40 ವರ್ಷದ ಅಂಕಲ್, 19ರ ಯುವತಿಯ ಪ್ರೀತಿ ಪ್ರೇಮ: ಪ್ರೇಮಲೋಕದಲ್ಲಿ ತೇಲಾಡುವಾಗಲೇ ನಡೆಯಿತು ಘನಘೋರ!

ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ, ಪ್ರೀತಿಗೆ ಯಾವುದೇ ಗಡಿಗಳಿಲ್ಲ ಅಂತಾರೆ. ಹಾಗೆ ಪ್ರೀತಿಗೆ ಕಣ್ಣಿಲ್ಲ ಅದು ಹೃದಯವನ್ನೇ ಆರಿಸಿಕೊಳ್ಳುತ್ತದೆ ಅಂತಾರೆ. ಅದರಂತೆ 40 ವರ್ಷದ ವ್ಯಕ್ತಿ ಹಾಗೂ 19 ವಯಸ್ಸಿನ ಯುವತಿ ನಡುವೆ ಪ್ರೇಮಾಂಕುರವಾಗಿದೆ. ಬಳಿಕ ಜೋಡಿ ಪ್ರೇಮಲೋಕದಲ್ಲಿ ತೇಲಾಡಲು ಶುರುಮಾಡಿದ್ದು, ಇದು ಯುವತಿಯ ಮನೆಯವರ ಕಣ್ಣಿಗೆ ಬಿದ್ದಿದೆ. ಮುಂದೆ ನಡೆದಿದ್ದು ಘನಘೋರ. ಅಷ್ಟಕ್ಕೂ ಈ ಲವ್ ಕಹಾನಿಯಲ್ಲೇನಾಯ್ತು|

40 ವರ್ಷದ ಅಂಕಲ್, 19ರ ಯುವತಿಯ ಪ್ರೀತಿ ಪ್ರೇಮ: ಪ್ರೇಮಲೋಕದಲ್ಲಿ ತೇಲಾಡುವಾಗಲೇ ನಡೆಯಿತು ಘನಘೋರ!
Chaluva
Edited By:

Updated on: Dec 19, 2025 | 7:06 PM

ರಾಮನಗರ, (ಡಿಸೆಂಬರ್ 19): ಆತನಿಗೆ 40 ವರ್ಷ. ಆ ಯುವತಿಗೆ 19 ವರ್ಷ. ಇಬ್ಬರ ನಡುವೆ ಪ್ರೀತಿ (Love) ಮೂಡಿತ್ತು. ಹದಿನೈದು ದಿನಗಳ ಕೆಳಗೆ ಇಬ್ಬರು ಓಡಿಹೋಗಿದ್ರು. ಈ ವಿಚಾರ ಯುವತಿಯ ತಂದೆಯನ್ನ ಕೆರಳುವಂತೆ ಮಾಡಿದ್ದು, ತನ್ನ ಮಗಳನ್ನ ಪ್ರೀತಿಸಿದವನನ್ನ ಕಿಡ್ಯಾಪ್ ಮಾಡಿ, ಬಳಿಕ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹೌದು.. ಬಣ್ಣ ಬಣ್ಣದ ಮಾತುಗಳನ್ನ ಆಡಿ ಮಗಳನ್ನ ಬಲೆಗೆ ಬೀಳಿಸಿಕೊಂಡಿದ್ದ ಪ್ರೀಯಕರನೊಬ್ಬನನ್ನ ಯುವತಿಯ ತಂದೆ, ತನ್ನ ಬಾಮೈದರ ಜೊತೆ ಸೇರಿ ಭೀಕರವಾಗಿ ಹತ್ಯೆ ಮಾಡಿರೋ ಘಟನೆ ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆ ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ‌ಬಳಿ ನಡೆದಿದೆ. ಮೂಲತಃ ಮಾಗಡಿ (Magadi) ತಾಲೂಕಿನ ದೋಣಕುಪ್ಪೆ ಗ್ರಾಮದ ಹಾಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಗ್ರಾಮದಲ್ಲಿ ವಾಸವಾಗಿರುವ ಚಲುವ (40) ಹತ್ಯೆಯಾದ ವ್ಯಕ್ತಿ.

ಓಡಿ ಹೋಗಿದ್ದ ಜೋಡಿ

ಅಂದಹಾಗೆ ಕೊತ್ತಗೆರೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಚಲುವ, ಮಾಗಡಿ ತಾಲೂಕಿನ ದೋಣಕುಪ್ಪೆ ಗ್ರಾಮದ ತನ್ನ ಸಂಬಂಧಿಯೇ ಆದ ಕೆಂಪಣ್ಣ ಎಂಬುವವರ 19 ವರ್ಷದ ಮಗಳನ್ನ ಪ್ರೀತಿಸುತ್ತಿದ್ದ. ಕಳೆದ ಹದಿನೈದು ದಿನಗಳ ಕೆಳಗೆ ಯುವತಿಯನ್ನ ಕರೆದುಕೊಂಡು ಮಂಡ್ಯದ ಕೆಎಂ ದೊಡ್ಡಿಯ ಸಂಬಂಧಿಕರ ಮನೆಯಲ್ಲಿ ಇಟ್ಟಿದ್ದ. ಆನಂತರ ರಾಜೀಪಂಚಾಯತಿ ನಡೆದು ಯುವತಿಯನ್ನ ವಾಪಾಸ್ ಕೆಂಪಣ್ಣ ಮನೆಗೆ ಕರೆತಂದಿದ್ದ.

ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ಕಾಮದ ತೀಟೆ ತೀರಿಸಿಕೊಂಡ ಪ್ರಿಯಕರ: ಸಾಲದಕ್ಕೆ ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ

ಮಗಳ ಪ್ರಿಯಕರನ ಕತ್ತು ಕೊಯ್ದು ಹತ್ಯೆ

ಇದಾಗಿ ಮೂರು ದಿನಗಳ ಕೆಳಗೆ ಆಕೆಯನ್ನ ಮನೆಯಲ್ಲಿ ಕೂಡಿ ಹಾಕಿದ್ದಾರೆ‌ ಎಂದು ಚಲುವ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಹಾಕಿದ್ದ. ಇದರಿಂದ ಕುಪಿತಗೊಂಡ ಕೆಂಪಣ್ಣ, ತನ್ನ ಬಾಮೈದರಾದ ರಾಮಕೃಷ್ಣ, ಮಂಜು ಎಂಬುವರೊಂದಿಗೆ ಸೇರಿ ನಿನ್ನೆ(ಡಿಸೆಂಬರ್ 18) ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ಚಲುವನನ್ನು ಕಿಡ್ಯಾಪ್ ಮಾಡಿದ್ದು, ಆನಂತರ ಸಾಕಷ್ಟು ‌ಕಡೆ ಸುತ್ತಾಡಿಸಿ ಕೊನೆಗೆ ಕಾರಿನಲ್ಲಿಯೇ ಚಲುವನ ಕತ್ತು ಕೊಯ್ದು ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ಹೊರವಲಯದ ಹಳ್ಳದ ಬಳಿ ಎಸೆದು ಪರಾರಿಯಾಗಿದ್ದಾರೆ.

ಅಂದಹಾಗೆ ಬೆಳಗ್ಗೆ ಹಳ್ಳದ ಬಳಿ ಮೃತದೇಹವನ್ನು ಕಂಡು ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಮಾಗಡಿ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ನಡೆಸಿದಾಗ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿತ್ತು. ಅಲ್ಲದೇ ಆತನನ್ನ ಕಾರಿನಲ್ಲಿ ಕಿಡ್ಯಾಪ್ ಮಾಡಿ ಹತ್ಯೆ ಮಾಡಲಾಗಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಆದ್ರೆ, ಇನ್ನು ಚಲುವನನ್ನ ಕುಣಿಗಲ್ ಕಿಡ್ಯಾಪ್ ಮಾಡಿರುವುದರಿಂದ ಮಾಗಡಿ ಪೊಲೀಸರು ಈ ಪ್ರಕರಣವನ್ನ ಕುಣಿಗಲ್ ಠಾಣೆ ವರ್ಗಾವಣೆ ಮಾಡಿದ್ದಾರೆ. ಬಳಿಕ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಚಲುವನನ್ನ ಹತ್ಯೆ ಮಾಡಿದ ಮೂವರನ್ನು ವಶಕ್ಕೆ ಪಡೆದು ತೀವ್ರ ‌ವಿಚಾರಣೆ‌ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Fri, 19 December 25