ಕಳೆದ ಹತ್ತು ವರ್ಷದಲ್ಲಿ ಕನಿಷ್ಟ ಮಟ್ಟಕ್ಕಿಳಿದ‌ ತುಂಗಭದ್ರಾ ಜಲಾಶಯ ನೀರಿನ ಪ್ರಮಾಣ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 16, 2024 | 11:04 AM

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿದೆ. ಹೊಸದಾಗಿ ಗೇಟ್​ ಅಳವಡಿಸಲು ತಾಂತ್ರಿಕ ಸಿಬ್ಬಂದಿಗಳು ಶತಪ್ರಯತ್ನ ಮಾಡುತ್ತಿದ್ದಾರೆ. ಇದರ ಮಧ್ಯೆ ಕಳೆದ ಹತ್ತು ವರ್ಷದಲ್ಲಿ ಆಗಸ್ಟ್​ನಲ್ಲಿ ತುಂಗಭದ್ರಾ ಜಲಾಶಯದ ನೀರಿನ ಪ್ರಮಾಣ ಕನಿಷ್ಟ ಮಟ್ಟಕ್ಕೆ ಇಳಿದೆ. ಕಳೆದ ಆರು ದಿನದಲ್ಲಿ 33 ಟಿಎಂಸಿ ನೀರು ಖಾಲಿ ಆಗಿದೆ.

ಕಳೆದ ಹತ್ತು ವರ್ಷದಲ್ಲಿ ಕನಿಷ್ಟ ಮಟ್ಟಕ್ಕಿಳಿದ‌ ತುಂಗಭದ್ರಾ ಜಲಾಶಯ ನೀರಿನ ಪ್ರಮಾಣ
ಕಳೆದ ಹತ್ತು ವರ್ಷದಲ್ಲಿ ಕನಿಷ್ಟ ಮಟ್ಟಕ್ಕಿಳಿದ‌ ತುಂಗಭದ್ರಾ ಜಲಾಶಯ ನೀರಿನ ಪ್ರಮಾಣ
Follow us on

ಕೊಪ್ಪಳ, ಆಗಸ್ಟ್​ 16: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಡ್ಯಾಂ (Tungabhadra Dam) 19ನೇ ಕ್ರಸ್ಟ್​ಗೇಟ್ ಕಟ್ ಆಗಿ ನೀರುಪಾಲಾಗಿದೆ. ಹೊಸ ಸ್ಟಾಪ್ ಲಾಗ್ ಗೇಟ್​ ಅಳವಡಿಸಲು ತಜ್ಞರು ಹರಸಾಹಸ ಪಡುತ್ತಿದ್ದಾರೆ. ಕ್ಷಣ ಕ್ಷಣವೂ ಅಪಾರ ನೀರು ಪೋಲಾಗುತ್ತಿದೆ. ಇತ್ತೀಚೆಗಿನ ಬರಗಾಲದ ಸಮಯದಲ್ಲೂ ಕೂಡ ಜಲಾಶಯ ಖಾಲಿ ಆಗಿರಲಿಲ್ಲ. ಆದರೆ ಕ್ರಸ್ಟ್​ಗೇಟ್ ಕಟ್​ ಆದ ಪರಿಣಾಮ ಕಳೆದ ಹತ್ತು ವರ್ಷದಲ್ಲಿ ಜಲಾಶಯ ನೀರಿನ ಪ್ರಮಾಣ ಕನಿಷ್ಟ ಮಟ್ಟಕ್ಕೆ ಇಳಿದೆ.

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿತ್ತು. ಈ ಹಿನ್ನೆಲೆಯಲ್ಲಿ ಹೊಸದಾಗಿ ಗೇಟ್​ ಅಳವಡಿಸಲು ಆರಂಭದಲ್ಲಿ ಜಲಾಶಯದ ನೀರನ್ನು ಖಾಲಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ತಂತ್ರಜ್ಞಾನದ ಮೂಲಕ ನೀರು ಖಾಲಿ ಮಾಡದೇ ಗೇಟ್​ ಅಳವಡಿಕೆಗೆ ತಜ್ಞರು ಮುಂದಾಗಿದ್ದಾರೆ. ಆದರೂ  ಕಳೆದ ಹತ್ತು ವರ್ಷದಲ್ಲಿ ಆಗಸ್ಟ್​ನಲ್ಲಿ ನೀರಿನ ಪ್ರಮಾಣ ಕನಿಷ್ಟ ಮಟ್ಟಕ್ಕಿಳಿದೆ.

ಇದನ್ನೂ ಓದಿ: ರೋಚಕ ಕಾರ್ಯಾಚರಣೆ ಹೊರತಾಗಿಯೂ ತುಂಗಭದ್ರಾ ಡ್ಯಾಂಗೆ ಸ್ಟಾಪ್‌ಲ್ಯಾಗ್‌ ಗೇಟ್ ಅಳವಡಿಸಲು ಅಡ್ಡಿ

ಕಳೆದ ವರ್ಷ ಬರಗಾಲದಲ್ಲಿ ಕೂಡಾ 88 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಳೆದ ಹತ್ತು ವರ್ಷದಲ್ಲಿ ಜಲಾಶಯದ ಸರಾಸರಿ 83 ಟಿಎಂಸಿ ನೀರಿದೆ. ಆ ಮೂಲಕ ಕಳೆದ ಆರು ದಿನದಲ್ಲಿ 33 ಟಿಎಂಸಿ ನೀರು ಖಾಲಿ ಮಾಡಲಾಗಿದೆ. ಈ ಬಾರಿ ಕೂಡಾ ಆಗಸ್ಟ್​ನಲ್ಲಿಯೇ ಜಲಾಶಯ ಭರ್ತಿಯಾಗಿತ್ತು. ಆದರೆ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿದ್ದರಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ.

ಡ್ಯಾಂಗೆ ಶಾಶ್ವತ ಗೇಟ್ ಅಳವಡಿಕೆಯ ಬದಲು ಸ್ಟಾಪ್‌ಲ್ಯಾಗ್‌ ಗೇಟ್‌ ಅಳವಡಿಸಲಾಗುತ್ತೆ. ಒಟ್ಟು 20ಅಡಿ ಎತ್ತರದ ಗೇಟ್‌ನ್ನ ನಾಲ್ಕು ಭಾಗ ಮಾಡಲಾಗಿದೆ. ಒಂದೊಂದು ಭಾಗವು 4 ಅಡಿ ಎತ್ತರ, 64 ಅಡಿ ಅಗಲ ಇದ್ದು, ಪ್ರತಿ ಗೇಟ್​ಗಳು ಬರೋಬ್ಬರಿ 13 ಟನ್‌ ತೂಕ ಹೊಂದಿವೆ. ಒಂದೊಂದು ಭಾಗದಿಂದಲೂ 25 ಟಿಎಂಸಿ ನೀರು ಸಂಗ್ರಹ ಆಗುತ್ತೆ. ಸದ್ಯಕ್ಕೆ 3 ಭಾಗಗಳನ್ನು ಮಾತ್ರ ಅಳವಡಿಸಲಾಗುತ್ತಿದ್ದು, ಕೆಲಸ ಯಶಸ್ವಿ ಆಗುತ್ತಿದ್ದಂತೆ ಉಳಿದ 2 ಎಲೆಮೆಂಟ್ಸ್ ಫಿಕ್ಸ್‌ ಮಾಡಲಾಗುತ್ತೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಗೊಳಿಸಿ;​ ಪ್ರತಿ ಕಾರ್ಮಿಕನಿಗೆ 50 ಸಾವಿರ ಕೊಡ್ತೇನೆ ಎಂದ ಸಚಿವ ಜಮೀರ್ ಅಹ್ಮದ್

ಟಿಬಿ ಡ್ಯಾಮ್​ಗೆ ಹೊಸ ಗೇಟ್ ಅಳವಡಿಸುತ್ತಿರುವ ಸ್ಥಳಕ್ಕೆ ನಿನ್ನೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಭೇಟಿ ನೀಡಿದ್ದರು. ತ್ವರಿತವಾಗಿ ಗೇಟ್ ಅಳವಡಿಕೆ ಕಾರ್ಯ ಮುಗಿಸಿದರೆ, ಎಲ್ಲಾ ಸಿಬ್ಬಂದಿಗೂ ವೈಯಕ್ತಿಕವಾಗಿ ತಲಾ 50 ಸಾವಿರ ರೂಪಾಯಿ ನೀಡೋದಾಗಿ ಘೋಷಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.