AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣ, ಸಂಡೂರು- ಶಿಗ್ಗಾಂವಿ ಬೈ ಎಲೆಕ್ಷನ್: ಇಲ್ಲಿದೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ!

ಚನ್ನಪಟ್ಟಣ ಮಾತ್ರವಲ್ಲ, ರಾಜ್ಯದ ಇನ್ನೆರಡು ಕ್ಷೇತ್ರಗಳಲ್ಲೂ ಉಪಚುನಾವಣೆ ರಂಗೇರಿದೆ. ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಘೋಷಣೆಯಾಗಿದ್ದು, ಪ್ರಭಾವಿ ನಾಯಕರು ತಮ್ಮ ಆಪ್ತರನ್ನೇ ಅಭ್ಯರ್ಥಿ ಮಾಡುವುದಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆಕಾಂಕ್ಷಿಗಳು ದೆಹಲಿ ಮಟ್ಟದಲ್ಲಿ ಬೀಡುಬಿಟ್ಟು ಟಿಕೆಟ್ ಪಡೆಯೋದಕ್ಕೆ ಪಣ ತೊಟ್ಟಿದ್ದಾರೆ. ಹಾಗಿದ್ರೆ ಯಾವ್ಯಾವ ಕ್ಷೇತ್ರದಲ್ಲಿ, ಚುನಾವಣೆ ಕಾವಿದೆ.. ನಾಯಕರು ಮಾಡ್ತಿರೋ ಪ್ರಯತ್ನವಾದ್ರೂ ಏನು?.. ಇಲ್ಲಿದೆ ಕಂಪ್ಲೀಟ್ ರಿಪೋರ್ಟ್..

ಚನ್ನಪಟ್ಟಣ, ಸಂಡೂರು- ಶಿಗ್ಗಾಂವಿ ಬೈ ಎಲೆಕ್ಷನ್: ಇಲ್ಲಿದೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ!
ಕಾಂಗ್ರೆಸ್, ಬಿಜೆಪಿ, ಜೆಡಿಎಸ್
ರಮೇಶ್ ಬಿ. ಜವಳಗೇರಾ
|

Updated on: Oct 17, 2024 | 8:27 PM

Share

ಬಳ್ಳಾರಿ/ಹಾವೇರಿ, (ಅಕ್ಟೋಬರ್ 17): ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ ಆಗಿದ್ದೇ ತಡ, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇಷ್ಟು ದಿನ ಸುಮ್ಮನಿದ್ದ ನಾಯಕರು ಸೈಲೆಂಟ್ ಆಗಿ ತಂತ್ರ ರೂಪಿಸುವುದಕ್ಕೆ ಶುರು ಮಾಡಿದ್ದಾರೆ. ಅವರನ್ನ ಇವರು, ಇವರನ್ನ ಅವರು ಭೇಟಿ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಈ ನಡುವೆ ಸವಾಲು-ಪ್ರತಿ ಸವಾಲಿಗೂ ಅಖಾಡ ಸಾಕ್ಷಿಯಾಗುತ್ತಿದೆ.

ಸಂಡೂರು ಬಿಜೆಪಿ ಟಿಕೆಟ್​ಗಾಗಿ ಮೂವರು ಪಟ್ಟು

ಸಂಸದ ತುಕಾರಾಂ ಅವರಿಂದ ಸಂಡೂರು ವಿಧಾನಸಭೆ ಕ್ಷೇತ್ರ ತೆರವಾಗಿದೆ. ಎಸ್​ಟಿ ಮೀಸಲು ಕ್ಷೇತ್ರ ಗೆಲ್ಲೋದಕ್ಕೆ ಬಿಜೆಪಿ ನಾಯಕರು ನಾನಾ ರಣತಂತ್ರ ಹೆಣೆಯುತ್ತಿದ್ದಾರೆ. ಈ ಮಧ್ಯೆ ಕೇಸರಿ ಟಿಕೆಟ್​ಗಾಗಿ ಮೂವರು ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಅಸಲಿ ವಿಷ್ಯ ಏನಂದ್ರೆ.. ಮೂವರು ಪ್ರಭಾವಿಗಳು ಪ್ರತ್ಯೇಕವಾಗಿ ಬ್ಯಾಟ್ ಬೀಸ್ತಿದ್ದಾರೆ. ಬಿಜೆಪಿ ಎಸ್​ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಪರ ಶಾಸಕ ಜನಾರ್ದನ ರೆಡ್ಡಿ ಪಟ್ಟು ಹಿಡದಿದ್ದಾರೆ. ಸಮುದಾಯದ ನಾಯಕ ರಮೇಶ್ ಜಾರಕಿಹೊಳಿ, ಮಾಜಿ ಸಂಸದ ದೇವೇಂದ್ರಪ್ಪಗೆ ಬೆಂಬಲ ಕೊಡ್ತಿದ್ದಾರೆ. ಈ ಮಧ್ಯೆ ಎಸ್​ಟಿ ಸಮುದಾಯದ ಪ್ರಭಾವಿ ನಾಯಕ ಶ್ರೀರಾಮುಲು ದಿವಾಕರ್​ ಬೆನ್ನಿಗೆ ನಿಂತಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡುವ ಜವಾಬ್ದಾರಿ ನನ್ನ ಮೇಲಿದೆ: ಹೆಚ್ ಡಿ ಕುಮಾರಸ್ವಾಮಿ

ಸಂಸದ ತುಕಾರಾಂ ಪುತ್ರಿಗೆ ಟಿಕೆಟ್? ‘ಕೈ’ ಕೊತಕೊತ

ಇನ್ನು ಸಂಡೂರು ಕಾಂಗ್ರೆಸ್ ಟಿಕೆಟ್ ಬಹುತೇಕ ಅಂತಿಮವಾಗಿದೆ ಎನ್ನಲಾಗ್ತಿದೆ. ಸಂಸದ ತುಕಾರಾಂ ಅವ್ರ ಪುತ್ರಿ ಚುನಾವಣಾ ಅಖಾಡಕ್ಕಿಳಿಯುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರೋ ಸಚಿವ ಸುಧಾಕರ್, ತುಕಾರಾಂ ಪುತ್ರಿಗೆ ಟಿಕೆಟ್ ನೀಡಲಾಗುತ್ತೆ ಎಂದಿದ್ದಾರೆ. ಆದ್ರೆ ತುಕಾರಾಂ ಕುಟುಂಬಕ್ಕೆ ಟಿಕೆಟ್ ಕೊಡೋ ಬಗ್ಗೆ ಕೈ ಮನೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ತುಕಾರಾಂ 4 ಬಾರಿ ಶಾಸಕರು ಇದೀಗ ಸಂಸದರಾಗಿದ್ದಾರೆ. ಮತ್ತೆ ಅವರ ಕುಟುಂಬಕ್ಕೆ ಟಿಕೆಟ್ ನೀಡಿದ್ರೇ ಹೇಗೆ ಅಂತಾ ಮುಖಂಡರು ಆಕ್ರೋಶ ಹೊರಹಾಕ್ತಿದ್ದಾರೆ. ಇಷ್ಟೆ ಅಲ್ಲದೇ ಪ್ರತ್ಯೇಕ ಸಭೆ ಕೂಡ ಮಾಡಿ ಕೈ ಕಲಿಗಳಿಗೆ ಸಂದೇಶ ರವಾನಿಸಿದ್ದಾರೆ.

ಶಿಗ್ಗಾಂವಿ ಬಿಜೆಪಿಯಲ್ಲೂ ಕೇಳಿಬಂತು ಮೂವರ ಹೆಸರು

ಇನ್ನು ಶಿಗ್ಗಾಂವಿ ಬೈಎಲೆಕ್ಷನ್​ ಟಿಕೆಟ್​ಗೆ ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಪುತ್ರನಿಗೆ ಟಿಕೆಟ್ ಕೊಡಿಸೋಕೆ ಸಂಸದ ಬಸವರಾಜ ಬೊಮ್ಮಾಯಿ ಕಸರತ್ತು ನಡೆಸ್ತಿದ್ರೆ, ಮುರುಗೇಶ್ ನಿರಾಣಿ, ಶ್ರೀಕಾಂತ್ ದುಂಡಿಗೌಡರ ಹೆಸರು ಮುಂಚೂಣಿಯಲ್ಲಿದೆ. ಹೀಗಾಗಿ ವರಿಷ್ಠರ ಜೊತೆ ಚರ್ಚೆ ಮಾಡೋ ಮುನ್ನ ಯಡಿಯೂರಪ್ಪರನ್ನ ಭೇಟಿಯಾಗಿ ಬೊಮ್ಮಾಯಿ ಚರ್ಚಿಸಿದ್ದಾರೆ. ಈ ನಡುವೆ ದೆಹಲಿಗೆ ತೆರಳಿರೋ ನಿರಾಣಿ ತಾವು ಆಕಾಂಕ್ಷಿಯಲ್ಲ ಎನ್ನುತ್ತಿದ್ದಾರೆ.

ಒಟ್ಟಿನಲ್ಲಿ ಉಪ ಚುನಾವಣೆ ಕಾವು ತೀವ್ರ ರೂಪಕ್ಕೆ ತಿರುಗುತ್ತಿದೆ. ಎರಡು ಪಕ್ಷಗಳ ನಡುವೆ ಟಿಕೆಟ್​ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ದೆಹಲಿ ಹೈಕಮಾಂಡ್ ಯಾರಿಗೆ ಮಣೆ ಹಾಕತ್ತವೇ ಎನ್ನುವುದೇ ಕುತೂಹಲ ಕೆರಳಿಸಿದೆ.

ಚನ್ನಪಟ್ಟಣ ಮಿನಿಸಮರದಲ್ಲಿ ಸೈನಿಕ-ದಳಪತಿ ಮಧ್ಯೆ ಟಿಕೆಟ್ ಯುದ್ಧ

ಚನ್ನಪಟ್ಟಣ ಮಿನಿ ಸಮರದಲ್ಲಿ ಸೈನಿಕ ವರ್ಸಸ್ ದಳಪತಿ ಟಿಕೆಟ್ ಕಾಳಗ ತಾರಕ್ಕೇರಿದೆ. ನಾಳೆಯಿಂದ ನಾಮಿನೇಷನ್ ಆರಂಭವಾಗಲಿದ್ದು, ಮುಂದಿನ ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಇನ್ನೊಂದು ವಾರದಲ್ಲಿ ಚನ್ನಪಟ್ಟಣದಿಂದ ಯಾರು ನಾಮಿನೇಷನ್ ಫೈಲ್ ಮಾಡ್ತಾರೆ ಅನ್ನೋ ಕುತೂಹಲ ಗರಿಗೆದರಿದೆ. ಯಾಕಂದ್ರೆ, ನಿನ್ನೆ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸಿದ್ದ ಸಿ.ಪಿ ಯೋಗೇಶ್ವರ್ ನಾನೇ ಮೈತ್ರಿ ಅಭ್ಯರ್ಥಿ ಅಂತಾ ಟವೆಲ್ ಹಾಕಿದ್ದಾರೆ.

ಯೋಗೇಶ್ವರ್ ಪಟ್ಟು ಹಾಕ್ತಿದ್ದಂತೆ ಅಲರ್ಟ್ ಆದ ಕುಮಾರಸ್ವಾಮಿ, ಅಭ್ಯರ್ಥಿ ಆಯ್ಕೆ ಬಗ್ಗೆ ಜೆಡಿಎಸ್ ಮುಖಂಡರ ಬಗ್ಗೆ ಸಭೆ ನಡೆಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಕಾರ್ಯಕರ್ತರ ಒತ್ತಡ ಹಾಕ್ತಿದ್ದು, ಈ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ. ಜೆಡಿಎಸ್‌ನಿಂದಲೇ ಮೈತ್ರಿ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಹೆಚ್‌ಡಿಕೆ ಪ್ಲ್ಯಾನ್ ಮಾಡ್ತಿದ್ದಾರೆ. ಸಭೆಗೂ ಮುನ್ನ ಮಾತನಾಡಿದ ಹೆಚ್‌ಡಿಕೆ, ಯಾರು ಏನೇ ಹೇಳಿದ್ರು, ಅಭ್ಯರ್ಥಿ ಫೈನಲ್ ಮಾಡೋಕೆ ಹೈಕಮಾಂಡ್ ನನಗೆ ಹೇಳಿದೆ. ಎಲ್ಲರ ಜೊತೆ ಚರ್ಚಿಸಿ ನಾನು ನಿರ್ಧಾರ ಮಾಡ್ತೀನಿ ಎಂದಿದ್ದಾರೆ. ಈ ಮೂಲಗಳ ಪ್ರಕಾರ ಕುಮಾರಸ್ವಾಮಿ ಪುತ್ರನಿಗೆ ಟಿಕೆಟ್​ ಕೊಡಿಸುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ.

ಕಾಂಗ್ರೆಸ್‌ನಿಂದ ಯಾರು?

ಇನ್ನು ಕಾಂಗ್ರೆಸ್‌ನಿಂದ ಚನ್ನಪಟ್ಟಣ ಅಭ್ಯರ್ಥಿ ಯಾರಾಗ್ತಾರೆಂಬ ಕುತೂಹಲವೂ ಗರಿಗೆದರಿದೆ. ಈಗಾಗಲೇ ಕ್ಷೇತ್ರದಲ್ಲಿ ಡಿ.ಕೆ ಸುರೇಶ್ ಹೆಸರು ಹರಿದಾಡ್ತಿದೆ. ಈಗಿರುವಾಗ್ಲೇ, ಮಾಜಿ ಶಾಸಕ ಎಂ.ಸಿ ಅಶ್ವತ್ಥ್ ಚಂಡಿಕಾಯಾಗ ಮಾಡಿಸಿದ್ದು, ಡಿ.ಕೆ ಸುರೇಶ್ ಗೆಲುವಿಗೆ ಪ್ರಾರ್ಥಿಸಿದ್ದಾರೆ. ಈ ಮಧ್ಯೆ, ಚನ್ನಪಟ್ಟಣ ಕಾಂಗ್ರೆಸ್​ ಟಿಕೆಟ್​ಗಾಗಿ ಮಾಜಿ ಎಂಎಲ್​ಸಿ ತೇಜಸ್ವಿನಿ ಗೌಡ ಬೇಡಿಕೆ ಇಟ್ಟಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡೋಕೆ ಟಿಕೆಟ್ ನೀಡಿ ಅಂತಾ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್‌ನಲ್ಲಾಗ್ತಿರೋ ಟಿಕೆಟ್ ಕಾಳಗವನ್ನ ಎನ್‌ಕ್ಯಾಶ್ ಮಾಡಿಕೊಳ್ಳಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಹೋಬಳಿ ಮಟ್ಟದಲ್ಲಿ ಸಚಿವರನ್ನ ನಿಯೋಜಿಸಿ ಕ್ಷೇತ್ರ ಗೆಲ್ಲೋಕೆ ಹೈಕಮಾಂಡ್ ಪ್ಲ್ಯಾನ್ ಮಾಡಿದೆ. ನಿನ್ನೆ ನಡೆದ ಸಿಎಂ, ಡಿಸಿಎಂ ಮತ್ತು ವೇಣುಗೋಪಾಲ್ ಸಭೆ ನಡೆಸಿದ್ದು, ಲಾಭದ ಲೆಕ್ಕಾಚಾರ ಹಾಕಿದ್ದಾರೆ. ಎನ್‌.ಡಿ ಗೊಂದಲದಿಂದ ನಮಗಾಗುವ ಪ್ಲಸ್ ಪಾಯಿಂಟ್ ಬಗ್ಗೆ ಚರ್ಚಿಸಿದ್ದಾರೆ.

Follow Us