
ರಾಮನಗರ, ಆಗಸ್ಟ್ 09: ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಪಾದಯಾತ್ರೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬೈರಮಂಗಲ ಗ್ರಾಮದಲ್ಲಿ ಚಾಲನೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಆರ್. ಅಶೋಕ್ ಚಾಲನೆ ನೀಡಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ನೇತೃತ್ವದಲ್ಲಿ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂಪಾರ್ಕ್ವರೆಗೂ ಪಾದಯಾತ್ರೆ ನಡೆಯಲಿದೆ. ನಮ್ಮ ಭೂಮಿ ನಮ್ಮ ಹಕ್ಕು ಹೆಸರಿನಲ್ಲಿ ಜೆಡಿಎಸ್ ಪಾದಯಾತ್ರೆಗೆ ಮೈತ್ರಿ ಪಕ್ಷ ಬಿಜೆಪಿ ನಾಯಕರೂ ಬೆಂಬಲ ಸೂಚಿಸಿದ್ದಾರೆ.
ಸರ್ಕಾರ ಸಾವಿನ ಕೊನೆ ಮೊಳೆ ಹೊಡೆದುಕೊಳ್ತಿದ್ದು, ರೈತರನ್ನು ಎದುರುಹಾಕಿಕೊಂಡಿರುವ ಯಾವ ಸರ್ಕಾರವೂ ಉಳಿದಿಲ್ಲ ಎಂದು ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರು ತಮ್ಮ ಭೂಮಿಗಾಗಿ ಹೋರಾಟ ಮಾಡುತ್ತಿದ್ದರೆ, ಇಂದು ಜಾಹೀರಾತುಗಾಗಿ ಕಾಂಗ್ರೆಸ್ಸಿಗರು 4 ಕೋಟಿ ಹಣ ಕೊಟ್ಟಿದ್ದಾರೆ. ಕಾಂಗ್ರೆಸನ್ನು ಮನೆಗೆ ಕಳುಹಿಸುವವರೆಗೂ ನಮ್ಮ ಹೋರಾಟ ಇರುತ್ತೆ. ಕುಮಾರಸ್ವಾಮಿ ರೈತರಿಗಾಗಿ ಯೋಜನೆ ಬಿಡುತ್ತೇನೆ ಎಂದಿದ್ದರು. ಆದರೆ ರಾಹುಲ್ ಗಾಂಧಿಗೆ ದುಡ್ಡು ಕಳುಹಿಸಲು ಇವರು ಮಾಡಿರುವ ಯೋಜನೆ ಇದು ಎಂದವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಬಿಡದಿ ಟೌನ್ಶಿಪ್ ವಿವಾದಕ್ಕೆ ಮತ್ತೊಂದು ತಿರುವು: ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆ
ರೈತರ ಮೇಲೆ ಮರಣ ಶಾಸನ ಬರೆಯುವ ಯೋಜನೆ ಇದಾಗಿದ್ದು, ರಾಜಕೀಯ ಲಾಭಕ್ಕಾಗಿ ನಾವು ಪಾದಯಾತ್ರೆ ಮಾಡುತ್ತಿಲ್ಲ ಎಂದು JDS ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಹೋರಾಟಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಮಾರ್ಗದರ್ಶನ ಇದ್ದು, ರೈತಾಪಿ ವರ್ಗ ಸಂಕಷ್ಟದಲ್ಲಿದೆ ಎಂದವರು ಆರೋಪಿಸಿದ್ದಾರೆ. ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ, ಎಂಎಲ್ಸಿ ರವಿಕುಮಾರ್, ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸೇರಿದಂತೆ ಜೆಡಿಎಸ್, ಬಿಜೆಪಿ ನಾಯಕರು, ಸಾವಿರಾರು ರೈತರು ಭಾಗಿಯಾಗಿದ್ದರು.
ಜೆಡಿಎಸ್ ಪಾದಯಾತ್ರೆ ಹಿನ್ನೆಲೆ ಒಂದೆಡೆ ಜೆಡಿಎಸ್ ಕಟೌಟ್ ಹಾಗೂ ಬ್ಯಾನರ್ಗಳು ರಾರಾಜಿಸುತ್ತಿದ್ದರೆ ಮತ್ತೊಂದೆಡೆ ಕಾಂಗ್ರೆಸಿಗರು ಕೌಮಟರ್ ಬ್ಯಾನರ್ಗಳನ್ನು ಅಳವಡಿಸಿರೋದು ಕಂಡುಬಂದಿದೆ. ಪ್ರಾಯಶ್ಚಿತ್ತ ಯಾತ್ರೆಗೆ ಹಾರ್ದಿಕ ಸ್ವಾಗತ ಎಂದು ಬೈರಮಂಗಲ ಸರ್ಕಲ್ನಲ್ಲಿ ಕಾಂಗ್ರೆಸಿಗರು ಬ್ಯಾನರ್ ಅಳವಡಿಕೆ ಮಾಡಿದ್ದಾರೆ. ಹೆಚ್ಡಿಕೆ, ಬಿಎಸ್ವೈ ಪುತ್ರರನ್ನ ಕೈಹಿಡಿದು ಪಾದಯಾತ್ರೆ ನಡೆಸುವ ರೀತಿ ವ್ಯಂಗ್ಯವಾಡಲಾಗಿದ್ದು, ಬಿಡದಿ ಟೌನ್ಶಿಪ್ ರೂವಾರಿಗಳಾದ ಬಿಜೆಪಿ ಮತ್ತು JDSನ ಪ್ರಾಯಶ್ಚಿತ್ತದ ಯಾತ್ರೆ ಎಂದು ಬ್ಯಾನರ್ನಲ್ಲಿ ಬರೆಯಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:41 pm, Sun, 9 August 26