ಪ್ರೇಯಸಿ ಜೊತೆ ಕಾರಿನಲ್ಲಿ ಹೋಗುತ್ತಿರುವಾಗಲೇ ನಾಡಬಾಂಬ್​ ಸ್ಫೋಟಿಸಿದ ಪ್ರಿಯಕರ: ಆಗಿದ್ದೇನು?

ವಿಚಿತ್ರ ಆತ್ಮಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವತಿಯನ್ನು ಕಿಡ್ನ್ಯಾಪ್​ ಮಾಡಿದ್ದ ಯುವಕ ನಾಡಬಾಂಬ್​ ಸ್ಫೋಟಿಸಿಕೊಂಡು ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಬಳಿ ನಡೆದಿದೆ. ಅದೃಷ್ಟವಶಾತ್ ಯುವತಿ ಮತ್ತು ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ​​

ಪ್ರೇಯಸಿ ಜೊತೆ ಕಾರಿನಲ್ಲಿ ಹೋಗುತ್ತಿರುವಾಗಲೇ ನಾಡಬಾಂಬ್​ ಸ್ಫೋಟಿಸಿದ ಪ್ರಿಯಕರ: ಆಗಿದ್ದೇನು?
ಸುಟ್ಟುಕರಕಲಾದ ಕಾರು
Image Credit source: tv9 kannada
Edited By:

Updated on: Jun 27, 2026 | 5:21 PM

ಮುಖ್ಯಾಂಶಗಳು

  • ನಾಡಬಾಂಬ್​ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ
  • ಬೆಂಗಳೂರಿನಲ್ಲಿ ಯುವತಿಯನ್ನ ಕಿಡ್ನ್ಯಾಪ್​ ಮಾಡಿದ್ದ ನಾಗೇಂದ್ರ
  • ಮದುವೆಗೆ ಒಪ್ಪದಿದ್ದಕ್ಕೆ ಬಲವಂತವಾಗಿ ಕರೆದೊಯ್ದಿದ್ದ ನಾಗೇಂದ್ರ

ತುಮಕೂರು, ಜೂನ್​​ 27: ಕಾರಿನಲ್ಲಿ ನಾಡಬಾಂಬ್ (nada bomb)​ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ (death) ಮಾಡಿಕೊಂಡಿರುವಂತ ಭೀಕರ ಘಟನೆಯೊಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ನಾಗೇಂದ್ರ (30) ಆತ್ಮಹತ್ಯೆ ಮಾಡಿಕೊಂಡ ಯುವಕ. ಇನ್ನು ಈ ದುರಂತದಲ್ಲಿ ಅಪಹರಣಕ್ಕೊಳಗಾಗಿದ್ದ ಯುವತಿ ಹಾಗೂ ಕಾರು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಸ್ಥಳಕ್ಕೆ ತುಮಕೂರು ಎಸ್​ಪಿ ವೆಂಕಟ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ವೇಳೆ ಮತ್ತೊಂದು ಜೀವಂತ ಬಾಂಬ್ ಪತ್ತೆ ಆಗಿದೆ.

ನಡೆದಿದ್ದೇನು?

ರಮ್ಯಾ ಹಾಗೂ ನಾಗೇಂದ್ರ ಇಬ್ಬರು ಅಂಕೋಲ ಮೂಲದವರು. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ರಮ್ಯಾ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರೆ, ನಾಗೇಂದ್ರ ಡೆಲಿವರಿ ಬಾಯ್ ಆಗಿದ್ದ. ಇಬ್ಬರು ಕಳೆದ ಏಳೆಂಟು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ರಮ್ಯಾ ಮದುವೆಗೆ ನಿರಾಕರಿಸಿದ್ದಳು.

ರಮ್ಯಾಳನ್ನ ಬಲವಂತವಾಗಿ ಕಿಡ್ನ್ಯಾಪ್ ಮಾಡಿದ ನಾಗೇಂದ್ರ

ಇದರಿಂದ ಕೋಪಗೊಂಡಿದ್ದ ನಾಗೇಂದ್ರ, ತಾನೇ ಒಂದು ಬಾಡಿಗೆ ಕಾರನ್ನು ಬುಕ್ ಮಾಡಿಕೊಂಡು, ರಮ್ಯಾ ತಂಗಿದ್ದ ಬೆಂಗಳೂರಿನ ಪಿಜಿ ಬಳಿ ತೆರಳಿ ಆಕೆಯನ್ನು ಬಲವಂತವಾಗಿ ಅಪಹರಿಸಿದ್ದ. ನಾಗೇಂದ್ರ ಪ್ಲ್ಯಾನ್​ ಮಾಡಿ ನಾಡಬಾಂಬ್ ತಯಾರಿಸಿಕೊಂಡು ತಂದಿದ್ದ ಎಂಬ ಮಾಹಿತಿ ಇದೆ. ರಮ್ಯಾ ನಾಪತ್ತೆ ಕುರಿತು ಆಕೆಯ ಸ್ನೇಹಿತೆ ತಕ್ಷಣವೇ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಇದನ್ನೂ ಓದಿ: ಗದಗ: ಮಹಿಳೆಯರ ಕೂಡಿ ಹಾಕಿ ಥಳಿಸಿದ ಮೀಟರ್ ಬಡ್ಡಿ ದಂಧೆಕೋರರು, ಎಸ್ಪಿ ಕಚೇರಿ ಎದುರು ಸಂತ್ರಸ್ತೆಯರ ಕಣ್ಣೀರು

ಇನ್ನು ರಮ್ಯಾಳನ್ನು ಕಿಡ್ನ್ಯಾಪ್ ಮಾಡಿದ್ದ ನಾಗೇಂದ್ರ ಶಿರಾ ರಸ್ತೆಯಲ್ಲಿ ತೆರಳುತ್ತಿದ್ದ. ಕಾರಿನಲ್ಲೇ ಇಬ್ಬರ ಮಧ್ಯೆ ತೀವ್ರ ಜಗಳ ನಡೆದಿದೆ. ಈ ವೇಳೆ ನಾಗೇಂದ್ರ ರಮ್ಯಾ ತಲೆಗೆ ಆಯುಧದಿಂದ ಹೊಡೆದಿದ್ದಾನೆ. ರಮ್ಯಾ ತಕ್ಷಣವೇ ಚಲಿಸುವ ಕಾರಿನಿಂದ ಹೊರಗೆ ಜಿಗಿದು ಜೀವ ಉಳಿಸಿಕೊಂಡಿದ್ದಾಳೆ. ಯುವತಿ ಕಾರಿನಿಂದ ಇಳಿದಾಗ ಚಾಲಕ ಸಹಾಯಕ್ಕೆ ತೆರಳಿದ್ದಾನೆ.

ಕಾರಿನೊಳಗೇ ಸಜೀವ ದಹನ

ಇದೇ ಸಮಯವನ್ನು ಬಳಸಿಕೊಂಡ ನಾಗೇಂದ್ರ ಕಾರಿನ ಎಲ್ಲಾ ಡೋರ್‌ಗಳನ್ನು ಒಳಗಿನಿಂದ ಲಾಕ್ ಮಾಡಿಕೊಂಡು, ತಾನು ತಂದಿದ್ದ ನಾಡಬಾಂಬ್ ಅನ್ನು ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ನಾಗೇಂದ್ರ ಕಾರಿನೊಳಗೇ ಸಜೀವ ದಹನವಾಗಿದ್ದಾನೆ.

ಘಟನೆ ಬಗ್ಗೆ ಕಾರು ಚಾಲಕ ಪ್ರವೀಣ್ ಶಾಕಿಂಗ್​​ ಹೇಳಿಕೆ

ಇನ್ನು ಘಟನೆ ಬಗ್ಗೆ ಕಾರು ಚಾಲಕ ಪ್ರವೀಣ್ ಟಿವಿ9 ಜೊತೆಗೆ ಮಾತನಾಡಿದ್ದು, ಉಬರ್​ನಲ್ಲಿ ನನಗೆ ನಾಗೇಂದ್ರ ಎಂಬ ಹೆಸರಿನಲ್ಲಿ ಕಾರ್ ಬುಕ್ ಆಗಿತ್ತು. ಬೆಳಿಗ್ಗೆ 11 ಗಂಟೆಗೆ ಜಯನಗರದಲ್ಲಿ ಇಬ್ಬರು ಒಟ್ಟಿಗೆ ಕಾರು ಹತ್ತಿದರು. ಕಳ್ಳಂಬೆಳ್ಳವರೆಗೂ ಯಾವುದೇ ಸಮಸ್ಯೆ ಇರಲಿಲ್ಲ. ಜೊತೆಗೆ ಅಂಕೋಲಾದಿಂದ ನನಗೆ ಕರೆ ಬಂದಿದ್ದು, ಇದು ಕಿಡ್ನ್ಯಾಪ್ ಅಂತ ಪೊಲೀಸರು ಮಾಹಿತಿ ಕೊಟ್ಟಿದ್ದರು. ಬಳಿಕ ಇಬ್ಬರ ನಡುವೆ ಗಲಾಟೆ ಆಗಿದೆ. ಆತ ಚಾಕುವಿನಿಂದ ಆಕೆಗೆ ಚುಚ್ಚಿದ್ದಾನೆ. ಆಗ ನಾನು ಕಾರು ರಸ್ತೆ ಪಕ್ಕಕ್ಕೆ ಹಾಕಿದೆ. ಯುವತಿ ರಕ್ಷಿಸುವುದು ನನ್ನ ಮೊದಲ ಆದ್ಯತೆ ಆಗಿತ್ತು. ಹೀಗಾಗಿ ರಕ್ಷಣೆ ಮಾಡಿ ಹೋಗುತ್ತಿದ್ದ ಬೈಕ್​ಗೆ ಹತ್ತಿಸಿದೆ. ಈ ವೇಳೆ ಕಾರಿನಲ್ಲಿ ಬಾಂಬ್​ ಇದೆ ಎಂದು ಹೇಳಿದ್ದಾಳೆ ಎಂದರು.

ಇದನ್ನೂ ಓದಿ: ಆಸ್ತಿಗಾಗಿ ತಂದೆ ಕಥೆಯನ್ನೇ ಮುಗಿಸಿದ್ರಾ ಮಕ್ಕಳು?: ದೂರು, ಪ್ರತಿದೂರಿನ ಹಿನ್ನೆಲೆ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

ನಂತರ ನಾನು ಕಾರು ಹತ್ತಿರ ಹೋದಾಗ ಯುವಕ ಒಂದು ಬಾಂಬ್ ಕೈನಲ್ಲಿ ಹಿಡಿದಿದ್ದ. ನಾನು ಅದನ್ನ ಕಿತ್ತು ಎಸೆದೆ. ನಂತರ ಮತ್ತೊಂದು ಬಾಂಬ್​​ಗೆ ಬೆಂಕಿ ಹಚ್ಚಲು ಮುಂದಾಗಿದ್ದು, ಆಗ ನಾನು ಅಲ್ಲಿಂದ ಓಡಿದೆ. ನಂತರ ಕಾರ್ ಬ್ಲಾಸ್ಟ್ ಆಗಿದೆ. ನನ್ನ ಹೆಂಡತಿಯ ಒಡವೆ ಅಡವಿಟ್ಟು ಕಾರು ಖರೀದಿ ಮಾಡಿದ್ದೇನೆ ಎಂದು ಕಾರು ಚಾಲಕ ಪ್ರವೀಣ್ ಹೇಳಿದ್ದಾರೆ.

ಸದ್ಯ ಪ್ರಕರಣ ಭಾರಿ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನಿಂದ ಪರಿಶೀಲನಾ ತಂಡ ಆಗಮಿಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಮತ್ತು ಕಳ್ಳಂಬೆಳ್ಳ ಪೊಲೀಸರು ಜಂಟಿ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:53 pm, Sat, 27 June 26

Loading...
Unable to load recommendations.
Follow Us