TV9 Kannada News Live: ಪರೀಕ್ಷೆ ರದ್ದಾಗಿದ್ದಕ್ಕೆ ವಿದ್ಯಾರ್ಥಿಗಳು ಬೇಸರ; ಜ್ಯೋತಿಷಿಗೆ ಗಿಫ್ಟ್ ನೀಡಿದ ಸಿಎಂ ವಿಜಯ್
ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಹಿನ್ನೆಲೆ ನೀಟ್ ಪರೀಕ್ಷೆ ರದ್ದಾಗಿದ್ದಕ್ಕೆ ರಾಜ್ಯದ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕೃತ್ಯದ ಬಗ್ಗೆ ರಾಜ್ಯ ಸಚಿವರೂ ಆಕ್ರೋಶ ಹೊರಹಾಕಿದ್ದಾರೆ. ಇನ್ನು ವಿಜಯ್ ಸಿಎಂ ಆಗುತ್ತಾರೆಂದು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಇದೀಗ ವಿಜಯ್ ಭರ್ಜರಿ ಗಿಫ್ಟ್ ನೀಡಿದ್ದಾರೆ. ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

ಬೆಂಗಳೂರು, ಮೇ 12: ಮೇ 3ರಂದು ದೇಶಾದ್ಯಂತ ನಡೆದ NEET-UG ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಶೀಘ್ರದಲ್ಲೇ ಹೊಸ ದಿನಾಂಕ ನಿಗದಿ ಮಾಡಲಾಗುವುದು ಎಂದು ಅದು ಹೇಳಿದೆ. ನೀಟ್ ಪರೀಕ್ಷೆ ರದ್ದಾಗಿರೋದಕ್ಕೆ ರಾಜ್ಯದ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಜ್ಯದ ಸಚಿವರೂ ಆಕ್ರೋಶ ಹೊರಹಾಕಿದ್ದಾರೆ. ನೀಟ್ ಪರೀಕ್ಷೆ ರದ್ದಾಗಿರುವುದರಿಂದ ಆಘಾತ ಆಗಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಹೇಳಿದ್ದಾರೆ. ಇನ್ನು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಆಕ್ರೋಶ ಹೊರಹಾಕಿದ್ದು, ರಾಜ್ಯದಲ್ಲಿ ಪರೀಕ್ಷೆಯಲ್ಲಿ ಇಂತಹ ಅಕ್ರಮವಾಗಿದೆಯಾ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಾಂಶಗಳು
- ನೀಟ್ ಪರೀಕ್ಷೆ ರದ್ದಾಗಿದ್ದಕ್ಕೆ ರಾಜ್ಯದ ಸಚಿವರು ಆಕ್ರೋಶ
- ಭವಿಷ್ಯ ನುಡಿದ ಜ್ಯೋತಿಷಿಗೆ ಸಿಎಂ ವಿಜಯ್ ಕಡೆಯಿಂದ ಭರ್ಜರಿ ಗಿಫ್ಟ್
- ಬಗೆದಷ್ಟು ಬಯಲಾಗ್ತಿದೆ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣದ ರಹಸ್ಯ
ಪೊಲೀಸರಿಗೆ ಕಗ್ಗಂಟಾದ ಜಿಲೆಟಿನ್ ಕಡ್ಡಿ ಪ್ರಕರಣ: ಆರೋಪಿ ಲೋಹಿತ್ ಮೂಲ ಸೂತ್ರಧಾರಿನಾ?
ಪ್ರಧಾನಿ ನರೇಂದ್ರ ಮೋದಿ ಹಾದು ಹೋಗುವ ಮಾರ್ಗ ಬಳಿ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣ ಪೊಲೀಸರಿಗೆ ಕಗ್ಗಂಟ್ಟಾಗಿದೆ. ಕಳೆದ ಮೂರು ದಿನಗಳಾದ್ರೂ ಆರೋಪಿಯ ಸುಳಿವೇ ಸಿಕ್ಕಿರಲಿಲ್ಲ. ಬೆಂಗಳೂರಿನ ವಡೇರಹಳ್ಳಿ ಗೇಟ್ ಬಳಿ ಪತ್ತೆಯಾಗಿದ್ದ ಸ್ಫೋಟಕಗಳನ್ನ ಯಾರಿಟ್ಟಿದ್ದು ಎಂದು ಸುಳಿವೇ ಸಿಕ್ಕಿರಲಿಲ್ಲ. ಎಲ್ಲಾ ಆಯಾಮದಲ್ಲೂ ಪೊಲೀಸರು ತನಿಖೆ ಮಾಡಿದ್ರು. ಆದರೆ ಅಂದು ಮೇ10 ರಂದು ಮೋದಿ ಬರುವ ವೇಳೆಯಲ್ಲೇ ಬಾಂಬ್ ಸ್ಫೋಟಿಸೋದಾಗಿ ಬೆದರಿಕೆ ಕರೆ ಮಾಡಿದ್ದ ಲೋಹಿತ್ ಮೇಲೆ ಪೊಲೀಸರಿಗೆ ಅನುಮಾನ ಬಂದಿತ್ತು. ಈತನಿಗೂ ಜಿಲೆಟಿನ್ ಕಡ್ಡಿ ಪತ್ತೆಗೂ ಏನಾದ್ರೂ ಸಂಬಂಧ ಇದೆಯಾ ಅಂತಾ ಪೊಲೀಸರು ತನಿಖೆ ಮಾಡಿದ್ದರು. ಆದರೆ ಇದೀಗ ಅದು ನಿಜ ಆದಂತೆ ಕಾಣಿಸ್ತಿದೆ. ಏಕೆಂದರೆ ಆರೋಪಿ ಲೋಹಿತ್ ಹೇಳಿರುವ ಸ್ಥಳದ ಸಮೀಪವೇ ಜಿಲೆಟಿನ್ ಕಡ್ಡಿಗಳು ಪತ್ತೆ ಆಗಿದೆ.
ಶ್ರೀಲಂಕಾದಿಂದ ಭಾರತಕ್ಕೆ ಈಜಿ ದಾಖಲೆ ಸೃಷ್ಟಿಸಿದ ಬೆಂಗಳೂರು ದಂಪತಿ
ಬೆಂಗಳೂರಿನ ದಂಪತಿ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದ್ ಅವರು ಶ್ರೀಲಂಕಾದಿಂದ ಭಾರತಕ್ಕೆ ಪಾಲ್ಕ್ ಜಲಸಂಧಿಯ ಮೂಲಕ ಈಜಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮೇ 7ರಂದು ಶ್ರೀಲಂಕಾದ ತಲೈಮನ್ನಾರ್ನಿಂದ ಈಜು ಆರಂಭಿಸಿದ ಜೋಡಿ, ಸುಮಾರು 32 ಕಿ.ಮೀ ದೂರವನ್ನು ಕೇವಲ 10 ಗಂಟೆ 45 ನಿಮಿಷಗಳಲ್ಲಿ ಕ್ರಮಿಸಿ ತಮಿಳುನಾಡಿನ ಧನುಷ್ಕೋಡಿಯನ್ನು ತಲುಪಿದ್ದಾರೆ.
ಇದನ್ನೂ ಓದಿ: ಟ್ರೆಕ್ಕಿಂಗ್ ಪ್ರಿಯರೇ ಗಮನಿಸಿ: ವನ್ಯಜೀವಿ ಓಡಾಟವಿರುವ ಚಾರಣಪಥಗಳಲ್ಲಿ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್
ಈ ಕಠಿಣ ಮಾರ್ಗದಲ್ಲಿ ಓಪನ್ ವಾಟರ್ ಈಜು ಪೂರ್ಣಗೊಳಿಸಿದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಕೇವಲ ನಾಲ್ಕು ವರ್ಷಗಳ ಹಿಂದೆ ಈಜು ಕಲಿಯಲು ಆರಂಭಿಸಿದ ಇವರು, ಕಠಿಣ ತರಬೇತಿಯ ಮೂಲಕ ಈ ಸಾಹಸ ಮೆರೆಯುವ ಮೂಲಕ ಅನೇಕರಿಗೆ ಪ್ರೇರಣೆಯಾಗಿದ್ದಾರೆ.
ವಿಜಯ್ ಸಿಎಂ ಆಗುತ್ತಾರೆಂದು ಭವಿಷ್ಯ ನುಡಿದ್ದ ಜ್ಯೋತಿಷಿಯ ಲಕ್ ಚೇಂಜ್
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಗೆಲುವನ್ನು ಮೊದಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರ ಲಕ್ಕೇ ಬದಲಾಗಿದೆ. ವಿಜಯ್ ಅವರದ್ದು ಸುನಾಮಿ ಜಾತಕ ಎಂದು ಹೇಳಿದ್ದ ಅವರನ್ನು ಸಿಎಂ ವಿಜಯ್ ಇದೀಗ ತಮ್ಮ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕ ಮಾಡಿಕೊಂಡಿದ್ದಾರೆ. ಆಸ್ಟ್ರಾಲಜಿ ಮೇಲೆ ವಿಜಯ್ ಅವರಿಗಿರುವ ನಂಬಿಕೆ ಅಥವಾ ಭವಿಷ್ಯ ನಿಜವಾದ ಕೃತಜ್ಞತೆಗಾಗಿ ಈ ಸ್ಥಾನ ನೀಡಲಾಗಿದೆಯೇ ಎಂಬ ಚರ್ಚೆ ಶುರುವಾಗಿದೆ. ವಿಶೇಷವೆಂದರೆ, ವಿಜಯ್ ಹೊಸ ಕ್ಯಾಬಿನೆಟ್ನಲ್ಲಿ ಯೂಟ್ಯೂಬರ್ ಸೇರಿದಂತೆ ರಾಜಕೀಯೇತರ ವ್ಯಕ್ತಿಗಳಿಗೆ ಮಣೆ ಹಾಕಲಾಗಿದ್ದು, ಇದು ತಮಿಳುನಾಡು ರಾಜಕೀಯದಲ್ಲಿ ಹೊಸ ಮತ್ತು ವಿಚಿತ್ರ ಬೆಳವಣಿಗೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




