ಸೂರ್ಯಾಸ್ತದ ಸುಂದರ ತಾಣಕ್ಕೀಗ ಕತ್ತಲ ಛಾಯೆ: ಕ್ಷಿತಿಜ ನೇಸರಧಾಮಕ್ಕೆ ಬೇಕಿದೆ ತುರ್ತು ಕಾಯಕಲ್ಪ

kshitija nesara dhama: ಅರಬ್ಬಿ ಸಮುದ್ರದ ಸುಂದರ ನೋಟದ ಬೈಂದೂರು ನೇಸರಧಾಮವು ಮೂಲಸೌಕರ್ಯ ಕೊರತೆ ಮತ್ತು ನಿರ್ವಹಣೆಯಿಲ್ಲದೆ ತನ್ನ ವೈಭವ ಕಳೆದುಕೊಳ್ಳುತ್ತಿದೆ. ಶಿಥಿಲಗೊಂಡ ಕಟ್ಟಡಗಳು, ಕಳೆಗುಂದಿದ ಉದ್ಯಾನಗಳು, ಸುರಕ್ಷತೆಯಿಲ್ಲದ ಸೂರ್ಯಾಸ್ತ ವೀಕ್ಷಣಾ ಸ್ಥಳ ಪ್ರವಾಸಿಗರನ್ನು ವಿಮುಖಗೊಳಿಸುತ್ತಿವೆ. ನೈತಿಕ ಪೊಲೀಸ್‌ಗಿರಿ ಕೂಡ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ.

ಸೂರ್ಯಾಸ್ತದ ಸುಂದರ ತಾಣಕ್ಕೀಗ ಕತ್ತಲ ಛಾಯೆ: ಕ್ಷಿತಿಜ ನೇಸರಧಾಮಕ್ಕೆ ಬೇಕಿದೆ ತುರ್ತು ಕಾಯಕಲ್ಪ
ಕ್ಷಿತಿಜ ನೇಸರಧಾಮ
Image Credit source: tv9 kannada
Edited By:

Updated on: Jul 24, 2026 | 7:03 PM

ಮುಖ್ಯಾಂಶಗಳು

  • ನೇಸರಧಾಮದದಲ್ಲಿ ಮೂಲಸೌಕರ್ಯ ಕೊರತೆ ಮತ್ತು ನಿರ್ವಹಣೆಯ ನಿರ್ಲಕ್ಷ್ಯ
  • ಶಿಥಿಲಗೊಂಡ ಕಟ್ಟಡ, ಹಾಳಾದ ಗ್ಯಾಲರಿ
  • ಪ್ರವಾಸಿಗರಿಗೆ ನೈತಿಕ ಪೊಲೀಸ್‌ಗಿರಿ ಭೀತಿ

ಉಡುಪಿ, ಜಿಲೈ 24: ಅರಬ್ಬಿ ಸಮುದ್ರದ ಅಪರೂಪದ ಸೂರ್ಯಾಸ್ತ ನೋಟ, ಹಚ್ಚಹಸಿರಿನ ಪ್ರಕೃತಿ, ಸಮುದ್ರದ ತಂಗಾಳಿ ಮತ್ತು ಪ್ರಶಾಂತ ವಾತಾವರಣದಿಂದ ಕರಾವಳಿಯ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಬೈಂದೂರಿನ ನೇಸರಧಾಮ (kshitija nesara dhama) ಇಂದು ಅಭಿವೃದ್ಧಿಯ ನಿರೀಕ್ಷೆಯಲ್ಲಿ ನಿಂತಿದೆ. ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಸಾಮರ್ಥ್ಯ ಹೊಂದಿದ್ದರೂ, ಸೂಕ್ತ ನಿರ್ವಹಣೆ ಮತ್ತು ಮೂಲ ಸೌಕರ್ಯಗಳ ಕೊರತೆಯಿಂದ ಈ ಸುಂದರ ತಾಣ ತನ್ನ ಕಳೆ ಕಳೆದುಕೊಳ್ಳುತ್ತಿದೆ.

ನೇಸರಧಾಮದಲ್ಲಿ ಮೂಲ ಸೌಕರ್ಯಗಳ ಕೊರತೆ

ಸದಾ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತಿದ್ದ ನೇಸರಧಾಮದಲ್ಲಿ ಇಂದು ನಿರ್ಲಕ್ಷ್ಯದ ಗುರುತುಗಳು ಎದ್ದುಕಾಣುತ್ತಿವೆ. ಹಲವು ವರ್ಷಗಳ ಹಿಂದೆ ನಿರ್ಮಿಸಲಾದ ಕಟ್ಟಡಗಳು ದುರಸ್ತಿ ಕಾಣದೆ ಶಿಥಿಲಾವಸ್ಥೆ ತಲುಪಿದ್ದು, ಉದ್ಯಾನವನಗಳು ನಿರ್ವಹಣೆಯ ಕೊರತೆಯಿಂದ ಸೊರಗಿವೆ. ಪ್ರವಾಸಿಗರ ವಿಶ್ರಾಂತಿ ಸ್ಥಳಗಳು ಹಾನಿಗೊಳಗಾಗಿದ್ದು, ತಾಣದ ಸೌಂದರ್ಯಕ್ಕೂ ಧಕ್ಕೆ ಉಂಟಾಗಿದೆ.

ಇದನ್ನೂ ಓದಿ: ಮಳೆರಾಯನ ಮುನಿಸು: KRS ನೀರಿನ ಮಟ್ಟ ಕುಸಿತ; ಮಂಡ್ಯದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧ

ಕ್ಷಿತಿಜ ನೇಸರಧಾಮದ ಪ್ರಮುಖ ಆಕರ್ಷಣೆ ಎಂದರೆ ಸೂರ್ಯಾಸ್ತ. ಈ ಸೂರ್ಯಾಸ್ತ ವೀಕ್ಷಣಾ ಸ್ಥಳವೂ ಇಂದು ದುಸ್ಥಿತಿಯಲ್ಲಿದೆ. ಪ್ರವಾಸಿಗರು ಕುಳಿತು ಸಮುದ್ರದ ಅಂಚಿನಲ್ಲಿ ಸೂರ್ಯಾಸ್ತವನ್ನು ಆಸ್ವಾದಿಸಲು ನಿರ್ಮಿಸಲಾದ ಕಾಂಕ್ರೀಟ್ ವೇದಿಕೆಯ ಹಲವೆಡೆ ಕಾಂಕ್ರೀಟ್ ಕಿತ್ತು ಹೋಗಿದ್ದು, ಸುರಕ್ಷತೆಯ ಪ್ರಶ್ನೆಯೂ ಉದ್ಭವಿಸಿದೆ. ದುರಸ್ತಿ ಇಲ್ಲದೆ ವರ್ಷಗಳಿಂದ ಇದೇ ಸ್ಥಿತಿ ಮುಂದುವರಿದಿದೆ. ಪ್ರವಾಸಿಗರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ, ಪ್ರವಾಸಿ ಬಂಗಲೆಗಳು ಸಾರ್ವಜನಿಕ ಬಳಕೆಗೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಕೆಲವೇ ಅಧಿಕಾರಿಗಳ ಬಳಕೆಗೆ ಸೀಮಿತವಾಗಿರುವಂತಿರುವ ಈ ಕಟ್ಟಡಗಳು ಸಾಮಾನ್ಯ ಪ್ರವಾಸಿಗರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ ಎನ್ನುವುದು ಸ್ಥಳೀಯರ ಅಸಮಾಧಾನ.

ನೈತಿಕ ಪೊಲೀಸ್‌ಗಿರಿ ಕಂಟಕ!

ಇಲ್ಲಿಗೆ ಭೇಟಿ ನೀಡುವ ಕೆಲವು ಯುವ ಜೋಡಿಗಳು ಹಾಗೂ ಪ್ರವಾಸಿಗರನ್ನು ಕೆಲ ವ್ಯಕ್ತಿಗಳು ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಪ್ರಶ್ನಿಸುವುದು, ಬೆದರಿಸುವುದು ಮತ್ತು ಅನಗತ್ಯವಾಗಿ ಕಿರಿಕಿರಿ ಉಂಟು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಇಂತಹ ಘಟನೆಗಳು ಪ್ರವಾಸೋದ್ಯಮದ ಮೇಲೆಯೇ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಮೂಲಸೌಕರ್ಯಗಳನ್ನು ಕಲ್ಪಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಳ ಸಾಧ್ಯತೆ  

ಪ್ರಕೃತಿಯ ಸೌಂದರ್ಯ, ಸಮುದ್ರದ ವಿಹಂಗಮ ನೋಟ ಮತ್ತು ಪ್ರಶಾಂತ ವಾತಾವರಣ ಹೊಂದಿರುವ ಕ್ಷಿತಿಜ ನೇಸರಧಾಮವನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿದರೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ರೂಪಿಸಬಹುದಾಗಿದೆ. ಸುರಕ್ಷಿತ ವೀಕ್ಷಣಾ ಗ್ಯಾಲರಿ, ಮಕ್ಕಳ ಆಟದ ವಲಯ, ಸುಸಜ್ಜಿತ ಉದ್ಯಾನವನ, ಆಹಾರ ಮಳಿಗೆ, ಶೌಚಾಲಯಗಳು, ಸಮರ್ಪಕ ಬೆಳಕಿನ ವ್ಯವಸ್ಥೆ, ವಾಹನ ನಿಲುಗಡೆ, ಮಾಹಿತಿ ಕೇಂದ್ರ ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದರೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುಳ ಸಾಧ್ಯತೆ ಇದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಳೆಯಬ್ಬರ: ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ

ಪ್ರತಿ ವರ್ಷ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಸಾಮರ್ಥ್ಯ ಹೊಂದಿರುವ ಈ ತಾಣ ನಿರ್ಲಕ್ಷ್ಯದಿಂದ ತನ್ನ ವೈಭವ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ವಿಶೇಷ ಯೋಜನೆ ರೂಪಿಸಿ ಕ್ಷಿತಿಜ ನೇಸರಧಾಮದ ಸಮಗ್ರ ಅಭಿವೃದ್ಧಿಗೆ ಮುಂದಾದರೆ, ಬೈಂದೂರಿನ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ದೊರೆಯುವುದರ ಜೊತೆಗೆ ಸ್ಥಳೀಯರಿಗೂ ಉದ್ಯೋಗ ಮತ್ತು ಆರ್ಥಿಕ ಅವಕಾಶಗಳು ಹೆಚ್ಚಲಿವೆ.

Udupi Story: ಅಭಿವೃದ್ಧಿ ನಿರೀಕ್ಷೆಯಲ್ಲಿ ಕರಾವಳಿಯ ಪ್ರಮುಖ ಪ್ರವಾಸಿ ತಾಣ ಬೈಂದೂರಿನ ಕ್ಷಿತಿಜ ನೇಸರಧಾಮ| #TV9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:59 pm, Fri, 24 July 26

Follow Us