AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ, ಮಂಗಳೂರು ಆಯ್ತು ಈಗ ಭಟ್ಕಳದ ತಹಶೀಲ್ದಾರ್ ಕಚೇರಿಗೂ ಬಾಂಬ್ ಬೆದರಿಕೆ!

ಕರ್ನಾಟಕದಲ್ಲಿ ಸರ್ಕಾರಿ ಕಚೇರಿಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಹೆಚ್ಚಾಗಿವೆ. ಕೆಲ ದಿನಗಳಿಂದ ಮಂಗಳೂರು, ಗದಗ ಹಾಗೂ ಕೋಲಾರದ ಜಿಲ್ಲಾಧಿಕಾರಿ ಕಚೇರಿಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದವು. ಇದೀಗ ಭಟ್ಕಳ ತಹಶೀಲ್ದಾರ್ ಮತ್ತು ತುಮಕೂರು ಜಿಲ್ಲಾಧಿಕಾರಿ ಕಚೇರಿಗಳೂ ಬೆದರಿಕೆಗಳನ್ನು ಸ್ವೀಕರಿಸಿವೆ. ನಿರಂತರವಾಗಿ ಇಂತಹ ಸಂದೇಶಗಳು ಜನರಲ್ಲಿ ಆತಂಕ ಮೂಡಿಸುತ್ತಿವೆ.

ಗದಗ, ಮಂಗಳೂರು ಆಯ್ತು ಈಗ ಭಟ್ಕಳದ ತಹಶೀಲ್ದಾರ್ ಕಚೇರಿಗೂ ಬಾಂಬ್ ಬೆದರಿಕೆ!
ಗದಗ ಆಯ್ತು, ಮಂಗಳೂರು ಆಯ್ತು ಈಗ ಭಟ್ಕಳದ ತಹಶೀಲ್ದಾರ್ ಕಚೇರಿಗೂ ಬಾಂಬ್ ಬೆದರಿಕೆ!
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: Dec 16, 2025 | 12:33 PM

Share

ಉತ್ತರ ಕನ್ನಡ, ಡಿಸೆಂಬರ್ 19: ಇತ್ತೀಚೆಗೆ ಸರ್ಕಾರಿ ಕಚೇರಿ ಸೇರಿ ಹಲವು ಕಡೆ ಬಾಂಬ್ ಬೆದರಿಕೆಗಳು (Bomb Threats) ಕೇಳಿಬರುತ್ತಿವೆ. ಬೆದರಿಕೆ ಹುಸಿಯಾಗಿರಲಿ ಇಲ್ಲವೇ ಸತ್ಯವಾಗಿರಲಿ ಜನರಲ್ಲಿ ಇದರಿಂದ ಕಳವಳ ಉಂಟಾಗುವುದಂತೂ ಸತ್ಯ. ಹೀಗಿರುವಾಗ ಉತ್ತರ ಕನ್ನಡದ ಭಟ್ಕಳ ತಹಶೀಲ್ದಾರ್ ಕಚೇರಿ ಹಾಗೂ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಸ್ಫೋಟದ ಬೆದರಿಕೆ ಬಂದಿರುವುದು ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ನಿನ್ನೆಯಷ್ಟೇ (ಡಿ.15) ಗದಗ, ಮಂಗಳೂರಿನ ಸರ್ಕಾರಿ ಕಚೇರಿಗಳಲ್ಲಿಯೂ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆಗಳು ಬಂದಿದ್ದವು. ಇದೀಗ ಮತ್ತೊಮ್ಮೆ ಇಂತಹದ್ದೇ ಇ-ಮೇಲ್ ಬಂದಿರುವುದು ಕಳವಳಕಾರಿಯಾಗಿದೆ.

ಎಲ್ಲರನ್ನೂ ತಕ್ಷಣ ಕಚೇರಿಯಿಂದ ತೆರವುಗೊಳಿಸಿ ಎಂದು ಇ-ಮೇಲ್

ಭಟ್ಕಳ ತಹಶೀಲ್ದಾರ್ ಕಚೇರಿಗೆ ಬೆಳಿಗ್ಗೆ 7.25ರ ಸುಮಾರಿಗೆ “ಗೈನಾ ರಮೇಶ್@ಔಟ್‌ಲುಕ್ ಡಾಟ್ ಕಾಂ” ಎಂಬ ಇ-ಮೇಲ್ ಐಡಿಯಿಂದ ಬೆದರಿಕೆಯ ಸಂದೇಶ ರವಾನೆಯಾಗಿದ್ದು, ಕಚೇರಿಯಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಲಾಗಿದೆ. “ಎಲ್ಲರನ್ನೂ ತಕ್ಷಣ ತಹಶೀಲ್ದಾರ್ ಕಚೇರಿಯಿಂದ ತೆರವುಗೊಳಿಸಿ” ಎಂಬ ಹೆಡ್ಡಿಂಗ್‌ನೊಂದಿಗೆ ಕನ್ನಡದಲ್ಲಿ ಸಂದೇಶ ಕಳುಹಿಸಲಾಗಿದೆ.

ಇ-ಮೇಲ್ ಬಾಡಿಯಲ್ಲಿ , ಪ್ರಶಾಂತ್ ಕಿಶೋರ್ ಹಾಗೂ ಸುನೀಲ್ ಕನುಗೋಲು ಮುಂತಾದವರ ಸೂಚನೆಯಂತೆ ತಮಿಳುನಾಡಿನ ಡಿಎಂಕೆ ಸರಕಾರ 2001ರಲ್ಲಿ ಮಾಧ್ಯಮವನ್ನು ಬುಡಮೇಲು ಮಾಡಲು ಯತ್ನಿಸಿತ್ತು. ಇದು ಹತೋಟಿ ತಪ್ಪಿದಾಗ ರಾಧಾಕೃಷ್ಣನ್ ಐಪಿಎಸ್ ಹಾಗೂ ಜಾಫರ್ ಸೇಟ್ ಮೂಲಕ ಗೆಲಿಲಿಯೋ ಆ್ಯಪ್ ಮೂಲಕ ಕನ್ನಡದವರ ಮೇಲೆ ಗೂಡಾಚಾರಿಕೆ ಮಾಡಿದರು. ಡಿಎಂಕೆ ಉದಯನಿಧಿಯ ಉದ್ದೇಶ ಹಣಗಳಿಸುವುದಕ್ಕಿಂತ ಹೆಚ್ಚಿನದ್ದೇ ಇದೆ ಎಂದು ತಲೆಬುಡವಿಲ್ಲದ ಆರೋಪಗಳನ್ನು ಮಾಡಲಾಗಿದೆ.

ಕಚೇರಿ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್

ಇ-ಮೇಲ್​ನಲ್ಲಿ ಅನಾಥಾಶ್ರಮಗಳ ಬಾಲಕಿಯರ ದುರುಪಯೋಗ ಸೇರಿದಂತೆ ಹಲವು ಅಸಂಬದ್ಧ ವಿಷಯಗಳನ್ನು ಉಲ್ಲೇಖಿಸಲಾಗಿದ್ದು, ಈ ಬೆದರಿಕೆಯೊಂದಿಗೆ ಸಮಾಜದೊಳಗೆ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಹಿನ್ನೆಲೆ ಭಟ್ಕಳ ತಹಶೀಲ್ದಾರ್ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ಸಂಪೂರ್ಣ ತಪಾಸಣೆ ನಡೆಸಲಾಗಿದೆ.

ಇದನ್ನೂ ಓದಿ 13 ವರ್ಷದ ಬಾಲಕಿಯಿಂದ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ: ಕಾರಣ ಕೇಳಿ ಶಾಕ್ ಆದ ಅಧಿಕಾರಿಗಳು!

ತುಮಕೂರಿನ ಡಿಸಿ ಕಚೇರಿಗೂ ಬೆದರಿಕೆ ಇ-ಮೇಲ್

ಇದೇ ವೇಳೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರ ಅಧಿಕೃತ ಇ-ಮೇಲ್ ಐಡಿಗೂ ಬೆಳಿಗ್ಗೆ 7 ಗಂಟೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ತಕ್ಷಣ ಪೊಲೀಸರು ಡಿಸಿ ಕಚೇರಿಗೆ ಧಾವಿಸಿ ಒಳಭಾಗದಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ. ಸದ್ಯ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

ಒಂದೇ ವಾರದಲ್ಲಿ ಹಲವೆಡೆ ಬಾಂಬ್ ಥ್ರೆಟ್ಸ್

ಡಿ.12ರಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಂದ ಬಾಂಬ್ ಬೆದರಿಕೆ ಇಮೇಲ್ ಕೆಲಕಾಲ ಆತಂಕ ಸೃಷ್ಟಿಸಿತ್ತು. ಜಿಲ್ಲಾಡಳಿತ ಹಾಗೂ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಶೋಧ ನಡೆಸಿದ್ದು, ತಮಿಳುನಾಡಿನ 13 ವರ್ಷದ ಬಾಲಕಿಯಿಂದ ಬಂದ ಹುಸಿ ಬೆದರಿಕೆ ಎಂದು ತಿಳಿದುಬಂದಿತ್ತು. ನಿನ್ನೆಯಷ್ಟೆ ಗದಗ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಡಿಸಿ ಕಚೇರಿಗೆ ಬಾಂಬ್​​ ಬೆದರಿಕೆ ಹಾಕಲಾಗಿದ್ದು, ಪಾಕ್​ನ ಐಎಸ್​​ಐ ಮತ್ತು ಎಲ್​​​ಟಿಟಿಇ ಕಾರ್ಯಕರ್ತರ ಜೊತೆ ಸೇರಿ 5 ಬಾಂಬ್​ಗಳಿಂದ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಕಿಡಿಗೇಡಿಗಳು ಧಮ್ಕಿ ಹಾಕಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.