ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್​, ಸ್ಥಳಿಯರಿಗೆ ಸಿಗುತ್ತಾ ಉದ್ಯೋಗ? ಪರಮೇಶ್ವರ್​ಕೊಟ್ರು ಹಿಂಟ್​

ನಮ್ಮ ಮೆಟ್ರೋ ವಿಸ್ತರಣೆ, ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಬೆನ್ನಲ್ಲೇ ತುಮಕೂರಿನಲ್ಲಿ ಏಷ್ಯಾದಲ್ಲೇ ಅತಿ ದೊಡ್ಡ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಅನುಮತಿ ದೊರೆತಿದೆ. ಇದರಿಂದ ತುಮಕೂರಿನ ಅಭಿವೃದ್ಧಿಗೆ ಹೊಸ ಆಯಾಮ ದೊರೆಯಲಿದೆ. ಆದರೆ, ಸ್ಥಳೀಯರಿಗೆ ಉದ್ಯೋಗ ಸಿಗುತ್ತಾ? ಗೃಹ ಸಚಿವ ಜಿ ಪರಮೇಶ್ವರ್ ಉತ್ತರ ನೀಡಿದ್ದಾರೆ.​

ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್​, ಸ್ಥಳಿಯರಿಗೆ ಸಿಗುತ್ತಾ ಉದ್ಯೋಗ? ಪರಮೇಶ್ವರ್​ಕೊಟ್ರು ಹಿಂಟ್​
ಸಚಿವ ಡಾ. ಜಿ ಪರಮೇಶ್ವರ್
Edited By:

Updated on: Dec 02, 2024 | 1:00 PM

ತುಮಕೂರು, ಡಿಸೆಂಬರ್​​ 02: ಬೆಂಗಳೂರು-ತುಮಕೂರು ನಮ್ಮ ಮೆಟ್ರೋ (Namma Metro) ವಿಸ್ತರಣೆ, ಅಂತರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂ (Tumkur International Cricket Stadium) ನಿರ್ಮಾಣ ಬೆನ್ನಲ್ಲೇ ತುಮಕೂರು ಜನರಿಗೆ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್​​ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮತಿ ನೀಡಿದ್ದಾರೆ. ಏಷ್ಯಾ‌ ಖಂಡದಲ್ಲೇ ಅತಿ ದೊಡ್ಡ ಕೈಗಾರಿಕಾ ಹಬ್ ಮಾಡಲು ಮುಖ್ಯಮಂತ್ರಿಗಳು ಒತ್ತು ನೀಡಿದ್ದಾರೆ ಎಂದು ತಿಳಿಸಿದರು.

ತುಮಕೂರು ಜಿಲ್ಲೆಯ ಸೂರೆಗುಂಟೆ ಗ್ರಾಮದ ವ್ಯಾಪ್ತಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಡಿಸೆಂಬರ್​. 02) ಶಂಕುಸ್ಥಾಪನೆ ನೆರವೇರಿಸಿದರು.

ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ತುಮಕೂರು ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಫಲಾನುಭವಿಗಳ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿ ಪರಮೇಶ್ವರ್, ಈಗಾಗಲೇ ಸುಮಾರು 150 ಕಂಪನಿಗಳು ಬಂದಿವೆ. ಇನ್ನೂ ಬರಲಿವೆ. ಸ್ಥಳಿಯರಿಗೆ ಉದ್ಯೋಗ ಸಿಗಬೇಕಿದೆ ಎಂದು ಗೃಹ ಸಚಿವರು ಹೇಳಿದರು.

ಇದನ್ನೂ ಓದಿ: ಬೆಂಗಳೂರು-ತುಮಕೂರು ಮೆಟ್ರೋ: ಜಿ ಪರಮೇಶ್ವರ್​​ ಕೊಟ್ರು ಬಿಗ್​ ಅಪ್ಡೇಟ್​​

ಅಂತರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮಾಡುವ ಚಿಂತನೆಯಿಂದ ಮುಖ್ಯಮಂತ್ರಿಗಳು ಅಡಿಗಲ್ಲು ಹಾಕಿದ್ದಾರೆ. ಎರಡು ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಸ್ಟೇಡಿಯಂ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ. ಈ‌ ಕ್ರಿಕೆಟ್ ಸ್ಟೇಡಿಯಂ ವಿಶ್ವಕ್ಕೆ ಪರಿಚಯಿಸುವ ಹಂತಕ್ಕೆ ನಿರ್ಮಾಣ ಆಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರುಗಳಾದ ಜ್ಯೋತಿ ಗಣೇಶ್, ಗ್ರಾಮಾಂತರ ಶಾಸಕ ಸುರೇಶ್ ಗೌಡ, ಎಂಎಲ್ ಸಿ ಚಿದಾನಂದ ಗೌಡ, ಜೆಡಿಎಸ್ ಶಾಸಕರಾದ ಸುರೇಶ್ ಬಾಬು ಹಾಗೂ ಎ.ಟಿ ಕೃಷ್ಣಪ್ಪ ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ