
ರಾಯಚೂರು, ಮೇ 17: ಜಿಲ್ಲೆಯ ಯಾಪಲದಿನ್ನಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಭೀಕರ ಕೊಲೆ (kill) ಹಾಗೂ ಅಪ್ರಾಪ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. ಅನ್ಯಧರ್ಮದ ಯುವಕನೊಬ್ಬ ಹಿಂದೂ ಧರ್ಮದ ಅಪ್ರಾಪ್ತ ಬಾಲಕಿಯನ್ನು ಓಡಿಸಿಕೊಂಡು ಹೋಗಿದ್ದನ್ನು ಪ್ರಶ್ನಿಸಿದಕ್ಕೆ ಗ್ರಾಮಸ್ಥನನ್ನೇ ಕೊಲೆ ಮಾಡಿದ್ದ ಆರೋಪಿಗಳು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ತಲೆಮರೆಸಿಕೊಂಡಿದ್ದ ಲವ್ ಬರ್ಡ್ಸ್ (Lovebirds)
ಮತ್ತು ಆತನ ಗ್ಯಾಂಗ್ ಅನ್ನು ಯಾಪಲದಿನ್ನಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಮೇ 5ರಂದು ರಾಯಚೂರು ತಾಲೂಕಿನ ಯಾಪಲದಿನ್ನಿ ಗ್ರಾಮದ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಸ್ಲಂ ಎಂಬಾತ ಕರೆದೊಯ್ಯುತ್ತಿದ್ದ. ರಾತ್ರಿ 2 ಗಂಟೆ ಸಮಯ. ಯಾಪಲದಿನ್ನಿ ಗ್ರಾಮದ ಜನ ಗಾಢ ನಿದ್ರೆಯಲ್ಲಿದ್ದರು. ಅದರಲ್ಲೂ ಸೆಕೆ ಹಿನ್ನಲೆ ಜನರು ಮನೆ ಮಾಳಿಗೆ ಮೇಲೆ ಮಲಗುತ್ತಾರೆ. ಅದೇ ರೀತಿ ಈಶಪ್ಪ ತಮ್ಮ ಮನೆ ಮೇಲೆ ಮಲಗಿದ್ದರು. ತಡ ರಾತ್ರಿ ಮನೆ ಹಿಂಭಾಗದಲ್ಲಿ ಯಾರೋ ಓಡಾಡುವುದು, ಗುಸುಗುಸು ಮಾತನಾಡುವುದು ಕೇಳಿಸಿದೆ. ಹೀಗಾಗಿ ಕೆಳಕ್ಕೆ ಓಡಿ ಬಂದಿದ್ದ ಈಶಪ್ಪ ಅಲ್ಲಿದ್ದವರನ್ನ ಪ್ರಶ್ನಿಸಿದ್ದಾರೆ. ಆಗ ಅಲ್ಲಿದ್ದ ಪ್ರಿಯಕರ ಆಸ್ಲಂ ಹಾಗೂ ಆತನ ಸ್ನೇಹಿತ ಹುಸೇನ್ ಸೇರಿ ಈಶಪ್ಪನ ಕತ್ತಿಗೆ ಹಗ್ಗ ಬಿಗಿದು, ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ್ದರು.
ಕೊಲೆಗೃತ್ಯದ ಬಳಿಕ ಜಮೀರ್ ಹಾಗೂ ಬಡೇಸಾಬ್ ಎಂಬ ಇನ್ನಿಬ್ಬರು ಆರೋಪಿಗಳ ಸಹಾಯದಿಂದ ಅಪ್ರಾಪ್ತೆಯನ್ನು ಕರೆದುಕೊಂಡು ಪ್ರಿಯಕರ ಎಸ್ಕೇಪ್ ಆಗಿದ್ದ. ಯಾಪಲದಿನ್ನಿಯಿಂದ ತೆಲಂಗಾಣದ ಗದ್ವಾಲ್, ಅಲ್ಲಿಂದ ಆಂಧ್ರಪ್ರದೇಶದ ಕರ್ನೂಲ್ ಹಾಗೂ ಹೈದರಾಬಾದ್ ಮೂಲಕ ಮಹಾರಾಷ್ಟ್ರದ ಸೋಲಾಪುರ ತಲುಪಿ ತಲೆಮರೆಸಿಕೊಂಡಿದ್ದರು.
ಇದನ್ನೂ ಓದಿ: ಮದುವೆಯಾಗುತ್ತೇನೆಂದು ನಂಬಿಸಿ ಕೈಕೊಟ್ಟ ಇಂಜಿನಿಯರ್; ಫೋಟೋ, ವೀಡಿಯೋ ಸಮೇತ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ!
ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದ ಯಾಪಲದಿನ್ನಿ ಪೊಲೀಸರು ಸದ್ಯ ಸೋಲಾಪುರದಲ್ಲಿ ಅಡಗಿದ್ದ ಮುಖ್ಯ ಆರೋಪಿ ಆಸ್ಲಂ, ಹುಸೇನ್, ಜಮೀರ್ ಹಾಗೂ ಬಡೇಸಾಬ್ನನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಸದ್ಯ ಯಾಪಲದಿನ್ನಿ ಠಾಣೆಯಲ್ಲಿ ಕೊಲೆ, ಕಿಡ್ನಾಪ್ ಹಾಗೂ ಪೋಕ್ಸೋ ಕಾಯ್ದೆಯಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಇನ್ನು ಅಪ್ರಾಪ್ತೆಯನ್ನು ಬಾಲಮಂದಿರಕ್ಕೆ ಶಿಫ್ಟ್ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.