
ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಭೀತಿ ಹೆಚ್ಚಾಗಿದ್ದು, ಡೊನಾಲ್ಡ್ ಟ್ರಂಪ್ ಅವರ ಭೀಕರ ದಾಳಿಯ ಬೆದರಿಕೆಗೆ ಇರಾನ್ ಕಠಿಣ ತಿರುಗೇಟು ನೀಡಿದೆ. ಇತ್ತ ಕರ್ನಾಟಕದಲ್ಲಿ ಡೀಸೆಲ್ ದರ ಏರಿಕೆ ಬೆನ್ನಲ್ಲೇ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಟಿಕೆಟ್ ದರವನ್ನು ಶೇಕಡಾ 25 ರಷ್ಟು ಹೆಚ್ಚಿಸಲು ಸಿಎಂಗೆ ಮನವಿ ಮಾಡಲಾಗಿದ್ದು, ಜನಸಾಮಾನ್ಯರಿಗೆ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ಇನ್ನು ಸಿನಿಮಾ ಲೋಕದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಭಾರತ ಮತ್ತು ವಿದೇಶಗಳಲ್ಲಿ ಎರಡು ವಿಭಿನ್ನ ಪ್ರಿಂಟ್ಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ಡಿಕೆ ಶಿವಕುಮಾರ್ ಅವರು ಅಧಿಕಾರ ಹಂಚಿಕೆ ಗುಟ್ಟನ್ನು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಬಿಚ್ಚಿಟ್ಟಿದ್ದಾರೆ. ಹೌದು…ಪರಿಷತ್ ಸದಸ್ಯ ಸಲೀಂ ಅಹ್ಮದ್ಗೆ ಸಚಿವ ಸ್ಥಾನ ನೀಡಬೇಕೆಂದು ದರ್ಗಾಗಳ ಧರ್ಮಗುರುಗಳ ನಿಯೋಗ ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಈ ವೇಳೆ ಅಧಿಕಾರ ಹಂಚಿಕೆ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ನಿಮ್ಮ ಮನವಿ ವರಿಷ್ಠರ ಗಮನಕ್ಕೆ ತರುತ್ತೇನೆ. ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಬಂದಿತ್ತು. ವರಿಷ್ಠರು ನನ್ನನ್ನೇ ಸಿಎಂ ಮಾಡುತ್ತಾರೆ ಅಂದುಕೊಂಡಿದ್ದೆ. ಆದ್ರೆ, ಸಿದ್ದರಾಮಯ್ಯಗೂ ಅವಕಾಶ ಕೊಡೋಣ ಅಂದರು. ಅಲ್ಲದೇ ಅಂದು ಇಬ್ಬರು ಶೇರ್ ಮಾಡಿಕೊಳ್ಳಿ ಎಂದು ಪಕ್ಷ ಹೇಳಿತ್ತು. ಅಂದು ಈ ನಿರ್ಧಾರವಾಗಿತ್ತು, ಅದರ ಬಗ್ಗೆ ಎಲ್ಲೂ ಹೇಳಲಿಲ್ಲ. ಅಧಿಕಾರ ಹಂಚಿಕೆ ವಿಚಾರ 3ರಿಂದ 4 ಜನರಿಗಷ್ಟೇ ಗೊತ್ತಿತ್ತು. ಆದ್ರೆ ಈಗ ಪಕ್ಷ ನನಗೂ ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಪುಟ ಉಪಸಮಿತಿ ಸಭೆ ಮುಕ್ತಾಯವಾಗಿದ್ದು, ಭಾರತ್ ಜೋಡೋ ಯುವ ಕ್ಲಬ್ ರಚನೆ ಕುರಿತು ಚರ್ಚೆ ಮಾಡಲಾಗಿದೆ. ಭಾರತ್ ಜೋಡೋ ಯುವ ಕ್ಲಬ್ ಯಾವ ರೀತಿ ಇರಬೇಕು? ಎಷ್ಟು ಸದಸ್ಯರು ಇರಬೇಕು, ಎಲ್ಲಿ ನಡೆಸಬೇಕು ಎಂದು ಚರ್ಚಿಸಿದ್ದು, ಈ ಬಗ್ಗೆ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಜ್ಯುವೆಲ್ಲರಿ ಶಾಪ್ ಮಾಲೀಕ ಗುಂಡಿನ ದಾಳಿ ನಡೆಸಿರುವ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ. ಜೀರಿಗೆವಾಡ ಗ್ರಾಮದ ನಿಂಗಪ್ಪ ಹೊರಕೇರಿ, ಸಿದ್ದಪ್ಪ ನಿಂಗಪ್ಪ ಎನ್ನುವ ತಂದೆ-ಮಗನ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ. ಗಿರವಿ ಇಟ್ಟಿದ್ದ ಚಿನ್ನ ಮರಳಿ ಪಡೆಯುವ ವಿಚಾರಕ್ಕೆ ಫೈರಿಂಗ್ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪೊಲಿಸರು ತನಿಖೆ ನಡೆಸಿದ್ದಾರೆ.
ಉತ್ತರ ಪ್ರದೇಶ ರಾಜಧಾನಿ ಲಖನೌ ನಗರದಲ್ಲಿ ಸಂಭವಿಸಿರುವ ಭೀಕರ ಅಗ್ನಿ ಅವಘಡದಲ್ಲಿ 14 ಯುವಕರು ಸಜೀವ ದಹನವಾಗಿದ್ದಾರೆ. ಗೇಮಿಂಗ್ ಸೆಂಟರ್, ಕೋಚಿಂಗ್ ಸೆಂಟರ್ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಒಳಗೆ ಇದ್ದ ಯುವಕರು ಸುಟ್ಟು ಕರಕಲಾಗಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ದೌಡಾಯಿಸಿದ್ದಾರೆ. ಮತ್ತಷ್ಟು ಓದಿ
ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕ ಅಡ್ಡಮತದಾನ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ಹೈಕಮಾಂಡ್ ರಾಜ್ಯ ನಾಯಕರಿಗೆ ಬುಲಾವ್ ನೀಡಿದೆ. ಹೀಗಾಗಿ ಇಂದು (ಜೂನ್ 22) ಬೆಳಗ್ಗೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ದೆಹಲಿಗೆ ಹಾರಿದ್ದಾರೆ. ಇದರ ಬೆನ್ನಲ್ಲೇ ಈಗ ವಿಪಕ್ಷ ನಾಯಕ ಆರ್. ಅಶೋಕ್ ದೆಹಲಿಗೆ ತೆರಳಿದ್ದು, ನಾಳೆ (ಜೂನ್ 23) ಮಧ್ಯಾಹ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ ವಿಧಾನ ಪರಿಷತ್ ಚುನಾವಣೆಯಲ್ಲಿನ ಅಡ್ಡ ಮತದಾನದ ಕುರಿತು ಚರ್ಚಿಸಲಿದ್ದಾರೆ.
ಕೇಂದ್ರ ಸರ್ಕಾರದ ಮಾದರಿಯಂತೆ ರಾಜ್ಯ ಸರ್ಕಾರ ಸಹ 40 ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಆರೋಗ್ಯ ಭಾಗ್ಯ ಒದಗಿಸಿದೆ. ಆರೋಗ್ಯ ಇಲಾಖೆಯಿಂದ ಆರೋಗ್ಯ ಸಂಜೀವಿನಿ ಅಡಿಯಲ್ಲಿ ನೌಕರರಿಗೆ ಆರೋಗ್ಯ ತಪಾಸಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಮಧುಮೇಹ, ರಕ್ತದೊತ್ತಡ ಹಾಗೂ ಕಾಯಿಲೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬಿಪಿ, ಶುಗರ್, ಇಸಿಜಿ, ಮೆಮೋಗ್ರಫಿ, ಇಎನ್ಟಿ ತಪಾಸಣೆಗೆ ನಿರ್ಧರಿಸಲಾಗಿದೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದ ಬಳಿಕ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದಾರೆ. ಹೌದು…5 ದಿನಗಳ ನೇಚರ್ ಥೆರಪಿಗೆಂದು ಸಿದ್ದರಾಮಯ್ಯ ಆ್ಯಂಡ್ ಟೀಮ್ ನಿನ್ನೆ (ಜೂನ್ 21) ರಾತ್ರಿಯೇ ಕೇರಳಕ್ಕೆ ತೆರಳಿದೆ. ಸಿದ್ದರಾಮಯ್ಯ ಜೊತೆ ಶಾಸಕರಾದ ಡಾ.ಹೆಚ್.ಸಿ.ಮಹದೇವಪ್ಪ, ಪೊನ್ನಣ್ಣ, ಕೆ.ವೆಂಕಟೇಶ್, ಹಂಪನಗೌಡ ಬಾದರ್ಲಿ ಹಾಗೂ ಸಚಿವ ಕೆ.ಜೆ.ಜಾರ್ಜ್ ಸಹ ತೆರಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸಿಎಂ ಡಿಕ ಶಿವಕುಮಾರ್ ಅವರು ಮತ್ತೆ ದೆಹಲಿಗೆ ತೆರಳಲಿದ್ದಾರೆ. ಜೂನ್ 27ರ ನಂತರ ದೆಹಲಿಗೆ ತೆರಳಿ ಯಾರನ್ನು ಸಂಪುಟಕ್ಕೆ ಸೇರಿಸಬೇಕು ಎಂಬ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡಲಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಕೃಷ್ಣಭೈರೇಗೌಡ ಅವರು ಅಲರ್ಟ್ ಆಗಿದ್ದು, ಅಧಿಕಾರಿಗಳ ಸಭೆ ಮೇಲೆ ಸಭೆ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮೊನ್ನೇ ಅಷ್ಟೇ ಜಿಬಿಎ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ರಸ್ತೆ ಗುಂಡಿಗಳ ಬಗ್ಗೆ ಗರಂ ಆಗಿದ್ದರು. ಇಂದು (ಜೂನ್ 22) ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್(ಬಿ-ಸ್ಮೈಲ್) ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲಿವೇಟೆಡ್ ಕಾರಿಡಾರ್ ಆಗುತ್ತೆ, ಫ್ಲೈಓವರ್ ಬರುತ್ತೆ ಅಂತಾ ಗೊತ್ತಿದ್ದರೂ ವೈಟ್ ಟ್ಯಾಪಿಂಗ್ ಮಾಡೋದೇಕೆ, ಆಮೇಲೆ ಫ್ಲೈಓವರ್ ಕಾರಣಕ್ಕೆ ಮತ್ತೆ ವೈಟ್ ಟ್ಯಾಪಿಂಗ್ ಕಿತ್ತಾಕೋದು ಯಾರಿಗೆ ಬಿಲ್ ಮಾಡೋಕೆ? ಎಂದು ಸಿಡಿಮಿಡಿಗೊಂಡಿದ್ದಾರೆ.
ನಟಿ ಸಮಂತಾ ರುತ್ ಪ್ರಭು ತಾಯಿಯಾಗುತ್ತಿರುವುದು ಖಚಿತವಾಗಿದೆ. ಅವರ ಇತ್ತೀಚಿನ ಚಿತ್ರ ‘ಮಾ ಇಂಟಿ ಬಂಗಾರಂ’ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕಿ ನಂದಿನಿ ರೆಡ್ಡಿ ಈ ಶುಭ ಸುದ್ದಿಯನ್ನು ದೃಢಪಡಿಸಿದ್ದಾರೆ. ನಾಗ ಚೈತನ್ಯ ಅವರಿಂದ ವಿಚ್ಛೇದನದ ಬಳಿಕ ರಾಜ್ ನಿಧಿಮೋರು ಅವರನ್ನು ಮದುವೆಯಾಗಿದ್ದ ಸಮಂತಾ ಅವರ ಈ ಹೊಸ ಇನ್ನಿಂಗ್ಸ್ಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಮತ್ತಷ್ಟು ಓದಿ
ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳ ವಿವಿಧ ದರ್ಗಾಗಳ ಧರ್ಮಗುರುಗಳ ನಿಯೋಗವು ಬೆಂಗಳೂರಿನ ಶಿವಾನಂದ್ ಸರ್ಕಲ್ ಬಳಿಯ ಸರ್ಕಾರಿ ನಿವಾಸದಲ್ಲಿ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿತು. ಇದೇ ವೇಳೆ, ಮುಖಂಡರಾದ ಎಂಎಲ್ಸಿ ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ನಿಯೋಗವು ಸಿಎಂಗೆ ಅಧಿಕೃತವಾಗಿ ಮನವಿ ಸಲ್ಲಿಸಿದೆ.
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ತಮ್ಮ ಹುದ್ದೆಗೆ ಹಾಗೂ ಲೇಬರ್ ಪಾರ್ಟಿಯ ಮುಖ್ಯಸ್ಥರ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. 2024ರ ಜುಲೈ 5 ರಿಂದ ಅಧಿಕಾರದಲ್ಲಿದ್ದ ಅವರು, ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಪಕ್ಷದ 100ಕ್ಕೂ ಹೆಚ್ಚು ಸಂಸದರಿಂದ ತೀವ್ರ ಒತ್ತಡ ಎದುರಿಸುತ್ತಿದ್ದರು. ಇವರ ರಾಜೀನಾಮೆಯೊಂದಿಗೆ, ಕಳೆದ 10 ವರ್ಷಗಳಲ್ಲಿ ಬ್ರಿಟನ್ 6 ಪ್ರಧಾನಿಗಳ ರಾಜೀನಾಮೆಗೆ ಸಾಕ್ಷಿಯಾದಂತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ‘ಅನುಗ್ರಹ ಕೆಮಿಕಲ್ ಫ್ಯಾಕ್ಟರಿ’ಯಲ್ಲಿ ಆಕಸ್ಮಿಕವಾಗಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಕಂಪನಿಯಲ್ಲಿ ಸಂಗ್ರಹಿಸಿಡಲಾಗಿದ್ದ ಕೆಮಿಕಲ್ ಡಬ್ಬಗಳು ಒಂದರ ಹಿಂದೆ ಒಂದರಂತೆ ಭೀಕರವಾಗಿ ಸ್ಫೋಟಗೊಳ್ಳುತ್ತಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ ಮೂರು ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಸದ್ಯ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
ದಾವಣಗೆರೆಯ ನಿವೃತ್ತ ಶಿಕ್ಷಕಿ ಹಾಗೂ ಕ್ಯಾನ್ಸರ್ ಪೀಡಿತರಾದ ಕೆ.ಬಿ. ಕರಿಬಸಮ್ಮ ಅವರು ತಮ್ಮ ಸ್ವಂತ ಮನೆಯನ್ನು ಮಾರಿದ ಹಣ ಮತ್ತು ಪಿಂಚಣಿ ಉಳಿತಾಯದಿಂದ ಒಟ್ಟು 10 ಲಕ್ಷ ರೂ.ಗಳನ್ನು ಸೈನಿಕರ ಕಲ್ಯಾಣ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ. ತೀವ್ರ ಅನಾರೋಗ್ಯದ ನಡುವೆಯೂ ಅವರು ಮೆರೆದ ಈ ಅಪಾರ ದೇಶಪ್ರೇಮ ಮತ್ತು ಮಾನವೀಯತೆ ಎಲ್ಲೆಡೆ ಭಾರಿ ಶ್ಲಾಘನೆಗೆ ಪಾತ್ರವಾಗಿದೆ. ಮತ್ತಷ್ಟು ಓದಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ವಿಧಾನಸೌಧಕ್ಕೆ ಆಗಮಿಸಿ, ಸ್ಕೌಟ್ಸ್ ನಿಯೋಗದೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ಜೊತೆಗೆ ಉನ್ನತ ಶಿಕ್ಷಣ ಇಲಾಖೆಯ ಮಾಜಿ ಸಚಿವ ಎಂ.ಸಿ. ಸುಧಾಕರ್ ಹಾಗೂ ಶಾಸಕ ವಿಜಯಾನಂದ್ ಕಾಶಪ್ಪನವರ್ ಉಪಸ್ಥಿತರಿದ್ದು, ವಿವಿಧ ಪ್ರಮುಖ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈರೇನಹಳ್ಳಿಯಲ್ಲಿ ತಡರಾತ್ರಿ ಕ್ಯಾಂಟರ್ ನಿಯಂತ್ರಣ ತಪ್ಪಿ ಶಾಲೆಯ ಕಾಂಪೌಂಡ್ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ಸ್ಥಳ ಅಪಘಾತದ ಹಾಟ್ ಸ್ಪಾಟ್ ಆಗಿದ್ದು, 15 ದಿನಗಳ ಹಿಂದೆಯೂ ಇಲ್ಲಿ ದುರಂತ ನಡೆದಿತ್ತು. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯ ಪ್ರಮುಖ ಪ್ರದೇಶಗಳಲ್ಲಿ ಜೂನ್ 22 ಮತ್ತು 23 ರಂದು ತುರ್ತು ಮೂಲಸೌಕರ್ಯ ನಿರ್ವಹಣೆ ಹಾಗೂ ನಿಯತಕಾಲಿಕ ಕಾಮಗಾರಿಗಳ ಕಾರಣದಿಂದಾಗಿ ಸುದೀರ್ಘ 7 ಗಂಟೆಗಳ ಕಾಲ ವಿದ್ಯುತ್ ಕಡಿತ ಇರಲಿದೆ. ಮತ್ತಷ್ಟು ಓದಿ
ಕತಾರ್ನ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿರುವ ಬರ್ಜಾನ್ ಅನಿಲ ಸ್ಥಾವರದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 54 ಜನ ಗಾಯಗೊಂಡಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ. ಸ್ಥಾವರದಲ್ಲಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಈ ದುರಂತ ಸಂಭವಿಸಿದೆ ಎಂದು ಕತಾರ್ ಎನರ್ಜಿ ದೃಢಪಡಿಸಿದೆ. ಸದ್ಯ ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾಗಿದ್ದು, ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಭರದಿಂದ ಕಾರ್ಯಾಚರಣೆ ನಡೆಸುತ್ತಿವೆ.
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಹಿಂದಿನ ಡಿಎಂಕೆ ಸರ್ಕಾರದ 246 ಕೋಟಿ ರೂ. ಮೌಲ್ಯದ 46 ಯೋಜನೆಗಳನ್ನು ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ತಮಿಳುನಾಡಿನ ಪ್ರಮುಖ ದೇಗುಲಗಳ ಅಭಿವೃದ್ಧಿಗೆ ನೀಡಲಾಗಿದ್ದ ನಿಧಿಯೂ ಒಳಗೊಂಡಿದೆ. ಸಿಎಂ ವಿಜಯ್ ಅವರ ಈ ದಿಢೀರ್ ಮತ್ತು ದೃಢ ನಿರ್ಧಾರವು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಹಾಗೂ ತೀವ್ರ ಚರ್ಚೆಗೆ ಕಾರಣವಾಗಿದೆ.
Published On - 8:37 am, Mon, 22 June 26