ಕಾಂಗ್ರೆಸ್ ಸರ್ಕಾರಕ್ಕೆ ಸಾವಿರ ದಿನದ ಸಡಗರ: ಕುರ್ಚಿ ಕದನ ಮತ್ತಷ್ಟು ಜೋರಾಗುವ ಸುಳಿವು

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಕಿತ್ತಾಟ ತೀವ್ರಗೊಳ್ಳುವ ಸುಳಿವು ದೊರೆತಿದೆ. ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ ವೇದಿಕೆಯಲ್ಲೇ ಇಬ್ಬರು ನಾಯಕರು ಮೌನ ಯುದ್ಧಕ್ಕೆ ಸಾಕ್ಷಿಯಾಗಿದ್ದು ಕುತೂಲ ಮೂಡಿಸಿದೆ. ಫೆಬ್ರವರಿ 17ರ ನಂತರ ರಾಜಕೀಯ ಬೆಳವಣಿಗೆಗಳು ಚುರುಕುಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾಂಗ್ರೆಸ್ ಸರ್ಕಾರಕ್ಕೆ ಸಾವಿರ ದಿನದ ಸಡಗರ: ಕುರ್ಚಿ ಕದನ ಮತ್ತಷ್ಟು ಜೋರಾಗುವ ಸುಳಿವು
ಡಿಸಿಎಂ ಡಿಕೆ ಶಿವಕುಮಾರ್, ಸಿದ್ದರಾಮಯ್ಯ
Edited By:

Updated on: Feb 14, 2026 | 8:05 AM

ಬೆಂಗಳೂರು, ಫೆಬ್ರವರಿ 14: ಕಾಂಗ್ರೆಸ್​​ನಲ್ಲಿ (Congress) ಅಧಿಕಾರ ಹಂಚಿಕೆ ಕಿತ್ತಾಟದ ಕಿಡಿ ದಿನೇದಿನೆ ಹೆಚ್ಚುತ್ತಿದೆ. ಸಿಎಂ ಸಿದ್ದರಾಮಯ್ಯ ‘ನಾ ಕೊಡೆ’ ಅಂದರೆ, ಡಿಸಿಎಂ ಡಿಕೆ ಶಿವಕುಮಾರ್ ‘ನಾ ಬಿಡೆ’ ಎಂದು ಪಟ್ಟು ಹಿಡಿದಿದ್ದಾರೆ. ಅದರಲ್ಲೂ ದೆಹಲಿಯಲ್ಲಿ ವರಿಷ್ಠರ ಭೇಟಿ ಮಾಡಿ ಬಂದ ಬಳಿಕ ಡಿಕೆಶಿ ವರಸೆಯೇ ಬದಲಾಗಿದೆ. ಬೆಂಗಳೂರಲ್ಲಿ ಶನಿವಾರ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ ನಡೆಯಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವೇದಿಕೆ ಮೇಲೆ ಕೂತಿದ್ದರು. ಸಾಮಾನ್ಯವಾಗಿ ಅಕ್ಕಪಕ್ಕ ಕುಳಿತಿದ್ದಾಗ ಮಾತನಾಡುವುದು ಸಹಜ. ಆದರೆ, ಸಿಎಂ ಹಾಗೂ ಡಿಸಿಎಂ ತುಂಬಾ ಹೊತ್ತು ಮಾತನಾಡಲೇ ಇಲ್ಲ. ಕನಿಷ್ಠಪಕ್ಷ ಪರಸ್ಪರ ಮುಖ ನೋಡುವ ಸಾಹಸಕ್ಕೂ ಕೈ ಹಾಕ್ಲಿಲ್ಲ!

ತುಂಬಾ ಹೊತ್ತಿನ ಬಳಿಕ ಇಬ್ಬರೂ ನದಿ ಮೂಲ ನಿರ್ವಹಣೆ ಪುಸ್ತಕದ ಬಗ್ಗೆ ಅನಿವಾರ್ಯವಾಗಿ ಮಾತನಾಡಿದರು. ಒಟ್ಟಾರೆಯಾಗಿ ಈ ಬೆಳವಣಿಗೆ ‘ಕೈ’ ಒಡಕಿಗೆ ಕನ್ನಡಿ ಹಿಡಿದಿದೆ. ಇದನ್ನು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದು, ದೆಹಲಿಯಿಂದ ರಾಜಕೀಯ ಗನ್ ಹಿಡಿದುಕೊಂಡು ಬಂದಿದ್ದಾರೆ ಎಂದು ಕುಟುಕಿದ್ದಾರೆ.

ವಿಪಕ್ಷಗಳ ಟೀಕೆ, ಪಕ್ಷದೊಳಗೆ ಏನೇ ತಂತ್ರಗಳು ನಡೆದರೂ, ಮೌನಯುದ್ಧ ನಡೆದರೂ ಡಿಕೆ ಶಿವಕುಮಾರ್​​ಗೆ ಮಾತ್ರ ಹೈಕಮಾಂಡ್ ಮೇಲೆ ವಿಶ್ವಾಸ ಹೆಚ್ಚಾದಂತೆ ಕಾಣಿಸುತ್ತಿದೆ. ದೆಹಲಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುವಾಗ, ‘ಏನು ಹೇಳಬೇಕೋ ಅದನ್ನು ವರಿಷ್ಠರಿಗೆ ಹೇಳಿದ್ದೇನೆ’ ಎಂದು ಹೇಳಿದ್ದರು. ಅವರ ಮಾತಿನಲ್ಲಿ ವಿಶ್ವಾಸದ ಬಲ ಮತ್ತಷ್ಟು ಹೆಚ್ಚಾದ್ದಂತೆ ಕಾಣಿಸಿತ್ತು.

ಗುರುವಾರ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮುಂದೆ ಹಕ್ಕು ಮಂಡಿಸಿ ವಾಪಸ್ ಆಗಿರುವ ಡಿಕೆಶಿ, ನಂತರ ಕಾಲವೇ ಉತ್ತರಿಸುತ್ತದೆ ಎಂದಿದ್ದರು. ಇದರೊಂದಿಗೆ, ಫೆಬ್ರವರಿ 17ರ ನಂತರ ಗೇಮ್ ಪ್ಲ್ಯಾನ್ ಚೇಂಜ್ ಆಗಲಿದೆಯೇ ಎಂಬ ಚರ್ಚೆ ಗರಿಗೆದರಿದೆ.

ಹೈಕಮಾಂಡ್ ಮಧ್ಯಪ್ರವೇಶ ಮಾಡುತ್ತೆ ಎಂಬುದು ಡಿಕೆಶಿ ಹಾಗೂ ಬಣದ ವಿಶ್ವಾಸ. ಆದರೆ ಬಜೆಟ್‌ ದಿನಾಂಕ ಘೋಷಿಸಿ, ಲೆಕ್ಕಪತ್ರ ಮಂಡಿಸಲು ಸಜ್ಜಾಗಿರುವ ಸಿಎಂ ಮುಂದಿನ ಒಂದು ತಿಂಗಳು ಬ್ಯುಸಿ ಎಂಬ ಸಂದೇಶ ರವಾನಿಸಿದ್ದಾರೆ. ಈ ನಡುವೆ ಫೆಬ್ರವರಿ 17ರ ಬಳಿಕ ಇಬ್ಬರಿಗೂ ಹೈಕಮಾಂಡ್ ಬುಲಾವ್ ನೀಡುತ್ತದೆ ಎನ್ನಲಾಗಿದೆ.

ಎಐಸಿಸಿ ಮೂಲಗಳು ಕೊಟ್ಟ ಮಾಹಿತಿ ಪ್ರಕಾರ, ಸಚಿವರು, ನಾಯಕರನ್ನು ವರಿಷ್ಠರು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದಾರೆ. ಅಧಿಕಾರ ಹಂಚಿಕೆ ವಿಚಾರವಾಗಿ ಸಿಎಂ, ಡಿಸಿಎಂ ಜತೆ ಪ್ರತ್ಯೇಕವಾಗಿ ಮಾತನಾಡುವ ಸಾಧ್ಯತೆ ಇದೆ.

ಸರ್ಕಾರಕ್ಕೆ ಅಜ್ಜಯ್ಯನ ಶಕ್ತಿ, ಮುಂದೇನೋ ಗೊತ್ತಿಲ್ಲ ಎಂದ ಡಿಕೆಶಿ

ಕಾಂಗ್ರೆಸ್​​ನ ಒಟ್ಟಾರೆ ಬೆಳವಣಿಗೆಗಳ ಮಧ್ಯೆ, ಪ್ರಾರ್ಥನೆ ಮೇಲೆ ನಂಬಿಕೆ ಇಟ್ಟಿರುವ ಡಿಕೆ ಶಿವಕುಮಾರ್, ನೊಣವಿನಕೆರೆ ಅಜ್ಯಯ್ಯನ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಅಜ್ಜಯ್ಯನ ಶಕ್ತಿ ಇಲ್ಲದೇ ಇದ್ದರೆ ಈ ಸರ್ಕಾರ ಇಷ್ಟು ಶಕ್ತಿಯುತವಾಗಿ ಇರುತ್ತಿರಲಿಲ್ಲ. ಮುಂದೆ ಏನಾಗುತ್ತದೆ ಎಂಬುದನ್ನು ನಾನು ಚರ್ಚೆ ಮಾಡುವುದಿಲ್ಲ ಎಂದು ಟ್ವಿಸ್ಟ್ ಕೊಟ್ಟಿದ್ದಾರೆ.

ಇದನ್ನೂ ಓದಿ: ದೆಹಲಿಗೆ ಬಂದಿದ್ದೇ ರಾಜಕೀಯ ಮಾಡಲು, ಎಲ್ಲ ಮಾತಾಡದೆ ಸುಮ್ನೆ ಹೋಗ್ತೀನಾ? ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಮಾತು

ಈ ಬೆಳವಣಿಗೆ ಡಿಕೆಶಿ ಆಪ್ತರ ವಿಶ್ವಾಸ ಹೆಚ್ಚಿಸಿದ್ರೆ, ಸಿಎಂ ಆಪ್ತರು ತ್ಯಾಗದ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ. ಈ ನಡುವೆ ಸರ್ಕಾರ ಸಾವಿರ ದಿನದ ಸಂಭ್ರಮದಲ್ಲಿದೆ. ಇಂದು ಹಾವೇರಿಯಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಪಟ್ಟದಾಟದ ನಡುವೆ, ಸಾವಿರ ದಿನದ ಸಂಭ್ರಮ ನಡೆಯುತ್ತಿದೆ. ಇಂದಿನ ಕಾರ್ಯಕ್ರಮದತ್ತ ಎಲ್ಲರ ಚಿತ್ತ ನೆಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ