ಉಡುಪಿ ಜಿಲ್ಲೆಯಲ್ಲಿ ಸಂಭವಿಸಿದ ಮೇಘ ಸ್ಫೋಟಕ್ಕೆ ಓರ್ವ ವೃದ್ಧೆ ಬಲಿ

| Updated By: ಆಯೇಷಾ ಬಾನು

Updated on: Oct 07, 2024 | 12:23 PM

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದಲ್ಲಿ ಮೇಘಸ್ಫೋಟ ಉಂಟಾಗಿದೆ. ಮೇಘ ಸ್ಫೋಟಕ್ಕೆ ಓರ್ವ ವೃದ್ಧೆ ಬಲಿಯಾಗಿದ್ದಾರೆ. ಪ್ರವಾಹದ ನೀರಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆ ಮೃತದೇಹ ಬಲ್ಲಾಡಿ ಪರಿಸದರದ ಗದ್ದೆ ಬಳಿ ಪತ್ತೆಯಾಗಿದೆ. ನಿನ್ನೆ ಸಂಜೆ 4.30ರ ಸುಮಾರಿಗೆ ಏಕಾಏಕಿ ಸುರಿದ ಮಳೆಗೆ ದಿಢೀರ್ ಪ್ರವಾಹ ಸೃಷ್ಟಿಯಾಗಿದೆ. ಮೇಘಸ್ಫೋಟದ ಪರಿಣಾಮ ಏಕಾಏಕಿ ಕೃಷಿ ಜಮೀನು, ಮನೆಗಳಿಗೆ ನೀರು ನುಗ್ಗಿದೆ.

ಉಡುಪಿ ಜಿಲ್ಲೆಯಲ್ಲಿ ಸಂಭವಿಸಿದ ಮೇಘ ಸ್ಫೋಟಕ್ಕೆ ಓರ್ವ ವೃದ್ಧೆ ಬಲಿ
ಮೇಘ ಸ್ಫೋಟ
Follow us on

ಉಡುಪಿ, ಅ.07: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿದೆ (Karnataka Rains). ಪಶ್ಚಿಮ ಘಟ್ಟದ ತಪ್ಪಲು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಓರ್ವ ವೃದ್ಧೆ ಬಲಿಯಾಗಿದ್ದಾರೆ (Death). ಭಾರಿ ಮಳೆಯಿಂದಾಗಿ ಉಡುಪಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ನಿನ್ನೆ ಸುರಿದ ಭಾರಿ ಮಳೆಯಲ್ಲಿ ಚಂದ್ರಾ ಗೌಡ್ತಿ(85) ಎಂಬ ವೃದ್ಧೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತ ವೃದ್ಧೆ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ನಿವಾಸಿ. ನಿನ್ನೆ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇಂದು ಮುಂಜಾನೆ ಬಲ್ಲಾಡಿ ಪರಿಸದರದ ಗದ್ದೆ ಬಳಿ ವೃದ್ಧೆ ಶವ ಪತ್ತೆಯಾಗಿದೆ.

ನಿನ್ನೆ ಮೇಘಸ್ಫೋಟದಿಂದಾಗಿ ಏಕಾಏಕಿ ಭಾರಿ ಮಳೆ ಆಗಿತ್ತು. ಆಗುಂಬೆ ಘಾಟಿ ಪ್ರದೇಶದ ಸೇರಿ ಸುತ್ತಮುತ್ತ ನಿನ್ನೆ ಮಧ್ಯಾಹ್ನ 3 ಗಂಟೆಯಿಂದ 5ರವರೆಗೆ ನಿರಂತರ ಮಳೆಯಾಗಿತ್ತು. ಭಾರಿ ಮಳೆಯಿಂದಾಗಿ ಕಬ್ಬಿನಾಲೆ ಗುಡ್ಡದಿಂದ ಭಾರಿ ನೀರು ಹರಿದಿತ್ತು. ಸಂಜೆಯ ಬಳಿಕ ಮಳೆ ಕಡಿಮೆಯಾಗಿದೆ. ಸದ್ಯ ಈಗ ಮೋಡ ಕವಿದ ವಾತಾವರಣವಿದೆ.

ಇದನ್ನೂ ಓದಿ: ಉಡುಪಿಯ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ

ಇನ್ನು ಬಲ್ಲಾಡಿಯ ಈಶ್ವರನಗರ ಸಮೀಪದ ಬಮ್ಮಗುಂಡಿ ಹೊಳೆ ಉಕ್ಕಿ ಹರಿದು ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಭಾರೀ ಆವಾಂತರ ಸೃಷ್ಟಿಯಾಗಿದೆ. ಮೇಘಸ್ಫೋಟದಿಂದ ಉಂಟಾದ ಪ್ರವಾಹದಿಂದ  ಮನೆಗಳು, ಕಾರು ಬೈಕ್ ಗಳು ಕೊಚ್ಚಿಕೊಂಡು ಹೋಗಿವೆ. ಮುದ್ರಾಡಿಯ ಹೊಸ ಕಂಬ್ಲ, ಕಾಂತರಬೈಲು, ಕೆಲಕಿಲ ಎಂಬಲ್ಲಿನ ಸುಮಾರು ಎಂಟು ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ. ನೆರೆಯಿಂದಾಗಿ ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಸಂಪೂರ್ಣ ಬಂದ್ ಆಗಿದ್ದು ಸ್ಥಳೀಯರು ಬದಲಿ ರಸ್ತೆಯ ಮೂಲಕ ಸಂಚರಿಸುತ್ತಿದ್ದಾರೆ.

ಸಿಡಿಲಿಗೆ 15 ಕುರಿಗಳು ಸಾವು, ಇಬ್ಬರಿಗೆ ಗಾಯ

ಸಿಡಿಲು ಬಡಿದು 15ಕ್ಕೂ ಹೆಚ್ಚು ಕುರಿಗಳು ಸಾವನಪ್ಪಿ, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕೊಡಾಲ್ ಗ್ರಾಮದಲ್ಲಿ ನಡೆದಿದೆ. ಕುರಿಗಾಹಿಗಳಾದ ಉಳೂರು ಗ್ರಾಮದ ಬಸಪ್ಪ, ಕರಿಮಿಂಚಾಲಿಗೆ ಗಾಯಗೊಂಡಿದ್ದು, ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಳೆಗೆ ನೆಲಕಚ್ಚಿತು 8 ಎಕರೆ ಮೆಕ್ಕೆಜೋಳ

ಬಿರುಗಾಳಿ ಸಹಿತ ಮಳೆಗೆ 8 ಎಕರೆ 20 ಗುಂಟೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ನಾಶವಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಹೊರವಲಯದಲ್ಲಿ ಘಟನೆ ನಡೆದಿದೆ. 3 ಲಕ್ಷ ಹಣ ಖರ್ಚು ಮಾಡಿದ್ದ ಬೆಳೆದಿದ್ದ ರೈತ ಷಣ್ಮುಖಪ್ಪ
ಕಣ್ಣೀರಿಡುವಂತಾಗಿದೆ. ಬೆಳೆಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ