
ಬೆಂಗಳೂರು, ಏಪ್ರಿಲ್ 2: ಕರ್ನಾಟಕ ಶೈಕ್ಷಣಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಎಸ್ಎಸ್ಎಲ್ಸಿ (SSLC) ತೃತೀಯ ಭಾಷಾ ಪರೀಕ್ಷೆಯಲ್ಲಿ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ತೀರ್ಮಾನ ಈಗ ಕಾನೂನು ಹೋರಾಟಕ್ಕೆ ನಾಂದಿ ಹಾಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಈ ದಿಢೀರ್ ಘೋಷಣೆಯು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕರಿ ನೆರಳು ಬೀರಲಿದೆ ಎಂದು ಆರೋಪಿಸಿ ಹೈಕೋರ್ಟ್ನಲ್ಲಿ (Karnataka High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಾಗಿದೆ. ಬೆಂಗಳೂರಿನ ನಿವಾಸಿಗಳಾದ ಎಚ್.ಎನ್. ಚಂದನಾ ಮತ್ತು ಎಸ್. ವೆಂಕಟೇಶ್ ಸಲ್ಲಿಸಿರುವ ಈ ಅರ್ಜಿಯಲ್ಲಿ, ಸರ್ಕಾರದ ನಡೆಯನ್ನು ‘ಅಸಂವಿಧಾನಿಕ’ ಎಂದು ಉಲ್ಲೇಖಿಸಲಾಗಿದೆ.
ಮುಖ್ಯವಾಗಿ, ಯಾವುದೇ ಒಂದು ದೊಡ್ಡ ಶೈಕ್ಷಣಿಕ ಬದಲಾವಣೆ ಮಾಡುವ ಮುನ್ನ ಸಾರ್ವಜನಿಕರ ಅಥವಾ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯುವುದು ಅತ್ಯಗತ್ಯ. ಆದರೆ, ಈ ವಿಷಯದಲ್ಲಿ ಸರ್ಕಾರ ಅಂತಹ ಯಾವುದೇ ಪ್ರಕ್ರಿಯೆ ನಡೆಸದೆ, ಸಚಿವ ಸಂಪುಟದ ಒಪ್ಪಿಗೆಯನ್ನೂ ಪಡೆಯದೆ ಏಕಪಕ್ಷೀಯವಾಗಿ ತೀರ್ಮಾನಿಸಿದೆ ಎಂಬುದು ಅರ್ಜಿದಾರರ ಪ್ರಬಲ ವಾದ.
ತೃತೀಯ ಭಾಷೆಯ (ಹಿಂದಿ/ಇತರ) ಅಂಕಗಳನ್ನು ಒಟ್ಟು ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ.
ಒಟ್ಟು 625 ಅಂಕಗಳ ಬದಲಿಗೆ ಕೇವಲ 525 ಅಂಕಗಳ ಆಧಾರದ ಮೇಲೆ ಶೇಕಡಾವಾರು ಲೆಕ್ಕ ಹಾಕಲಾಗುತ್ತದೆ.
ತೃತೀಯ ಭಾಷೆಯಲ್ಲಿ ಕೇವಲ ಎ, ಬಿ, ಸಿ, ಡಿ ಗ್ರೇಡ್ಗಳನ್ನು ಮಾತ್ರ ನೀಡಲಾಗುತ್ತದೆ.
ಈಗಾಗಲೇ ಈ ವಿಷಯವು ರಾಜಕೀಯ ಬಣ್ಣ ಪಡೆದುಕೊಂಡಿದೆ. ರಾಜ್ಯ ಸರ್ಕಾರವು ‘ಹಿಂದಿ ಹೇರಿಕೆ’ ತಡೆಯುವ ನೆಪದಲ್ಲಿ ತ್ರಿಭಾಷಾ ಸೂತ್ರಕ್ಕೆ ಎಳ್ಳುನೀರು ಬಿಟ್ಟು, ಪರೋಕ್ಷವಾಗಿ ದ್ವಿಭಾಷಾ ನೀತಿಯನ್ನು ಜಾರಿಗೊಳಿಸುತ್ತಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಹಿಂದಿ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಅಶ್ವತ್ಥ್ ನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದರು.
ಮತ್ತೊಂದೆಡೆ, SSLC 3ನೇ ಭಾಷೆಯ ಅಂಕಗಳನ್ನು ರದ್ದುಗೊಳಿಸಿರುವ ನಿರ್ಧಾರದಿಂದ, ಉರ್ದು ಹಾಗೂ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ಓದುವವರಿಗೆ 3ನೇ ಭಾಷೆಯಾದ ‘ಕನ್ನಡ’ಕ್ಕೆ ಮಹತ್ವ ಇಲ್ಲದಂತಾಗುವುದಿಲ್ಲವೇ ಎಂಬ ಪ್ರಶ್ನೆಯೂ ಉದ್ಭವಿಸಿತ್ತು. ಕನ್ನಡ ಉಳಿಸಲು, ಹಿಂದಿ ಹೇರಿಕೆ ತಡೆಯಲು ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದ. ಆದರೆ, ಇಲ್ಲಿ ಕನ್ನಡ 3ನೇ ಭಾಷೆ ಇದ್ದವರ ವಿಚಾರದಲ್ಲಿ ಕನ್ನಡಕ್ಕೆ ಅನ್ಯಾಯವಾದಂತಲ್ಲವೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಇದನ್ನೂ ಓದಿ: SSLC ಒಟ್ಟು ಮಾರ್ಕ್ಸ್ 625ದಿಂದ 525ಕ್ಕೆ ಇಳಿಕೆ: ಹಿಂದಿ ಅಂಕಕ್ಕೆ ಕೋಕ್
ಈ ವಿವಾದಾತ್ಮಕ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಲಿದೆಯೇ ಅಥವಾ ಸರ್ಕಾರದ ಈ ಹೊಸ ಶೈಕ್ಷಣಿಕ ಪ್ರಯೋಗ ಮುಂದುವರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಶೀಘ್ರದಲ್ಲೇ ಈ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆಯಿದೆ.
Published On - 6:32 am, Thu, 2 April 26