
ಕಾರವಾರ, ಫೆಬ್ರವರಿ 9: ಜ್ಯೋತಿಷಿ ಕಮಲಾಕರ ಭಟ್ (Kamalakara Bhat) ಜತೆ ಅಕ್ರಮ ಸಂಬಂಧಕ್ಕಾಗಿ ಕೊಲೆ ಮಾಡಿಸಿದ ಪ್ರಕರಣದಲ್ಲಿ ಜೈಲುಪಾಲಾಗಿರುವ ಉತ್ತರ ಕನ್ನಡ (Uttara Kannada) ಜಿಲ್ಲೆಯ ಸಿದ್ದಾಪುರ ಮೂಲದ ಸುಚಿತ್ರಾ (Suchitra) ಕುರಿತು ಮತ್ತೊಂದು ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಪಡ್ಡೆ ಹುಡುಗರನ್ನು ಬಲೆಗೆ ಬೀಳಿಸಲು ಸುಚಿತ್ರಾ ಮಾಸ್ಟರ್ ಪ್ಲಾನ್ ರೂಪಿಸಿಕೊಂಡಿದ್ದಳು ಎಂಬುದು ತನಿಖೆಯಲ್ಲಿ ಬಹಿರಂಗವಾಗಿರುವುದು ಮೂಲಗಳಿಂದ ತಿಳಿದುಬಂದಿದೆ. ಮದುವೆ ಪ್ರಮಾಣಪತ್ರದ ಪ್ರಕಾರ ಸುಚಿತ್ರಾಳ ನಿಜವಾದ ಹೆಸರು ಸುರೇಖಾ! ಆದರೆ ಯುವಕರನ್ನು ಸೆಳೆಯಲು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹೆಸರನ್ನೇ ಬದಲಿಸಿ ‘ಸುಚಿತ್ರಾ’ ಎಂದು ಪರಿಚಯಿಸಿಕೊಳ್ಳುತ್ತಿದ್ದಳು ಎಂಬುದು ತಿಳಿದುಬಂದಿದೆ.
‘ಸುರೇಖಾ ಎಂಬಾಕೆ ನನ್ನ ಅಕ್ಕ. ನಾವು ಟ್ವಿನ್ಸ್, ಅಕ್ಕ ಸಾವನ್ನಪ್ಪಿದ ಬಳಿಕ ಮಕ್ಕಳನ್ನು ನಾನು ನೋಡಿಕೊಳ್ಳುತ್ತಿದ್ದೇನೆ, ನನಗೆ ಮದುವೆಯಾಗಿಲ್ಲ’ ಎಂಬ ಕಥೆ ಹೇಳಿ ಹುಡುಗರನ್ನು ಸೆಳೆಯುತ್ತಿದ್ದಳು ಎನ್ನಲಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕವೇ ಪಡ್ಡೆ ಹುಡುಗರನ್ನು ಸಂಪರ್ಕಿಸುವುದು ಸುಚಿತ್ರಾಳ ಮುಖ್ಯ ತಂತ್ರವಾಗಿತ್ತು. ಮೊದಲಿಗೆ ಚೆಂದದ ಯುವಕರ ಫೋಟೋಗಳಿಗೆ ಕಾಮೆಂಟ್ ಮಾಡುವುದು, ನಂತರ ಮೆಸೆಂಜರ್ನಲ್ಲಿ ಸ್ನೇಹ ಬೆಳೆಸುವುದು, ಎರಡು-ಮೂರು ತಿಂಗಳು ಚಾಟಿಂಗ್ ನಡೆಸುತ್ತಾ ಅವರ ವೈಯಕ್ತಿಕ ಹಾಗೂ ಆರ್ಥಿಕ ಹಿನ್ನೆಲೆ ಬಗ್ಗೆ ಮಾಹಿತಿ ಸಂಗ್ರಹಿಸುವುದನ್ನು ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಗರ ಜತೆ ಚಾಟಿಂಗ್ ಮಾಡಿ ಸಲುಗೆ ಬೆಳೆಯುತ್ತಿದ್ದಂತೆಯೇ ‘‘ಭೇಟಿಯಾಗೋಣ’’ ಎಂದು ಕರೆಸಿಕೊಂಡು ಆಪ್ತವಾಗುತ್ತಿದ್ದಳು. ಕೊನೆಗೆ ಆ ಹುಡುಗರನ್ನು ಮನೆಗೆ ಕರೆಯುತ್ತಿದ್ದಳು. ಈ ರೀತಿ ಹಲವರನ್ನು ತನ್ನ ಬಲೆಗೆ ಬೀಳಿಸಲು ಸುಚಿತ್ರಾ ಮಸ್ಟರ್ ಪ್ಲಾನ್ ಮಾಡಿಕೊಂಡಿದ್ದಾಳೆ ಎಂಬುದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಕಮಲಾಕರ್ ಭಟ್ ಮಾತ್ರವಲ್ಲದೆ ಕಲಬುರಗಿಯ ಜಮೀನ್ದಾರನ ಜೊತೆಗೂ ಸುಚಿತ್ರಾ ಲವ್ವಿಡವ್ವಿ ನಡೆದಿತ್ತು ಎಂಬುದು ಭಾನುವಾರ ಬಯಲಾಗಿತ್ತು. ಸುಚಿತ್ರಾ ಮೊಬೈಲ್ ಫೋನ್ ಪರಿಶೀಲನೆಗೆ ಒಳಪಡಿಸಿದ ಪೊಲೀಸರಿಗೆ ಹಲವು ಸ್ಫೋಟಕ ಮಾಹಿತಿಗಳು ತಿಳಿದುಬಂದಿದ್ದವು. ಇದೀಗ ಆಕೆ ಹುಡುಗರನ್ನು ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದುದು ಹೇಗೆ ಎಂಬುದೂ ಬಯಲಾಗಿದೆ.
ಇದನ್ನೂ ಓದಿ: ಕಮಲಾಕರ್ ಭಟ್ ಮಾತ್ರವಲ್ಲ, ಕಲಬುರಗಿಯ ಜಮೀನ್ದಾರನ ಜೊತೆಗೂ ಸುಚಿತ್ರಾ ಲವ್ವಿಡವ್ವಿ
ಸದ್ಯ ಕಮಲಾಕರ ಭಟ್ ಪ್ರಕರಣದ ಹಿನ್ನೆಲೆ ಈಗ ಸುಚಿತ್ರಾ ನಡೆ-ನುಡಿಗಳ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಆಕೆ ಸಂಪರ್ಕದಲ್ಲಿದ್ದವರ ವಿವರಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸ್ಫೋಟಕ ಸಂಗತಿಗಳು ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Published On - 9:07 am, Mon, 9 February 26