
ಶಿವಮೊಗ್ಗ, ಫೆಬ್ರವರಿ 24: ಶಿವಮೊಗ್ಗದ (Shivamogga) ಹೊರವಲಯದ ಸೂಳೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ (SSLC Exam) ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಪೇಶಲ್ ಕ್ಲಾಸ್ ತೆಗೆದುಕೊಳ್ಳಲಾಗುತ್ತಿತ್ತು. ಇದೇ ಸೂಳೆಬೈಲು ಬಡಾವಣೆಯ ಸಂಕೇತ್ ಕ್ಲಾಸ್ ಮುಗಿಸಿಕೊಂಡು ವಾಪಸ್ ಮನೆಯತ್ತ ಹೋಗುವಾಗ ಸ್ನೇಹಿತ ಗಿರೀಶ್ ಮೇಲೆ ಅದೇ ಬಡಾವಣೆಯ ಐವರು ಬಾಲಕರು ಏಕಾಏಕಿ ಹಲ್ಲೆ ಮಾಡುತ್ತಿದ್ದರು. ಈ ನಡುವೆ ಗಿರೀಶ್ನನ್ನು ಬಚಾವ್ ಮಾಡಲು ಅಲ್ಲಿಗೆ ಸಂಕೇತ್ ಹೋಗಿದ್ದಾನೆ. ಆ ಐವರು ಬಾಲಕರು ಸಂಕೇತ್ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಂಕೇತ್ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಗಿರೀಶ್ ತನ್ನ ಮನೆಯವರಿಗೆ ಮತ್ತು ಅಕ್ಕಪಕ್ಕದವರಿಗೆ ಗಲಾಟೆ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ. ಇದರಿಂದ ಅಕ್ಕಪಕ್ಕದವರು ಅಲ್ಲಿಗೆ ಹೋಗಿ ನೋಡಿದಾಗ ಹಲ್ಲೆಗೊಳಗಾದ ಸಂಕೇತ್ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಕೆರೆದುಕೊಂಡು ಹೋದರು. ಆದರೆ ಮಾರ್ಗ ಮಧ್ಯೆಯೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಇರುವ ಒಬ್ಬ ಮಗನನ್ನು ಕಳೆದುಕೊಂಡ ಹೆತ್ತವರು ಆಘಾತಕ್ಕೊಳಗಾಗಿದ್ದಾರೆ. ಮಗನ ಸಾವಿನ ಸುದ್ದಿಯಿಂದ ಇಡೀ ಕುಟುಂಬಸ್ಥರು ದೊಡ್ಡ ಆಘಾತಗೊಳಗಾಗಿದ್ದಾರೆ. ಅವರ ಅಕ್ರಂದನ ಮುಗಿಲು ಮುಟ್ಟಿದೆ.
ಸೂಳೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಮಕ್ಕಳಿಗೆ ಪರೀಕ್ಷೆ ಹಿನ್ನಲೆಯಲ್ಲಿ ಸ್ಪೆಷಲ್ ಕ್ಲಾಸ್ ಇತ್ತು. ಕ್ಲಾಸ್ ಮುಗಿಸಿಕೊಂಡು ಹೋಗುವಾಗ ಅದೇ ಬಡಾವಣೆಯ ಮೂವರು ಬಾಲಕರು ಕಿರಿಕ್ ಮಾಡಿದ್ದಾರೆ. ಈ ನಡುವೆ ಬಾಲಕರ ನಡುವೆ ಗಲಾಟೆಯಾಗಿದೆ. ಅನ್ಯಕೋಮಿನ ಬಾಲಕರು ಮೊದಲು ಗಿರೀಶ್ ಹಾಗೂ ನಂತರ ಸಂಕೇತ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಸಂಕೇತ್ ಕುಸಿದು ಬೀಳುತ್ತಿದ್ದಂತೆಯೇ ಮೂವರು ಬಾಲಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ತುಂಗಾ ನಗರ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಹಲ್ಲೆ ಮಾಡಿ ಕೊಲೆಗೆ ಕಾರಣವಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಕುರಿತು ತನಿಖೆಯು ಚುರುಕುಗೊಂಡಿದೆ.
ಬಾಲಕನ ಕೊಲೆಯ ನಂತರ, ನಗರದಲ್ಲಿ ಕೋಮು ಗಲಭೆ ಆಗದಂತೆ ಜಿಲ್ಲಾ ಪೊಲೀಸರು ಎಲ್ಲ ರೀತಿಯ ಮುಂಜಾಗ್ರತೆ ವಹಿಸಿದ್ದಾರೆ. ಘಟನಾ ಸ್ಥಳ, ಮೆಗ್ಗಾನ್ ಜಿಲ್ಲಾಸ್ಪತ್ರೆ ಸೇರಿದಂತೆ ನಗರದಲ್ಲಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಗಿರೀಶ್ ಮತ್ತು ಮೃತ ಸಂಕೇತ್ ಅತ್ಯುತ್ತಮ ಸ್ನೇಹಿತರಾಗಿದ್ದರು. ಈ ಹಿನ್ನಲೆಯಲ್ಲಿ ಗಿರೀಶ್ ಮೇಲೆ ಅನ್ಯಕೋಮಿನ ಬಾಲಕರು ಹಲ್ಲೆ ಮಾಡುವ ಸಂದರ್ಭದಲ್ಲಿ ಸ್ನೇಹಿತನ ಬಚಾವ್ ಮಾಡಲು ಸಂಕೇತ್ ಎಂಟ್ರಿಕೊಟ್ಟಿದ್ದ. ಗಿರೀಶ್ನನ್ನು ಬಚಾವ್ ಮಾಡುವ ಸಂದರ್ಭದಲ್ಲಿ ಬಾಲಕರು ಗಿರೀಶ್ನನ್ನು ಬಿಟ್ಟು ಸಂಕೇತ್ ಮೇಲೆ ಹಲ್ಲೆ ಮಾಡಿದ್ದಾರೆ. ಎದೆ, ಮುಖ, ಹೊಟ್ಟೆ ಮೇಲೆ ಹೊಡೆದಿದ್ದಾರೆ. ಇದರಿಂದ ಸಂಕೇತ್ ಅಸ್ವಸ್ಥಗೊಂಡು ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ದಾಖಲಿಸುವ ಮೊದಲೇ ಅಸುನೀಗಿದ್ದಾನೆ.
ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಗಿರೀಶ್ನ ಆರೋಗ್ಯ ವಿಚಾರಿಸಿ, ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ. ಏತನ್ಮಧ್ಯೆ, ಸಂಕೇತ್ ಸಾವಿನ ಕುರಿತು ಶಾಸಕರು ಸರಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸ್ ಇಲಾಖೆ ಅಂದರೆ ಹಿಂದೂಗಳ ಹೆಣಹೊರುವ ಇಲಾಖೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಹಿಂದೂಗಳ ಜೀವ ಹೋಗಿದೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನೆ ಮಾಡಿದ್ಧಾರೆ.
Published On - 8:26 am, Tue, 24 February 26