ದಶಕಗಳ ಕನಸು ನನಸು: ಮೆಜೆಸ್ಟಿಕ್‌ TO ಏರ್‌ಪೋರ್ಟ್‌ ಸಬ್​ಅರ್ಬನ್ ರೈಲು ಯೋಜನೆಗೆ ಗ್ರೀನ್ ಸಿಗ್ನಲ್

ಬೆಂಗಳೂರಿನ ದಶಕಗಳ ಕನಸು ನನಸಾಗಿದೆ. ಮೆಜೆಸ್ಟಿಕ್​​​ನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಕೊನೆಗೂ ಕೇಂದ್ರ ರೈಲ್ವೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹಾಗಾದ್ರೆ, ಈ ಯೋಜನೆಗೆ ಎಷ್ಟು ವೆಚ್ಚ? ಪೂರ್ಣಗೊಂಡು ಪ್ರಯಾಣಿಕರು ಯಾವಾಗ ಸಬ್​ಅರ್ಬನ್ ರೈಲಿನ ಪ್ರಯಾಣಿಸಬಹುದು ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ದಶಕಗಳ ಕನಸು ನನಸು: ಮೆಜೆಸ್ಟಿಕ್‌ TO ಏರ್‌ಪೋರ್ಟ್‌ ಸಬ್​ಅರ್ಬನ್ ರೈಲು ಯೋಜನೆಗೆ ಗ್ರೀನ್ ಸಿಗ್ನಲ್
Suburban Railway
Edited By:

Updated on: Jan 24, 2026 | 9:13 PM

ಬೆಂಗಳೂರು, (ಜನವರಿ 24): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (kempegowda international airport)  ಉಪನಗರ ರೈಲು  (suburban railway)ಸಂಪರ್ಕ ಕಲ್ಪಿಸುವ ಯೋಜನೆಗೆ ಕೊನೆಗೂ ಹಸಿರು ನಿಶಾನೆ ದೊರೆತಿದೆ. ಹೌದು…ಮೆಜೆಸ್ಟಿಕ್​​​​ನಿಂದ ಬೆಂಗಳೂರು (Bengaluru) ಏರ್​ಪೋರ್ಟ್​ ವರೆಗೆ 4,100 ಕೋಟಿ ರೂಪಾಯಿ ವೆಚ್ಚದ ಸಬ್​ಅರ್ಬನ್ ರೈಲು ಯೋಜನೆಗೆ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಇನ್ನುಸುಮಾರು 4,100 ಕೋಟಿ ರೂ.ವೆಚ್ಚದ ಯೋಜನೆಯ ಅಂತಿಮ ವಿನ್ಯಾಸಕ್ಕೂ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಸಮ್ಮತಿ ಸೂಚಿಸಿದೆ. ಒಟ್ಟು 8.5 ಕಿ.ಮೀ ರೈಲು ಮಾರ್ಗವಿದ್ದು, ಈ ಯೋಜನೆ 2030ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಬಹುಮುಖ್ಯವಾಗಿ ಈ ಯೋಜನೆಯಿಂದ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ.

2030ರ ವೇಳೆಗೆ ಪೂರ್ಣಗೊಳಿಸುವ ಗುರಿ

ಈ ಯೋಜನೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಅನುದಾನ ನೀಡಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಮತ್ತು ಭಾರತೀಯ ರೈಲ್ವೆಯಿಂದ ಈಕ್ವಿಟಿ ಹಣಕಾಸು ಪಡೆಯಲು ಪ್ರಯತ್ನಗಳು ನಡೆಯುತ್ತಿವೆ. ಯೋಜನೆಯ ವರದಿಯನ್ನು ರೈಟ್ಸ್ ಸಂಸ್ಥೆ ಸಿದ್ಧಪಡಿಸಿದ್ದು, ಈ ಸಂಪೂರ್ಣ ಸಂಪಿಗೆ ಲೈನ್ ಮತ್ತು ವಿಮಾನ ನಿಲ್ದಾಣದ ಕೊಂಡಿಯನ್ನು ಮಾರ್ಚ್ 2030ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ: ವಿಶ್ವದಲ್ಲೇ ಹೆಚ್ಚು ಟ್ರಾಫಿಕ್ ಇರುವ ನಗರ: ಬೆಂಗಳೂರಿಗೆ 2ನೇ ಸ್ಥಾನ!

ಮೆಜೆಸ್ಟಿಕ್ ಟು ಏರ್​​ಪೋರ್ಟ್ ಮಾರ್ಗ

ಈ ಮಾರ್ಗ ಕೆಎಸ್‌ಆರ್ ಬೆಂಗಳೂರು ಸಿಟಿಯಿಂದ ಹೊರಟು ಯಶವಂತಪುರ, ಯಲಹಂಕ ಮೂಲಕ ಸಾಗಿ, ಟ್ರಂಪೆಟ್ ಇಂಟರ್‌ಚೇಂಜ್ ಬಳಿ ತಿರುವು ಪಡೆದು, ಬಿಕೆ ಹಳ್ಳಿ ಮತ್ತು ಏರೋಸ್ಪೇಸ್ ಪಾರ್ಕ್ ಮೂಲಕ ದೇವನಹಳ್ಳಿ ಏರ್‌ಪೋರ್ಟ್ ಟರ್ಮಿನಲ್ ತಲುಪಲಿದೆ.

ಬೆಂಗಳೂರು ಉಪನಗರ ರೈಲು ಯೋಜನೆಯ ಮೊದಲನೇ ಕಾರಿಡಾರ್ ಆದ ‘ಸಂಪಿಗೆ ಲೈನ್’ ಅಡಿಯಲ್ಲಿ ಮೆಜೆಸ್ಟಿಕ್‌ನಿಂದ ದೇವನಹಳ್ಳಿಯವರೆಗೆ ಈ ವಿಮಾನ ನಿಲ್ದಾಣದ ಸಂಪರ್ಕ ಕೊಂಡಿಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಟ್ರಂಪೆಟ್ ಜಂಕ್ಷನ್‌ನಿಂದ ವಿಮಾನ ನಿಲ್ದಾಣದ ಟರ್ಮಿನಲ್‌ವರೆಗೆ ಒಟ್ಟು 8.5 ಕಿ.ಮೀ ಉದ್ದದ ಮಾರ್ಗವನ್ನು ಇದು ಒಳಗೊಂಡಿದೆ. ಈ ಯೋಜನೆಯಲ್ಲಿ 5.5 ಕಿ.ಮೀ ಮಾರ್ಗವು ನೆಲಮಟ್ಟದಲ್ಲಿ ಹಾಗೂ ಉಳಿದ 3.5 ಕಿ.ಮೀ ಮಾರ್ಗವು ವಿಮಾನ ನಿಲ್ದಾಣದ ಸಂಕೀರ್ಣದೊಳಗೆ ಸಂಪೂರ್ಣ ಭೂಗತವಾಗಿ ನಿರ್ಮಾಣವಾಗಲಿದೆ.

ಟ್ರಾಫಿಕ್ ಸಮಸ್ಯೆಗೆ ಮುಕ್ತಿ

ಟ್ರಾಫಿಕ್‌ನಿಂದ ಬಳಲುತ್ತಿರುವ ಬೆಂಗಳೂರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಉಪನಗರ ರೈಲು ಯೋಜನೆ ಮಹತ್ವದ್ದಾಗಿದೆ.   ಪ್ರಸ್ತುತ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳಲ್ಲಿ ಪ್ರತಿದಿನ ಬಹಳಷ್ಟು ವಾಹನಗಳು ಸಂಚರಿಸುತ್ತಿವೆ. ಇದರಿಂದ ಈ ಭಾಗದಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈಗ ಈ ರೈಲು ಮಾರ್ಗವು ಕಾರ್ಯಾರಂಭ ಮಾಡಿದರೆ ವಾಹನ ಸಂಚಾರ ದಟ್ಟಣೆಗೆ ಮುಕ್ತಿ ಸಿಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ