ರಸ್ತೆ ಬದಿ ವ್ಯಾಪಾರಿಗಳೂ UPI ಪಾವತಿ ಸ್ವೀಕರಿಸ್ತಾರೆ? ಬೆಸ್ಕಾಂಗೆ ಏನಾಗಿದೆ? ಹೈಕೋರ್ಟ್​ ಕ್ಲಾಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Jul 26, 2024 | 7:37 PM

ಬೆಸ್ಕಾಂ ಏಕೆ ತಂತ್ರಜ್ಙಾನ ಬಳಸಿಕೊಳ್ಳಲು ಹಿಂದುಳಿದಿದೆ. ಎಲ್ಲ ರೀತಿಯ ಪಾವತಿಗೂ ಯುಪಿಐ ಏಕೆ ಅಳವಡಿಕೊಂಡಿಲ್ಲ. ಈ ಬಗ್ಗೆ ಆಗಸ್ಟ್ 9 ರೊಳಗೆ ಪ್ರಮಾಣಪತ್ರ ಸಲ್ಲಿಸಲು ಬೆಸ್ಕಾಂ ಎಂಡಿಗೆ ನ್ಯಾ. ಎನ್.ಎಸ್.ಸಂಜಯ್ ಗೌಡ ಅವರಿದ್ದ ಹೈಕೋರ್ಟ್ ಪೀಠ ಸೂಚನೆ ನೀಡಿದೆ. ಬೆಂಗಳೂರಿನ ಸೀತಾಲಕ್ಷ್ಮಿ ಎಂಬುವರು ರಿಟ್ ಅರ್ಜಿ ಸಲ್ಲಿಸಿದ್ದರು.

ರಸ್ತೆ ಬದಿ ವ್ಯಾಪಾರಿಗಳೂ UPI ಪಾವತಿ ಸ್ವೀಕರಿಸ್ತಾರೆ? ಬೆಸ್ಕಾಂಗೆ ಏನಾಗಿದೆ? ಹೈಕೋರ್ಟ್​ ಕ್ಲಾಸ್
ರಸ್ತೆ ಬದಿ ವ್ಯಾಪಾರಿಗಳೂ UPI ಪಾವತಿ ಸ್ವೀಕರಿಸ್ತಾರೆ? ಬೆಸ್ಕಾಂಗೆ ಏನಾಗಿದೆ? ಹೈಕೋರ್ಟ್​ ಕ್ಲಾಸ್
Follow us on

ಬೆಂಗಳೂರು, ಜುಲೈ 26: ಹೆಚ್ಚುವರಿ ಸಂಪರ್ಕ ಪಡೆಯಲು ಯುಪಿಐ (UPI) ಪಾವತಿಗೆ ಬೆಸ್ಕಾಂ (BESCOM) ನಿರಾಕರಣೆಯನ್ನು ಪ್ರಶ್ನಿಸಿ ಇಂದು ರಿಟ್ ಅರ್ಜಿ ವಿಚಾರಣೆ ಮಾಡಿದ್ದು, ಎಲ್ಲಾ ಪಾವತಿಗೂ ಯುಪಿಐ ಅಳವಡಿಸಿಕೊಳ್ಳದ ಬೆಸ್ಕಾಂಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಇಡೀ ಪ್ರಪಂಚವೇ ಯುಪಿಐ ಪಾವತಿ ಸ್ವೀಕರಿಸುತ್ತಿದೆ. ಬೆಸ್ಕಾಂ ಏಕೆ ತಂತ್ರಜ್ಙಾನ ಬಳಸಿಕೊಳ್ಳಲು ಹಿಂದುಳಿದಿದೆ ಎಂದು ಪ್ರಶ್ನಿಸಿದ್ದು, ಈ ಬಗ್ಗೆ ಆಗಸ್ಟ್ 9 ರೊಳಗೆ ಪ್ರಮಾಣಪತ್ರ ಸಲ್ಲಿಸಲು ಬೆಸ್ಕಾಂ ಎಂಡಿಗೆ ಸೂಚನೆ ನೀಡಲಾಗಿದೆ.

2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 47 (5)ರ ಪ್ರಕಾರ ಪೂರ್ವಪಾವತಿ ಮೀಟರ್ ಒದಗಿಸುವಂತೆ ಮತ್ತು ಯುಪಿಐ ಪಾವತಿ ಸ್ವೀಕರಿಸಲು ಬೆಸ್ಕಾಂಗೆ ನಿರ್ದೇಶನ ನೀಡಬೇಕೆಂದು ಕೋರಿ ಬೆಂಗಳೂರಿನ ಹಿರಿಯ ನಾಗರಿಕರು ಸೀತಾಲಕ್ಷ್ಮಿ ಎಂಬುವರು ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾ. ಎನ್.ಎಸ್.ಸಂಜಯ್ ಗೌಡ ಅವರಿದ್ದ ಹೈಕೋರ್ಟ್ ಪೀಠ ವಿಚಾರಣೆ ಮಾಡಿದ್ದು, ರಸ್ತೆ ಬದಿ ವ್ಯಾಪಾರಿಗಳೂ ಯುಪಿಐ‌ ಪಾವತಿ ಸ್ವೀಕರಿಸುತ್ತಾರೆ. ಎಲ್ಲ ರೀತಿಯ ಪಾವತಿಗೂ ಯುಪಿಐ ಏಕೆ ಅಳವಡಿಕೊಂಡಿಲ್ಲ. ಬೆಸ್ಕಾಂ ಎಲ್ಲ ಪಾವತಿಗಳನ್ನೂ ಯುಪಿಐ ಸ್ವೀಕರಿಸುತ್ತಿಲ್ಲವೆಂದು ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು ವಾದ ಮಂಡಿಸಿದ್ದಾರೆ.

ಇದನ್ನೂ ಓದಿ: Tv9 Impact: ಟಿವಿ9ನಲ್ಲಿ ಸುದ್ದಿ ಬಿತ್ತರಿಸಿದ 24 ಗಂಟೆಗಳಲ್ಲೇ ಡೆಡ್ಲಿ ಸ್ಪಾಟ್, ಟ್ರಾನ್ಸ್ಫಾರ್ಮರ್​ ಸರಿಪಡಿಸಿದ ಬೆಸ್ಕಾಂ

ವಿಚಾರಣೆಯ ವೇಳೆ ಬೆಸ್ಕಾಂ ಪರ ವಕೀಲರು, ಬೆಸ್ಕಾಂ ಕೌಂಟರ್‌ಗಳಲ್ಲಿ ಯುಪಿಐ ಪಾವತಿ ಮಾಡಲು ಅವಕಾಶವಿಲ್ಲ. ನಗದು ಪಾವತಿಯನ್ನು ಮಾತ್ರ ಸ್ವೀಕರಿಸಲಾಗುತ್ತದೆ ಎಂದು ವಾದಿಸಿದರು. ಆದಾಗ್ಯೂ, ಗ್ರಾಹಕರು ಬೆಸ್ಕಾಂ ಅಪ್ಲಿಕೇಶನ್ ಮೂಲಕ ಆನ್‌ಲೈನ್, ಯುಪಿಐ ಪಾವತಿಗಳನ್ನು ಮಾಡಬಹುದು. ಹಿರಿಯ ನಾಗರಿಕರು ಮತ್ತು ವಯಸ್ಸಾದವರು ಮನೆಯಲ್ಲಿ ಕುಳಿತು ಕೌಂಟರ್‌ಗೆ ಬರುವ ಅಗತ್ಯವಿಲ್ಲದೆ ಅಪ್ಲಿಕೇಶನ್‌ ಮೂಲಕ ಪಾವತಿಸಬಹುದಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೆ.ಜೆ ಜಾರ್ಜ್ ಸ್ವಕ್ಷೇತ್ರದಲ್ಲೇ ಸಮಸ್ಯೆಗಳ ಸರಮಾಲೆ; ಅಮಾಯಕರ ಬಲಿಗಾಗಿ ಕಾದಿವೆ ಡೆಡ್ಲಿ ಟ್ರಾನ್ಸ್ಫರ್ಮರ್ಸ್

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಶ್ರೀಧರ್ ಪ್ರಭು, ವಯಸ್ಸಾದ ಮಹಿಳೆ, ದೈನಂದಿನ ಕೆಲಸಗಳನ್ನು ನಿರ್ವಹಿಸುವಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಪಡೆಯಲು ಸರದಿಯಲ್ಲಿ ನಿಂತು ನಂತರ ಪಾವತಿಯನ್ನು ಮಾಡಿದ್ದಾರೆ. ಹೀಗಾಗಿ ಅವರು ತಮ್ಮ ಖಾತೆ ಸ್ಕ್ಯಾನರ್ ಅಥವಾ ಯುಪಿಐ ಅನ್ನು ಒದಗಿಸುವ ಮೂಲಕ ಪ್ರಕ್ರಿಯೆಯನ್ನು ಸುಲಭಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.