
ಬೆಂಗಳೂರು, ಜೂನ್ 28: ಬಿಜೆಪಿ ಶಾಸಕ ಡಾ. ಅಶ್ವಥ್ ನಾರಾಯಣ್ ಅವರ ಬೆಂಗಳೂರು ನಿವಾಸದಲ್ಲಿ ಶುಕ್ರವಾರ ನಡೆದ ಬಿಜೆಪಿ (BJP) ನಾಯಕರ ಸಭೆಯಲ್ಲಿ ಪರಸ್ಪರ ವಿಶ್ವಾಸ ಮೂಡಿಸಿಕೊಂಡು ಹೋಗುವ ಬಗ್ಗೆ ಚರ್ಚೆ ನಡೆದಿದೆ. ಆರ್ಎಸ್ಎಸ್ ನಿರ್ದೇಶನದ ಮೇರೆಗೆ ಸಭೆ ನಡೆದಿದೆ. ಕಳೆದ ವಾರ ನಡೆದಿದ್ದ ಆರ್ಎಸ್ಎಸ್ (RSS) ಸಭೆಯಲ್ಲಿ ಆಗಾಗ ಸಮನ್ವಯ ಸಭೆ ನಡೆಸಲು ಸೂಚನೆ ಸಿಕ್ಕಿತ್ತು. ಪ್ರತಿ ಹದಿನೈದು ದಿನಗಳಿಗೊಮ್ಮೆ ನೇರವಾಗಿ ಅಥವಾ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲು ಸೂಚನೆ ನೀಡಲಾಗಿತ್ತು. ಪಕ್ಷದೊಳಗಿನ ವ್ಯತ್ಯಾಸ ಸರಿಪಡಿಸಲು ಜೊತೆಯಾಗುವಂತೆ ಬಿಜೆಪಿ ನಾಯಕರಿಗೆ ಆರ್ಎಸ್ಎಸ್ ಸೂಚನೆ ನೀಡಿತ್ತು. ರಾಜ್ಯ ಬಿಜೆಪಿ ಸಂಘಟನೆ ವಿಚಾರ ಹಾಗೂ ಹೋರಾಟದ ಬಗ್ಗೆ ಗಂಭೀರ ಚರ್ಚೆ ನಡೆದಿದೆ.
ಈ ಮಧ್ಯೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಮಾದರಿಯಲ್ಲೇ ರೇಣುಕಾಚಾರ್ಯ ವಿರುದ್ಧವೂ ಕ್ರಮಕ್ಕೆ ಹೈಕಮಾಂಡ್ಗೆ ಶಿಫಾರಸು ಮಾಡಬೇಕು ಎಂಬ ಮಟ್ಟಿಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಸಭೆಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಉಪಸ್ಥಿತಿ ದೊಡ್ಡ ಅಚ್ಚರಿಯಾಗಿತ್ತು. ಕಳೆದ ಬಾರಿಯ ಸಭೆಗೂ ಅರವಿಂದ ಲಿಂಬಾವಳಿಗೆ ಆಹ್ವಾನ ಇತ್ತೆನ್ನಲಾಗಿದ್ದು, ಬೆಂಗಳೂರಿನಲ್ಲಿ ಇರದ ಕಾರಣ ಲಿಂಬಾವಳಿ ಗೈರಾಗಿದ್ದರು. ವಿಜಯೇಂದ್ರ ನಾಯಕತ್ವವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ಲಿಂಬಾವಳಿ ನೇರವಾಗಿ ಹೇಳಿದ್ದಾರೆ ಎನ್ನಲಾಗಿದ್ದು, ಹಳೆಯದನ್ನೆಲ್ಲಾ ಮರೆತು ಎಲ್ಲರೂ ಒಟ್ಟಾಗಿ ಹೋಗೋಣ ಎಂಬ ಸಮಾಧಾನದ ಮಾತುಗಳು ಹಿರಿಯರಿಂದ ವ್ಯಕ್ತವಾಗಿವೆ.
ಈ ಮಧ್ಯೆ ಬಿಜೆಪಿಯ ತಂತ್ರಗಾರ ಎನ್ನಿಸಿಕೊಂಡಿರುವ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಶುಕ್ರವಾರ ಇಡೀ ದಿನ ಬೆಂಗಳೂರಿನಲ್ಲಿದ್ದರು. ರಾತ್ರಿ ವಿಜಯೇಂದ್ರ ಒಂದೂವರೆ ಗಂಟೆಗೂ ಹೆಚ್ಚು ಕಾಲ ಯಾದವ್ ಜೊತೆ ಖಾಸಗಿ ಹೋಟೆಲ್ನಲ್ಲಿ ಚರ್ಚೆ ನಡೆಸಿದ್ದಾರೆ.
ಈ ಮಧ್ಯೆ, ಪಕ್ಷದ ವೇದಿಕೆಯೆಲ್ಲೇ ಎರಡು ಮೂರು ಕಾರ್ಯಕ್ರಮಗಳು ನಡೆದರೂ ದೆಹಲಿಗೆ ಹೋಗಿ ಬಂದ ಬಳಿಕ ವಿಧಾನಸಭೆ ವಿಪಕ್ಷ ನಾಯಕ ಅಶೋಕ್ ಬೆಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೇ ಮೈಸೂರಿನಲ್ಲಿ ತುರ್ತು ಪರಿಸ್ಥಿತಿ ಕುರಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರಗೆ ಕೊಕ್? ಮುಂಚೂಣಿಯಲ್ಲಿ ಕೇಳಿಬರುತ್ತಿದೆ ಈ ನಾಯಕರ ಹೆಸರು!
ಒಟ್ಟಾರೆ, ಶುಕ್ರವಾರದ ಸಭೆಯ ಪ್ರಧಾನ ಅಜೆಂಡಾ ಇದ್ದಿದ್ದು, ಮಾಜಿ ಸಚಿವ ಲಿಂಬಾವಳಿ ಮನವೊಲಿಕೆ. ಆದರೆ ಅಷ್ಟು ಸುಲಭವಾಗಿ ಒಪ್ಪದ ಲಿಂಬಾವಳಿ ತಮ್ಮ ನಿಲುವನ್ನು ನೇರಾನೇರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯುವ ಮೊದಲು ನಿಮ್ಮ ನಿಮ್ಮ ವ್ಯತ್ಯಾಸ ಸರಿಪಡಿಸಿಕೊಳ್ಳಿ ಎಂಬ ಆರ್ಎಸ್ಎಸ್ ನಿರ್ದೇಶನ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತದೆಯೋ ಕಾದುನೋಡಬೇಕಿದೆ.