ಮಲ್ಲಿಕಾರ್ಜುನ ಖರ್ಗೆ ಅಂತವರಿಗೆ ಪ್ರಿಯಾಂಕ್ ಖರ್ಗೆ ಹುಟ್ಟಿರುವುದೇ ಅನ್ಯಾಯ: ಈಶ್ವರಪ್ಪ ಕಿಡಿ
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಹಿನ್ನಲೆ ಡಿಕೆಶಿ, ಪ್ರಿಯಾಂಕ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವರು ಕೂಗಿಲ್ಲ ಎಂದಿದ್ದರು. ಇದೀಗ ಎಫ್ಎಸ್ಎಲ್ ವರದಿ ಬಂದಿದೆ. ಇದಕ್ಕೆ ಪರಮೇಶ್ವರ ಹಾಗೂ ಸಿದ್ದರಾಮಯ್ಯ ಅವರಿಗೆ ಅಭಿನಂದಿಸುತ್ತೇನೆ ಎಂದು ಕೆಎಸ್ ಈಶ್ವರಪ್ಪ ಅವರು ಹೇಳಿದರು.
![ಮಲ್ಲಿಕಾರ್ಜುನ ಖರ್ಗೆ ಅಂತವರಿಗೆ ಪ್ರಿಯಾಂಕ್ ಖರ್ಗೆ ಹುಟ್ಟಿರುವುದೇ ಅನ್ಯಾಯ: ಈಶ್ವರಪ್ಪ ಕಿಡಿ](https://images.tv9kannada.com/wp-content/uploads/2024/03/ks-eshwarappa-said-it-is-unfair-that-priyank-kharge-was-born-to-mallikarjuna-kharge_.jpg?w=1280)
ಶಿವಮೊಗ್ಗ, ಮಾ.06: ಮಲ್ಲಿಕಾರ್ಜುನ ಖರ್ಗೆ ಅಂತಹವರಿಗೆ ಪ್ರಿಯಾಂಕ್ ಖರ್ಗೆ(Priyank Kharge) ಅಂತಹವರು ಹುಟ್ಟಿರುವುದೇ ಅನ್ಯಾಯ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ(K. S. Eshwarappa) ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ‘ಪ್ರಿಯಾಂಕ್ ಖರ್ಗೆ ಅವರು ಯಾವುದೇ ಕಾರಣಕ್ಕೂ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ ಅಂದಿದ್ದರು, ಎ2 ಆರೋಪಿ ಕುಟುಂಬ ಸಮೇತ ಓಡಿ ಹೋಗಿದ್ದಾನೆ. ಅವನು ಓಡಿ ಹೋಗಲು ಯಾರು ಕಾರಣ?, ಪೊಲೀಸರ ವೈಪಲ್ಯವಾ, ರಾಜ್ಯ ಸರಕಾರ ಸಹಕಾರ ಕೊಟ್ಟಿದೆಯಾ ಅಥವಾ ಪಾಕಿಸ್ತಾನ ಪರವಾಗಿ ಇರುವ ವ್ಯಕ್ತಿಗಳು ಸಹಕಾರ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ ರಾಜ್ಯ, ರಾಷ್ಟ್ರ ದ್ರೋಹಿಗಳ ತಾಣ ಆಗ್ತಿದೆ
ಕರ್ನಾಟಕ ರಾಜ್ಯ, ರಾಷ್ಟ್ರ ದ್ರೋಹಿಗಳ ತಾಣ ಆಗುತ್ತಿದೆ. ಪಾಕಿಸ್ತಾನ ಪರ ಘೋಷಣೆ, ಬಾಂಬ್ ಬ್ಲಾಸ್ಟ್, ರಾಜ್ಯದಲ್ಲಿ ಮಾಮೂಲಿ ಆಗಿರುವುದು ರಾಜ್ಯದ ಜನತೆಗೆ ಅಪಮಾನವಾಗಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದವರು, ಬ್ಲಾಸ್ಟ್ ಮಾಡಿದವರ ಪರ ಬೆಂಬಲ ನೀಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು. ಇದೇ ವೇಳೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತ ಪಾಕ್ ಪರ ಘೋಷಣೆ ವಿಚಾರ, ‘ ಅವನು ಮಂಡ್ಯದಲ್ಲಿ ಬಾಯ್ತಪ್ಪಿ ಹೇಳಿದ್ದಾನೆ. ಆತನ ವಿರುದ್ದ ಇಲ್ಲಿಯವರೆಗೆ ಯಾವುದೇ ಕ್ರಮ ಇರಲಿಲ್ಲ. ಕಾಂಗ್ರೆಸ್ ಸರಕಾರಕ್ಕೆ ಅಪಮಾನ ಆಯ್ತು ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಯಾವೊಬ್ಬ ಬಿಜೆಪಿ ಕಾರ್ಯಕರ್ತ ರಾಷ್ಟ್ರ ದ್ರೋಹಿ ಹೇಳಿಕೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಕೆಎಸ್ ಈಶ್ವರಪ್ಪ ವಿರುದ್ಧದ ಎಫ್ಐಆರ್ಗೆ ತಡೆ; ಆಕ್ಷೇಪಾರ್ಹ ಹೇಳಿಕೆ ನೀಡುವ ರಾಜಕಾರಣಿಗಳಿಗೆ ಹೈಕೋರ್ಟ್ ತರಾಟೆ
ಇನ್ನು ಹೆಬ್ಬಾರ್, ಎಸ್.ಟಿ.ಸೋಮಶೇಖರ್ ನಂತರ ಸಾಕಷ್ಟು ಜನ ಬಿಜೆಪಿಗೆ ಬರುತ್ತಾರೆ ಡಿಕೆಶಿ ಹೇಳಿಕೆ, ‘ಉಪ ಮುಖ್ಯಮಂತ್ರಿ ಆದಾಗ ಬಿಜೆಪಿಯ ಅರ್ಧಕ್ಕಿಂತ ಹೆಚ್ಚು ಜನ ಕಾಂಗ್ರೆಸ್ಗೆ ಬರುತ್ತಾರೆ ಎಂದರು, ಹೆಬ್ಬಾರ್, ಸೋಮಶೇಖರ್ ರಾಜ್ಯಸಭೆ ಚುನಾವಣೆ ವೇಳೆ ಗೈರಾದರು, ಅವರು ಬಿಟ್ಟು ಇನ್ನು ಯಾರು ಬಿಜೆಪಿ ಬಿಟ್ಟು ಹೋಗಲ್ಲ. ಮುಳುಗಿ ಹೋಗ್ತಿರುವ ಹಡಗಿಗೆ ಯಾರು ಹೋಗುತ್ತಾರೆ, ಕಾಂಗ್ರೆಸ್ನವರು ಅವರ ಪಕ್ಷ ಬಿಟ್ಟು ಬರುವವರನ್ನು ಹಿಡಿದಿಟ್ಟುಕೊಳ್ಳಲಿ, ನಮ್ಮಲ್ಲಿ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ.
ಕಾಂಗ್ರೆಸ್ನಲ್ಲಿ ಟಿಕೆಟ್ ಪಡೆಯಲು 100 ಕೋಟಿ ಕೊಡಬೇಕು ಎಂಬ ಆರೋಪಕ್ಕೆ ಉತ್ತರಿಸಿದ ಇವರು, ‘100 ಕೋಟಿ ಯಾರಿಗೆ ಕೊಡಬೇಕು? ಯಾರು ತಗೊಂಡಿದ್ದಾರೆ ಎಂಬ ಬಗ್ಗೆ ತನಿಖೆ ಆಗಬೇಕು. 100 ಕೋಟಿ ಯಾರಿಗೆ ತಲುಪುತ್ತಿದೆ ಎಂಬ ಬಗ್ಗೆ ಸಿಎಂ, ಡಿಸಿಎಂ ಹೇಳಲಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 28 ಕ್ಕೆ 28 ಸ್ಥಾನದಲ್ಲಿ ಗೆಲ್ಲುತ್ತದೆ. ಆ ಮೂಲಕ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗುತ್ತಾರೆ.
ಲೋಕ ಕಲ್ಯಾಣಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅಪೇಕ್ಷೆಯಿಂದ ಯಾಗ
ಶಿವಮೊಗ್ಗ ನಗರದಲ್ಲಿ ಅತಿರುದ್ರ ಮಹಾಯಾಗ ಯಶಸ್ವಿಯಾಗಿ ನಡೆದಿದೆ. ಲೋಕ ಕಲ್ಯಾಣಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಎಂಬ ಅಪೇಕ್ಷೆಯಿಂದ ಯಾಗ ಮಾಡಲಾಗಿತ್ತು. ನಿರೀಕ್ಷೆ ಮೀರಿ ಭಕ್ತರು ಭಾಗವಹಿಸಿದ್ದರು. 11 ಹೋಮ ಕುಂಡಗಳಲ್ಲಿ ಹೋಮ ಮಾಡಿದ್ದಾರೆ. ರಾಜ್ಯಕ್ಕೆ , ದೇಶಕ್ಕೆ ಒಳ್ಳೆಯದು ಆಗಲಿ ಎಂದು ಉಜ್ಜಯಿನಿ ಜಗದ್ಗುರುಗಳು ಆಶಿಸಿದ್ದಾರೆ. ದೇಶ ಉಳಿಸಬೇಕಾದರೆ, ಧರ್ಮ ಉಳಿಯಬೇಕಾದರೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಲಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ