
ಶಿವಮೊಗ್ಗ, ನವೆಂಬರ್ 22: ನವೆಂಬರ್ 19 ಮಧ್ಯಾಹ್ನ ಸುಮಾರು 2.15 ರ ಹೊತ್ತಿಗೆ ಶಿವಮೊಗ್ಗದ (Shivamogga) ಕೇಂದ್ರ ಕಾರಾಗೃಹಕ್ಕೆ (Shivamogga Central Jail) ಆಟೋವೊಂದು ಬಂದಿದ್ದು, ಆಟೋ ಚಾಲಕ ಅನಾಮತ್ತಾಗಿ ಬಾಳೆಹಣ್ಣಿನ 5 ಗೊನೆಗಳನ್ನು ಇಟ್ಟು ಹೋಗಿದ್ದ. ಇದನ್ನು ಪ್ರಶ್ನಿಸಿದ ಜೈಲು ಭದ್ರತಾ ಸಿಬ್ಬಂದಿಗೆ, ಜೈಲಿನ ಕ್ಯಾಂಟಿನ್ನವರು ಬಾಳೆಹಣ್ಣು ತರಲು ಹೇಳಿದ್ದರು ಎಂದು ಗೊನೆಗಳನ್ನು ಗೇಟಿನ ಬಳಿ ಇಳಿಸಿ ವಾಪಾಸ್ ತೆರಳಿದ್ದ. ಆದರೆ, ಈ ಬಾಳೆಹಣ್ಣಿನ ಗೊನೆಗಳನ್ನು ಪರಿಶೀಲಿಸಿದ ಕೆಎಸ್ಐಎಸ್ಎಫ್ ಪೊಲೀಸರು ಒಮ್ಮೆಲೇ ಆಘಾತಕ್ಕೊಳಗಾಗಿದ್ದರು. ಯಾಕೆಂದರೆ, ಈ ಬಾಳೆಗೊನೆ ದಿಂಡನ್ನು ಕೊರೆದು ನೋಡಿದ ಭದ್ರತಾ ಸಿಬ್ಬಂದಿಗೆ ಅದರೊಳಗೆ ಗಾಂಜಾ ಹಾಗೂ ಸಿಗರೇಟನ್ನು ಟೇಪ್ನಲ್ಲಿ ಸುತ್ತಿ ಇಟ್ಟಿರುವುದು ಪತ್ತೆಯಾಗಿದೆ. ಹೀಗೂ ಇರುತ್ತಾ ಎಂದು ಕಕ್ಕಾಬಿಕ್ಕಿಯಾದ ಭದ್ರತಾ ಸಿಬ್ಬಂದಿ, ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಬಾಳೆಗೊನೆ ಪರಿಶೀಲಿಸಿದ ವೇಳೆ, 123 ಗ್ರಾಂ ಗಾಂಜಾ ಮತ್ತು ಒಟ್ಟು 40 ಸಿಗರೇಟ್ ಸಿಕ್ಕಿವೆ.
ಬಾಳೆಹಣ್ಣಿನ ಗೊನೆಯಲ್ಲಿ ಗಾಂಜಾ ಸಿಕ್ಕ ಬೆನ್ನಲ್ಲೇ ಜೈಲು ಸಿಬ್ಬಂದಿ ಬಳಿಯೇ ಗಾಂಜಾ ಪತ್ತೆಯಾಗಿದೆ. ಶಿವಮೊಗ್ಗ ಜೈಲಿನ ಸಿಬ್ಬಂದಿಯೇ ಬಂಧನಕ್ಕೊಳಗಾಗಿರುವುದು ಇಡೀ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಾಗಿದೆ. ಒಳ ಉಡುಪಿನಲ್ಲಿ ಗಾಂಜಾ ಪೊಟ್ಟಣ ಇಟ್ಟುಕೊಂಡು ಬಂದಿದ್ದ ಜೈಲು ಸಿಬ್ಬಂದಿ 25 ವರ್ಷದ ಸಾತ್ವಿಕ್, ಜೈಲು ಪ್ರವೇಶಿಸುವಾಗಲೇ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಕೇಂದ್ರ ಕಾರಾಗೃಹದಲ್ಲಿ ಎಸ್ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಸಾತ್ವಿಕ್ ಬಳಿ 170 ಗ್ರಾಂ ಮಾದಕ ವಸ್ತು ಗಾಂಜಾ ದೊರಕಿದೆ. ಗುರುವಾರ ಕರ್ತವ್ಯಕ್ಕೆ ಹಾಜರಾಗಲು ಬಂದಾಗ ತಪಾಸಣೆಗೊಳಪಡಿಸಿದ್ದ ಭದ್ರತಾ ಸಿಬ್ಬಂದಿಗೆ, ಸಾತ್ವಿಕ್ ಒಳ ಉಡುಪಿನಲ್ಲಿ ಗಮ್ಟೇಪಿನಲ್ಲಿ ಸುತ್ತಿರುವ ಗಾಂಜಾ ಪೊಟ್ಟಣ ಸಿಕ್ಕಿದೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಇದು ಜೈಲು ಅಧಿಕಾರಿಗಳಿಗೆ ಶಾಕ್ ಜೊತೆಗೆ ಇರಿಸುಮುರುಸು ಉಂಟು ಮಾಡಿದೆ.
ಈ ಘಟನೆಗಳ ಬಗ್ಗೆ ಧಿಗ್ಭ್ರಮೆ ವ್ಯಕ್ತಪಡಿಸಿರುವ ಸಂಸದ ಬಿವೈ ರಾಘವೇಂದ್ರ, ಪರಪ್ಪನ ಅಗ್ರಹಾರ, ಶಿವಮೊಗ್ಗ ಜೈಲಿನಲ್ಲಿ ಗಾಂಜಾ ಪೂರೈಕೆ, ಅಕ್ರಮ ಚಟುವಟಿಕೆಗಳಿಗೆ ನೇರವಾಗಿ ರಾಜ್ಯ ಸರ್ಕಾರದ ಗೃಹ ಇಲಾಖೆಯ ವೈಫಲ್ಯವೇ ಕಾರಣ ಎಂದು ಟೀಕಿಸಿದ್ದಾರೆ. ಈಗಾಗಲೇ ಪರಪ್ಪನ ಅಗ್ರಹಾರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಮಂತ್ರಾಲಯದ ಸಭೆಯಲ್ಲಿ ಗಮನ ಸೆಳೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಶಿವಮೊಗ್ಗ ಜೈಲಿನಲ್ಲಿ ಇಂಥ ಕೃತ್ಯ ನಡೆದಿರುವುದು ರಾಜ್ಯ ಗೃಹ ಸಚಿವರ ವೈಫಲ್ಯ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ಉಗ್ರ ಫೋನ್ ಬಳಕೆ, ಏರ್ಪೋರ್ಟ್ ನಮಾಜ್-ದೆಹಲಿ ಸ್ಫೋಟಕ್ಕೂ ಲಿಂಕ್: ಅಶೋಕ್ ಅನುಮಾನ
ಒಟ್ಟಾರೆ, ಬಾಳೆಗೊನೆಯಲ್ಲಿ ಗಾಂಜಾ ಪತ್ತೆ ಹಾಗೂ ಜೈಲಿನೊಳಗೆ ಗಾಂಜಾ ಪೂರೈಕೆ ಸಂಬಂಧಪಟ್ಟಂತೆ ತುಂಗಾನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜೈಲು ಸಿಬ್ಭಂದಿಯೇ ಕಾರಾಗೃಹದಲ್ಲಿ ಸೆರೆಯಾಗುವಂತಾಗಿರುವುದು ವಿಪರ್ಯಾಸ.