ಆಗಸ್ಟ್​ 5 ರಂದು ಸಾರಿಗೆ ನೌಕರರು ಬಸ್ ಸಂಚಾರ​ ಬಂದ್ ಮಾಡಿ ಮನೆಯಿಂದಲೇ ಪ್ರತಿಭಟನೆ: ಅನಂತ ಸುಬ್ಬರಾವ್

ಆಗಸ್ಟ್​ 5 ರಂದು ಸಾರಿಗೆ ನೌಕರರು ಮುಷ್ಕರ ಮಾಡುತ್ತಿಲ್ಲ. ಬದಲಿಗೆ ಬಸ್​ ಸಂಚಾರ ಸ್ಥಗಿತಗೊಳಿಸಿ ಎಲ್ಲ ಸಿಬ್ಬಂದಿ ಮನೆಯಲ್ಲಿರುತ್ತಾರೆ. ಸರ್ಕಾರ ಮಾತುಕತೆಗೆ ಕರೆದಿದೆ. ಆದರೆ ಕೊನೆ ಗಳಿಗೆಯಲ್ಲಿ ಸಭೆ ಕರೆದಿರುವುದು ಖಂಡನೀಯ. ನೌಕರರ 38 ತಿಂಗಳ ಅರಿಯರ್ಸ್ ಕೊಡಬೇಕು​. ಸಿಬ್ಬಂದಿಗೆ ಸಿದ್ದರಾಮಯ್ಯ ಸರ್ಕಾರ ವಿಶ್ವಾಸ ದ್ರೋಹ ಮಾಡಿದೆ ಎಂದು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದರು.

ಆಗಸ್ಟ್​ 5 ರಂದು ಸಾರಿಗೆ ನೌಕರರು ಬಸ್ ಸಂಚಾರ​ ಬಂದ್ ಮಾಡಿ ಮನೆಯಿಂದಲೇ ಪ್ರತಿಭಟನೆ: ಅನಂತ ಸುಬ್ಬರಾವ್
ಅನಂತ ಸುಬ್ಬರಾವ್
Updated By: ವಿವೇಕ ಬಿರಾದಾರ

Updated on: Aug 04, 2025 | 7:21 AM

ಬೆಂಗಳೂರು, ಆಗಸ್ಟ್​ 03: ಮಂಗಳವಾರ (ಆ.05) ದಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ (Rahul Gandhi) ಕರ್ನಾಟಕಕ್ಕೆ ಬರುತ್ತಿರುವುದರಿಂದ ಸಾರಿಗೆ ನೌಕರರು ಮುಷ್ಕರ ಮಾಡುತ್ತಿಲ್ಲ. ಬದಲಿಗೆ ಬಸ್​ ಸಂಚಾರ ಸ್ಥಗಿತಗೊಳಿಸಿ ಎಲ್ಲ ಸಿಬ್ಬಂದಿ ಮನೆಯಲ್ಲಿರುತ್ತಾರೆ ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ (Anantha Subbarao) ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೂಡಲೇ ಸರ್ಕಾರ 38 ತಿಂಗಳ ಅರಿಯರ್ಸ್​ ಕೊಡಬೇಕು. ಶಕ್ತಿ ಯೋಜನೆಯನ್ನ ನಾವು ಯಶಸ್ವಿಯಾಗಿ ನಿರ್ವಹಿಸ್ತಿದ್ದೇವೆ. ನಮ್ಮ ಸಿಬ್ಬಂದಿಗೆ ಒಂದು ಕೃತಜ್ಞತೆಯನ್ನ ಹೇಳಿದ್ರಾ ನೀವು? ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.

ನಮ್ಮ ಇಲಾಖೆಯಲ್ಲಿ ಒಂದೇ ಒಂದು ರೂ. ಹಗರಣ ಆಗಿಲ್ಲ. ಸಾರಿಗೆ ಸಿಬ್ಬಂದಿಗೆ ಸಿದ್ದರಾಮಯ್ಯ ಸರ್ಕಾರ ವಿಶ್ವಾಸ ದ್ರೋಹ ಮಾಡಿದೆ. ಸರ್ಕಾರ ವಿಶ್ವಾಸ ದ್ರೋಹ ಮಾಡಿದೆ ಎಂಬ ಭಾವನ ಬಂದಿದೆ. ಮುಷ್ಕರ ತಪ್ಪಿಸುವ ಅವಕಾಶ ಇದೆ. ಪೊಲೀಸ್ ಅಧಿಕಾರಿಗಳು ನಮ್ಮನ್ನು ಈಗಾಗಲೇ ಕರೆಯುತ್ತಿದ್ದಾರೆ. ನಮ್ಮನ್ನು ಅರೆಸ್ಟ್ ಮಾಡಿ ಪಾಕಿಸ್ತಾನ ಜೈಲಿಗೆ ಹಾಕುತ್ತೀರಾ? ನಮ್ಮನ್ನ ಕರೆದು ಸಮಪರ್ಕವಾಗಿ ಮಾತಾಡಿ. ಬೇರೆ ಯಾರದ್ದೋ ಮಾತು ಕೇಳಿ ಹಾಳಾಗಬೇಡಿ ಎಂದು ಹೇಳದರು.

ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯರ ಕಿವಿ ಹಿಂಡಬೇಕು. ನಮ್ಮ ಬೇಡಿಕೆಗಳನ್ನ ಈಡೇರಿಸಲು ಮುಂದಾಗಿ. ಆ.5ರಂದು ನಾವು ಯಾವುದೇ ರೀತಿಯ ಱಲಿ ಮಾಡುವುದಿಲ್ಲ. ಸಿಎಂ ಸಿದ್ದರಾಮಯ್ಯನವರೇ ನಮಗೆ ದ್ರೋಹ ಮಾಡಬೇಡಿ. ಮರ್ಯಾದೆಯಾಗಿ ಸಾರಿಗೆ ಸಿಬ್ಬಂದಿ ಬೇಡಿಕೆಗಳನ್ನ ಈಡೇರಿಸಿ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರಕ್ಕೆ ಟಕ್ಕರ್ ಕೊಡಲು ಮುಂದಾದ ರಾಜ್ಯ ಸರ್ಕಾರ!

ಸಿಎಂ ನಾಳೆ ಸಭೆ ಕರೆದಿದ್ದಾರೆ ಹೋಗುತ್ತೇವೆ. ಕೊನೆ ಗಳಿಗೆಯಲ್ಲಿ ಸಭೆ ಕರೆಯಬೇಡಿ ಎಂದು ಮನವಿ ಮಾಡಿದ್ದೇವೆ. ಆದರೂ ಕೊನೆಯ ಗಳಿಗೆಯಲ್ಲೇ ಸಭೆ ಕರೆದಿದ್ದಾರೆ. ಎಸ್ಮಾ ಜಾರಿ ಮಾಡುತ್ತೇವೆ ಎಂಬುವದು, ಮುಷ್ಕರ ಮಾಡಿದ್ರೆ ಸಂಬಳ ನೀಡುವುದಿಲ್ಲ ಎನ್ನುವುದು ಸರಿಯಲ್ಲ. ಏನಾದರೂ ಹಿಂದಿನ ಆದೇಶದಲ್ಲಿ ತಪ್ಪಾಗಿದ್ದರೇ ಅದನ್ನು ಬದಲಾವಣೆ ಮಾಡಿ. ನಮ್ಮ ಬೇಡಿಕೆಗಳ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಬೇಡಿ. ನಾಳೆಯ ಸಭೆಯಲ್ಲಿ ಹಳೆಯ ಹಾಡನ್ನು ಹಾಡಿದ್ರೆ, ಬಿಜೆಪಿ ಸರ್ಕಾರ ನೀಡಬೇಕಿರೋದು ಅನ್ನಬೇಡಿ. 500 ಕೋಟಿ ಟಿಕೆಟ್ ಹಂಚಿಕೆ ಮಾಡಿದ್ರಿ ಆದರೆ ನಿರ್ವಾಹಕ ಮತ್ತು ಚಾಲಕರಿಗೆ ಧನ್ಯವಾದ ಹೇಳಲಿಲ್ಲ ಎಂದು ವಾಗ್ದಾಳಿ ಮಾಡಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:08 pm, Sun, 3 August 25