TV9 Kannada News Live: ರಾಜ್ಯಕ್ಕೆ ಮತ್ತೆ ವಾಪಸಾಯ್ತಾ ಮಹಾಮಾರಿ ಕೊರೊನಾ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ

Karnataka News Today Live Updates: ಆಂಧ್ರದಲ್ಲಿ ಕೋವಿಡ್ ಸಾವು ಹಾಗೂ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಆತಂಕ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿರುವ ಟ್ರಂಪ್-ಇರಾನ್ ಸುಂಕದ ಸಮರ ಮತ್ತು ಮಂಗಳೂರಿನಲ್ಲಿ ಮುಂದುವರಿದ ಅಕ್ರಮ ಬಾಂಗ್ಲಾ ವಲಸಿಗರ ಬಂಧನ ಕಾರ್ಯಾಚರಣೆ ಸೇರಿದಂತೆ ದೇಶ, ವಿದೇಶ ಹಾಗೂ ರಾಜ್ಯದ ಇಂದಿನ ಎಲ್ಲಾ ಪ್ರಮುಖ ವಿದ್ಯಮಾನಗಳ ಕ್ಷಣಕ್ಷಣದ ಲೈವ್ ಸುದ್ದಿಗಳು ಇಲ್ಲಿ ಲಭ್ಯ.

TV9 Kannada News Live: ರಾಜ್ಯಕ್ಕೆ ಮತ್ತೆ ವಾಪಸಾಯ್ತಾ ಮಹಾಮಾರಿ ಕೊರೊನಾ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ
ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ

Updated on: Jul 14, 2026 | 10:45 AM

LIVE NEWS & UPDATES

  • 14 Jul 2026 10:45 AM (IST)

    ಗೂಗಲ್ ಐಓ ಕನೆಕ್ಟ್ ಸಮಾವೇಶದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಭಾಗಿ

    ಮಾದಾವರದ ಬಿಐಇಸಿಯಲ್ಲಿ ನಡೆಯುತ್ತಿರುವ ‘ಗೂಗಲ್ ಐಓ ಕನೆಕ್ಟ್’ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿ ಮಾತನಾಡಿದ್ದಾರೆ. ಎಐ ತಂತ್ರಜ್ಞಾನದ ಜಾಗತಿಕ ರಾಜಧಾನಿಯಾಗಿ ಬೆಂಗಳೂರು ಬೆಳೆಯುತ್ತಿದ್ದು, ಶಾಲೆ ಹಂತದಿಂದಲೇ ಸರ್ಕಾರ ಎಐ ಕಲಿಕೆಗೆ ಬೆಂಬಲ ನೀಡಲಿದೆ ಎಂದು ಸಿಎಂ ತಿಳಿಸಿದ್ದು, ಗೂಗಲ್ ಸಂಸ್ಥೆಗೆ ಧನ್ಯವಾದ ಅರ್ಪಿಸಿದ್ದಾರೆ.

  • 14 Jul 2026 10:45 AM (IST)

    ಬಾಂಗ್ಲಾದೇಶೀಯರನ್ನು ಕರೆತಂದ ಮೂವರ ವಿರುದ್ಧ ಪ್ರಕರಣ ದಾಖಲು

    ಕಾನೂನುಬಾಹಿರವಾಗಿ ಬಾಂಗ್ಲಾದೇಶ ಪ್ರಜೆಗಳನ್ನು ಮಂಗಳೂರಿಗೆ ಕೆಲಸಕ್ಕೆ ಕರೆತಂದ ಆರೋಪದಡಿ ಪಶ್ಚಿಮ ಬಂಗಾಳ ಮೂಲದ ಮೊಯ್ದಿನ್ ಇಸ್ಲಾಂ, ರಸುಲ್ ಇಸ್ಲಾಂ ಹಾಗೂ ದಿಲ್ವಾರ್ ಹುಸೇನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇವರಲ್ಲಿ ಇಬ್ಬರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದ್ದು, ಕೋಲ್ಕತ್ತಾದಲ್ಲಿ ಬಂಧನಕ್ಕೊಳಗಾಗಿರುವ ಮತ್ತೊಬ್ಬ ಆರೋಪಿ ರಸುಲ್ ಇಸ್ಲಾಂನನ್ನು ವಶಕ್ಕೆ ಪಡೆಯಲು ಪೊಲೀಸರು ಕೋಲ್ಕತ್ತಾಕ್ಕೆ ತೆರಳಿದ್ದಾರೆ.

  • 14 Jul 2026 10:00 AM (IST)

    ಅಮಾವಾಸ್ಯೆ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ

    ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಭಕ್ತರು ಹರಿದುಬಂದಿದ್ದು, ಮುಖ್ಯ ದ್ವಾರ ತೆರೆಯದ ಪ್ರಾಧಿಕಾರದ ಬೇಜವಾಬ್ದಾರಿತನಕ್ಕೆ ರೊಚ್ಚಿಗೆದ್ದಿದ್ದಾರೆ. ಟಿಕೆಟ್ ಪಡೆದೂ ದರ್ಶನ ಸಿಗದೆ ಸುಸ್ತಾದ ಭಕ್ತರು ಬ್ಯಾರಿಕೇಡ್ ಹಾಗೂ ಗ್ರಿಲ್ಸ್ ಹತ್ತಿ ಒಳಪ್ರವೇಶಿಸಲು ಹರಸಾಹಸ ಪಟ್ಟ ಘಟನೆ ನಡೆದಿದೆ.

  • 14 Jul 2026 09:58 AM (IST)

    ಕುಡಿಯುವ ನೀರಿನ ಪೈಪ್‌ಗೆ ಕಲ್ಲು ತುಂಬಿದ ಕಿಡಿಗೇಡಿಗಳು

    ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಸುವ ತುಂಗಭದ್ರಾ ಪೈಪ್‌ಲೈನ್‌ಗೆ ಅಡವಿಸೋಮಾಪುರ ಬಳಿ ದುಷ್ಕರ್ಮಿಗಳು ಕಲ್ಲು ತುಂಬಿದ್ದು, ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಲ್ಲು ತೆರವುಗೊಳಿಸಿದ್ದು, ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • 14 Jul 2026 08:30 AM (IST)

    ದಾವಣಗೆರೆ: ಲಾರಿ ಪಲ್ಟಿ; ಚಾಲಕ ಸ್ಥಳದಲ್ಲೇ ದುರ್ಮರಣ

    ಹಾವೇರಿಯಿಂದ ದಾಬಸ್‌ಪೇಟೆಗೆ ಸಿಮೆಂಟ್ ಶೀಟ್ ಹೊತ್ತು ಸಾಗುತ್ತಿದ್ದ ಲಾರಿ ಬ್ರೇಕ್ ಫೇಲ್ ಆಗಿ ದಾವಣಗೆರೆಯ ತುಂಗಭದ್ರಾ ಬಡಾವಣೆ ಬಳಿ ಪಲ್ಟಿಯಾಗಿದೆ. ಸಿಮೆಂಟ್ ಶೀಟ್‌ಗಳ ಅಡಿ ಸಿಲುಕಿ ಚಾಲಕ ರಮೇಶ್ (55) ಸ್ಥಳದಲ್ಲೇ ಸಾವನ್ನಪ್ಪಿದ್ದು, ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 14 Jul 2026 08:29 AM (IST)

    ನೆಲಮಂಗಲದಲ್ಲಿ ಚಿರತೆ ಪ್ರತ್ಯಕ್ಷ; ಆತಂಕದಲ್ಲಿ ನಿವಾಸಿಗಳು

    ನೆಲಮಂಗಲದ ಮೋಟಗಾನಹಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಚಿರತೆ ಹಾವಳಿಯಿಂದ ಗ್ರಾಮಸ್ಥರು ಮನೆಯಿಂದ ಹೊರಬರಲು ಭೀತಿಗೊಂಡಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.

  • 14 Jul 2026 08:29 AM (IST)

    ಕೋಲಾರ: ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ

    ಕೋಲಾರ ಎಪಿಎಂಸಿ ಮಾರುಕಟ್ಟೆ ಬಳಿ ಗಾಂಜಾ ಮಾರುತ್ತಿದ್ದ ಉತ್ತರ ಪ್ರದೇಶ ಮೂಲದ ಬೋಲಾನಾಥ್ ಪಾಲ್ (45) ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹2.5 ಲಕ್ಷ ಮೌಲ್ಯದ 4.5 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 14 Jul 2026 08:29 AM (IST)

    ಮಾಜಿ ಸಚಿವ ರಾಮಚಂದ್ರೇಗೌಡ ನಿಧನ

    ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ರಾಜಕಾರಣಿ, ಮಾಜಿ ಸಚಿವ ರಾಮಚಂದ್ರೇಗೌಡ (88) ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 6 ಬಾರಿ ಎಂಎಲ್​ಸಿ ಹಾಗೂ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

  • 14 Jul 2026 08:28 AM (IST)

    ಕಲಬುರಗಿ: ಜೈಲಿನಿಂದ ಮೂವರು ಕೈದಿಗಳು ಪರಾರಿ

    ಕಲಬುರಗಿ ಕೇಂದ್ರ ಕಾರಾಗೃಹದ ಕಾಂಪೌಂಡ್ ಹಾರಿ ಬೀದರ್ ಕೊಲೆ ಪ್ರಕರಣದ ಸಜಾ ಕೈದಿಗಳಾದ ಮಸ್ತಾನ್, ಸಂತೋಷ್ ಮತ್ತು ಸಾಗರ್ ತಡರಾತ್ರಿ ಪರಾರಿಯಾಗಿದ್ದಾರೆ. ಈ ಕುರಿತು ಫರತಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೈದಿಗಳಿಗಾಗಿ ತೀವ್ರ ಹುಡುಕಾಟ ನಡೆದಿದೆ.

Breaking News Today Live Updates in Kannada: ನೆರೆರಾಜ್ಯ ಆಂಧ್ರಪ್ರದೇಶದ ಕಡಪಾದಲ್ಲಿ ಕೋವಿಡ್‌ಗೆ ಇಬ್ಬರು ಬಲಿಯಾಗಿದ್ದು, ಕರ್ನಾಟಕದಲ್ಲೂ ಜುಲೈನಲ್ಲಿ ಪ್ರಕರಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಸೋಂಕಿನ ಗಂಭೀರತೆ ಕಡಿಮೆ ಇದ್ದರೂ ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾ ಭೀತಿ ಶುರುವಾಗಿದೆ. ಮಂಗಳೂರಿನ ಉರ್ವಾ ಸಮೀಪ ಪೊಲೀಸರು ಕಾರ್ಯಾಚರಣೆ ನಡೆಸಿ 11 ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇತ್ತ ಅಮೆರಿಕ ಅಧ್ಯಕ್ಷ ಟ್ರಂಪ್ ಹಾರ್ಮುಜ್ ಜಲಸಂಧಿಯಲ್ಲಿ ಶೇ20ರಷ್ಟು ಸುರಕ್ಷತಾ ಶುಲ್ಕ ವಿಧಿಸಿದ್ದು, ಇರಾನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸುಂಕದ ಸಮರದಿಂದ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಭಾರತದ ಆರ್ಥಿಕತೆಗೆ ಪೆಟ್ಟು ಬೀಳುವ ಆತಂಕ ಎದುರಾಗಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

YouTube video player

Published On - 8:27 am, Tue, 14 July 26

Follow Us