
ಬೆಂಗಳೂರು ದಕ್ಷಿಣ (ರಾಮನಗರ), ಜೂನ್ 02: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ನಾಳೆ (ಜೂ.03) ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಅವರ ಹುಟ್ಟೂರು ದೊಡ್ಡ ಆಲಹಳ್ಳಿಯಲ್ಲಿ ಸಂಭ್ರಮ ಮನೆಮಾಡಿದೆ. ಈ ಕುರಿತು ಟಿವಿ9 ಜೊತೆ ಮಾತನಾಡಿರುವ ಗ್ರಾಮದ ಹಿರಿಯ ಮುಖಂಡ ಶಿವಶಂಕರ್ ಶರ್ಮಾ, ಡಿಕೆಶಿ ಗುಣಗಾನ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ತಂದೆ ದೊಡ್ಡಲಹಳ್ಳಿ ಕೆಂಪೇಗೌಡರಿಗೆ ತಮ್ಮ ಮಗ ಒಂದು ದಿನ ಮುಖ್ಯಮಂತ್ರಿಯಾಗುವುದನ್ನು ನೋಡಬೇಕು ಎಂಬ ಆಸೆ ಇತ್ತು. ಅದನ್ನೀಗ ಡಿಕೆಶಿ ತಮ್ಮ ಪರಿಶ್ರಮದಿಂದ ನನಸಾಗಿಸಿಸುತ್ತಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಡಿಕೆಶಿ ಅವರ ಮುತ್ತಾತ ಚಿ.ಕೆಂಪೇಗೌಡ ಅವರು ಅತ್ಯಂತ ಶಕ್ತಿಶಾಲಿ ವ್ಯಕ್ತಿ ಆಗಿದ್ದರು. ಅವರ ಧೈರ್ಯ,ಕೆಚ್ಚು, ಎದೆಗಾರಿಕೆ ಮತ್ತು ಸಂವಾದ ಕೌಶಲ್ಯಗಳು ಡಿ.ಕೆ. ಶಿವಕುಮಾರ್ ಅವರಿಗೂ ಬಂದಿವೆ. ಬದ್ಧತೆಗೆ ಮತ್ತೊಂದು ಹೆಸರು ಡಿ.ಕೆ. ಶಿವಕುಮಾರ್ ಆಗಿದ್ದು, ಹಿಡಿದ ಕೆಲಸವನ್ನು ಸಾಧಿಸುವ ಛಲ ಅವರಲ್ಲಿದೆ ಎಂದು ಶಿವಶಂಕರ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ವ ಧರ್ಮ ಸ್ವಾಮೀಜಿಗಳ ಸಮ್ಮುಖದಲ್ಲಿ ಪೂರ್ವಾಭಿಮುಖವಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿಕೆಶಿ
ಜಿಲ್ಲಾ ಪಂಚಾಯತ್ ಸದಸ್ಯನಾಗಿ ಆರಂಭವಾದ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನ ಶಾಸಕ, ಸಚಿವ, ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಹುದ್ದೆಗಳನ್ನು ದಾಟಿ ಇದೀಗ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದೆ. ಈ ಪಯಣದಲ್ಲಿ ಡಿಕೆಶಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದಿದ್ದಾರೆ. ಹತ್ತಿರದಿಂದ ನೋಡಿದವರಿಗೆ ಮಾತ್ರ ಡಿಕೆಶಿ ಏನೆಂಬುದು ಗೊತ್ತು. ಕಷ್ಟ ಎಂದು ಊರವರು ತೆರಳಿದಾಗೆಲ್ಲ ಅವರು ನೆರವಿಗೆ ನಿಂತಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:39 pm, Tue, 2 June 26