
ಬೆಂಗಳೂರು, ಫೆಬ್ರವರಿ 16: ‘ಸಂಘದ ಗುರುದಕ್ಷಿಣೆ ಡೊನೇಷನ್ ಅಲ್ಲ, ಡಿವೋಷನ್’ ಎಂಬ ಮೋಹನ್ ಭಾಗವತ್ (Mohan Bhagwat) ಅವರ ಹೇಳಿಕೆಯನ್ನು ಮತ್ತೆ ಮುನ್ನೆಲೆಗೆ ತರುವ ಮೂಲಕವೇ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹಾಗೂ ಟೀಕಾಕಾರರಿಗೆ ಆರ್ಎಸ್ಎಸ್ (RSS) ಖಡಕ್ ಉತ್ತರ ನೀಡಿದೆ. ಆರ್ಎಸ್ಎಸ್ನ ಆರ್ಥಿಕ ಮೂಲ ಯಾವುದು ಮತ್ತು ಅದು ತೆರಿಗೆ ಪಾವತಿಸುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಈವರೆಗೆ ಉತ್ತರ ಸಿಕ್ಕಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಅದಕ್ಕುತ್ತರವಾಗಿ ಮೋಹನ್ ಭಾಗವತ್ ಅವರ ಹೇಳಿಕೆಯ ವಿಡಿಯೋವನ್ನು ಸಂಘ ಮತ್ತೆ ಮುನ್ನೆಲೆಗೆ ತಂದಿದೆ.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕಳೆದ ನವೆಂಬರ್ನಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಆಗ ಮಾತನಾಡಿ, ಸಂಘದ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ್ದರು. ‘ನಾವು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ, ದೇಣಿಗೆ ತೆಗೆದುಕೊಳ್ಳುವುದಿಲ್ಲ, ಸಂಘದ ಸದಸ್ಯರೇ ಗುರುದಕ್ಷಿಣೆ ನೀಡುತ್ತಾರೆ’ ಎಂದು ಭಾಗವತ್ ಹೇಳಿದ್ದರು. ಅಲ್ಲದೆ, ಸಂಘ ಸಮಾಜವನ್ನು ಬಲಪಡಿಸುವ ಕೆಲಸ ಮಾಡುತ್ತಿದೆ ಮತ್ತು ರಾಜಕಾರಣದಿಂದ ದೂರವಿದೆ ಎಂದು ಸ್ಪಷ್ಟಪಡಿಸಿದ್ದರು.
ಈ ವಿಚಾರವಾಗಿ ಬೆಂಗಳೂರಿನ ಗಾಂಧಿಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಖರ್ಗೆ, ಆರ್ಎಸ್ಎಸ್ ಫಂಡಿಂಗ್ ತೆಗೆದುಕೊಳ್ಳುವುದಿಲ್ಲ, ಸದಸ್ಯರೇ ಗುರುದಕ್ಷಿಣೆ ನೀಡುತ್ತಾರೆ ಎಂದು ಮೋಹನ್ ಭಾಗವತ್ ಹೇಳುತ್ತಾರೆ. ಆದರೆ, ಇವರದ್ದು ದೊಡ್ಡ ನೆಟ್ವರ್ಕ್ ಇದೆ. ಅಮೆರಿಕಾ, ಇಂಗ್ಲೆಂಡ್ ಸೇರಿ ವಿದೇಶಗಳಿಂದ ಹೆಚ್ಚು ಫಂಡಿಂಗ್ ಬರುತ್ತದೆ. ತಮ್ಮ ಧ್ವಜದ ಹೆಸರಲ್ಲಿ ಗುರುದಕ್ಷಿಣೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. 2,500 ಸಂಘಟನೆಗಳ ಜಾಲ ಇದೆ. ಈ ಜನರು ಹಣ ವರ್ಗಾವಣೆಯಲ್ಲಿ ತೊಡಗಿದ್ದಾರೆ. ಇವರಿಗೆ ಇಷ್ಟು ಹಣ ಎಲ್ಲಿಂದ ಬರುತ್ತದೆ ಎಂದು ಖರ್ಗೆ ಪ್ರಶ್ನಿಸಿದ್ದರು.
‘57 ವರ್ಷಗಳ ಕಾಲ ದೇಶದ ಧ್ವಜವನ್ನು ಹಾರಿಸದವರು ಈಗ ದೇಶಪ್ರೇಮದ ಬಗ್ಗೆ ಮಾತನಾಡುತ್ತಿದ್ದಾರೆ. ಸಂಘದ ಆರ್ಥಿಕ ಮೂಲ ಯಾವುದು? ಅದು ತೆರಿಗೆ ಪಾವತಿಸುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ’ ಎಂದು ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ಹೊರಹಾಕಿದ್ದರು. ಮುಂದುವರಿದು, ಆರ್ಎಸ್ಎಸ್ ದೆವ್ವ ಇದ್ದಂತೆ, ಬಿಜೆಪಿ ದೆವ್ವದ ಕರಿ ನೆರಳು. ನಾವು ನೆರಳಿನ ಜೊತೆ ಅಲ್ಲ, ದೆವ್ವದ ಜೊತೆ ಹೋರಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಧರ್ಮದ ಸಂರಕ್ಷಕರಾಗಲು ಆರ್ಎಸ್ಎಸ್ಗೆ ಯಾರು ಅಧಿಕಾರ ನೀಡಿದ್ದು: ಸಚಿವ ಪ್ರಿಯಾಂಕ್ ಖರ್ಗೆ
ಆರ್ಎಸ್ಎಸ್ ಅನ್ನು ನೋಂದಣಿ ಮಾಡುವ ಅಗತ್ಯವಿಲ್ಲ ಎಂಬುದನ್ನು ಖಂಡಿಸಿರುವ ಖರ್ಗೆ, ಇವತ್ತಲ್ಲ, ನಾಳೆ ಆರ್ಎಸ್ಎಸ್ ನೋಂದಣಿ ಆಗಲೇಬೇಕು. ನಾನೇ ಅದನ್ನು ಮಾಡಿಸುತ್ತೇನೆ ಎಂದಿದ್ದಾರೆ. ನಾವು ಹೋಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಏಕೆಂದರೆ ಅವರು ವ್ಯಕ್ತಿಗಳ ಸಮೂಹ ಎಂದು ಹೇಳುತ್ತಾರೆ. ಮೋಹನ್ ಭಾಗವತ್ ಅವರು ಹೇಳಿದರೂ, ನಮಗೆ ನೋಂದಣಿಗೆ ಅವಕಾಶವಿಲ್ಲ ಎಂದು ಗೊತ್ತಾಗಲಿಲ್ಲವೇ? ನಾನು ಮಾತು ಕೊಡುತ್ತೇನೆ, ಇವತ್ತಿನಿಂದ ನಾಳೆ ಅವರು ನೋಂದಣಿ ಆಗಲೇಬೇಕು. ಆಗ್ತಾರೆ, ನಾನು ಮಾಡಿಸುತ್ತೇನೆ ಎಂದು ಖರ್ಗೆ ಹೇಳಿದ್ದಾರೆ.