ರಾಯಚೂರಿನಲ್ಲಿ ಮಕ್ಕಳ ಎದುರೇ ಹೆಂಡತಿ, ಅಜ್ಜಿಯನ್ನ ಕೊಚ್ಚಿ ಕೊಂದ! ಕಾರಣ?

ಅವರಿಬ್ಬರು ಜಾತಿ ಬೇಧ ಭಾವ ಧಿಕ್ಕರಿಸಿ ಪ್ರೀತಿಸಿ ಮದುವೆಯಾಗಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ನಾಲ್ಕು ಜನ ಹೆಣ್ಣುಮಕ್ಕಳೂ ಜನಿಸಿದ್ದರು. ಆದ್ರೆ, ಅದೇನಾಯ್ತೋ ಏನೋ ಗೊತ್ತಿಲ್ಲ, ಇಂದು(ಆ.23) ನಸುಕಿನಲ್ಲಿ ಆ ಪಾಪಿ ತನ್ನನ್ನ ನಂಬಿ ಬಂದಿದ್ದ ಹೆಂಡತಿ, ಅಜ್ಜಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ. ಹಾಗಾದರೆ ಆಗಿದ್ದೇನು ಅಂತೀರಾ? ಈ ಸ್ಟೋರಿ ಓದಿ.

ರಾಯಚೂರಿನಲ್ಲಿ ಮಕ್ಕಳ ಎದುರೇ ಹೆಂಡತಿ, ಅಜ್ಜಿಯನ್ನ ಕೊಚ್ಚಿ ಕೊಂದ! ಕಾರಣ?
ರಾಯಚೂರಿನಲ್ಲಿ ಮಕ್ಕಳ ಎದುರೇ ಹೆಂಡತಿ, ಅಜ್ಜಿಯನ್ನ ಕೊಚ್ಚಿ ಕೊಂದ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 23, 2024 | 7:37 PM

ರಾಯಚೂರು, ಆ.23: ಮಕ್ಕಳ ಎದುರೇ ಹೆಂಡತಿ ಹಾಗೂ ಅಜ್ಜಿಯನ್ನ ಕೊಚ್ಚಿ ಕೊಂದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು(Lingasugur) ತಾಲ್ಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದಿದೆ. ಮುದಗಲ್ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಿ ದರ್ಜೆಯಲ್ಲಿ ಗುತ್ತಿಗೆ ಆಧಾರದಲ್ಲಿ ಆರೋಪಿ ದುರ್ಗಪ್ಪ ಕೆಲಸ ಮಾಡುತ್ತಿದ್ದ. ಹೀಗಾಗಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಕ್ವಾರ್ಟರ್ಸ್​ನಲ್ಲೇ ದುರ್ಗಪ್ಪ‌ ಕುಟುಂಬ ಸಮೇತ ಇದ್ದ. ಆದ್ರೆ, ಇಂದು(ಶುಕ್ರವಾರ) ನಸುಕಿನ ಜಾವ ನಾಲ್ಕು ಗಂಟೆಗೆ ಪತ್ನಿ ಜ್ಯೋತಿ ಹಾಗೂ ಅಜ್ಜಿ ದ್ಯಾಮವ್ವ ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಹಾಗೂ ಅಜ್ಜಿಯನ್ನ ಕೊಂದು ಎಸ್ಕೇಪ್

ದುರ್ಗಪ್ಪ ಕಾಲೇಜು ಓದುವ ವೇಳೆ ಜ್ಯೋತಿಯನ್ನ ಪ್ರೀತಿಸಿ ಮದುವೆಯಾಗಿದ್ದ. ಅಂತರ್ಜಾತಿ ವಿವಾಹ ವಿವಾಹವಾಗಿದ್ದರಿಂದ ಜ್ಯೋತಿ ಮನೆಯವರು ದೂರವಾಗಿದ್ದರು. ಆದ್ರೆ ,ದುರ್ಗಪ್ಪ ಪತ್ನಿಯನ್ನ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಹೀಗೆ ಸಂಸಾರ ನಡೆಸಿ ನಾಲ್ಕು ಹೆಣ್ಣು-ಮಕ್ಕಳಿಗೆ ಈ ದಂಪತಿ ಸಾಕ್ಷಿಯಾಗಿದ್ದರು. ಹೀಗಿರುವಾಗ ದುರ್ಗಪ್ಪನಿಗೆ ಕುಡಿಯುವ ಚಟ ಕೂಡ ಇತ್ತು. ಕಂಠಪೂರ್ತಿ‌ ಕುಡಿದು ಒಮ್ಮೊಮ್ಮೆ ಪತ್ನಿ ಜೊತೆ ಜಗಳವಾಗಿದ್ದು ಉಂಟು. ಹೀಗೆ ಮದ್ಯಪಾನ ಹೆಚ್ಚಾಗಿದ್ದರಿಂದ ಆತ ಅನಾರೋಗ್ಯಕ್ಕೆ ತುತ್ತಾಗಿದ್ದನಂತೆ. ಈ ಮಧ್ಯೆ ಅಜ್ಜಿ ದ್ಯಾಮವ್ವ ಮೊಮ್ಮಗನ ಕಡೆ ಇರ್ತಿನಿ ಎಂದು ಕಳೆದ ನಾಲ್ಕು ದಿನಗಳ ಹಿಂದೆ ದುರ್ಗಪ್ಪನ ಮನೆಗೆ ಬಂದಿದ್ದಳು.

ಇದನ್ನೂ ಓದಿ:ಬೆಂಗಳೂರು: ಅಂತಿಮ ದರ್ಶನಕ್ಕೆ ಬಂದು ಸ್ನೇಹಿತನಿಂದಲೇ ಕೊಲೆಯಾದ ವ್ಯಕ್ತಿ

ಈ ಮಧ್ಯೆ ಇಂದು ನಸುಕಿನಲ್ಲಿ ಪತ್ನಿ ಜ್ಯೋತಿ ಹಾಗೂ ಅಜ್ಜಿ ದ್ಯಾಮವ್ವಳನ್ನ ಕೊಡಲಿಯಿಂದ ಕೊಚ್ಚಿ, ಕೊಡಲಿಯನ್ನ ತಾನೂ ಕೆಲಸ ಮಾಡ್ತಿದ್ದ ಆಸ್ಪತ್ರೆ ಮೂಲೆಯೊಂದರಲ್ಲಿಟ್ಟು ಎಸ್ಕೇಪ್ ಆಗಿದ್ದ. ಬಳಿಕ ಮುದಗಲ್ ಪೊಲೀಸರು ಶೋಧ ಕಾರ್ಯ ನಡೆಸಿ ಆಸ್ಪತ್ರೆ ಪಕ್ಕದ ಇಂದಿರಾ ಕ್ಯಾಂಟಿನ್​​ನಲ್ಲಿ ಅವಿತು ಕೂತಿದ್ದ ಆರೋಪಿ ದುರ್ಗಪ್ಪನನ್ನ ವಶಕ್ಕೆ ಪಡೆದಿದ್ದಾರೆ.

ನಿಗೂಢವಾಗಿ ಉಳಿದ ಅಸಲಿ ಕಾರಣ?

ಇಷ್ಟೆಲ್ಲಾ ಆದರೂ ಜೋಡಿ ಕೊಲೆಗೆ ಅಸಲಿ ಕಾರಣ ಏನು ಎನ್ನುವುದು ನಿಗೂಢವಾಗಿದೆ. ಕಳೆದ ಎಂಟು ತಿಂಗಳಿನಿಂದ ಸಂಬಳ‌ ಆಗದಿದ್ದಕ್ಕೆ ನೊಂದಿದ್ದ. ಹೀಗಾಗಿ ಇದೇ ಕೊರಗಿನಲ್ಲಿ ಹೆಚ್ಚು ಕುಡಿತ ಶುರುಮಾಡಿ, ಅದೇ ಕೋಪದಲ್ಲಿ ಕೊಂದಿರಬಹುದು ಎಂದು ಹೇಳಲಾಗುತ್ತಿದೆ. ಮುದಗಲ್ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ‌ ದುರ್ಗಪ್ಪನನ್ನ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಆದ್ರೆ, ಪತ್ನಿ ಹಾಗೂ ಅಜ್ಜಿ ಕೊಲೆ ಮಾಡೋಕೆ ಕಾರಣ ಏನು ಅನ್ನೋದನ್ನ ಮಾತ್ರ ಬಾಯಿ ಬಿಡ್ತಿಲ್ಲ. ಹೀಗಾಗಿ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ