ಅಬಕಾರಿ ನೀತಿ ಪ್ರಕರಣ; ಕೇಜ್ರಿವಾಲ್, ಸಿಸೋಡಿಯಾ ವಿಚಾರದಲ್ಲಿ ಕಾನೂನು ಏನು ಹೇಳುತ್ತದೆ?
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಸಚಿವ ಮನೀಶ್ ಸಿಸೋಡಿಯಾ ಸೇರಿದಂತೆ 23 ಜನರನ್ನು ದೋಷಮುಕ್ತಗೊಳಿಸಲಾಗಿದೆ. ಈ ನಡುವೆ ಕೋರ್ಟ್ ಖುಲಾಸೆ ಎಂಬ ಪದದ ಬದಲಾಗಿ ಮುಕ್ತಗೊಳಿಸಲಾಗಿದೆ ಎಂಬ ಪದವನ್ನು ಬಳಸಿದೆ. ಇವೆರಡರ ನಡುವಿನ ವ್ಯತ್ಯಾಸವೇನು? ಹೀಗಾಗಿ, ಈ ಪ್ರಕರಣದಲ್ಲಿ ಕಾನೂನು ಏನು ಹೇಳುತ್ತದೆ? ಈ ತೀರ್ಪು ಹೇಗೆ ಭಿನ್ನವಾಗಿದೆ ಮತ್ತು ಏಕೆ ಮುಖ್ಯವಾಗಿದೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ನವದೆಹಲಿ, ಫೆಬ್ರವರಿ 27: ನವದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ (Arvind Kejriwal) ಮತ್ತು ಮನೀಶ್ ಸಿಸೋಡಿಯಾ ದೋಷಮುಕ್ತರೆಂದು ಘೋಷಿಸಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ ಹೆಸರಿಸಿದ್ದ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ತೆಲಂಗಾಣದ ರಾಜಕಾರಣಿ ಕೆ. ಕವಿತಾ ಮತ್ತು ಎಎಪಿ ನಾಯಕರಾದ ವಿಜಯ್ ನಾಯರ್ ಸೇರಿದಂತೆ ಎಲ್ಲಾ 23 ಜನರನ್ನು ವಿಶೇಷ ನ್ಯಾಯಾಧೀಶ ಜಿತೇಂದರ್ ಸಿಂಗ್ ದೋಷಮುಕ್ತಗೊಳಿಸಿದ್ದಾರೆ.
ಅಬಕಾರಿ ನೀತಿಯ ಹಿಂದೆ ಯಾವುದೇ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶ ಇರಲಿಲ್ಲ. ಸಿಬಿಐ ಸಾಕ್ಷಿಗಳಿಗಿಂತ ಊಹೆಯ ಆಧಾರದ ಮೇಲೆ ಅವರ ಮೇಲೆ ಪಿತೂರಿಯನ್ನು ನಿರ್ಮಿಸಲು ಪ್ರಯತ್ನಿಸಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದರಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಇತರರನ್ನು ಸಂಪೂರ್ಣವಾಗಿ ‘ಮುಕ್ತಗೊಳಿಸಲಾಗಿದೆ’ ಎಂಬ ಪದ ಬಳಸಿದೆ. ಆದರೆ, ಅವರನ್ನು “ಖುಲಾಸೆಗೊಳಿಸಲಾಗಿಲ್ಲ” ಎಂಬುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ: Delhi Excise Policy Case: ದೆಹಲಿ ಮದ್ಯ ನೀತಿ ಪ್ರಕರಣ, ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಖುಲಾಸೆ
ಡಿಸ್ಚಾರ್ಜ್ಡ್ ಅಥವಾ ಮುಕ್ತಗೊಳಿಸಲಾಗಿದೆ ಎಂದರೆ ಕೇವಲ ಅಪರಾಧ ಅಥವಾ ಅವರ ನಿರಪರಾಧದ ಮೇಲಿನ ತೀರ್ಪನ್ನು ಸೂಚಿಸುವುದಿಲ್ಲ. ಅದು ವಿಚಾರಣೆಯ ಸಂಪೂರ್ಣ ಮುಕ್ತಾಯವಾಗಿದೆ ಎಂದರ್ಥ. ಈ ಬಗ್ಗೆ ವಿವರಿಸಿರುವ ಸುಪ್ರೀಂ ಕೋರ್ಟ್ ವಕೀಲ ಅನಸ್ ತನ್ವೀರ್, “ಪ್ರಾಥಮಿಕ ಪ್ರಕರಣವನ್ನು ನಿರೂಪಿಸಲು ಸಾಕಷ್ಟು ಪುರಾವೆಗಳಿಲ್ಲದ ಕಾರಣದಿಂದ ಆರೋಪಗಳನ್ನು ಹೊತ್ತಿರುವ ವ್ಯಕ್ತಿಯನ್ನು ಬಿಡುಗಡೆ ಮಾಡಬಹುದು” ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಯಾವುದಾದರೂ ಒಂದು ಪ್ರಕರಣ ದಾಖಲಿಸುವಾಗ 4 ಹಂತಗಳಿರುತ್ತವೆ. ಮೊದಲನೆಯದು ಎಫ್ಐಆರ್ ಅಥವಾ ದೂರು ದಾಖಲಿಸುವುದು, ಪೊಲೀಸ್ ಅಥವಾ ತನಿಖಾ ಸಂಸ್ಥೆಯು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸುವುದು, ಆರೋಪಗಳು ಸತ್ಯವಾಗಿದೆಯೇ ಎಂದು ನಿರ್ಧರಿಸಲು ನ್ಯಾಯಾಲಯವು ಚಾರ್ಜ್ಶೀಟ್ ಪರಿಶೀಲಿಸುತ್ತದೆ, ವಿಚಾರಣೆಗೆ ಆರೋಪಗಳನ್ನು ರೂಪಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತದೆ. ನಂತರ ವಿಚಾರಣೆಯನ್ನು ನಡೆಸಲಾಗುತ್ತದೆ. ಈ ವಿಚಾರಣೆ ಮುಗಿದ ಬಳಿಕ ಶಿಕ್ಷೆ ಅಥವಾ ಖುಲಾಸೆಯ ತೀರ್ಪು ಪ್ರಕಟವಾಗುತ್ತದೆ.
ಇದನ್ನೂ ಓದಿ: ಚಂಡೀಗಢದಲ್ಲಿ 2 ಎಕರೆ ಜಾಗದಲ್ಲಿ ಅರವಿಂದ್ ಕೇಜ್ರಿವಾಲ್ ಹೊಸ ‘ಶೀಷ್ ಮಹಲ್’ ನಿರ್ಮಾಣ; ಬಿಜೆಪಿ ಆರೋಪ
ಅರವಿಂದ್ ಕೇಜ್ರಿವಾಲ್ ಪ್ರಕರಣದಲ್ಲಿ, ನ್ಯಾಯಾಲಯವು ಮೂರನೇ ಹಂತದಲ್ಲಿಯೇ ವಿಚಾರಣೆಯನ್ನು ನಿಲ್ಲಿಸಿದೆ. ಅಂದರೆ ವಿಚಾರಣೆಗೆ ಚೌಕಟ್ಟನ್ನು ನಿರ್ಮಿಸಲು ಅಗತ್ಯವಾದ ಯಾವುದೇ ಆರೋಪಗಳು ಕಂಡುಬಂದಿಲ್ಲ. ಹೊಸ ಪುರಾವೆಗಳು ಸಿಕ್ಕಿದರೆ ಅಥವಾ ಉನ್ನತ ನ್ಯಾಯಾಲಯದಲ್ಲಿ ಆದೇಶವನ್ನು ಪ್ರಶ್ನಿಸಲು ಅದು ಆಧಾರಗಳನ್ನು ಹೊಂದಿದ್ದರೆ, ಬಿಡುಗಡೆ ಅಥವಾ ಮುಕ್ತವಾದರೂ ಆರೋಪಗಳನ್ನು ಮರು ಸಲ್ಲಿಸಲು ಅವಕಾಶವಿರುತ್ತದೆ. ಇದು ಖುಲಾಸೆ ಮತ್ತು ಮುಕ್ತಗೊಳಿಸುವಿಕೆಗೂ ಇರುವ ವ್ಯತ್ಯಾಸ.
ಇಂದು ದೆಹಲಿ ಕೋರ್ಟ್ ಕೇಜ್ರಿವಾಲ್ ಅವರನ್ನು ಆರೋಪದಿಂದ ಮುಕ್ತಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪರಿಷ್ಕರಣಾ ಅರ್ಜಿಯ ಮೂಲಕ ರೌಸ್ ಅವೆನ್ಯೂ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲು ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಲು ನಿರ್ಧರಿಸಿದೆ. ಸಿಬಿಐ ಆಗಸ್ಟ್ 2022ರಲ್ಲಿ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಸಾಕ್ಷ್ಯಗಳ ನಾಶ ಹಾಗೆಯೇ ಭ್ರಷ್ಟಾಚಾರ ತಡೆ ಕಾಯ್ದೆಯನ್ನು ಒಳಗೊಂಡ ಕಾನೂನು ವಿಭಾಗಗಳ ಅಡಿಯಲ್ಲಿ ತನ್ನ ಪ್ರಕರಣವನ್ನು ದಾಖಲಿಸಿತು. ಒಟ್ಟು 3 ಆರೋಪಪಟ್ಟಿಗಳನ್ನು ಸಲ್ಲಿಸಲಾಗಿದ್ದು, ಎರಡನೆಯದರಲ್ಲಿ ಕೇಜ್ರಿವಾಲ್ ಅವರನ್ನು ನಿರ್ದಿಷ್ಟವಾಗಿ ಹೆಸರಿಸಲಾಗಿದೆ.
ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರತ್ಯೇಕ ಪ್ರಕರಣವನ್ನು ಮುಂದುವರಿಸುತ್ತಿದೆ. ಇದು ಮುಖ್ಯ ಪ್ರಕರಣಕ್ಕೆ ಸಂಬಂಧಿಸಿದ ಹವಾಲಾ ವರ್ಗಾವಣೆ ಮತ್ತು ಶೆಲ್ ಕಂಪನಿಗಳ ತನಿಖೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್ ಎರಡೂ ಪ್ರಕರಣಗಳಲ್ಲಿ ಜಾಮೀನು ನೀಡುವ ಮೊದಲು ಕೇಜ್ರಿವಾಲ್ ಅವರನ್ನು ಮಾರ್ಚ್ 2024ರಲ್ಲಿ ಇಡಿ ಮತ್ತು ನಂತರ ಸಿಬಿಐ ಬಂಧಿಸಿತು. ಅವರು 5 ತಿಂಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
