
ಕಾರವಾರ, ಏಪ್ರಿಲ್ 20: ದುಷ್ಕರ್ಮಿಗಳು ಚಾಕುವಿನಿಂದ ಇರಿದು ನಗರಸಭೆ ಮಾಜಿ ಸದಸ್ಯನನ್ನು ಕೊಲೆ (kill) ಮಾಡಿ ಪರಾರಿ ಆಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಿಎಸ್ಎನ್ಎಲ್ ಕಚೇರಿ ಬಳಿ ನಡೆದಿದೆ. ಸತೀಶ್ ಕೋಳಂಕರ್ ಕೊಲೆಯಾದ ನಗರಸಭೆ ಮಾಜಿ ಸದಸ್ಯ (Council Member). ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಚಾಕು ಇರಿಯಲಾಗಿದ್ದು, ತಕ್ಷಣ ಸತೀಶ್ರನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವೈಯಕ್ತಿಕ ದ್ವೇಷಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಘಟನೆ ಬಗ್ಗೆ ಎಸ್.ಪಿ ಎಂ ನಾರಾಯಣ್ ಮಾಧ್ಯಮದವರೊಂದಿಗೆ ಮಾತನಾಡಿ, ಕೊಲೆಯಾದ ವ್ಯಕ್ತಿ ಒಬ್ಬ ರೌಡಿ ಶೀಟರ್ ಆಗಿದ್ದ. ಮಾಜಿ ನಗರಸಭಾ ಸದಸ್ಯ ಕೂಡ ಹೌದು. ಈತನ ಮೇಲೆ 9ಕ್ಕೂ ಹೆಚ್ಚು ಪ್ರಕರಣಗಳಿವೆ. ಸತೀಶ್ ಕೊಳಂಕರ್ ಕಾರವಾರ ತಾಲೂಕಿನ ಚಿತ್ತಾಕುಲ ನಿವಾಸಿ. ಬೆಳಗಿನ ಜಾವ ವಾಯು ವಿಹಾರಕ್ಕೆ ಬಂದಾಗ ಚಾಕುವಿನಿಂದ ಇರಿಯಲಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವು ಆಗಿದೆ ಎಂದಿದ್ದಾರೆ.
ಇದನ್ನೂ ಓದಿ: ಕಪ್ಪಗಿದ್ದೀಯಾ ಅಂತ ಅತ್ತೆ, ಭಾವನಿಂದ ಸೂಸೆಗೆ ಕಿರುಕುಳ: ಮನನೊಂದು ನವವಿವಾಹಿತೆ ಆತ್ಮಹತ್ಯೆ
ವೈಯಕ್ತಿಕ ಕಾರಣಕ್ಕೆ ಈತನ ಹತ್ಯೆಯಾಗಿದೆ. ಈತನಿಗೆ ಎರಡು ಲಕ್ಷ ಹಣವನ್ನು ಸಾಲ ನೀಡಿದ್ದ ವ್ಯಕ್ತಿಗಳು ಮರಳಿ ಕೇಳಿದರೂ ನೀಡಿರಲಿಲ್ಲ. ಕೆಲವು ದಿನದ ಹಿಂದೆ ಕಾರವಾರದ ಪ್ರೀಮಿಯರ್ ಹೋಟೆಲ್ನಲ್ಲಿ ಹಣ ವಾಪಾಸ್ ಕೊಡುವಂತೆ ಗಲಾಟೆ ಆಗಿದೆ. ಇಂದು ಬೆಳಗ್ಗೆ ಹಣ ವಾಪಾಸ್ ಕೇಳಿದ್ದಾರೆ, ಈ ವಿಷಯಕ್ಕೆ ಕಿರಿಕ್ ಆಗಿ ಗಲಾಟೆ ವಿಕೋಪಕ್ಕೆ ಹೋಗಿ ಹತ್ಯೆಯಾಗಿದೆ. ಆರೋಪಿಗಳ ಮಾಹಿತಿ ದೊರೆತಿದ್ದು, ಶೀಘ್ರದಲ್ಲಿ ಬಂಧಿಸುತ್ತೇವೆ. ಕಾರವಾರದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದೆ. ಇದು ಒಂದು ವೈಯಕ್ತಿಕ ಮತ್ತು ಸಾಲದ ವ್ಯವಹಾರಕ್ಕೆ ಆದ ಕೊಲೆ ಎಂದು ಹೇಳಿದ್ದಾರೆ.
ಕೊಲೆಯಾದ ವ್ಯಕ್ತಿಯ ಮಗಳು ಪೂರ್ಣಿಮಾ ಪ್ರತಿಕ್ರಿಯಿಸಿದ್ದು, ನಿತೇಶ್ ತಾಂಡೆಲ್ ಹಾಗೂ ದರ್ಶನ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ. ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದಿದ್ದಾರೆ. ಕಳೆದ 10 ದಿನಗಳ ಹಿಂದೆ ಕಾರವಾರದ ಪ್ರಿಮಿಯರ್ ಹೋಟೆಲ್ನಲ್ಲಿ ನನ್ನ ತಂದೆಯ ಮೇಲೆ ಹಲ್ಲೆ ಆಗಿತ್ತು. ಆ ದಿನ ನಮ್ಮ ತಂದೆಯ ಮುಖ ಪೂರ್ತಿ ಕೆಂಪಗಾಗಿತ್ತು. ಯಾಕೆ, ಏನು ಅಂತ ಕಾರಣ ತಿಳಿಸದೆ ಹತ್ತಾರು ಜನ ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಅವರು ಹೇಳಿದ್ದರು.
ಇದನ್ನೂ ಓದಿ: Gun Firing on Rikki Rai: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್: ಮೂಗು, ಕೈಗೆ ತಾಕಿದ ಗುಂಡು
ಇಂದು ಬೆಳಿಗ್ಗೆ ಸ್ನಾನ ಮಾಡಿ ವಾಯು ವಿಹಾರಕ್ಕೆ ಹೊಗಿದ್ದರು. ಆ ಸಂದರ್ಭದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ನಿತೇಶ್ ಎಂಬ ವ್ಯಕ್ತಿಯೇ ಕೊಲೆ ಮಾಡಿದ್ದು ಅದರಲ್ಲಿ ಸಂಶಯವೇ ಬೇಡ. ನನ್ನ ತಂದೆ ಮಾಜಿ ನಗರಸಭೆ ಸದಸ್ಯರಾಗಿದ್ದು, ಸಿವಿಲ್ ಗುತ್ತಿಗೆದಾರರು ಆಗಿದ್ದರು. ನಿತೇಶ್ ಯಾರೂ ಎಂಬುವುದು ನನಗೆ ಪೂರ್ಣ ಮಾಹಿತಿ ಇಲ್ಲ. ನನ್ನ ಮಾಹಿತಿ ಪ್ರಕಾರ ನಿತೇಶ್ ಜೊತೆ ಯಾವುದೇ ವ್ಯವಹಾರ ಇರಲಿಲ್ಲ. ಆದರೆ ಕ್ಷುಲ್ಲಕ ಕಾರಣಕ್ಕೆ ಕೊಲೆ ಆಗಿರುವ ಶಂಕೆ ಇದೆ ಎಂದಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.