ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ತಾರಕಕ್ಕೇರಿದ ಬಣ ಬಡಿದಾಟ: ಎರಡೂ ಬಣಗಳ ರಹಸ್ಯ ಸಭೆ

ಕರ್ನಾಟಕ ಬಿಜೆಪಿಯಲ್ಲಿ ಬಣ ಬಡಿದಾಟ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಉತ್ತರ ಕರ್ನಾಟಕದಲ್ಲಿ ವಕ್ಫ್ ಹೆಸರಿನಲ್ಲಿ ಯತ್ನಾಳ್ ಪ್ರತ್ಯೇಕವಾಗಿ ತಂಡ ಕಟ್ಟಿಕೊಂಡು ಜನಸಂವಾದ ಮಾಡ್ತಿದ್ದಾರೆ. ಇದಕ್ಕೆ ಸಿಡಿದೆದ್ದಿರುವ ವಿಜಯೇಂದ್ರ ಬಣ, ಪಕ್ಷದಿಂದ ಯತ್ನಾಳ್​​ ಅವರನ್ನು ಉಚ್ಚಾಟಿಸಬೇಕೆಂದು ಪಟ್ಟು ಹಿಡಿದಿದೆ. ಇನ್ನು ಎರಡೂ ತಂಡಗಳು ಪ್ರತ್ಯೇಕ ಸಭೆ ನಡೆಸಿದ್ದು, ಈ ರಹಸ್ಯ ಸಭೆಗಳಲ್ಲಿ ಏನೆಲ್ಲಾ ಚರ್ಚೆ ಆಯ್ತು ಎನ್ನುವ ಮಾಹಿತಿ ಇಲ್ಲಿದೆ.

ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ತಾರಕಕ್ಕೇರಿದ ಬಣ ಬಡಿದಾಟ: ಎರಡೂ ಬಣಗಳ ರಹಸ್ಯ ಸಭೆ

Updated on: Dec 01, 2024 | 1:32 PM

ಬೆಂಗಳೂರು, (ಡಿಸೆಂಬರ್ 01): ಕರ್ನಾಟಕ ಬಿಜೆಪಿಯಲ್ಲಿ ಬಸನಗೌಡ ಪಾಟೀಲ್​ ಯತ್ನಾಳ್​ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಣದ ಮಧ್ಯೆ ಪ್ರತಿಷ್ಠೆ ಫೈಟ್​ ನಡೆಯುತ್ತಿದ್ದು, ವಿಜಯೇಂದ್ರ ಆಪ್ತರು, ಯತ್ನಾಳ್​ ಉಚ್ಚಾಟನೆಗೆ ಪಟ್ಟು ಹಿಡಿದಿದ್ದಾರೆ. ನಿನ್ನೆಯಷ್ಟೇ ರೇಣುಕಾಚಾರ್ಯ ಟೀಂ, ಚಾಮುಂಡಿ ಸನ್ನಿಧಿಯನ್ನೇ ದುಷ್ಟ ಸಂಹಾರ ಆಗುತ್ತೆ ಅಂದಿದ್ರು. ಇದೀಗ ಬೆಳ್ಳಂಬೆಳಗ್ಗೆ ಬೆಂಗಳೂರಿನ ಡಾಲರ್ಸ್​ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಮಾಜಿ ಶಾಸಕರ ದಂಡು ಭೇಟಿ ನೀಡಿ ಮಹತ್ವದ ಸಭೆ ನಡೆಸಿದ್ದು. ಯತ್ನಾಳ್ ಉಚ್ಚಾಟನೆಗೆ ರೇಣುಕಾಚಾರ್ಯ ಟೀಂ ಪಟ್ಟು ಹಿಡಿದಿದೆ.

ಡಿ.11ರಂದು ದಾವಣಗೆರೆಯಲ್ಲಿ ಸಭೆ

ಇನ್ನು ಯಡಿಯೂರಪ್ಪ ಜೊತೆಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂಪಿ ರೇಣುಕಾಚಾರ್ಯ , ಶಾಸಕ ಯತ್ನಾಳ್​ಗೆ ಎಲ್ಲಿದೆ ಶಕ್ತಿ, ಅವರು ಇರೋದು ನಾಲ್ಕೇ ಜನ. ಡಿಸೆಂಬರ್ 11ರಂದು ದಾವಣಗೆರೆಯಲ್ಲಿ ಸಭೆ ಸೇರುತ್ತೇವೆ. ಯತ್ನಾಳ್​ರನ್ನು ಉಚ್ಚಾಟನೆ ಮಾಡಬೇಕಾ ಬೇಡ್ವಾ ಎಂದು ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆಗೆ ಬಿಗಿಪಟ್ಟು: ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ

ಇನ್ನು ಇದೇ ವೇಳೆ ಪ್ರತಾಪ್ ಸಿಂಹ ವಿರುದ್ಧ ಗುಡುಗಿದ ರೇಣುಕಾಚಾರ್ಯ, ಪೇಪರ್ ಸಿಂಹ ನಮ್ಮ ಬಗ್ಗೆ ಮಾತಾಡಿದ್ದಾರೆ. ಯಾವುದೋ ಕಾರಣಗಳಿಗೆ ಚುನಾವಣೆಯಲ್ಲಿ ನಮ್ಮನ್ನು ಸೋಲಿಸಿದ್ದಾರೆ. ಜನರು ನಮ್ಮನ್ನು ತಿಪ್ಪೆಗೆ ಎಸೆದಿಲ್ಲ. ಆದರೆ ನಿಮ್ಮ ರೀತಿ ಪೇಪರ್‌ ಸಿಂಹ ಅಲ್ಲ. ಮೈಸೂರಲ್ಲಿ ಎಷ್ಟು ಸಂಘಟನೆ ಮಾಡಿದ್ದೀರಿ? ಎಷ್ಟು ಜನರ ಗೆಲ್ಲಿಸಿದ್ದೀರಿ? ಕೊಡಗು, ಮೈಸೂರಿನಲ್ಲಿ ಸ್ವಸಾಮರ್ಥ್ಯದಿಂದ ನಮ್ಮವರು ಗೆದ್ದಿದ್ದಾರೆ. ನಿನಗೆ ಸಾಮರ್ಥ್ಯ ಇದ್ದಿದ್ದರೆ ಯಾಕೆ‌ ನಿಮ್ಮವರನ್ನು ಗೆಲ್ಲಿಸಿಲ್ಲ. ನೀನು ಪ್ರಯೋಜನ ಇಲ್ಲ ಎಂದು ಡಸ್ಟ್​ಬಿನ್​, ಕೊಚ್ಚೆಗೆ ಎಸೆದಿದ್ದಾರೆ‌ ಎಂದು ಮಾಜಿ‌ ಸಂಸದ ಪ್ರತಾಪ್‌ ಸಿಂಹ ವಿರುದ್ಧ ತಿರುಗೇಟು ನೀಡಿದರು.

ವಿಜಯೇಂದ್ರ ಬಣಕ್ಕೆ ಸಂದೇಶ ರವಾನೆ

ಕೇಸರಿ ಮನೆಯಲ್ಲಿನ ಪ್ರತ್ಯೇಕ ಸಮರ ಸಾರಿರುವ ಯತ್ನಾಳ್​ಗೆ ಎಷ್ಟೇ ಯಾರೇ ವಾರ್ನಿಂಗ್ ಕೊಟ್ಟರೂ ತಮ್ಮ ಪಟ್ಟನ್ನ ಮಾತ್ರ ಬಿಡ್ತಿಲ್ಲ. ಉಚ್ಚಾಟನೆ ಆಗ್ಬೇಕು ಅಂತಾ ವಿಜಯೇಂದ್ರ ಆಪ್ತರು ಪಟ್ಟು ಹಿಡಿದಿದ್ದಾರೆ. ಇದಕ್ಕೂ ಕ್ಯಾರೇ ಅಂತಿಲ್ಲ,, ಬೇಕಾದ​ ಕ್ರಮ ಕೈಗೊಳ್ಳಲಿ ನನ್ನ ಹೋರಾಟ ನಾನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರೋ ರೆಬೆಲ್ ಶಾಸಕ, ಉಗ್ರ ಕ್ರಮಕೈಗೊಂಡರೂ ಕೇರ್​ ಮಾಡುವುದಿಲ್ಲ ಎಂದು ವಿಜಯೇಂದ್ರ ಬಣಕ್ಕೆ ಸಂದೇಶ ರವಾನೆ ಮಾಡಿದ್ದಾರೆ.

ಯತ್ನಾಳ್​ ಬಣದಿಂದಲೂ ರಹಸ್ಯ ಸಭೆ

ಇತ್ತ ವಿಜಯೇಂದ್ರ ಬಣದ ನಾಯಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಹತ್ವದ ಸಭೆ ನಡೆಸಿದ್ದರೆ, ಇತ್ತ ರೆಬೆಲ್ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ನೇತೃತ್ವದ ಬಣ ಸಹ ಬೆಳಗಾವಿಯಲ್ಲಿ ರಹಸ್ಯ ಸಭೆ ನಡೆಸಿದೆ. ಬೆಳಗಾವಿ ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಸಭೆಯಲ್ಲಿ, ದೆಹಲಿಯಲ್ಲಿ ವರಿಷ್ಠರ ಜೊತೆ ಯಾವ ವಿಷಯ ಚರ್ಚೆ ಮಾಡಬೇಕು ಎನ್ನುವುದರ ಬಗ್ಗೆ ಚರ್ಚಿಸಿದರು.

ವಕ್ಫ್ ಸೇರಿ ರಾಜಕೀಯ ಬೆಳವಣಿಗೆ ಕುರಿತು ಗಮನ ಸೆಳೆಯುವುದು, ವಕ್ಫ್​​​ ವಿರುದ್ಧದ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಹಲವರು ವಿರೋಧಿಸುತ್ತಿರುವ ಬಗ್ಗೆ ಗಮನಕ್ಕೆ ತರುವ ಬಗ್ಗೆ ಚರ್ಚೆಯಾಗಿದ್ದು, ಈ ಎಲ್ಲಾ ಅಂಶಗಳನ್ನು ಹೈಕಮಾಂಡ್ ನಾಯಕರ ಗಮನಕ್ಕೆ ತರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಉಪಚುನಾವಣೆ ಮಿನಿ ಸಮರದ ಸೋಲಿನಿಂದ ಇನ್ನೂ ಹೊರಬಾರದ ಬಿಜೆಪಿಗೆ ರೆಬೆಲ್‌ ಟೀಂ ಕಂಟಕವಾಗಿ ಕಾಡುತ್ತಿದೆ. ಇದರ ಮಧ್ಯೆ ಬಿಜೆಪಿ ಹೈಕಮಾಂಡ್ ಸೈಲೆಂಟ್ ಆಗಿರೋದು ನಾನಾ ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಇದು ಮುಂದುವರೆದ್ರೆ, ರಾಜ್ಯದಲ್ಲಿ ಬಿಜೆಪಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಅನ್ನೋದನ್ನ ಹರಿತ ಬಿಜೆಪಿ ನಿಷ್ಠರ ಪಡೆ, ಹೈಕಮಾಂಡ್​ಗೆ ಸ್ಪಷ್ಟ ಸಂದೇಶ ರವಾನಿಸಲು ಮುಂದಾಗಿದೆ.

Loading...
Unable to load recommendations.
Follow Us