
ತುಮಕೂರು, ಏಪ್ರಿಲ್ 05: ಶಿರಾ ತಾಲ್ಲೂಕಿನ ಮಿನಿ ವಿಧಾನಸೌಧ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ಅಪಘಾತ ನಡೆದಿದ್ದು, ಖಾಸಗಿ ಸ್ಲೀಪರ್ ಬಸ್ಗೆ KSRTC ಬಸ್ ಹಿಂದಿನಿಂದ ಗುದ್ದಿದೆ. ಅಪಘಾತದ ತೀವ್ರತೆಗೆ ಖಾಸಗಿ ಬಸ್ನಲ್ಲಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದು, 35 ಮಂದಿಗೆ ಗಂಭೀರ ಗಾಯಗಳಾಗಿವೆ. ಮೃತರನ್ನು ಹಾವೇರಿ ಮೂಲದ ಪ್ರವೀಣ್ ಕೃಷ್ಣಪ್ಪ (28) ಮತ್ತು ಗದಗ ಮೂಲದ ಸಂಗೀತಾ (16) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ.
ಅಪಘಾತವಾಗಿರುವ ಎರಡೂ ಬಸ್ಗಳು ಬೆಂಗಳೂರಿಗೆ ಬರುತ್ತಿದ್ದವು ಎನ್ನಲಾಗಿದ್ದು ಹೆದ್ದಾರಿಯ ಮೂರನೇ ಲೇನ್ನಿಂದ ಏಕಾಏಕಿ ಎರಡನೇ ಲೇನ್ಗೆ ಖಾಸಗಿ ಬಸ್ ಬಂದಿರೋದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ವೇಳೆ ಮತ್ತೊಂದು ಲೇನ್ನಲ್ಲಿ ವೇಗವಾಗಿ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಯಂತ್ರಣ ತಪ್ಪಿ ಖಾಸಗಿ ಬಸ್ನ ಹಿಂಭಾಕ್ಕೆ ಗುದ್ದಿದೆ. ಪರಿಣಾಮ ಖಾಸಗಿ ಬಸ್ನ ಹಿಂಬದಿ ಸೀಟ್ಗಳಲ್ಲಿದ್ದ ಇಬ್ಬರು ಪ್ರಾಣಬಿಟ್ಟಿದ್ದಾರೆ. ಬೇಜವಾಬ್ದಾರಿ ಚಾಲನೆ ಹಿನ್ನಲೆ ಘಟನೆ ಸಂಬಂಧ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪತ್ಯೇಕ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಡಿಕ್ಕಿ ಹೊಡೆದ ರಭಸಕ್ಕೆ ಹೊತ್ತಿ ಉರಿದ ಕಾರು: ಓರ್ವ ಸಾವು, ಮೂವರು ಗಂಭೀರ
ಬೈಕ್ ಹಾಗೂ ಲಾರಿ ನಡುವೆ ಅಪಘಾತ ನಡೆದ ಪರಿಣಾಮ ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ನಗರದ ಕುಣಿಗಲ್ ಸರ್ಕಲ್ನಲ್ಲಿ ನಡೆದಿದೆ. ಗೂಳರಿವೆ ಗ್ರಾಮದ ನಿವಾಸಿ ರಾಜಣ್ಣ (60) ಮೃತರಾಗಿದ್ದು, ಘಟನಾ ಸ್ಥಳಕ್ಕೆ ತುಮಕೂರು ಸಂಚಾರ ಪೊಲೀಸರು ಭೇಟಿನೀಡಿ, ಪರಿಶೀಲನೆ ನಡೆಸಿದ್ದಾರೆ. ಅಪಘಾತವಾದ ಲಾರಿ ಹಾಗೂ ಲಾರಿ ಚಾಲಕನನ್ನ ವಶಕ್ಕೆ ಪಡೆಯಲಾಗಿದ್ದು, ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಘಟನೆ ಸಂಬಂಧ ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.