
ಆನೇಕಲ್, ಅಕ್ಟೋಬರ್ 21: ಲಿವಿಂಗ್ ಟುಗೆದರ್ ನಲ್ಲಿದ್ದ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಲ್ಲುಬಾಳು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಒಡಿಶಾ ಮೂಲದ ಸೀಮಾ ನಾಯಕ್(25) ಮತ್ತು ರಾಕೇಶ್(23) ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಎರಡು ದಿನಗಳಿಂದ ಮನೆ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯರು ಅನುಮಾನಗೊಂಡು ಕಿಟಕಿ ಗಾಜು ಒಡೆದು ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಗೊತ್ತಾಗಿದೆ. ಕೂಡಲೇ ಜಿಗಣಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಎಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೋಡಿ ಮಧ್ಯೆ ಪದೇ ಪದೇ ಕಲಹ ಉಂಟಾಗುತ್ತಿತ್ತು. ಕುಡಿದು ಬಂದು ರಾಕೇಶ್ ಜಗಳ ಮಾಡುತ್ತಿದ್ದ. ಭಾನುವಾರವೂ ಸೀಮಾ ನಾಯಕ್ ಜೊತೆ ಜಗಳ ಮಾಡಿದ್ದ. ಬೆಳಗ್ಗೆ ಎದ್ದಾಗ ರಾಕೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಸೀಮಾ ಗಮನಕ್ಕೆ ಬಂದಿದೆ. ಆತನಿಗೆ ಇನ್ನೂ ಜೀವ ಇರಬಹುದು ಎಂಬ ನಂಬಿಕೆಯಿಂದ ರಾಕೇಶ್ ಉಳಿಸಿಕೊಳ್ಳಲು ಒಂದಿಷ್ಟು ಪ್ರಯತ್ನಗಳನ್ನು ಸೀಮಾ ಮಾಡಿದ್ದಾರೆ. ಆದರೆ ಆತ ಮೃತಪಟ್ಟಿರೋದು ದೃಢವಾಗುತ್ತಿದ್ದಂತೆ ಸೀಮಾ ಕೂಡ ನೇಣಿಗೆ ಶರಾಣಗಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದೀಪಾವಳಿ ಸಂಭ್ರಮದ ನಡುವೆ ಘೋರ ದುರಂತ: 3 ಬಾಲಕರು ನೀರುಪಾಲು, ಸಾಲಿಗ್ರಾಮದಲ್ಲಿ ನೀರವ ಮೌನ
ಮೈಸೂರು ಜಿಲ್ಲೆ ಸಾಲಿಗ್ರಾಮ ಪಟ್ಟಣದಲ್ಲಿ ಕಾಲುವೆಗೆ ಈಜಲು ಇಳಿದಿದ್ದ ಮೂರು ಬಾಲಕರ ದಾರುಣ ಸಾವು ಪ್ರಕರಣ ಸಂಬಂಧ ಮತ್ತೊಬ್ಬ ಬಾಲಕನ ಶವ ಪತ್ತೆಯಾಗಿದೆ. ಚಾಮರಾಜ ಎಡದಂಡೆ ಕಾಲುವೆಗೆ ಈಜಲು ಬಾಲಕರು ತೆರಳಿದ್ದ ಸಂದರ್ಭ ಅವಘಡ ನಡೆದಿತ್ತು. ಮೃತರಾದ ಅಯಾನ್ (16), ಆಜಾನ್ (13) ಶವ ನಿನ್ನೆಯೇ ಪತ್ತೆಯಾಗಿದ್ದು, ಮತ್ತೋರ್ವ ಬಾಲಕನಿಗಾಗಿ ಶೋಧ ಮುಂದುವರಿದಿತ್ತು. ಲುಕ್ಮಾನ್ (14) ಶವ ಕೂಡ ಈಗ ಪತ್ತೆಯಾಗಿದೆ. ದೀಪಾವಳಿ ಹಬ್ಬದ ರಜೆ ಹಿನ್ನೆಲೆ ಸಂಜೆ 4 ಗಂಟೆ ಹೊತ್ತಿಗೆ ಬಾಲಕರು ಈಜಲು ತೆರಳಿದ್ದರು. ಆದರೆ, ಸಂಜೆಯಾದರೂ ಮಕ್ಕಳು ಮನೆಗೆ ಬಾರದ ಕಾರಣ ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.