
ಉಡುಪಿ, ಆಗಸ್ಟ್ 09: ಎರಡು ತಿಂಗಳ ಮೀನುಗಾರಿಕೆ (Fishing) ನಿಷೇಧದ ಬಳಿಕ ಮತ್ತೆ ಸಮುದ್ರಕ್ಕೆ (Sea) ಇಳಿಯಲು ಕಡಲ ಮಕ್ಕಳು ಸನ್ನದ್ಧರಾಗಿದ್ದಾರೆ. ಪ್ರತಿಕ್ಷಣವು ಕಡಲಿನ ಅಲೆಯ ನಡುವೆ ಗುದ್ದಾಡಿ ಮೀನುಗಾರಿಕೆ ನಡೆಸುವ ಮೀನುಗಾರರು ಯಾವುದೇ ಅಪಾಯ ಎದುರಾಗದಿರಲಿ ಎಂದು ಸಮುದ್ರ ರಾಜನಿಗೆ ಶನಿವಾರ (ಆ.09) ಪೂಜೆ ಸಲ್ಲಿಸಿದರು. ಕಡಲ ಮಕ್ಕಳು ಅಪ್ರತಿಮ ಸಾಹಸಿಗಳು, ಬೋಟ್ಗಳಲ್ಲಿ ಬಲೆಗಳನ್ನು ತುಂಬಿಕೊಂಡು ಕಡಲಿಗೆ ಇಳಿದರೆ 15 ದಿನ ಸಮುದ್ರ ಬಿಟ್ಟು ದಡಕ್ಕೆ ಬರುವುದಿಲ್ಲ.
ಮೀನುಗಾರಿಕೆ ಎಂಬ ಅದೃಷ್ಟದ ಆಟ ಇಂದಿನಿಂದ ಸಾಂಪ್ರದಾಯಿಕವಾಗಿ ಆರಂಭವಾಗಿದೆ. ಆಳಸಮುದ್ರದಲ್ಲಿ ಪರ್ಸಿನ್ ಬೋಟ್ ಸೇರಿದಂತೆ ಸಾವಿರಾರು ಬೋಟ್ಗಳು ಇಂದಿನಿಂದ ಬೃಹತ್ ಪ್ರಮಾಣದ ಮೀನುಗಾರಿಕೆಯಲ್ಲಿ ತೊಡಗಲಿವೆ. ಹೇರಳವಾಗಿ ಮೀನು ಲಭ್ಯವಾಗಲಿ ಎಂದು ಪ್ರಾರ್ಥಿಸುವ ಸಲುವಾಗಿ ಇಂದು ಕಡಲ ಮಕ್ಕಳು ಸಮುದ್ರಕ್ಕೆ ಪೂಜೆಯನ್ನು ಮಾಡಿದರು. ಸಮುದ್ರಕ್ಕೆ ಹಾಲೆರೆದು ಸಮುದ್ರ ರಾಜನ ಆರಾಧನೆ ಮಾಡಿದರು.
ಮಲ್ಪೆ ಕಡಲ ತೀರದಲ್ಲಿರುವ ವಡಭಾಂಡೇಶ್ವರ ಬಲರಾಮ ಸನ್ನಿಧಾನದಲ್ಲಿ ಸೇರಿದ ಮೀನುಗಾರರು ಬಲರಾಮ, ಬೊಬ್ಬರ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ಪ್ರಸಾದ ಕೈಯಲ್ಲಿ ಹಿಡಿದು ಕಡಲ ಕಿನಾರೆಗೆ ಮೆರವಣಿಗೆ ಮೂಲಕ ಆಗಮಿಸಿ, ಪೂಜೆ ನೆರವೇರಿಸಿದರು. ಬಳಿಕ ಸಾಮೂಹಿಕವಾಗಿ ಸಮುದ್ರಕ್ಕೆ ದೇವರ ಪ್ರಸಾದವನ್ನು ಅರ್ಪಿಸಲಾಯಿತು. ಈ ಸಂಧರ್ಭದಲ್ಲಿ ಅಬ್ಬರಿಸುವ ಕಡಲಿಗೆ ಹಾಲೆರುದು ಸಮುದ್ರ ರಾಜನ ಆಶಿರ್ವಾದ ಪಡೆಯುವುದು ಸಂಪ್ರದಾಯ. ಅದರಂತೆ ಸೀಯಾಳ, ಫಲಪುಷ್ಪವನ್ನು ಸಮುದ್ರ ರಾಜನಿಗೆ ಅರ್ಪಿಸಲಾಯಿತು.
ಇದನ್ನೂ ಓದಿ: ಉಕ್ಕಿ ಹರಿಯುವ ನದಿಯಲ್ಲಿ ದೋಣಿ ನಡೆಸುವ ದಿಟ್ಟ ಮಹಿಳೆ: ಶಾಲಾ ಮಕ್ಕಳಿಗೆ ಇವರೇ ನಾವಿಕೆ
ಕಡಲಿನಲ್ಲಿ ಮೀನುಗಾರಿಕೆ ವೇಳೆ ನೂರೆಂಟು ಅಪಾಯಗಳು ಎದರುಗಾತ್ತವೆ. ಯಾವುದೇ ಅನಾಹುತ ಆಗದೆ ಉತ್ತಮ ಮೀನುಗಾರಿಕೆ ಆಗಲಿ ಅಂತ ಸಮುದ್ರ ರಾಜನಲ್ಲಿ ಪ್ರಾರ್ಥಿಸಲಾಯಿತು. ಇಂದಿನಿಂದ ಕಡಲು ಮಕ್ಕಳು ಆಳಸಮುದ್ರದಲ್ಲಿ ಮತ್ಸ್ಯ ಬೇಟೆಗೆ ಇಳಿದಿದ್ದಾರೆ.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Sat, 9 August 25