
ನವದೆಹಲಿ, ಅಕ್ಟೋಬರ್ 14: ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ (KY Nanjegowda) ಅವರನ್ನು ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ತಡೆಯಾಜ್ಞೆ ನೀಡಿದ್ದು, ಮರು ಮತ ಎಣಿಕೆಗೆ ಸೂಚನೆ ನೀಡಿದೆ. ಮತಗಳ ಮರುಎಣಿಕೆ ನಡೆಸಿ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಇದರೊಂದಿಗೆ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡಗೆ ತುಸು ರಿಲೀಫ್ ದೊರೆತಂತಾಗಿದೆ. ಶಾಸಕ ಕೆವೈ ನಂಜೇಗೌಡ ಆಯ್ಕೆ ಅಸಿಂಧು ಎಂದು ಸೆಪ್ಟೆಂಬರ್ 16 ರಂದು ತೀರ್ಪು ಪ್ರಕಟಿಸಿದ್ದ ಕರ್ನಾಟಕ ಹೈಕೋರ್ಟ್, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿತ್ತು. ಅಲ್ಲದೆ, ಮೇಲ್ಮನವಿ ಸಲ್ಲಿಸುವ ವರೆಗೆ ಆದೇಶವನ್ನು ತಟಸ್ಥವಾಗಿ ಇರಿಸುವಂತೆ ನಿರ್ದೇಶನ ನೀಡಿತ್ತು.
ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನಂಜೇಗೌಡ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ನ ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಜೊಯಮಲ್ಯ ಬಾಗ್ಚಿ ಅವರ ಪೀಠ ವಿಚಾರಣೆ ನಡೆಸಿತು. ಮರು ಮತಎಣಿಕೆ ನಂತರ, ನ್ಯಾಯಾಲಯದ ಅನುಮತಿಯಿಲ್ಲದೆ ಫಲಿತಾಂಶ ಘೋಷಿಸುವಂತಿಲ್ಲ.
ಅಲ್ಲಿಯವರೆಗೆ, ನಂಜೇಗೌಡ ಅವರು ಶಾಸಕ ಸ್ಥಾನ ಅಬಾಧಿತ ಎಂದಿದೆ.
ಸುಪ್ರೀಂ ಕೋರ್ಟ್ ಆದೇಶ್ ಬಗ್ಗೆ ನಂಜೇಗೌಡ ಸಂತಸ
ಸುಪ್ರೀಂ ಕೋರ್ಟ್ ಆದೇಶ್ ಬಗ್ಗೆ ನಂಜೇಗೌಡ ಸಂತಸ ವ್ಯಕ್ತಪಡಿಸಿದ್ದು, ನ್ಯಾಯ ಸಿಕ್ಕಿದೆ. ಸಂತೋಷ ಆಗುತ್ತಿದೆ ಎಂದಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ನಲ್ಲಿ ಕೇಸ್ ಹಾಕಿಕೊಂಡಾಗ ಬಿಜೆಪಿ ಅಭ್ಯರ್ಥಿಗೆ ಹೇಳಿದ್ದೆ. ಮರು ಮತ ಎಣಿಕೆಗೆ ನಾನು ಬೇಡ ಎನ್ನಲ್ಲ ಎಂದಿದ್ದೆ. ಮರುಮತ ಎಣಿಕೆ ಜತೆಗೆ ಅಸಿಂಧು ಎಂದು ಆದೇಶವಾಗಿತ್ತು. ಹಾಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದೆ. ಅಸಿಂಧು ಎಂಬ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ. ಮರು ಮತ ಎಣಿಕೆ ಆದರೂ ನಾನು ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ್ದೇಕೆ ಹೈಕೋರ್ಟ್? ಇಲ್ಲಿವೆ ಅಸಲಿ ಕಾರಣಗಳು
ಮಾಲೂರು ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಪ್ರತಿಕ್ರಿಯಿಸಿ, ಅಸಿಂಧು ಆದೇಶಕ್ಕೆ ನಾಲ್ಕುವಾರ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮರು ಮತ ಎಣಿಕೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಕೇವಲ ಮಾರ್ಜಿನ್ ಬಗ್ಗೆ ಮಾತ್ರ ನಮಗೆ ಅನುಮಾನ ಇತ್ತು. ವಿಡಿಯೋಗ್ರಾಫ್ ಕೇಳಿದ್ದರೆ ಕೊಟ್ಟಿಲ್ಲ. ಆರ್ಒ ನಮ್ಮ ಅರ್ಜಿಯನ್ನು ಪೆಂಡಿಂಗ್ ಇಟ್ಟಿದ್ದರು. ನಮಗೆ ಜಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.
Published On - 1:07 pm, Tue, 14 October 25