ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕರು ರಾಜಸ್ಥಾನ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಆಪರೇಷನ್ ಕಮಲದ ಮೂಲಕ ಸರ್ಕಾರಗಳನ್ನು ಉರುಳಿಸಲಾಗುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಕಚೇರಿಯೆದರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜಾಧ್ಯಕ್ಷ ಡಿ ಕೆ ಶಿವಕುಮಾರ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸರ್ಕಾರಗಳನ್ನು ಬೀಳಿಸುತ್ತಿದೆ ಎಂದು ಹೇಳಿದರು. ದೇಶದಲ್ಲಿ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ, ಚುನಾಯಿತ ಸರ್ಕಾರಗಳನ್ನು ಕೇವಲ ಅಧಿಕಾರದ ಆಸೆಗಾಗಿ ಬೀಳಿಸಿ ಜನಾದೇಶಕ್ಕೆ ಮೋಸ ಮಾಡಲಾಗುತ್ತಿದೆ ಮತ್ತು ಜನರ ಆಶಯಗಳನ್ನು ಹತ್ತಿಕ್ಕಲಾಗುತ್ತಿದೆ ಎಂದರು. ಕರ್ನಾಟಕದಲ್ಲಿ ಸರ್ಕಾರ ಉರುಳಸಿದ ಪ್ರಸಂಗವನ್ನು ಉದಾಹರಿಸಿದ ಡಿಕೆಶಿ, ಮಧ್ಯಪ್ರದೇಶದಲ್ಲೂ ಅದೇ ರೀತಿಯಲ್ಲಿ ಚುನಾಯಿತ ಸರ್ಕಾರವನ್ನು ಉರುಳಿಸಲಾಯಿತು ಎಂದು ಹೇಳಿದರು.
ಕೇಂದ್ರ ಸರ್ಕಾರದ ಅಸಂವೈಧಾನಿಕ ಕೃತ್ಯಗಳನ್ನು ಇಡೀ ದೇಶ ಗಮನಿಸುತ್ತಿದೆ, ರಾಜಸ್ಥಾನದ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರನ್ನು ಭೇಟಿಯಾಗಲು ಅವಕಾಶ ನೀಡಲಾಗುತ್ತಿಲ್ಲ, ರಾಷ್ರಪತಿಗಳಿಗೆ ಮನವಿ ಸಲ್ಲಿಸಬೇಕಾದರೆ ಅದನ್ನು ರಾಜ್ಯಪಾಲರ ಮುಖಾಂತರವೇ ಮಾಡಬೇಕಾಗುತ್ತದೆ, ಆದರೆ ಕೇಂದ್ರ ಸರ್ಕಾರ ತನ್ನ ಪ್ರಬಾವ ಬೀರಿ ಮುಖ್ಯಮಂತ್ರಿಗಳಿಗೆ ತಡೆಯೊಡ್ಡುತ್ತಿದೆ ಎಂದ ಶಿವಕುಮಾರ್, ಸಂವಿಧಾನ ಹಾಗೂ ಕಾನೂನನ್ನು ಗೌರವಿಸುತ್ತಾ ತಮ್ಮ ಪಕ್ಷ ಶಾಂತಿಯುತ ಹೋರಾಟ ನಡೆಸುತ್ತಿದೆ ಎಂದರು.
ನಂತರ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮ್ಯನವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ದೊರೆಗಳು ಮತ್ತು ನಿರ್ಣಾಯಕರು, ನಾವು ಈ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ, ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂವಿಧಾನಕ್ಕೆ ಅಗೌರವ ತೋರುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ ಎಂದರು. ಮೋದಿ ಅಧಿಕಾರಕ್ಕೆ ಬಂದ ನಂತರ ಇಂಥ ಕೆಲಸಗಳು ಜಾಸ್ತಿಯಾಗಿವೆ ಎಂದು ನೇರವಾಗೇ ಆರೋಪ ಮಾಡಿದ ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕದಲ್ಲಿ ಬಿ ಎಸ್ ಯಡಿಯೂರಪ್ಪ 2008 ರಲ್ಲೇ ಕುದುರೆ ವ್ಯಾಪಾರ ಶುರು ಮಾಡಿ ಅಧಿಕಾರಕ್ಕೆ ಬಂದರು ಎಂದು ಹೇಳಿದರು.
ಕೊವಿಡ್-19 ಸಮಯದಲ್ಲಿ ಸಹಕಾರ ನೀಡಬೇಕೆಂದು ಆಡಳಿತ ಪಕ್ಷದ ನಾಯಕರು ನಮ್ಮನ್ನು ಕೇಳುತ್ತಾರೆ, ನಾವು ಸಹಕಾರ ನೀಡುತ್ತಿದ್ದೆವು, ಆದರೆ ಭ್ರಷ್ಟಾಚಾರದಲ್ಲಿ ನಡೆಸುತ್ತಿರುವ ಸರ್ಕಾರಕ್ಕೆ ನಾವು ಅದನ್ನು ನೀಡಲಾರೆವು ಎಂದು ಸಿದ್ದರಾಮಯ್ಯ ಹೇಳಿದರು. ಶಾಸಕರ ಖರೀದಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಾರೆ, ವಾಮ ಮಾರ್ಗದಿಂದ ಸರ್ಕಾರ ರಚಿಸಲು ದುಡ್ಡು ಒಗ್ಗೂಡಿಸುತ್ತಾರೆ, ಅವರಿಗೆ ಹಣ ಎಲ್ಲಿಂದ ಬರಯತ್ತಿದೆಯೆಂದು ಚೌಕಿದಾರನೇ ಹೇಳಬೇಕು ಅಂತ ಸಿದ್ದರಾಮಯ್ಯ, ಮೋದಿಯನ್ನು ಕುಟುಕಿದರು.
ನಾವು ಯಾವ ರಾಜ್ಯದಲ್ಲೂ ಕಾನೂನಿನ ಉಲ್ಲಂಘನೆ ಮಾಡಿಲ್ಲ, ಆದಾಗ್ಯೂ ಪೊಲೀಸರನ್ನು ನಮ್ಮ ಹಿಂದೆ ಛೂ ಬಿಡಲಾಗಿದೆ, ನಾವು ಶಾಂತಿಭಂಗ ಮಾಡುವ ಕೆಲಸ ಮಾಡುತ್ತಿಲ್ಲ, ರಾಜಸ್ಥಾನದ ರಾಜ್ಯಪಾಲರು ಕೇಂದ್ರದ ಏಜೆಂಟ್ರಂತಿದ್ದಾರೆ, ಅಲ್ಲಿ ಅಧಿವೇಶನ ಕರೆಯುವುದಕ್ಕೂ ಅವಕಾಶ ನೀಡುತ್ತಿಲ್ಲ ಎಂದ ಸಿದ್ದರಾಮಯ್ಯ, ಕಾನೂನುಬದ್ಧವಾಗಿ ಕೆಲಸ ಮಾಡಿ, ಮುಂದೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರನ್ನು ವಶಕ್ಕೆ ತೆಗೆದುಕೊಳ್ಳಲು ಬಂದ ಪೋಲಿಸರಿಗೆ ಎಚ್ಚರಿಸಿದರು.
ಪ್ರತಿಭಟನಾನಿರತ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಬಿಎಮ್ಟಿಸಿ ಬಸ್ನಲ್ಲಿ ಕರೆದೊಯ್ಯುವಾಗ; ಶಿವಕುಮಾರ್, ಯಾರೇನೇ ಮಾಡಿದರೂ ಕಾಂಗ್ರೆಸ್ ಹೋರಾಟ ನಿಲ್ಲಿಸುವುದಿಲ್ಲ ಎಂದರು.