ಸಂಘದ ಸಾಲ ತೀರಿಸಲು 20 ದಿನದ ಮಗುವನ್ನು ಮಾರಾಟ ಮಾಡಿದ ದಂಪತಿ
ಉತ್ತರ ಕನ್ನಡದ ದಾಂಡೇಲಿಯಲ್ಲಿ ಮನಲಕುವ ಘಟನೆ ನಡೆದಿದೆ. ಸಾಲದ ಸುಳಿಗೆ ಸಿಲುಕಿದ ದಂಪತಿ ತಮ್ಮ 20 ದಿನದ ಮಗುವನ್ನು 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಪೊಲೀಸರು ಬೆಳಗಾವಿಯಲ್ಲಿ ಮಗುವನ್ನು ಖರೀದಿಸಿದವರನ್ನು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ. ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರವಾರ, ಜುಲೈ 11: ಸಂಘದ ಸಾಲ ತೀರಿಸಲು ದಂಪತಿ 20 ದಿನದ ಮಗುವನ್ನು ಮಾರಾಟ ಮಾಡಿರುವ ಘಟನೆ ಉತ್ತರ ಕನ್ನಡ (Uttar Kannada) ಜಿಲ್ಲೆಯ ದಾಂಡೇಲಿ (Dandeli) ತಾಲೂಕಿನ ಹಳೇ ದಾಂಡೇಲಿಯ ದೇಶಪಾಂಡೆ ನಗರದಲ್ಲಿ ನಡೆದಿದೆ. ಮಗು ಖರೀದಿಸಿದ ಬೆಳಗಾವಿಯ ಆನಗೋಳದ ನಿವಾಸಿಗಳಾದ ನೂರ್ ಮಹಮ್ಮದ್ ಅಬ್ದುಲ್ ಮಜೀದ್ (47), ಕಿಶನ್ ಐರೇಕರ (42) ಮಗು ಖರೀದಿಸಿದವರು.
ಹಳೇ ದಾಂಡೇಲಿಯ ದೇಶಪಾಂಡೆ ನಗರದ ನಿವಾಸಿಯಾದ ಮಾಹೀನ್ ಎಂಬುವರು ಜೂನ್ 17 ರಂದು ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ತಂದೆ ವಸೀಂ ಚಂಡು ಪಟೇಲ್ ಮೈತುಂಬಾ ಸಾಲ ಮಾಡಿಕೊಂಡಿದ್ದರು. ಸಂಘದ ಸಾಲಗಾರರು ಸಾಲದ ಹಣವನ್ನು ವಾಪಸ್ ಕೊಡುವಂತೆ ಬೆನ್ನು ಬಿದ್ದಿದ್ದರು. ಸಾಲಗಾರರ ಕಾಟಕ್ಕೆ ರೋಸಿ ಹೋದ ವಸೀಂ ಚಂಡು ಪಟೇಲ್ ಮತ್ತು ಮಾಹೀನ್ ದಂಪತಿ 20 ದಿನದ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿದರು.
ಜುಲೈ 8ರಂದು ಧಾರವಾಡಕ್ಕೆ ಹೋಗಿ, ಬೆಳಗಾವಿಯ ನೂರ್ ಅಹಮ್ಮದ್ ಎಂಬಾತನಿಗೆ 3 ಲಕ್ಷ ರೂ.ಗೆ ಮಗುವನ್ನು ಮಾರಾಟ ಮಾಡಿದ್ದರು. ಮಾಹೀನ್ ಮನೆಯಲ್ಲಿ ಮಗು ಕಾಣದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಮಹಾದೇವ ಪಾವಸ್ಥರ ಅವರು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಂಗನವಾಡಿ ಕಾರ್ಯಕರ್ತೆಯ ದೂರಿನ ಹಿನ್ನೆಲೆಯಲ್ಲಿ ಪಿಎಸ್ಐ ಅಮೀನಸಾಬ ಅತ್ತಾರ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದರು.
ಇದನ್ನೂ ಓದಿ: ಲಂಚ ಪಡೆಯುವಾಗ ಸಿಕ್ಕಿಬಿದ್ದ ಸರ್ಜನ್: ವೈದ್ಯನ ಕಿರುಕಳಕ್ಕೆ ಪತ್ನಿ ತಾಳಿ ಅಡವಿಟ್ಟಿದ್ದ ಗುತ್ತಿಗೆದಾರ!
ಉತ್ತರ ಕನ್ನಡ ಪೊಲೀಸರು ಬೆಳಗಾವಿಗೆ ತೆರಳಿ ಮಗುವನ್ನು ಖರೀದಿಸಿದ್ದ ನೂರ್ ಮಹಮ್ಮದ್ ಅಬ್ದುಲ್ ಮಜೀದ್ ಮತ್ತು ಕಿಶನ್ ಐರೇಕರ್ನನ್ನು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ. ದಾಂಡೇಲಿ ಪೊಲೀಸ್ ಶಿರಸಿ ಮಕ್ಕಳ ಕಲ್ಯಾಣ ಸಮಿತಿಗೆ ಮಗುವನ್ನು ಹಸ್ತಾಂತರಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:23 pm, Fri, 11 July 25



