ಬೆಂಗಳೂರು-ಮೈಸೂರು ಹೆದ್ದಾರಿಗೆ ಚನ್ನಪಟ್ಟಣದಲ್ಲಿ ಹೊಸ ಎಂಟ್ರಿ, ಎಕ್ಸಿಟ್
ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಸ ಎಂಟ್ರಿ ಮತ್ತು ಎಕ್ಸಿಟ್ಗೆ NHAI ಅನುಮತಿ ನೀಡಿದೆ. ಎಂಟ್ರಿ ಮತ್ತು ಎಕ್ಸಿಟ್ ಅನ್ನು ಕಣ್ವ ಜಂಕ್ಷನ್ ಬಳಿ ಇದನ್ನು ನಿರ್ಮಿಸಲಾಗುವುದು. ಇದು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಶೀಘ್ರದಲ್ಲೇ ಮೂರು ಸ್ಕೈವಾಕ್ಗಳು ಮತ್ತು ಚನ್ನಪಟ್ಟಣದ ಬಳಿ ಒಂದು ಟಾಯ್ಸ್ ಪಾರ್ಕ್ ನಿರ್ಮಾಣವಾಗಲಿದೆ ಎಂದು ಸಂಸದ ಡಾ. ಮಂಜುನಾಥ್ ತಿಳಿಸಿದ್ದಾರೆ.

ರಾಮನಗರ, ಏಪ್ರಿಲ್ 29: ಪ್ರವಾಸಿಗರು ಹಾಗೂ ವಾಹನ ಸವಾರರ ಅನುಕೂಲಕ್ಕಾಗಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ (Bengaluru-Mysore National Highway) ಹೊಸ ಪ್ರವೇಶ ಮತ್ತು ನಿರ್ಗಮನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅನುಮತಿ ನೀಡಿದೆ ಎಂದು ಸಂಸದ ಡಾ. ಮಂಜುನಾಥ್ (Dr. Manjunath) ತಿಳಿಸಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕಣ್ವ ಜಂಕ್ಷನ್ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದ ರಾಂಪುರದ ಬಳಿ ಪ್ರವೇಶ ಮತ್ತು ನಿರ್ಗಮನಕ್ಕೆ ಜಾಗ ಗುರುತಿಸಲಾಗಿತ್ತು. ಆದರೆ ಅಲ್ಲಿ ಸೂಕ್ತ ಜಾಗ ಇಲ್ಲದಿದ್ದಕ್ಕೆ ಕಣ್ವ ಜಂಕ್ಷನ್ ಬಳಿ ಜಾಗ ಗುರುತು ಮಾಡಲಾಗಿದೆ ಎಂದು ಹೇಳಿದರು.
ಹೀಗಾಗಿ, ಸ್ಥಳೀಯ ಶಾಸಕರು ಹಾಗೂ ಎನ್ಹೆಚ್ಎಐ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಕಣ್ವ ಜಂಕ್ಷನ್ನಲ್ಲಿ ಪ್ರವೇಶ ಮತ್ತು ನಿರ್ಗಮನ ನಿರ್ಮಾಣವಾದರೆ ಪ್ರವಾಸೋದ್ಯಮಕ್ಕೂ ಅನುಕೂಲವಾಗುತ್ತದೆ. ಕಣ್ವ ಡ್ಯಾಂ, ಕೆಂಗಲ್ ಆಂಜನೇಯನ ದೇವಾಲಯ ಹಾಗೂ ಬೆಂಗಳೂರು-ಮೈಸೂರು ಹಳೇ ಹೆದ್ದಾರಿಗೆ ನೇರ ಸಂಪರ್ಕ ಕಲ್ಪಿಸುತ್ತೆ ಎಂದರು.
ಅಲ್ಲದೇ ಶೀಘ್ರದಲ್ಲೇ ಮೂರು ಕಡೆಗಳಲ್ಲಿ ಸ್ಕೈವಾಕ್ ಕಾಮಗಾರಿ ಮುಗಿಯಲಿದೆ. ಚನ್ನಪಟ್ಟಣದ ಬಳಿ ಟಾಯ್ಸ್ ಪಾರ್ಕ್ ಕೂಡ ನಿರ್ಮಾಣವಾಗಲಿದೆ. ಅದಕ್ಕೂ ಈಗಾಗಲೇ ಜಾಗ ಗುರುತು ಮಾಡಲಾಗಿದೆ. ಹೆದ್ದಾರಿಯ ಎಲ್ಲ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಟ್ಟಿಟರ್ ಪೋಸ್ಟ್
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಚನ್ನಪಟ್ಟಣ ಶಾಸಕರಾದ ಶ್ರೀ @CPYogeeshwara ಅವರ ಜೊತೆಗೂಡಿ ಬೆಂಗಳೂರು-ಮೈಸೂರು ಎಕ್ಸಪ್ರೆಸ್ ಹೈವೇಗೆ ಚನ್ನಪಟ್ಟಣ ತಾಲ್ಲೂಕಿನಿಂದ ಪ್ರವೇಶ ಮತ್ತು ನಿರ್ಗಮನ ಕಲ್ಪಿಸಲು ರಾಂಪುರ ಬಳಿ ಉದ್ದೇಶಿತ ಜಾಗವನ್ನು ಪರಿಶೀಲಿಸಿದೆ.
ರಾಂಪುರ ಬಳಿ ಪ್ರವೇಶ ಮತ್ತು ನಿರ್ಗಮನ ಕಲ್ಪಿಸುವುದರಿಂದ ಚನ್ನಪಟ್ಟಣ… pic.twitter.com/MWD2BmHtsU
— Dr.C.N.Manjunath (@DrCNManjunath) April 29, 2025
ಪಹಲ್ಗಾಮ್ ದಾಳಿಗೆ ಕೇಂದ್ರ ಭದ್ರತಾ ವೈಫಲ್ಯ ಕಾರಣ ಎಂಬ ವಿಪಕ್ಷಗಳ ಆರೋಪ ವಿಚಾರವಾಗಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಘಟನೆಗೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುವುದು ಮುಖ್ಯವಾಗುತ್ತದೆ. ಈ ಕ್ಷಣಕ್ಕೆ ಭಯೋತ್ಪಾದನೆ ಹಾಗೂ ಭಯೋತ್ಪಾದಕರಿಗೆ ತಕ್ಕಪಾಠ ಕಲಿಸುವ ಬಗ್ಗೆ ಯೋಚನೆ ಮಾಡಬೇಕು. ಮಿಕ್ಕಿದ್ದೆಲ್ಲ ಆಮೇಲೆ ಮಾತನಾಡಬಹುದು. ಯುದ್ಧ ಎಂಬುದು ಸೂಕ್ಷ್ಮವಾದ ವಿಚಾರ, ಅದರ ಬಗ್ಗೆ ಎಲ್ಲೆಂದರಲ್ಲಿ ಚರ್ಚೆ ಮಾಡುವುದು ಸೂಕ್ತವಲ್ಲ ಎಂದು ಹೇಳಿದರು.
ಇದನ್ನೂ ಓದಿ: ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇನಲ್ಲಿ ಟೋಲ್ ತಪ್ಪಿಸಿಕೊಳ್ಳುತ್ತಿದ್ದ ವಾಹನ ಸವಾರರಿಗೆ ಶಾಕ್..!
ಹೆದ್ದಾರಿಯಲ್ಲಿ ಹೊಸ ಎಂಟ್ರಿ ಮತ್ತು ಎಕ್ಸಿಟ್ ನಿರ್ಮಾಣಕ್ಕೆ ಎನ್ಹೆಚ್ಎಐ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸೇರಿಕೊಂಡು ಸಂಸದ ಡಾ.ಮಂಜುನಾಥ್ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ಸ್ಥಳ ಪರಿಶೀಲನೆ ನಡೆಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:08 pm, Tue, 29 April 25







