
ರಾಯಚೂರು, ಮಾರ್ಚ್ 27: ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣ (death) ಹೊಂದಿರುವಂತಹ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಬಳಿ ನಡೆದಿದೆ. ಉಮಾವತಿ(35), ರತ್ನ(24), ಮಹೇಶ್(28) ಮತ್ತು ಶಿವಾನಂದ(24) ಮೃತ ದುರ್ದೈವಿಗಳು. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಕೋಸಗಿ ಆಸ್ಪತ್ರೆಗೆ ಶವಗಳ ಸ್ಥಳಾಂತರ ಮಾಡಲಾಗಿದೆ.
ಒಂದೇ ಕುಟುಂಬದವರು ಆಂಧ್ರಪ್ರದೇಶದ ಕೋಸಗಿ ತಾಲೂಕಿನ ರಾಜಲಬಂಡ ಅಣೆಕಟ್ಟಿನ ಕೊನೆ ಭಾಗದಲ್ಲಿರುವ ಸಾತುನೂರು ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಮಧ್ಯಾಹ್ನ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ತಗ್ಗು ಪ್ರದೇಶದಲ್ಲಿ ಸಿಲುಕಿ ನಾಲ್ವರ ಸಾವನ್ನಪ್ಪಿದ್ದಾರೆ. ಮೃತರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಕೋಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿರಗುಡಿ ಎಂಬಲ್ಲಿ ಸಿಡಿಲು ಬಡೆದು ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ನಡೆದಿದೆ. ಸುನಂದಾ (42) ಮೃತ ಮಹಿಳೆ. ತಡರಾತ್ರಿ ಗುಡುಗು ಸಹಿತ ಮಳೆ ಸುರಿದಿದೆ. ಈ ವೇಳೆ ಹೊಲದಲ್ಲಿ ಕಟಾವು ಮಾಡಿ ಬರುವ ವೇಳೆ ಏಕಾಏಕಿ ಸಿಡಿಲು ಅಪ್ಪಳಿಸಿದ್ದು, ಸುನಂದಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ತಿರದಲ್ಲಿದ್ದ ಇನ್ನಿಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತೂಪಲ್ಲಿ ಗ್ರಾಮದ ಬಳಿಯ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ.
ಇದನ್ನೂ ಓದಿ: ವಿಜಯಪುರದಲ್ಲೊಂದು ಮನಕಲಕುವ ಘಟನೆ : ಪುಟ್ಟ ಪುಟ್ಟ 3 ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಆಂಧ್ರಪ್ರದೇಶದ ಮದನಪಲ್ಲಿ ನಿವಾಸಿ ಶಾಮೀರ್(22) ಮೃತ ದುರ್ದೈವಿ. ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:01 pm, Fri, 27 March 26