ದೋಸೆ ಮಾತ್ರವಲ್ಲ ದಾವಣಗೆರೆ ಶಾವಿಗೆ ಸಹ ಅಮೆರಿಕಾದಲ್ಲಿ ಫೇಮಸ್​: ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕಾರಿ

ಭಾರತೀಯರ ಹೊಸ ವರ್ಷ ಯುಗಾದಿ ಬಂತೆಂದರೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಬೆಣ್ಣೆ ಸುವಾಸನೆಗಿಂತ ಶಾವಿಗೆಯ ಘಮಘಮ ಹೆಚ್ಚು ಹರಡುತ್ತದೆ. ಇಲ್ಲಿನ ಕೆಟಿಜೆ ನಗರದ 17ನೇ ಕ್ರಾಸ್​​ನಲ್ಲಿ ಹತ್ತಾರು ಶಾವಿಗೆ ತಯಾರಿಕಾ ಘಟಕಗಳು ಜೀವ ಪಡೆದುಕೊಳ್ಳುತ್ತವೆ. ರಾಜ್ಯದ ಕೇಂದ್ರಬಿಂದು ದಾವಣಗೆರೆಯಲ್ಲಿ ಯುಗಾದಿ ಅಂದರೆ ಬೇವು-ಬೆಲ್ಲದ ಜೊತೆ ಶಾವಿಗೆ ಬಸಿದು ತಿನ್ನುವುದು.

ದೋಸೆ ಮಾತ್ರವಲ್ಲ ದಾವಣಗೆರೆ ಶಾವಿಗೆ ಸಹ ಅಮೆರಿಕಾದಲ್ಲಿ ಫೇಮಸ್​: ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕಾರಿ
ಶಾವಿಗೆ
Edited By:

Updated on: Apr 09, 2024 | 6:10 PM

ದಾವಣಗೆರೆ, ಏಪ್ರಿಲ್ 09: ಬೆಣ್ಣೆ ನಗರಿ ದಾವಣಗೆರೆ ಯುಗಾದಿ (Ugadi) ಆಚರಣೆ ಅಂದರೆ ಒಂದು ರೀತಿಯಲ್ಲಿ ವಿಶೇಷ. ಇಲ್ಲಿ ಶಾವಿಗೆ ಇಲ್ಲ ಅಂದರೆ ಹಬ್ಬ ಆಚರಿಸುವುದೇ ಇಲ್ಲಾ. ಇದಕ್ಕಾಗಿಯೇ ಇಲ್ಲೊಂದಿಷ್ಟು ಪ್ರದೇಶ ಶಾವಿಗೆ ಕೈಗಾರಿಕೆಗಳಿವೆ. ಅಷ್ಟರ ಮಟ್ಟಿಗೆ ಇಲ್ಲಿ ಶಾವಿಗೆ ಫೇಮಸ್. ಅಲ್ಲದೆ ದೇಶ ವಿದೇಶಗಳಲ್ಲಿ ಕೂಡ ಇಲ್ಲಿನ ಶಾವಿಗೆಗೆ ಫುಲ್ ಡಿಮ್ಯಾಂಡ್. ಮಹಿಳೆಯರು ಕೂಡ ಆರ್ಥಿಕವಾಗಿ ಸದೃಢರಾಗಲು ಸ್ವಯಂ ಉದ್ಯೋಗ ಒದಗಿಸಿಕೊಟ್ಟಿದ್ದು ಕೂಡ ಇದೇ ಶ್ಯಾವಿಗೆ. ಇದು ಸಪ್ತಸಾಗರದಾಚೆ ಅಂದರೆ ಅಮೆರಿಕಾದಲ್ಲಿಯೂ ಪ್ರಸಿದ್ಧ ಈ  ಸ್ಪೇಷಲ್ ಶಾವಿಗೆ. ಹಾಗಾದರೆ ಏನ್ ಅದು ಸ್ಪೆಷಲ್ ಶಾವಿಗೆ ವೈಶಿಷ್ಠ್ಯತೆ ಅಂತೀರಾ. ಮುಂದೆ ಓದಿ.

ಭಾರತೀಯರ ಹೊಸ ವರ್ಷ ಯುಗಾದಿ ಬಂತೆಂದರೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಬೆಣ್ಣೆ ಸುವಾಸನೆಗಿಂತ ಶಾವಿಗೆಯ ಘಮಘಮ ಹೆಚ್ಚು ಹರಡುತ್ತದೆ. ಇಲ್ಲಿನ ಕೆಟಿಜೆ ನಗರದ 17ನೇ ಕ್ರಾಸ್​​ನಲ್ಲಿ ಹತ್ತಾರು ಶಾವಿಗೆ ತಯಾರಿಕಾ ಘಟಕಗಳು ಜೀವ ಪಡೆದುಕೊಳ್ಳುತ್ತವೆ. ರಾಜ್ಯದ ಕೇಂದ್ರಬಿಂದು ದಾವಣಗೆರೆಯಲ್ಲಿ ಯುಗಾದಿ ಅಂದರೆ ಬೇವು-ಬೆಲ್ಲದ ಜೊತೆ ಶಾವಿಗೆ ಬಸಿದು ತಿನ್ನುವುದು.

ದೇಶ-ವಿದೇಶಗಳಲ್ಲೂ ದಾವಣಗೆರೆ ಶಾವಿಗೆಗೆ ಸಖತ್ ಬೇಡಿಕೆ​ 

ಹೊಸ ವರ್ಷದ ಮೊದಲ ದಿನ ಸುಖದ ಸಂಕೇತವಾದ ಬೆಲ್ಲ, ಕಷ್ಟದ ಸಂಕೇತವಾದ ಬೇವು ಸ್ವೀಕರಿಸುವುದು ವಿಶೇಷ. ಇನ್ನೊಂದು ವಿಶೇಷ ಅಂದರೆ ಬಹುತೇಕರ ಮನೆಯಲ್ಲಿ ಶಾವಿಗೆ ಬಸಿದು, ಸಕ್ಕರೆ, ಹಾಲು ತುಪ್ಪದೊಂದಿಗೆ ಬೇವು-ಬೆಲ್ಲ ಸ್ವೀಕರಿಸುತ್ತಾರೆ. ಹಾಗಾಗಿ ಶಾವಿಗೆ ತಯಾರಿಕಾ ಘಟಕಗಳು ಚುರುಕುಗೊಂಡಿವೆ. ವಿವಿಧ ಗುಣಮಟ್ಟದಲ್ಲಿ ಈಗಾಗಲೇ ಶಾವಿಗೆ ಸಿದ್ಧಗೊಂಡಿದೆ. ಅಲ್ಲದೆ ಇಲ್ಲಿನ ಶಾವಿಗೆ ದೇಶ ವಿದೇಶಗಳಲ್ಲಿ ಸಖತ್ ಬೇಡಿಕೆ ಇರುವ ಶಾವಿಗೆಗಳಾಗಿದ್ದು, ಇಲ್ಲಿಂದಲೇ ಕೊರಿಯರ್ ಮಾಡುವ ಸೌಲಭ್ಯವು ಇದೆ. ವರ್ಷದಲ್ಲಿ ಹತ್ತಾರು ಬಾರಿ ಇಲ್ಲಿನ ಶಾವಿಗೆ ಅಮೆರಿಕಾಗೆ ಹೋಗುತ್ತದೆ.

ಇದನ್ನೂ ಓದಿ: ಕರ್ನಾಟಕದ ಮ್ಯಾಂಚೆಸ್ಟರ್​​ಗೆ ಕೊನೆಯ ಕೊಂಡಿಯಾಗಿದ್ದ ಆಂಜನೇಯ ಕಾಟನ್ ಮಿಲ್​ಗೂ ಬೀಗ ಬಿತ್ತು! ಮಹಿಳಾ ಕಾರ್ಮಿಕರು ಕಂಗಾಲು

ಇಲ್ಲಿ ಶಾವಿಗೆ ತಯಾರಿಸುವ ಕುಟುಂಬಗಳು ಪರಂಪರಾಗತವಾಗಿ ವೃತ್ತಿ ಮಾಡಿಕೊಂಡಿವೆ. ವರ್ಷದ ನಾಲ್ಕೈದು ತಿಂಗಳು ಮಾತ್ರ ಶಾವಿಗೆ ತಯಾರಿಸಲಾಗುತ್ತದೆ. ಆಗ ತಯಾರಿಸಿಕೊಂಡು ಶಾವಿಗೆಯನ್ನು ವಿವಿಧ ಜಿಲ್ಲೆ, ರಾಜ್ಯಗಳಿಗೆ ಮಾರಾಟ ಮಾಡುತ್ತಾರೆ. ರಾಗಿ, ಗೋಧಿ, ಅಕ್ಕಿ, ಚಿರೋಟಿ ರವೆಯಲ್ಲಿ ತಯಾರಿಸಿದ ಶಾವಿಗೆ ಕೆಜಿ60 ರಿಂದ 70 ರೂ. ಬೆಲೆ ಇದೆ. ಯುಗಾದಿ ಹಬ್ಬದ ವೇಳೆ ಮೂರರಿಂದ ನಾಲ್ಕು ಕ್ವಿಂಟಾಲ್ ಶಾವಿಗೆ ತಯಾರಿಸಲಾಗುತ್ತದೆ. ಉಳಿದಂತೆ ಪ್ರತಿನಿತ್ಯ ಒಂದು ಕ್ವಿಂಟಾಲ್ ಶಾವಿಗೆ ತಯಾರಿಸಲಾಗುತ್ತದೆ.

ಶಾವಿಗೆ ತಯಾರಿಕೆಯನ್ನೇ ನಂಬಿಕೊಂಡು ಹತ್ತಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಅದರಲ್ಲೂ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಈ ಶಾವಿಗೆ ವ್ಯಾಪಾರ ಕೈಹಿಡಿದಿದೆ. ಅಲ್ಲದೆ ಶಾವಿಗೆ ತಯಾರಕ ಹೆಣ್ಣುಮಕ್ಕಳೇ ಮನೆ ಮನೆ ಹೋಗಿ ಶಾವಿಗೆ ಕೊಟ್ಟು ಬರ್ತಾರೆ. ಹೊಸದಾಗಿ ಮದುವೆಯಾದ ಅಳಿಯನಿಗೆ ಈ ಯುಗಾದಿ ಹಬ್ಬದಂದು ಶಾವಿಗೆ ಬಸಿದು ಉಣಬಡಿಸಬೇಕು ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ.

ಇದನ್ನೂ ಓದಿ: ಭದ್ರಾ ಡ್ಯಾಂನಿಂದ ತುಂಗಭದ್ರ ನದಿಗೆ 9 ದಿನಗಳ ಕಾಲ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶ

ದಾವಣಗೆರೆ ಮಂದಿ ಯುಗಾದಿ ವೇಳೆ ಶಾವಿಗೆ ಬಸಿದು ಬೇವು-ಬೆಲ್ಲ ತಿನ್ನುವುದರ ಜೊತೆಗೆ ಅದ್ಧೂರಿಯಾಗಿ ಯುಗಾದಿ ಹಬ್ಬ ಆಚರಿಸೋದೇ ಒಂದು ಖುಷಿ, ಅಲ್ಲದೆ ಇದೇ ಶಾವಿಗೆಯನ್ನು ನಂಬಿ ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ವಿಶೇಷವಾಗಿ ದಾವಣಗೆರೆ ನಗರದ ಕೆಟಿಜೆ ನಗರ ಅಂದ್ರೆ ಶಾವಿಗೆ ಗೆ ಪ್ರಸಿದ್ಧಿ. ಇಲ್ಲಿರುವ ಬಹುತೇಕ ಕುಟುಂಬಗಳನ್ನ ಶಾವಿಗೆ ಕುಟುಂಬಗಳು ಎಂದು ಕರೆಯುತ್ತಾರೆ. ವಿಶೇಷ ಅಂದರೆ ಯುಗಾದಿಗೆ ಮಾತ್ರ ಈ ಭಾಗದಲ್ಲಿ ಶಾವಿಗೆ ಪಾಯಸ ಊಟ ಮಾಡುವುದು ರೂಢಿಯಲ್ಲಿ ಇರುವುದರಿಂದ ಯುಗಾದಿ ಶಾವಿಗೆ ವ್ಯಾಪಾರಕ್ಕೆ ಹೇಳಿ ಮಾಡಿಸಿದ ಸಮಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Basavaraj Doddamani

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More
Follow Us