ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿ ಮತ್ತೊಮ್ಮೆ ಚಂಚಲಗೂಡ ಜೈಲಿಗೆ ಶಿಫ್ಟ್​

ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ. 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಬಿ.ವಿ.ಶ್ರೀನಿವಾಸರೆಡ್ಡಿ ಮತ್ತು ಇತರರನ್ನು ಕೂಡ ಅಪರಾಧಿ ಎಂದು ಘೋಷಿಸಲಾಗಿದೆ. ಕೋರ್ಟ್​ನಲ್ಲಿ ಎಲ್ಲ ಪ್ರಕ್ರಿಯೆಗಳು ಮುಗಿದಿದ್ದು, ಸಿಬಿಐ ಜನಾರ್ದನ ರೆಡ್ಡಿ ಅವರನ್ನು ಚಂಚಲಗುಡ ಜೈಲಿಗೆ ಶಿಫ್ಟ್​ ಮಾಡಿದೆ.

ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿ ಮತ್ತೊಮ್ಮೆ ಚಂಚಲಗೂಡ ಜೈಲಿಗೆ ಶಿಫ್ಟ್​
ಜನಾರ್ದನ ರೆಡ್ಡಿ

Updated on: May 06, 2025 | 10:46 PM

ಹೈದರಾಬಾದ್​, ಮೇ 06: ಓಬಳಾಪುರಂ ಅಕ್ರಮ ಅದಿರು ಗಣಿಗಾರಿಕೆ (OCM Illegal Mining Case) ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಏಳು ವರ್ಷಗಳ ಕಾಲ ಶಿಕ್ಷೆ ಪ್ರಕಟಿಸಿದೆ. ಕೋರ್ಟ್​ನಲ್ಲಿ ಎಲ್ಲ ಪ್ರಕ್ರಿಯೆಗಳು ಮುಗಿದಿದ್ದು, ಸಿಬಿಐ ಜನಾರ್ದನ ರೆಡ್ಡಿ ಅವರನ್ನು ಚಂಚಲಗುಡ ಜೈಲಿಗೆ ಶಿಫ್ಟ್​ ಮಾಡಿದೆ. ​ಸಿಬಿಐ ಕೋರ್ಟ್​ ಆದೇಶದಿಂದ ಓಬಳಾಪುರಂ ಮೈನಿಂಗ್​ ಕೇಸ್​ನಲ್ಲಿ ಜನಾರ್ದನ ರೆಡ್ಡಿ ಅವರಿಗೆ ಮತ್ತೊಮ್ಮೆ ಚಂಚಲಗೂಡ ಜೈಲೂಟ ಫಿಕ್ಸ್​ ಆಗಿದೆ.

ಏನಿದು ಪ್ರಕರಣ?

ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್ ಮತ್ತು ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ಅದಿರನ್ನು ಅಕ್ರಮವಾಗಿ ಗಣಿಕಾರಿಕೆ ಮಾಡಲಾಗಿತ್ತು. 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿದ್ದರು. ಈ ಪ್ರಕರಣದ ತನಿಖೆಗಾಗಿ 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿಎಸ್​ ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು.

ಈ ಪ್ರಕರಣ ದೇಶದಾದ್ಯಂತ ಭಾರಿ ಸಂಚಲನ ಸೃಷ್ಟಿಷಿತ್ತು. ಸುಮಾರು 13 ವರ್ಷಗಳ ಕಾಲ ವಿಚಾರಣೆ ನಡೆದಿತ್ತು. ಮೂರು ಸಾವಿರಕ್ಕೂ ಹೆಚ್ಚು ದಾಖಲೆಗಳ ಪರಿಶೀಲನೆ ಹಾಗೂ 219 ಸಾಕ್ಷಿಗಳ ವಿಚಾರಣೆ ಮಾಡಿತ್ತು. ಎಲ್ಲವನ್ನೂ ಪರಿಶೀಲಿಸಿದ ಕೋರ್ಟ್​ ಮಂಗಳವಾರ ತೀರ್ಪು ಪ್ರಕಟಿಸಿದೆ. ಈ ಅಪರಾಧವು ಐಪಿಸಿಯ ಸೆಕ್ಷನ್ 120B ಜೊತೆಗೆ 420, 409, 468, 471 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13 (2) ಜೊತೆಗೆ 13 (1)(d) ಅಡಿಯಲ್ಲಿ ಸಾಬೀತಾಗಿದೆ. ಇನ್ನು, ಇದೇ ಪ್ರಕರಣದಲ್ಲಿ ವಿ.ಡಿ.ರಾಜಗೋಪಾಲ್, ದಿ. ರಾವ್ ಲಿಂಗಾರೆಡ್ಡಿ, ಕೆ.ಮೆಹಫೂಸ್ ಅಲಿ ಖಾನ್, ಬಿವಿ ಶ್ರೀನಿವಾಸ್ ರೆಡ್ಡಿ (ಜನಾರ್ದನ್​ ರೆಡ್ಡಿ ಸಂಬಂಧಿ) ಮತ್ತು ಓಎಂಸಿ ಕಂಪನಿ ಕೂಡ ಅಪರಾಧಿ ಎಂದು ಕೋರ್ಟ್​​ ತೀರ್ಪು ನೀಡಿದೆ.

ಇದನ್ನೂ ಓದಿ
OMC Mining Case, ಜನಾರ್ದನ್​ ರೆಡ್ಡಿಗೆ ಜಾಮೀನು ಸಿಗುವ ಸಾಧ್ಯತೆ: ವಕೀಲ
ಅಂಗಲಾಚಿದರೂ ಕೇಳದ ಕೋರ್ಟ್:ರೆಡ್ಡಿ ಮತ್ತೆ ಜೈಲಿಗೆ, ಶಾಸಕ ಸ್ಥಾನಕ್ಕೆ ಕುತ್ತು
ರಾಜಕಾರಣ ಮತ್ತು ಪಕ್ಷದ ಬಗ್ಗೆ ಮಾತಾಡಲ್ಲವೆಂದ ಜನಾರ್ಧನ ರೆಡ್ಡಿ
ಬಿಡುಗಡೆಯಾಗದ ಆನೆಗೊಂದಿ ಉತ್ಸವ ಹಣ: ತಂಗಡಗಿ, ರೆಡ್ಡಿ ನಡುವೆ ಟಾಕ್ ಪೈಟ್​​

ಇದೇ ಪ್ರಕರಣದಲ್ಲಿ ಜನಾರ್ದನ್ ರೆಡ್ಡಿ ಈ ಹಿಂದೆ ಕೂಡ 2011 ಸೆಪ್ಟೆಂಬರ್​ ನಲ್ಲಿ ಮೂರುವರೆ ವರ್ಷಗಳ ಕಾಲ ಚಂಚಲಗೂಡಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ಇದೀಗ, ಮತ್ತೆ ಜನಾರ್ದನ್ ರೆಡ್ಡಿ ಚಂಚಲಗೂಡ ಜೈಲು ಸೇರಿದ್ದಾರೆ.

ಇದನ್ನೂ ಓದಿ: ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅಪರಾಧಿ: ಸಿಬಿಐ ಕೋರ್ಟ್ ತೀರ್ಪು

ಶಿಕ್ಷೆ ಪ್ರಮಾಣ ಕಡಿಮೆಗೊಳಿಸುವಂತೆ ರೆಡ್ಡಿ ಮನವಿ

“ಬಳ್ಳಾರಿ ಮತ್ತು ಗಂಗಾವತಿಯ ಜನರು ನನ್ನನ್ನು ಭಾರಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ ನಾನು ಸಾರ್ವಜನಿಕ ಸೇವೆಗೆ ಸಮರ್ಪಿತನಾಗಿದ್ದೇನೆ. ಸಾರ್ವಜನಿಕರಿಂದ ನನಗೆ ಸಿಗುವ ಬೆಂಬಲವು ಆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ದಯವಿಟ್ಟು ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಿ ಎಂದು ಜನಾರ್ದನ್​ ರೆಡ್ಡಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ಜನಾರ್ದನ ರೆಡ್ಡಿ ಮನವಿಯನ್ನು ತಿರಸ್ಕರಿಸಿ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:28 pm, Tue, 6 May 25