FSL ವರದಿ ಬಂದಿಲ್ಲ…ಬಂದಿಲ್ಲ ಎನ್ನುವ ಮಧ್ಯೆ ಮೂವರು ಅರೆಸ್ಟ್: ಅನುಮಾನಗಳಿಗೆ ಎಡೆಮಾಡಿಕೊಟ್ಟ ಸರ್ಕಾರದ ನಡೆ!

pakistan zindabad slogan Case: ಕಾಂಗ್ರೆಸ್ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್​ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಆದ್ರೆ, ಸರ್ಕಾರ ಎಫ್​ಎಸ್​ಎಲ್​ ವರದಿ ಬಂದಿಲ್ಲ ಎಂದು ಹೇಳುತ್ತಿರುವ ಮಧ್ಯೆಯೇ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದು, ಸರ್ಕಾರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

FSL ವರದಿ ಬಂದಿಲ್ಲ...ಬಂದಿಲ್ಲ ಎನ್ನುವ ಮಧ್ಯೆ ಮೂವರು ಅರೆಸ್ಟ್: ಅನುಮಾನಗಳಿಗೆ ಎಡೆಮಾಡಿಕೊಟ್ಟ ಸರ್ಕಾರದ ನಡೆ!
Follow us
|

Updated on:Mar 04, 2024 | 7:21 PM

ಬೆಂಗಳೂರು, (ಮಾರ್ಚ್​ 04): ನಾಸಿರ್‌ ಹುಸೇನ್‌  (Nasir hussain) ಅವರು ರಾಜ್ಯಸಭಾ (Rajyasabha Election) ಸದಸ್ಯರಾಗಿ ಆಯ್ಕೆಯಾಗಿದ್ದ ವೇಳೆ ವಿಧಾನಸೌಧದಲ್ಲಿ (Vidhana Soudha) ಪಾಕಿಸ್ತಾನ ಜಿಂದಾಬಾದ್ (Pakistan Zindabad slogans) ಘೋಷಣೆ ಕೂಗಿದ್ದ ದೇಶದ್ರೋಹದ ಪ್ರಕರಣಕ್ಕೆ (Sedition Case) ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಇಲ್ತಾಜ್, ಆರ್‌.ಟಿ. ನಗರದ ಮುನಾವರ್ ಹಾಗೂ ಬ್ಯಾಡಗಿ ಮೂಲದ ಮೊಹಮದ್ ಶಫಿ ನಾಶಿ ಪುಡಿ ಬಂಧಿತರು. ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢವಾದ ಬಳಿಕವೇ ಆರೋಪಿಗಳ ಬಂಧನವಾಗಿದೆ. ಈ ಬಗ್ಗೆ ಬೆಂಗಳೂರಿನ ಕೇಂದ್ರ ವಿಭಾಗದ ಪೊಲೀಸರು ಮಾಧ್ಯಮ ಪ್ರಕಟಣೆ ಮೂಲಕ ಖಚಿತಪಡಿಸಿದ್ದಾರೆ. ಆದ್ರೆ, ಇದೀಗ ಉದ್ಭವಿಸಿರುವ ಪ್ರಶ್ನೆ ಏನೆಂದರೆ ಸರ್ಕಾರ ಎಫ್​ಎಸ್​ಎಲ್​ ವರದಿ ಇನ್ನೂ ಬಂದಿಲ್ಲ…ಬಂದಿಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಈಗ ಪೊಲೀಸರು ಏಕಾಏಕಿ ಮೂವರನ್ನು ಅರೆಸ್ಟ್​ ಮಾಡಿದ್ಯಾಕೆ? ಹಾಗಾದ್ರೆ, ಎಫ್ಎಸ್ಎಲ್ ವರದಿ ಬಂದಿದ್ದರೂ ಸಹ ಸರ್ಕಾರ ಮುಚ್ಚಿಟ್ಟಿತ್ತಾ? ಎಫ್​ಎಸ್​ಎಲ್​ ವರದಿಯನ್ನು ಯಾಕೆ ಬಹಿರಂಗಪಡಿಸದೇ ನಿಗೂಢತೆ ಕಾಪಾಡಿದ್ಯಾಕೆ? ಈ ಪ್ರಕರಣವನ್ನು ಸರ್ಕಾರ ಯಾವ ದಿಕ್ಕಿನತ್ತ ಕೊಂಡೊಯ್ಯಲು ಪ್ರಯತ್ನಿಸಿತ್ತು? ಹೀಗೆ ಸರ್ಕಾರದ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ರಾಜ್ಯಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಗಲಿಗರು ವಿಜಯೋತ್ಸವದ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಕೆಲವು ಕಾಂಗ್ರೆಸ್​ನ ನಾಯಕರು ಮಾಧ್ಯಮಗಳ ವರದಿಯನ್ನೇ ಸುಳ್ಳೆಂದು ಜರಿದಿದ್ದರು. ಈ ಹಿನ್ನೆಲೆಯಲ್ಲಿ ಘೋಷಣೆ ಕೂಗಿದ್ದ ವಿಡಿಯೋವನ್ನು ಎಪ್‌ಎಸ್‌ಎಲ್ ವರದಿಗೆ ಕಳುಹಿಸಲಾಗಿತ್ತು. ಆದರೆ, ಈಗ ಎಪ್‌ಎಸ್ಎಲ್ ವರದಿಯನ್ನು ಆಧರಿಸಿ ವಿಧಾನಸೌಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೇಸ್: ಕೊನೆಗೂ ಮೂವರು ಅರೆಸ್ಟ್

ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಅವರ ಮಂತ್ರಿಮಂಡಲದ ಸಚಿವರು ಈ ಆರೋಪವನ್ನು ಕಾಂಗ್ರೆಸ್‌ ತಳ್ಳಿ ಹಾಕಿದ್ದರು. ಪೊಲೀಸರು ವಿಡಿಯೊವನ್ನು ನೋಡಿದ್ದು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗೇ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರು ಹೇಳಿದ್ದರು. ಈ ಬಗ್ಗೆ ಸ್ವತಃ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಸ್ಪಷ್ಟನೆ ನೀಡಿದ್ದರು. ಸದನದಲ್ಲೂ ಪ್ರಸ್ತಾಪವಾದಾಗ ಉತ್ತರ ನೀಡಿದ್ದ ಪರಮೇಶ್ವರ್‌, ವಿಡಿಯೊವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. ತಪ್ಪು ನಡೆದಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಆದ್ರೆ, ಎಫ್​ಎಸ್​ಎಲ್​ ವರದಿಯನ್ನೂ ಮಾತ್ರ ನಿಗೂಢವಾಗಿ ಇಟ್ಟಿದ್ಯಾಕೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರದ ಪ್ಲ್ಯಾನ್ ಫೇಲ್ ಆಯ್ತಾ?

ಶಕ್ತಿಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ಸರ್ಕಾರದ ಪ್ಲ್ಯಾನ್ ವಿಫಲವಾಯ್ತಾ? ಎನ್ನುವ ಅನುಮಾನಗಳು ಮೂಡಿಸಿವೆ. ಯಾಕಂದ್ರೆ, ಪ್ರಕರಣ ನಡೆದ ಮೂರ್ನಾಲ್ಕು ದಿನವಾದರೂ ಸಹ ಸರ್ಕಾರ ಇನ್ನೂ ಎಫ್​ಎಸ್​ಎಲ್​ ವರದಿ ಬಂದಿಲ್ಲ. ವರದಿ ಬಂದ ನಂತರ ಕ್ರಮಕೈಗೊಳ್ಳಲಾಗುತ್ತೆ ಎಂದು ಹೇಳಿಕೊಂಡೇ ಬಂದಿತ್ತು. ಈಗ ದಿಢೀರ್ ಮೂವರನ್ನು ಅರೆಸ್ಟ್​ ಮಾಡಿದ್ದನ್ನು ನೋಡಿದರೆ ಎಫ್​ಎಸ್​​ಎಲ್​ ವರದಿ ಬಂದಿದ್ದರೂ ಸಹ ಸರ್ಕಾರ ಬಹಿರಂಗ ಪಡಿಸದೇ ಮುಚ್ಚಿಟ್ಟು ಎನ್ನುವ ಅನುಮಾನ ಹುಟ್ಟಿಕೊಂಡಿದೆ. ವರದಿಯ ಬಂದಿಲ್ಲ ಬಂದಿಲ್ಲ ಎಂದು ಹೇಳುತ್ತಾ ಕೊನೆಗೂ ಆ ರೀತಿ ಯಾವುದೇ ಘೋಷಣೆ ಕೂಗಿಲ್ಲ ಎಂದು ಹೇಳಲು ಸರ್ಕಾರ ಹೊರಟ್ಟಿತ್ತು ಅನ್ನಿಸಿತ್ತು. ಆದ್ರೆ, ಬಿಜೆಪಿ ಖಾಸಗಿಯಾಗಿ ಎಫ್​​ಎಸ್​ಎಲ್​ ವರದಿ ಬಹಿರಂಗಪಡಿಸಿ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಇದು ಸರ್ಕಾರಕ್ಕೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದೆ. ಕೊನೆಗೆ ಯಾವುದನ್ನು ಮುಚ್ಚಿಡಲು ಈಗ ಸಾಧ್ಯವಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಆರೋಪಿಗಳ ಬಂಧನಕ್ಕೆ ಸೂಚನೆ ಹೋಗಿದೆ ಎನ್ನಲಾಗಿದೆ. ಈ ಮೂಲಕ ಸರ್ಕಾರದ ಪ್ಲ್ಯಾನ್ ಎಲ್ಲಾ ತಲೆಕೆಳಗಾದಂತಾಗಿದೆ.

ಫ್ಯಾಕ್ಟ್‌ ಚೆಕ್‌ ಮಾಡಿದ್ದ ಕಾಂಗ್ರೆಸ್‌

ಕಾಂಗ್ರೆಸ್‌ ಪಕ್ಷದ ಪ್ರಕಾರ ಅಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ (Pakistan Zindabad) ಘೋಷಣೆ ಕೂಗಲಾಗಿಲ್ಲ. ಬದಲಾಗಿ ನಾಸಿರ್‌ ಸಾಬ್‌ ಜಿಂದಾಬಾದ್‌ ಎಂಬ ಘೋಷಣೆಯನ್ನು ತಿರುಚಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದಂತೆ ಬಿಂಬಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ವಾದಿಸುತ್ತಾ ಬಂದಿತ್ತು. ಕಾಂಗ್ರೆಸ್‌ ನಾಯಕರು ಈ ಬಗ್ಗೆ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ, ಜತೆಗೆ ಫ್ಯಾಕ್ಟ್‌ ಚೆಕ್‌ ಮಾಡಿದ್ದನ್ನು ಬಿಡುಗಡೆ ಮಾಡಿದ್ದರು. ಫ್ಯಾಕ್ಟ್‌ ಚೆಕ್‌ ವಿಡಿಯೊದಲ್ಲಿ ನಾಸಿರ್‌ ಸಾಬ್‌ ಜಿಂದಾಬಾದ್‌ ಎಂದು ಹೇಳಿದಂತೆ ಕೇಳಿಸಿದೆ ಎಂದು ಕಾಂಗ್ರೆಸ್‌ ಹೇಳಿತ್ತು.

ಪ್ರಿಯಾಂಕ್‌ ಖರ್ಗೆ ಅವರ ವಾದವೇನಾಗಿತ್ತು?

ಈ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಟ್ವೀಟ್‌ ಪೋಸ್ಟ್‌ ಮಾಡಿ ಅಲ್ಲಿ ತಮ್ಮ ವಾದದ ವಿಚಾರವನ್ನು ಮುಂದಿಟ್ಟಿದ್ದರು. ಇದೊಂದು ವ್ಯವಸ್ಥಿತವಾದ ಷಡ್ಯಂತ್ರ ಎಂದಿದ್ದರು. ಅಲ್ಲದೇ ಮಾಧ್ಯಮಗಳಿಗೂ ಹಲವು ಪ್ರಶ್ನೆ ಕೇಳಿದ್ದರು. ಅಂತಿಮವಾಗಿ ಅಲ್ಲಿ ಏನೂ ನಡೆದಿಲ್ಲ. ಏನೋ ನಡೆದಿದೆ ಎಂಬಂತೆ ಬಿಂಬಿಸಲಾಗಿದೆ ಎಂದು ಅವರು ಹೇಳಿದ್ದರು.

ಈಗ ಅಂತಿಮವಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಎಸ್​ಎಲ್​ ವರದಿ ಬಂದಿಲ್ಲ ಬಂದಿಲ್ಲ ಎನ್ನುತ್ತಿರುವ ಮಧ್ಯೆಯೇ ವಿಧಾನಸೌಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಭಾರೀ ಸಂಚಲನ ಮೂಡಿಸಿದೆ. ಇದು ಮುಂದೆ ರಾಜ್ಯ ರಾಜಕಾರಣದಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:07 pm, Mon, 4 March 24

ತಾಜಾ ಸುದ್ದಿ