Ayodhya: ಕಾರ್ಕಳದಿಂದ ಅಯೋಧ್ಯೆಗೆ ಹೊರಟಿದೆ 10 ಟನ್ ತೂಕದ ಕೃಷ್ಣ ಶಿಲೆ; ಶ್ರೀರಾಮ ಮೂರ್ತಿ ತಯಾರಿಗೆ ಬಳಕೆ

|

Updated on: Mar 20, 2023 | 3:41 PM

ಅಯೋಧ್ಯೆಯ (Ayodhya) ರಾಮ ಮಂದಿರದಲ್ಲಿ (Ram Mandir) ಪ್ರತಿಷ್ಠಾಪಿಸಲಾಗುವ ಶ್ರೀರಾಮ ಮೂರ್ತಿ ತಯಾರಿಸಲು ಬಳಸಲಾಗುವ ಬೃಹತ್ ಕೃಷ್ಣಶಿಲೆಯನ್ನು ಕಾರ್ಕಳದ (Karkala) ನೆಲ್ಲಿಕ್ಕಾರು ಗ್ರಾಮದಿಂದ ಕಳುಹಿಸಿಕೊಡಲಾಗಿದೆ.

Ayodhya: ಕಾರ್ಕಳದಿಂದ ಅಯೋಧ್ಯೆಗೆ ಹೊರಟಿದೆ 10 ಟನ್ ತೂಕದ ಕೃಷ್ಣ ಶಿಲೆ; ಶ್ರೀರಾಮ ಮೂರ್ತಿ ತಯಾರಿಗೆ ಬಳಕೆ
ಅಯೋಧ್ಯೆಯ ರಾಮ ಮೂರ್ತಿಗೆ ಆಯ್ಕೆಯಾದ ಕಾರ್ಕಳದ ಕೃಷ್ಣಶಿಲೆ
Follow us on

ಉಡುಪಿ: ಅಯೋಧ್ಯೆಯ (Ayodhya) ರಾಮ ಮಂದಿರದಲ್ಲಿ (Ram Mandir) ಪ್ರತಿಷ್ಠಾಪಿಸಲಾಗುವ ಶ್ರೀರಾಮ ಮೂರ್ತಿ ತಯಾರಿಸಲು ಬಳಸಲಾಗುವ ಬೃಹತ್ ಕೃಷ್ಣಶಿಲೆಯನ್ನು ಕಾರ್ಕಳ(Karkala) ನೆಲ್ಲಿಕ್ಕಾರು ಗ್ರಾಮದಿಂದ ಕಳುಹಿಸಿಕೊಡಲಾಗಿದೆ. ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಇತ್ತೀಚೆಗೆ ಬೃಹತ್ ಟ್ರೇಲರ್ ಟ್ರಕ್​ನಲ್ಲಿ ಶಿಲೆಯನ್ನು ಕಳುಹಿಸಿಕೊಡಲಾಯಿತು ಎಂದು ಮೂಲಗಳು ತಿಳಿಸಿವೆ. 9.5 ಅಡಿ ಎತ್ತರ, 6 ಅಡಿ ಅಗಲ ಹಾಗೂ 10 ಟನ್ ತೂಕದ ಈ ಕೃಷ್ಣಶಿಲೆ ಕಾರ್ಕಳದ ನೆಲ್ಲಿಕ್ಕಾರುವಿನ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿತ್ತು. ಶಿಲೆಯನ್ನು ಅಯೋಧ್ಯೆಗೆ ಟ್ರಕ್​ನಲ್ಲಿ ಕಳುಹಿಸಿಕೊಡುವುದಕ್ಕೂ ಮುನ್ನ ಬಜಗೋಳಿಯ ಅಯ್ಯಪ್ಪ ಮಂದಿರದಲ್ಲಿ ಪ್ರಾರ್ಥನೆ ನಡೆಸಲಾಯಿತು. ಕೆಲವು ದಿನಗಳ ಹಿಂದಷ್ಟೇ ಅಯೋಧ್ಯೆಯಿಂದ ತಜ್ಞರ ತಂಡ ನೆಲ್ಲಿಕ್ಕಾರುವಿಗೆ ಭೇಟಿ ನೀಡಿ ಶಿಲೆಯ ಪರಿಶೀಲನೆ ನಡೆಸಿತ್ತು. ಮಳೆ, ಬಿಸಿಲು, ಬೆಂಕಿ ಮತ್ತು ಯಾವುದೇ ವಿಪರೀತ ಪರಿಸ್ಥಿತಿಯನ್ನು ತಡೆದುಕೊಳ್ಳುವ ಸಾಂರ್ಥ್ಯ ಇರುವ ಶಿಲೆ ಎಂಬುದನ್ನು ಖಚಿತಪಡಿಸಿದ ನಂತರ ತಂಡವು ಅದನ್ನು ಆಯ್ಕೆ ಮಾಡಿತ್ತು.

ಅಯೋಧ್ಯೆಯ ರಾಮ ಮೂರ್ತಿಗೆ ಕಾರ್ಕಳದ ಶಿಲೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದು ಕಾರ್ಕಳ ಶಾಸಕರೂ ಆಗಿರುವ ಇಂಧನ ಸಚಿವ ವಿ. ಸುನಿಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳದ ಕಾರ್ಯಕರ್ತರ ಪ್ರಯತ್ನದಿಂದಾಗಿ ಇದು ಸಾಧ್ಯವಾಯಿತು. ಇದರಿಂದ ಕಾರ್ಕಳವು ಜಾಗತಿಕವಾಗಿ ಪ್ರಸಿದ್ಧಿ ಪಡೆಯುತ್ತದೆ ಮತ್ತು ಕಾರ್ಕಳದಲ್ಲಿರುವ ಶಿಲೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಲಿದೆ ಎಂದು ಅವರು ಹೇಳಿದ್ದಾರೆ.

ಕಾರ್ಕಳದ ನೆಲ್ಲಿಕ್ಕಾರಿನ ಶಿಲೆಗಳನ್ನು ಹಲವಾರು ಶಿಲ್ಪಗಳ ನಿರ್ಮಾಣದಲ್ಲಿ ಬಳಸಲಾಗಿದ್ದು, ದೇಶ ವಿದೇಶಗಳ ವಿವಿಧ ಸ್ಥಳಗಳಲ್ಲಿ ಪ್ರದರ್ಶನಗೊಂಡಿವೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ 1300 ಕೋಟಿ ವೆಚ್ಚದ ಅಂದಾಜು: ನೀಲಿ ಛಾಯೆಯ ಶ್ವೇತ ಶಿಲೆಯಲ್ಲಿ ಕಂಗೊಳಿಸಲಿದ್ದಾನೆ ಶ್ರೀರಾಮ

ಅಯೋಧ್ಯೆಯ ರಾಮ ಮೂರ್ತಿಗೆ ಕರ್ನಾಟಕದ ಕಾರ್ಕಳದ ಈದು ಗ್ರಾಮದ ಕೃಷ್ಣಶಿಲೆ ಆಯ್ಕೆಯಾಗಿರುವ ಬಗ್ಗೆ ಇತ್ತೀಚೆಗಷ್ಟೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದರು. ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ಎನ್ನುವಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭ್ಯವ ಪ್ರಭು ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪವಿತ್ರ ಶ್ರೀ ರಾಮರ ಮೂರ್ತಿಗೆ ಕರ್ನಾಟಕದ ಕಾರ್ಕಳದ ಈದು ಗ್ರಾಮದ ಕೃಷ್ಣಶಿಲೆ ಆಯ್ಕೆಯಾಗಿದೆ. ಶಿಲ್ಪಿಗಳ ತವರೂರು ಎಂದೇ ಖ್ಯಾತವಾಗಿರುವ ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ ಶಿಲೆಯನ್ನು ಆಯ್ಕೆ ಮಾಡಲಾಗಿದೆ. ಸಂಪೂರ್ಣ ವಿಶ್ವವೇ ಈ ಶಿಲೆಯಿಂದ ರೂಪುಗೊಳ್ಳಲಿರುವ ಭಗವಾನ್ ಶ್ರೀ ರಾಮನ ದರ್ಶನ ಪಡೆಯಲಿದೆ ಎಂಬುದು ನಮ್ಮನ್ನು ಪುಳಕಿತರನ್ನಾಗಿ ಹಾಗೂ ಪುನೀತರನ್ನಾಗಿಸುವಂತಹದಾಗಿದೆ. ಈ ಸೇವೆ ಮಾಡುವ ಅವಕಾಶವನ್ನು ರಾಜ್ಯಕ್ಕೆ ನೀಡಿದ ಪ್ರಭು ಶ್ರೀ ರಾಮನಿಗೆ ಶಿರಸಾಷ್ಟಾಂಗ ನಮಸ್ಕಾರಗಳು ಎಂದು ಟ್ವೀಟ್​ನಲ್ಲಿ ಅವರು ಉಲ್ಲೇಖಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Mon, 20 March 23