ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಿರೋಧ, 1 ಪೀಠಕ್ಕೆ ಮೂರು ಜಿಲ್ಲೆ ನಡುವೆ ಹಗ್ಗ ಜಗ್ಗಾಟ

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಅನಕೂಲ ಆಗುವ ದೃಷ್ಟಿಯಿಂದ ಮಂಗಳೂರಿನಲ್ಲಿ ಹೈಕೋರ್ಟ್​​ ಪೀಠ ಸ್ಥಾಪನೆಗೆ ನಿರ್ಧರಿಸಲಾಗಿದೆ. ಆದ್ರೆ ಮಂಗಳೂರಿನಲ್ಲಿ ಸ್ಥಾಪನೆಗೆ ವಿರೋಧಗಳು ವ್ಯಕ್ತವಾಗಿವೆ. ಮಂಗಳೂರು ಬಿಟ್ಟು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸ ಪಿಠ ಮಾಡಿ ಇಲ್ಲವಾದಲ್ಲಿ ನಮಗೆ ಈಗ ಇದ್ದಂತೆ ಧಾರವಾಡದಲ್ಲೆ ಮುಂದುವರೆಯಲಿ ಎಂದು ಆಗ್ರಹಿಸಿದ್ದಾರೆ. ಇನ್ನೊಂದೆಡೆ ಶಿವಮೊಗ್ಗದಲ್ಲೇ ಆಗಬೇಕೆಂದು ಜನಾಂದೋಲನ ನಡೆದಿದೆ.

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಿರೋಧ, 1 ಪೀಠಕ್ಕೆ ಮೂರು ಜಿಲ್ಲೆ ನಡುವೆ ಹಗ್ಗ ಜಗ್ಗಾಟ
ಪ್ರಾತಿನಿಧಿಕ ಚಿತ್ರ
Edited By:

Updated on: Jun 05, 2026 | 4:59 PM

ಕಾರವಾರ, (ಜೂನ್ 04): ಸದ್ಯ ಕರ್ನಾಟಕದಲ್ಲಿ (Karnataka) ಕಲಬುರಗಿ ಹಾಗೂ ಧಾರವಾಡ ಹೈಕೋರ್ಟ್​​​ ಪೀಠ (High Court Bench) ಇದ್ದು, ಇದೀಗ ಕರಾವಳಿ (Karavali) ಹಾಗೂ ಮಲೆನಾಡು (malenadu) ಭಾಗದ ಜನರಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಮಂಗಳೂರಿನಲ್ಲಿ ಮತ್ತೊಂದು ಹೈಕೋರ್ಟ್ ಪೀಠ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿದೆ. ಆದ್ರೆ, ಮಂಗಳೂರಿನಲ್ಲಿ ಸ್ಥಾಪನೆ ಮಾಡುವುದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗಿವೆ. ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಜನರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಆಗಬೇಕೆಂದು ಆಗ್ರಹಿಸಿದ್ದಾರೆ. ಹೀಗಾಗಿ ಒಂದು ಪೀಠಕ್ಕೆ ಮೂರು ಜಿಲ್ಲೆಗಳ ನಡುವೆ ಹಗ್ಗ ಜಗ್ಗಾಟ ನಡೆದಿದೆ.

ಧಾರವಾಡವೇ ಹತ್ತಿರ, ಮಂಗಳೂರು ಭೌಗೋಳಿಕವಾಗಿ ದೂರ

ರಾಜ್ಯದಲ್ಲೇ ಭೌಗೋಳಿಕವಾಗಿ ದೊಡ್ಡದಾಗಿರುವ ಉತ್ತರ ಕನ್ನಡ ಜಿಲ್ಲೆ. ಜಿಲ್ಲೆಯಲ್ಲಿ ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಹೋಗುವುದೇ ಭಾರಿ ಕಷ್ಟ. ಹೀಗಿರುವಾಗ ಆರೋಗ್ಯ , ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಇಲ್ಲಿನ ಜನ ಬೇರೆ ಜಿಲ್ಲೆಯನ್ನೆ ಅವಲಂಬಿಸಿದ್ದಾರೆ. ಪ್ರಮುಖವಾಗಿ ಐದು ಜಿಲ್ಲೆಗಳಿಗೆ ಹೊಂದಿಕೊಂಡಿರುವುದರಿಂದ ಆಯಾ ತಾಲೂಕಿನವರು ಸಮಿಪದ ಜಿಲ್ಲೆಗಳನ್ನೆ ಹೆಚ್ಚಾಗಿ ಅವಲಂಬಿಸಿದ್ದಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪೀಠ ಆಗಬೇಕೆಂದು ಕಾರವಾರ ವಕೀಲರ ಸಂಘ ಆಗ್ರಹಿಸಿದೆ.

ಇದನ್ನೂ ಓದಿ: ಇಂದಿನಿಂದ ಜೂನ್ 11 ರವರೆಗೆ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ವರುಣನ ಅಬ್ಬರ: ಮೀನುಗಾರರಿಗೆ, ಪ್ರವಾಸಿಗರಿಗೆ ಬಿಗ್​​​ ಅಲರ್ಟ್

ಉತ್ತರ ಕನ್ನಡ ಜಿಲ್ಲೆಯಲ್ಲಿ 11 ಬಾರ್ ಅಸೋಷಿಯೇಷನ್ ಇದ್ದು ,ಉಡುಪಿ 4 , ಮಂಗಳೂರಿನಲ್ಲಿ 6 ಬಾರ್ ಅಸೋಷಿಯನ್ ಇದೆ. ಇನ್ನೂ ಹೈಕೋರ್ಟ್ ನಲ್ಲಿರುವ ಕೇಸ್ ಗಳ ಪ್ರಮಾಣದಲ್ಲೂ ಉತ್ತರ ಕನ್ನಡ ಜಿಲ್ಲೆಯ ಪ್ರಕರಣಗಳು ಹೆಚ್ಚಿಗೆ ಇವೆ. ಹೀಗಾಗಿ ಮಂಗಳೂರಿನಲ್ಲಿ ಸ್ಥಾಫನೆ ಮಾಡುವುದರ ಬದಲು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸ್ಥಾಫನೆ ಮಾಡಿದ್ರೆ ಶಿವಮೊಗ್ಗ ಸೇರಿದಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೂ ಅನಕೂಲ ಆಗುತ್ತದೆ. ಒಂದು ವೇಳೆ ಮಾಡುವುದಕ್ಕೆ ಆಗದೆ ಇದ್ರೆ ಈ ಹಿಂದಿನಂತೆ ಉತ್ತರ ಕನ್ನಡ ಜಿಲ್ಲೆ ಧಾರವಾಡ ಪಿಠದಲ್ಲಿಯೇ ಮುಂದುವರೆಯಲಿ ಎಂದಿದ್ದಾರೆ.

ಮಂಗಳೂರಿನಲ್ಲೇ ಪೀಠ ಸ್ಥಾಪನೆ ಮಾಡಲು ಹೊರಟಿದ್ಯಾಕೆ?

ಕರಾವಳಿಯ ಮಂಗಳೂರು ಮತ್ತು ಉಡುಪಿ ಜಿಲ್ಲೆ ಬೆಂಗಳೂರಿನ ಹೈಕೋರ್ಟ್​​ ಪಿಠದಡಿಯಲ್ಲಿ ಇದ್ದರೇ, ಉತ್ತರ ಕನ್ನಡ ಜಿಲ್ಲೆ ಮಾತ್ರ ಧಾರವಾಡ ಹೈಕೋರ್ಟ್​ ಪೀಠದಡಿ ಬರುತ್ತದೆ. ಹೀಗಾಗಿ ಕರಾವಳಿ ಜಿಲ್ಲೆಗೆ ಪ್ರತ್ಯೇಕ ಹೈಕೋರ್ಟ ಪೀಠ ಬೇಕೆಂದು ಮಂಗಳೂರಿನಲ್ಲಿ ಹೋರಾಟ ಪ್ರಾರಂಭವಾಯಿತು. ಇದರ ಪ್ರತಿಫಲವಾಗಿ ಇದೀಗ ರಾಜ್ಯ ಸರ್ಕಾರ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒಲವು ತೋರಿದ್ದು, ಮಂಗಳೂರಿನಲ್ಲಿ ಹೈ ಕೋರ್ಟ್ ಪಿಠಕ್ಕೆ ಸಕಲ ವ್ಯವಸ್ಥೆ ಕಲ್ಪಿಸುವುದಾಗಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಪತ್ರ ಬರೆದಿತ್ತು. ಇದರ ಬೆನ್ನಲ್ಲೇ ಮಂಗಳೂರಿಗೆ ತೆರಳಿ ಸ್ಥಳ ಪರಿಶೀಲನೆ ಹಾಗೂ ಮೂಲಭೂತ ಸೌಕರ್ಯದ ಕುರಿತು ಪರಿಶೀಲನೆ ನಡೆಸಲಾಗಿದೆ. ಆದ್ರೆ ಇದೀಗ ವಿರೋಧ ವ್ಯಕ್ತವಾಗಿದೆ. ಹೈಕೋರ್ಟ್ ಪೀಠ ಸ್ಥಾಪನೆ ಮಾಡುವುದಾದರೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮಾಡಲಿ,ಇದರಿಂದ ಉಡುಪಿ,ಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೂ ಲಾಭವಾಗಲಿದೆ ಎಂಬುವುದು ಉತ್ತರ ಕನ್ನಡ ಜಿಲ್ಲೆಯ ವಕೀಲರ ವಾದ.

ಶಿವಮೊಗ್ಗದಲ್ಲೆ ಪೀಠ ಸ್ಥಾಪನೆಗೆ ಆಗ್ರಹ

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಉತ್ತರ ಕನಡ ಜಿಲ್ಲೆ ಮಾತ್ರವಲ್ಲ ಶಿವಮೊಗ್ಗದವರು ಸಹ ವಿರೋಧ ವ್ಯಕ್ತಪಡಿಸಿದ್ದು, ಶಿವಮೊಗ್ಗದಲ್ಲೇ ಹೈಕೋರ್ಟ್​ ಪೀಠ ಸ್ಥಾಪನೆ ಮಾಡಬೇಕೆಂದು ಜಿಲ್ಲಾ ವಕೀಲರ ಸಂಘ ಆಗ್ರಹಿಸಿದೆ. ಹೀಗಾಗಿ ಒಂದು ಹೈಕೋರ್ಟ್ ಪೀಠಕ್ಕೆ ಮೂರು ಜಿಲ್ಲೆಗಳ ನಡುವೆ ಹಗ್ಗ ಜಗ್ಗಾಟ ನಡೆದಿದೆ.

ಒಟ್ಟಿನಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್​ ಪೀಠ ಸ್ಥಾಪನೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗುತಿದ್ದು ,ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರಿನೊಂದಿಗೆ ಸೇರಿಸಿದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ಜಿಲ್ಲಾ ವಕೀಲರ ಸಂಘ ನೀಡಿದೆ. ಇನ್ನೊಂದೆಡೆ ಶಿವಮೊಗ್ಗದಲ್ಲಿ ಪೀಠ ಆಗಬೇಕೆಂದು ಆಗ್ರಹಗಳು ವ್ಯಕ್ತವಾಗುತ್ತಿದ್ದು, ಸರ್ಕಾರ ಯಾವ ತಿರ್ಮಾನ ಕೈಗೊಳ್ಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:13 pm, Fri, 5 June 26

Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Follow Us