ಅಂಗನವಾಡಿಯಲ್ಲಿ ಮಗು ಹಠ ಮಾಡುತ್ತೆಂದು ಕೈಗೆ ಬರೆ: ಡೈಪರ್ಗೆ ಖಾರದಪುಡಿ ಹಾಕಿ ವಿಕೃತಿ!
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜಕಟ್ಟೆ ಗ್ರಾಮದ ಅಂಗನವಾಡಿ ಸಹಾಯಕಿಯಿಂದ ಎರಡು ವರ್ಷದ ಮಗುವಿನ ಮೇಲೆ ವಿಕೃತಿ ಮೆರೆಯಲಾಗಿದೆ. ಹಠ ಮಾಡುತ್ತಿದ್ದ ಎಂಬ ಕಾರಣಕ್ಕೆ ಮಗುವಿನ ಕೈಗೆ ಬರೆ ಎಳೆದು ಡೈಪರ್ಗೆ ಖಾರದಪುಡಿ ಹಾಕಿದ್ದಾರೆ. ಪೋಷಕರ ದೂರಿನ ಮೇರೆಗೆ ಅಂಗನವಾಡಿ ಸಹಾಯಕಿಯನ್ನು ಅಮಾನತುಗೊಳಿಸಲಾಗಿದೆ.

ರಾಮನಗರ, ಮಾರ್ಚ್ 21: ಹಠ ಮಾಡುತ್ತಿದ್ದನೆಂದು ಎರಡು ವರ್ಷದ ಮಗುವಿನ (child) ಕೈಗೆ ಬರೆ ಎಳೆದಿದ್ದು, ಅಷ್ಟೇ ಅಲ್ಲದೆ ಡೈಪರ್ಗೆ ಖಾರದ ಪುಡಿ ಹಾಕಿ ಅಂಗನವಾಡಿ ಸಹಾಯಕಿ (Anganwadi worker) ವಿಕೃತಿ ಮೆರೆದಿರುವಂತಹ ಘಟನೆ ಕನಕಪುರ ತಾಲೂಕಿನ ಮಹರಾಜಕಟ್ಟೆ ಗ್ರಾಮದ ಅಂಗನವಾಡಿಯಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂಗನವಾಡಿ ಸಹಾಯಕಿ ಚಂದ್ರಮ್ಮ ಅಮಾನವೀಯ ವರ್ತನೆಗೆ ದಂಗಾದ ಮಗುವಿನ ಪೋಷಕರು ಕನಕಪುರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಬೆನ್ನೆಲ್ಲೇ ಇದೀಗ ಚಂದ್ರಮ್ಮರನ್ನು ಅಮಾನತ್ತು ಮಾಡಲಾಗಿದೆ.
ಮಹರಾಜಕಟ್ಟೆ ಗ್ರಾಮದ ರಮೇಶ್ ಹಾಗೂ ಚೈತ್ರಾ ಎಂಬುವವರ ಮಗು ದೀಕ್ಷಿತ್ ಮೇಲೆ ಕ್ರೌರ್ಯವೆಸಗಲಾಗಿದೆ. ಅಂಗನವಾಡಿಯಲ್ಲಿ ಹಠ ಮಾಡುತ್ತಿದ್ದ ಎಂಬ ಕಾರಣಕ್ಕೆ ಚಂದ್ರಮ್ಮ ಆತನ ಕೈಗೆ ಬರೆ ಕೊಟ್ಟಿದ್ದು, ಬಳಿಕ ಮಗು ಡೈಪರ್ ಒಳಗೆ ಖಾರದಪುಡಿ ಹಾಕಿದ್ದಾರೆ. ಅಂಗನವಾಡಿಯಿಂದ ಮಗು ಕರೆತರಲು ಹೋದಾಗ ಚಂದ್ರಮ್ಮ ವಿಕೃತಿಯನ್ನು ಪೋಷಕರು ಗಮನಿಸಿದ್ದಾರೆ. ಕೊಡಲೇ ಚಂದ್ರಮ್ಮ ವಿರುದ್ಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಟಿವಿ9 ರಿಯಾಲಿಟಿ ಚೆಕ್: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಳುಗಳ ಪಾಲಾದ ಲಕ್ಷಾಂತರ ರೂ. ಮೌಲ್ಯದ ಅಕ್ಕಿ, ಗೋಧಿ
ಮಗುವಿನ ಮೇಲೆ ವಿಕೃತಿ ಮೆರೆಯುತ್ತಿದ್ದಂತೆ ಇತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಅಂಗನವಾಡಿ ಸಹಾಯಕಿ ಚಂದ್ರಮ್ಮರನ್ನು ಅಮಾನತ್ತು ಮಾಡಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಪಾಳು ಬಿದ್ದ ಮನೆಯಲ್ಲಿ ಅಂಗನವಾಡಿ ಕೇಂದ್ರ
ಯಾದಗಿರಿ ತಾಲೂಕಿನ ಗೌಡಗೇರ ಗ್ರಾಮದಲ್ಲಿ ಮೂರು ಅಂಗನವಾಡಿ ಕೇಂದ್ರಗಳಿವೆ. ಅದರಲ್ಲಿ ಪರಿಶಿಷ್ಟ ಪಂಗಡ ಮಕ್ಕಳಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಅಂಗನವಾಡಿ ಕೇಂದ್ರವನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆರಂಭಿಸಲಾಗಿದೆ. ಈ ಅಂಗನವಾಡಿ ಕೇಂದ್ರದಲ್ಲಿ ಪರಿಶಿಷ್ಟ ಪಂಗಡ ಅಂದರೆ ಎಸ್ಟಿ ಸಮುದಾಯಕ್ಕೆ ಸೇರಿದ ಸುಮಾರು 30 ಕ್ಕೂ ಅಧಿಕ ಮಕ್ಕಳ ಹಾಜರಾತಿಯಿದೆ. ಗ್ರಾಮದ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರವನ್ನ ನಡೆಸಲಾಗುತ್ತಿತ್ತು. ಆದರೆ ಕಟ್ಟಡ ಶಿಥಿಲಾವಸ್ತೆಗೆ ಬಂದಿದೆ ಎನ್ನುವ ಕಾರಣಕ್ಕೆ ಹೊಸ ಕಟ್ಟಡವನ್ನ ನಿರ್ಮಾಣ ಮಾಡುವ ಉದ್ದೇಶದಿಂದ ಇರುವ ಕಟ್ಟಡವನ್ನ ತೆರವು ಮಾಡಿದ್ದಾರೆ. ಆದರೆ ಕಟ್ಟಡ ತೆರವು ಮಾಡಿ ಮೂರು ವರ್ಷ ಕಳೆದ್ರು ಹೊಸ ಕಟ್ಟಡ ಕಟ್ಟುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿಲ್ಲ.
ಇದನ್ನೂ ಓದಿ: ಯಾದಗಿರಿಯಲ್ಲಿ ಅಂಗನವಾಡಿಯ ಕರ್ಮಕಾಂಡ ಬಯಲು: ಕಾರ್ಯಕರ್ತೆಯಿಂದ ಕಾಳಸಂತೆಯಲ್ಲಿ ಆಹಾರ ಪದಾರ್ಥಗಳ ಮಾರಾಟ
ಇರುವಂತ ಕಟ್ಟಡವನ್ನ ಬೇಕಾಬಿಟ್ಟಿಯಾಗಿ ಹೊಡೆದು ಹಾಕಿರುವ ಅಧಿಕಾರಿಗಳು ಕಟ್ಟಡದ ಅವಶೇಷಗಳನ್ನ ತೆರವು ಮಾಡಿ ಹೊಸ ಕಟ್ಟಡ ಕಟ್ಟುವ ಕೆಲಸಕ್ಕೆ ಮುಂದಾಗಬೇಕಾಗಿತ್ತು. ಆದರೆ ಕಟ್ಟಡ ಕಟ್ಟದೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.