ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಹೊಸ ಎಂಟ್ರಿ, ಎಕ್ಸಿಟ್ಗೆ ಕೇಂದ್ರದಿಂದ 712 ಕೋಟಿ ರೂ. ಬಿಡುಗಡೆ
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಹೊಸ ಎಂಟ್ರಿ ಹಾಗೂ ಎಕ್ಸಿಟ್ ಸ್ಥಾಪಿಸಿ ಹೆದ್ದಾರಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಕ್ಕಾಗಿ ಕೇಂದ್ರ ಸರ್ಕಾರ 712 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದೆ. ಆರಂಭದಲ್ಲಿ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಹೆದ್ದಾರಿಯನ್ನು ಮತ್ತಷ್ಟು ಸುರಕ್ಷಿತವಾಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ರಾಮನಗರ, ಜುಲೈ 31: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ (Bengaluru Mysuru Expressway) ಹೊಸ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ತೆರೆಯುವುದರೊಂದಿಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳಿಗಾಗಿ ಕೇಂದ್ರ ಸರ್ಕಾರ 712 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಸುಮಾರು 9 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ 118 ಕಿ.ಮೀ ಉದ್ದದ 6 ಪಥದ ಎಕ್ಸ್ಪ್ರೆಸ್ ವೇನಲ್ಲಿ ನಿತ್ಯ ಅಪಘಾತಗಳು ಸರ್ವೇ ಸಾಮಾನ್ಯವಾಗಿತ್ತು. 3 ವರ್ಷಗಳ ಹಿಂದೆಯೇ ಲೋಕಾರ್ಪಣೆಗೊಂಡ ಈ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳೇ ಇರಲಿಲ್ಲ ಎಂಬ ಆರೋಪಗಳಿದ್ದವು. ಬಸ್ ಶೆಲ್ಟರ್, ಮೇಲ್ಸೇತುವೆ, 2 ಕಡೆಗಳಲ್ಲಿ ಸರ್ವೀಸ್ ರಸ್ತೆ ಕಡಿತ, ಹೀಗೆ ಅನೇಕ ಸಮಸ್ಯೆಗಳಿದ್ದವು. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಕಾಮಗಾರಿಗಳಿಗಾಗಿ ಕೇಂದ್ರ 712 ಕೋಟಿ ರೂ. ಬಿಡುಗಡೆ ಮಾಡಿದೆ.
ಹೆದ್ದಾರಿಗೆ 14 ಕಡೆಗಳಲ್ಲಿ ಪ್ರವೇಶ ಹಾಗೂ ನಿರ್ಗಮನ ದ್ವಾರ
ರಾಷ್ಟ್ರೀಯ ಹೆದ್ದಾರಿ ಪ್ರಾಕಾರವು 2 ವರ್ಷಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಇನ್ನು ಹೆದ್ದಾರಿಯ ಬದಿಯಲ್ಲಿ ಒಟ್ಟು 22 ಕಿ.ಮೀನಷ್ಟು ದೂರದ ನೂತನ ಸರ್ವೀಸ್ ರಸ್ತೆ ನಿರ್ಮಾಣಗೊಳ್ಳಲಿದೆ. ಓವರ್ಬೈಪಾಸ್, ಅಂಡರ್ ಬ್ರಿಡ್ಜ್ನೊಂದಿಗೆ ಒಟ್ಟು 14 ಕಡೆಗಳಲ್ಲಿ ಹೆದ್ದಾರಿಗೆ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ತಲೆ ಎತ್ತಲಿವೆ.
ಅಂದಹಾಗೆ, 3 ವರ್ಷಗಳ ಹಿಂದೆಯೇ ಎಕ್ಸ್ಪ್ರೆಸ್ವೇ ಸಂಚಾರಕ್ಕೆ ಮುಕ್ತಗೊಂಡಿದೆ. ಆದರೆ ಬಿಡದಿ ಹಾಗೂ ಮಂಡ್ಯದ ಬಳಿ ಸರ್ವೀಸ್ ರಸ್ತೆಗಳ ಕಾಮಗಾರಿ ನಡೆದಿರಲಿಲ್ಲ. ಹೆದ್ದಾರಿಗೆ ಎಂಟ್ರಿ-ಎಕ್ಸಿಟ್ ಪಡೆಯುವ ಜಾಗಗಳು ಅವೈಜ್ಞಾನಿಕವಾಗಿವೆ ಎಂಬ ಆರೋಪಗಳಿದ್ದವು. ಎಂಟ್ರಿ-ಎಕ್ಸಿಟ್ ಸ್ಥಳಗಳಲ್ಲಿಯೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದವು. ಅಲ್ಲದೆ ಎಂಟ್ರಿ-ಎಕ್ಸಿಟ್ ಸ್ಥಳಗಳನ್ನು ಹೆಚ್ಚಿಸುವ ಬೇಡಿಕೆಗಳು ಇದ್ದವು. ಹೆದ್ದಾರಿ ದಾಟಲು ಅಂಡರ್ಪಾಸ್, ಪ್ಲೈಓವರ್ಗಳ ಕೊರತೆಯೂ ಹೆಚ್ಚಾಗಿತ್ತು. ಈ ಬಗ್ಗೆ ಪೊಲೀಸ್ ಇಲಾಖೆ ಮಾತ್ರವಲ್ಲದೇ, ಹೆದ್ದಾರಿ ಪ್ರಾಧಿಕಾರ ನಡೆಸಿದ ಸರ್ವೇಗಳಿಂದಲೂ ತಿಳಿದು ಬಂದಿತ್ತು. ಇದೆಲ್ಲದಕ್ಕಿಂತ ಹೆಚ್ಚಾಗಿ ಪ್ರಯಾಣಿಸಿದ ದೂರಕ್ಕಷ್ಟೆ ಟೋಲ್ ಪಾವತಿಸುವ ವ್ಯವಸ್ಥೆಯೇ ಇಲ್ಲಿರಲಿಲ್ಲ. ಈ ನಿಟ್ಟಿನಲ್ಲಿ ಅನುದಾನ ಬಿಡುಗಡೆಯಾಗಿದೆ.
ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ: ಏನಿದರ ವಿಶೇಷ? ಇಲ್ಲಿದೆ ವಿವರ
ಒಟ್ಟಾರೆಯಾಗಿ ಸಾಕಷ್ಟು ಅಪಖ್ಯಾತಿಗೆ ಹೆಸರುವಾಸಿಯಾಗಿದ್ದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಗೆ ಈಗ ಮರುಜೀವ ತುಂಬಲಾಗುತ್ತಿದ್ದು, ವಾಹನ ಸವಾರರ ಸಂತಸಕ್ಕೆ ಕಾರಣವಾಗಿದೆ.







