ರಾಯಚೂರು: ಬೆಂಕಿ ಅವಘಡಕ್ಕೆ 700 ಕುರಿಗಳ ಸಮೇತ ಶೆಡ್ ಸುಟ್ಟು ಭಸ್ಮ; ಗರ್ಭದಲ್ಲೇ ಮರಿಗಳ ಮಾರಣ ಹೋಮ

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮುಕ್ಕುಂದ ಬಳಿ ಕುರಿ ಶೆಡ್‌ಗೆ ತಡರಾತ್ರಿ ಬೆಂಕಿ ತಗುಲಿ ದಾರುಣ ಘಟನೆ ಸಂಭವಿಸಿದೆ. ಸುಮಾರು 700 ಕುರಿಗಳು ಬೆಂಕಿಗಾಹುತಿಯಾಗಿವೆ. ಮಾಲೀಕರು ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದು ಸಿಂಧನೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.

ರಾಯಚೂರು: ಬೆಂಕಿ ಅವಘಡಕ್ಕೆ 700 ಕುರಿಗಳ ಸಮೇತ ಶೆಡ್ ಸುಟ್ಟು ಭಸ್ಮ; ಗರ್ಭದಲ್ಲೇ ಮರಿಗಳ ಮಾರಣ ಹೋಮ
ಕುರಿಗಳು ಬೆಂಕಿಗಾಹುತಿ
Image Credit source: tv9 kannada
Edited By:

Updated on: Mar 06, 2026 | 7:05 PM

ರಾಯಚೂರು, ಮಾರ್ಚ್​ 06: ಅದು ರಣಭೀಕರ ಅಗ್ನಿ (fire) ಅವಘಡ. ರಾತ್ರೋರಾತ್ರಿ ಕುರಿಗಳ ಶೆಡ್​ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿತ್ತು. ಇಡೀ ಕುರಿ (sheep) ಶೆಡ್ ಬೆಂಕಿಗಾಹುತಿಯಾಗಿದ್ದು, ಸುಮಾರು 700 ಕುರಿಗಳು ಸುಟ್ಟು ಕರಕಲಾಗಿವೆ‌‌. ಇನ್ನೇನು ಕೆಲವೇ ದಿನಗಳಲ್ಲಿ ಮರಿ ಹಾಕಬೇಕಿದ್ದ ಕುರಿಗಳು ಗರ್ಭದಲ್ಲಿರುವ ಮರಿ ಸಮೇತ ಸುಟ್ಟುಹೋಗಿವೆ. ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮುಕ್ಕುಂದ ಗ್ರಾಮದ ಹೊರ ಭಾಗದಲ್ಲಿ ಘಟನೆ ನಡೆದಿದೆ.

1 ಕೋಟಿ ರೂ ವೆಚ್ಚದ ಕುರಿ ಶೆಡ್ ಬೆಂಕಿಗಾಹುತಿ

ಹೇಮಲತಾ ಮಧುಸೂದನ್ ಎನ್ನುವವರು ಸುಮಾರು 1 ಕೋಟಿ ರೂ ವೆಚ್ಚದಲ್ಲಿ ಕುರಿಗಳ ಶೆಡ್ ನಿರ್ಮಿಸಿದ್ದರು. ಕಳೆದ ಮೂರು ವರ್ಷಗಳಿಂದ ನೂರಾರು ಕುರಿಗಳನ್ನ ಸಾಕಾಣಿಕೆ ಮಾಡುತ್ತಿದ್ದರು. ಶೆಡ್​ನ ಬಂಡವಾಳದ ಹಣದಲ್ಲಿ ಕೇಂದ್ರ ಸರ್ಕಾರಿಂದ 47 ಲಕ್ಷ ರೂ ಸಬ್ಸಿಡಿ ಹೇಮಲತಾಗೆ ಬಂದಿತ್ತು. ಉಳಿದ ಹಣವನ್ನ ಸಾಲ ಸೋಲ‌ ಮಾಡಿ ಶೆಡ್ ನಿರ್ಮಿಸಿದ್ದರು.

ಇದನ್ನೂ ಓದಿ: ರಾಯಚೂರಿನಲ್ಲಿ ತಿಪ್ಪೆ ಸೇರಿದ ಸರ್ಕಾರಿ ಆಸ್ಪತ್ರೆ ಔಷಧಿ: ಸ್ಥಳೀಯರ ಆಕ್ರೋಶ

ಶೆಡ್​ನಲ್ಲಿ ಸುಮಾರು 700ಕ್ಕೂ ಹೆಚ್ಚು ಕುರಿಗಳನ್ನ ಸಾಕಾಣಿಕೆ ಮಾಡಲಾಗುತ್ತಿತ್ತು. ಈ ಕುರಿಗಳನ್ನ ನೋಡಿಕೊಳ್ಳುವುದಕ್ಕೆ 6 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ‌ 2.30ರ ಸುಮಾರಿಗೆ ಕುರಿ ಶೆಡ್​ಗೆ ಬೆಂಕಿ ತಗುಲಿದೆ. ಇತ್ತ ಕಾರ್ಮಿಕರು ಗಾಢ ನಿದ್ರೆಯಲ್ಲಿದ್ದ ಹಿನ್ನೆಲೆ ತಡವಾಗಿ ವಿಷಯ ಗೊತ್ತಾಗಿದೆ. ನಂತರ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಬರುವಷ್ಟರಲ್ಲಿ ದೊಡ್ಡ ದುರಂತವೇ ನಡೆದು ಹೋಗಿದೆ.

ತಡ ರಾತ್ರಿ ಘಟನೆ ಬಳಿಕ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಸ್ಥಳೀಯರ ಸಹಾಯದೊಂದಿಗೆ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ಘಟನೆಯಲ್ಲಿ ಇಡೀ ಕುರಿ ಶೆಡ್ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಸುಮಾರು‌ 700 ಕುರಿಗಳು ಸುಟ್ಟು ಭಸ್ಮವಾಗಿವೆ. ಈ ಪೈಕಿ 100ಕ್ಕೂ ಹೆಚ್ಚು ಕುರಿಗಳು ಇನ್ನೇನು ಕೆಲವೇ ದಿನಗಳಲ್ಲಿ ಮರಿ ಹಾಕಬೇಕಿದ್ದವು.

ಸೂಕ್ತ ಪರಿಹಾರಕ್ಕೆ ಸರ್ಕಾರ ಒತ್ತಾಯ

ಇತ್ತ ಶೆಡ್​ನಲ್ಲಿ 700ಕ್ಕೂ ಹೆಚ್ಚು ಕುರಿಗಳ ಪೈಕಿ 525 ಕುರಿಗಳಿಗೆ ವಿಮೆ ಇದೆ. ಈ ಬಗ್ಗೆ ಈಗಾಗಲೇ ವಿಮೆ ಕಂಪನಿಗೂ ಮಾಹಿತಿ ನೀಡಲಾಗಿದೆ. ಘಟನೆಯಿಂದ ಸುಮಾರು 2 ಕೋಟಿ ರೂ ವರೆಗೆ ನಷ್ಟವಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಅಂತ ಶೆಡ್ ಮಾಲೀಕರ ಸಂಬಂಧಿ ಪದ್ಮಾನಾಯ್ಡು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ರಾಯಚೂರು: ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಸನ್ನದ್ಧ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ

ಸದ್ಯ ಘಟನೆ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us