ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಧಮ್ಕಿ ಹಾಕಲಾಗುತ್ತಿದೆ: ಬಿವೈ ರಾಘವೇಂದ್ರ ಆರೋಪ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ, ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಧಮ್ಕಿ ಹಾಕುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ಅಲ್ಲದೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್​ ಬಡತನವನ್ನು ಪ್ರೀತಿಸಿತು, ಬಡವರನ್ನು ದ್ವೇಷಿಸಿದರು ಎಂದರು.

ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಧಮ್ಕಿ ಹಾಕಲಾಗುತ್ತಿದೆ: ಬಿವೈ ರಾಘವೇಂದ್ರ ಆರೋಪ
ಶಿವಮೊಗ್ಗ ಬಿಜೆಪಿ ಸಂಸದ ಬಿವೈ ರಾಘವೇಂದ್ರ
Follow us
| Updated By: Rakesh Nayak Manchi

Updated on:Mar 31, 2024 | 9:07 PM

ಶಿವಮೊಗ್ಗ, ಮಾ.31: ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಧಮ್ಕಿ ಹಾಕುವ ಕೆಲಸ ನಡೆಯುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ (B.Y. Raghavendra) ಅವರು ಆರೋಪಿಸಿದರು. ಶಿವಮೊಗ್ಗ (Shivamogga) ಲೋಕಸಭಾ ಕ್ಷೇತ್ರದ ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, ತಾಯಿ ಹಾಲು ಕುಡಿದು ಬೆಳೆದಿರುವ ಕಾರ್ಯಕರ್ತರು ಯಾರೂ ಹೆದರಬೇಕಿಲ್ಲ ಎಂದು ಹೇಳಿದರು. ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಬಿಜೆಪಿ ಪ್ರಪಂಚದಲ್ಲೇ ದೊಡ್ಡ ರಾಜಕೀಯ ಪಕ್ಷವಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಪಕ್ಷ ಹೊರಹೊಮ್ಮಲು ಪೇಜ್‌ ಪ್ರಮುಖರೇ ಕಾರಣ ಎಂದರು.

ಶಿವಮೊಗ್ಗ ನಗರದ ಸೈನ್ಸ್ ಕಾಲೇಜು ಮೈದಾನದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ಪೇಜ್ ಪ್ರಮುಖರ ಸಮಾವೇಶವನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ಉದ್ಘಾಟಿಸಿದರು. ಸಮಾವೇಶದಲ್ಲಿ ಶಾಸಕ ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಜೆಡಿಎಸ್ ಮುಖಂಡರು ಭಾಗಿಯಾಗಿದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಇಡೀ ಪ್ರಪಂಚದಲ್ಲಿ ದೊಡ್ಡ ರಾಜಕೀಯ ಪಕ್ಷವಾಗಿದೆ. ಪಕ್ಷ ಇಷ್ಟು ದೊಡ್ಡ ಮಟ್ಟದಲ್ಲಿ ಹೊರ ಹೊಮ್ಮಲು ಪೇಜ್ ಪ್ರಮುಖರು ಕಾರಣ. ಪ್ರಪಂಚದಲ್ಲಿ ನರೇಂದ್ರ ಮೋದಿ ನೋಡಲು ಜನರು ಹುಚ್ಚೆಂದು ಕಣಿಯುತ್ತಿದ್ದಾರೆ. ಮೋದಿ ಅವರ ಮಾತು ಕೇಳಬೇಕು ಅಂತಾ ಕಾತುರದಿಂದ ಇರುತ್ತಾರೆ. ಅಂತಹ ಪ್ರಧಾನಮಂತ್ರಿ ಅವರು ಶಿವಮೊಗ್ಗ ಜಿಲ್ಲೆಗೆ ಕಳೆದ ಒಂದೂವರೆ ವರ್ಷದಲ್ಲಿ ಮೂರು ಬಾರಿ ಬಂದಿದ್ದರು ಎಂದು ರಾಘವೇಂದ್ರ ಹೇಳಿದರು.

ಇದನ್ನೂ ಓದಿ: ಬೈಂದೂರಿನಲ್ಲಿ ಈಶ್ವರಪ್ಪ ಸಮಾವೇಶದ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ; ಕಾರ್ಯಕರ್ತರಿಗೆ ಸಿಗದ ಬಿರಿಯಾನಿ

ಭಾರತವನ್ನು ಆಳಿದ ಕಾಂಗ್ರೆಸ್ ಪಕ್ಷ ಅಧಿಕೃತ ವಿರೋಧ ಪಕ್ಷ ಸ್ಥಾನ ಕಳೆದುಕೊಂಡಿದೆ. ಗ್ರಾಮ ಪಂಚಾಯ್ತಿಯಲ್ಲಿ ಒಂದು ಸ್ಥಾನವೂ ಇರದಿದ್ದ ಬಿಜೆಪಿ ‌ಇಂದು ದೊಡ್ಡದಾಗಿ ಬೆಳೆದಿದೆ ಎಂದರು. ಸೈನಿಕರ ತಪ್ಪಸ್ಸಿನ‌ ಪ್ರತಿಫಲದಿಂದ ನಾವೆಲ್ಲ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಕಾಂಗ್ರೆಸ್​ನವರು ಬಡತನ ಪ್ರೀತಿ ಮಾಡಿದರು, ಬಡವರನ್ನು ದ್ವೇಷ ಮಾಡಿದರು. ಅದರ ಪ್ರತಿಫಲ‌ ಇಂದಿಗೂ ಹಲವು ಯೋಜನೆಗಳನ್ನು ಕೊಡುವಂತಾಗಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಅಭಿವೃದ್ಧಿ ಏನಾದರೂ ಆಗಿದ್ದರೆ ಅದು ಬಿಜೆಪಿ ಸರಕಾರದ ಅವಧಿಯಲ್ಲಿ ಮಾತ್ರ ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರವು ಈ ಬಾರಿ ಜಿದ್ದಾಜಿದ್ದಿಯ ಕಣಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣ ಬಿಜೆಪಿಯ ಕಟ್ಟಾಳು ಕೆಎಸ್ ಈಶ್ವರಪ್ಪ ಅವರು ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವುದು. ಹೌದು, ತನ್ನ ಪುತ್ರ ಕೆಇ ಕಾಂತೇಶ್​ಗೆ ಹಾವೇರಿ ಟಿಕೆಟ್ ಕೊಡಿಸಿಲ್ಲ ಎಂದು ಯಡಿಯೂರಪ್ಪ ಅವರ ಮೇಲೆ ಕೋಪಗೊಂಡಿರುವ ಈಶ್ವರಪ್ಪ ಅವರು ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಯಡಿಯೂರಪ್ಪ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಲು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳುತ್ತಿರುವ ಈಶ್ವರಪ್ಪ ಅವರು ಹಿಂದುತ್ವದ ಮೇಲೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕಾರ್ಯಕರ್ತರ ಸಭೆಯನ್ನು ನಡೆಸುತ್ತಿರುವ ಅವರು, ಹಿಂದುತ್ವ ಪರ ಧ್ವನಿ ಎತ್ತುವವರನ್ನು ಬಿಜೆಪಿಯಲ್ಲಿ ತುಳಿಯಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಅಲ್ಲದೆ, ಶಿವಮೊಗ್ಗದಲ್ಲಿ ಈ ಹಿಂದೆ ವಿಜಯೇಂದ್ರ ಅವರು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಗೆಲುವು ಸಾಧಿಸಿದ್ದಾರೆ, ಈ ಬಾರಿಯೂ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಅದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಡಮ್ಮಿ ಅಭ್ಯರ್ಥಿಯನ್ನು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:06 pm, Sun, 31 March 24