
ಬೆಂಗಳೂರು, ಮೇ 29: ಕರ್ನಾಟಕದ 7 ಜಿಲ್ಲೆಗಳು ಒಳಗೊಂಡಂತೆ ದಕ್ಷಿಣ ಭಾರತದ (South India) ವಿವಿಧ ರಾಜ್ಯಗಳ 49 ಜಿಲ್ಲೆಗಳಲ್ಲಿ ಜನನ ಪ್ರಮಾಣವು (Birth Rate) ಮರಣ (Death Rate) ಪ್ರಮಾಣಕ್ಕಿಂತ ಇಳಿಕೆಯಾಗಿರುವುದು ಕಂಡುಬಂದಿದೆ. ಭಾರತದ ಜನಸಂಖ್ಯೆ 140 ಕೋಟಿಗಿಂತ ಹೆಚ್ಚಿದ್ದರೂ, ಅದು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದರೂ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಮಟ್ಟಿಗೆ ಆಘಾತಕಾರಿ ಅಂಕಿಅಂಶ ಬಹಿರಂಗವಾಗಿದೆ. 2021 ರ ನಾಗರಿಕ ನೋಂದಣಿ ವರದಿಯ ಪ್ರಕಾರ, ದಕ್ಷಿಣ ಭಾರತದ 49 ಜಿಲ್ಲೆಗಳಲ್ಲಿ ಜನಿಸಿದವರ ಸಂಖ್ಯೆಗಿಂತ ಸಾವಿನ ಸಂಖ್ಯೆ ಹೆಚ್ಚಾಗಿದೆ.
ಒಂದೆಡೆ, ಈವರೆಗೆ ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿದ್ದರೆ, ಈಗ ಈ ಅಂಕಿ ಅಂಶಗಳು ಬಹಿರಂಗವಾಗುವುದರೊಂದಿಗೆ ಬೇರೆಯದೇ ಚಿತ್ರಣ ಹೊರಹೊಮ್ಮಿದೆ.
2021 ರವರೆಗಿನ ಅಂಕಿಅಂಶದ ಪ್ರಕಾರ, ಇಡೀ ದೇಶದಲ್ಲಿ ಒಟ್ಟು 49 ಜಿಲ್ಲೆಗಳಲ್ಲಿ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಿದೆ. ಈ ಗರಿಷ್ಠ (17) ಜಿಲ್ಲೆಗಳು ತಮಿಳುನಾಡಿನಲ್ಲಿವೆ. ಉಳಿದಂತೆ ಕರ್ನಾಟಕದಲ್ಲಿ 7, ಕೇರಳದ 6, ಗುಜರಾತ್ನ 5, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರದ ತಲಾ 2, ಪುದುಚೇರಿ ಮತ್ತು ಗೋವಾ, ತೆಲಂಗಾಣ, ಒಡಿಶಾ, ಮಣಿಪುರ, ಆಂಧ್ರಪ್ರದೇಶ, ಹಿಮಾಚಲ ಮತ್ತು ಸಿಕ್ಕಿಂನಲ್ಲಿ ತಲಾ ಒಂದು ಜಿಲ್ಲೆಗಳಿವೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. 2019 ರಲ್ಲಿ ಕೇವಲ 7 ಜಿಲ್ಲೆಗಳಲ್ಲಿ ಮರಣ ಪ್ರಮಾಣವು ಜನನ ಪ್ರಮಾಣಕ್ಕಿಂತ ಹೆಚ್ಚಿತ್ತು. ಆದರೆ 2021 ರ ಆ ಅಂಕಿಅಂಶಗಳಲ್ಲಿ ದೊಡ್ಡ ಬದಲಾವಣೆ ಕಾಣಿಸಿದೆ.
ಈ ಅಂಕಿಅಂಶಗಳು ದಕ್ಷಿಣದ ರಾಜ್ಯಗಳು ಜನ ಸಂಖ್ಯೆ ಕುಸಿತದಿಂದ ಹೆಚ್ಚು ಪರಿಣಾಮ ಬೀರುವ ಸುಳಿವು ನೀಡಿದೆ. ತಮಿಳುನಾಡಿನ ಒಟ್ಟು 37 ಜಿಲ್ಲೆಗಳಲ್ಲಿ 17 ಜಿಲ್ಲೆಗಳಲ್ಲಿ ಜನಸಂಖ್ಯೆಯು ಕ್ಷೀಣಿಸುತ್ತಿದೆ. ಇದರಿಂದ ರಾಜ್ಯದ ಅರ್ಧದಷ್ಟು ಜನಸಂಖ್ಯೆಯಲ್ಲಿ ಇಳಿಕೆಯಾಗುವ ಸುಳಿವು ದೊರೆತಿದೆ. ಕರ್ನಾಟಕ ಮತ್ತು ಕೇರಳದ ಹಲವು ಜಿಲ್ಲೆಗಳು ಸಹ ಇದೇ ರೀತಿಯ ಆತಂಕ ಎದುರಿಸುತ್ತಿವೆ.
ಇದನ್ನೂ ಓದಿ: ಕೂಡಲೆ ಮಕ್ಕಳನ್ನು ಮಾಡಿಕೊಳ್ಳಿ; ನವವಿವಾಹಿತರಿಗೆ ಸಿಎಂ ಸ್ಟಾಲಿನ್ ಮನವಿ
ಜನಸಂಖ್ಯೆ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬ ಅಭಿಪ್ರಾಯಗಳೂ ಇತ್ತೀಚೆಗೆ ವ್ಯಕ್ತವಾಗಿವೆ. ಇದರ ಹಿಂದೆ, ಜನಸಂಖ್ಯೆ ಕುಸಿತದ ಆತಂಕ ಇರುವುದನ್ನು ಗಮನಿಸಬಹುದಾಗಿದೆ.
Published On - 2:39 pm, Thu, 29 May 25