
ಹೊಸಪೇಟೆ, ಆಗಸ್ಟ್ 28: ಹೊಸಪೇಟೆ ಜಂಕ್ಷನ್ ಮತ್ತು ಅರಸೀಕೆರೆ ಜಂಕ್ಷನ್ ನಡುವೆ ವಾರದ 5 ದಿನಗಳ ಕಾಲ ಸಂಚರಿಸಲಿರುವ ಡಿಇಎಂಯು ವಿಶೇಷ ರೈಲು ಸೇವೆ ಇಂದಿನಿಂದ ಆರಂಭವಾಗಿದ್ದು, ಇದರಿಂದ ವಿಜಯನಗರ ಹಾಗೂ ಮಧ್ಯ ಕರ್ನಾಟಕದ ನಡುವಿನ ಹಗಲು ರೈಲು ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ನಿರೀಕ್ಷೆ ಮೂಡಿದೆ. ಕಾಯ್ದಿರಿಸದ (ಅನ್ರಿಸರ್ವ್ಡ್) ಈ ರೈಲು ಸೋಮವಾರದಿಂದ ಶುಕ್ರವಾರದವರೆಗೆ ಸಂಚರಿಸಲಿದೆ. ಬೆಳಗ್ಗೆ 6.30ಕ್ಕೆ ಹೊಸಪೇಟೆಯಿಂದ ಹೊರಟು ಕೊಟ್ಟೂರು, ದಾವಣಗೆರೆ ಹಾಗೂ ಕಡೂರು ಮಾರ್ಗವಾಗಿ ಮಧ್ಯಾಹ್ನ 2.20ಕ್ಕೆ ಅರಸೀಕೆರೆ ತಲುಪಲಿದೆ. ವಾಪಸ್ ಮಧ್ಯಾಹ್ನ 2.30ಕ್ಕೆ ಅರಸೀಕೆರೆಯಿಂದ ಹೊರಟು ರಾತ್ರಿ 9.30ಕ್ಕೆ ಹೊಸಪೇಟೆ ತಲುಪಲಿದೆ.
ಶಿಕ್ಷಣ, ವ್ಯಾಪಾರ, ಆರೋಗ್ಯ ಸೇವೆ ಸೇರಿದಂತೆ ವಿವಿಧ ಅಗತ್ಯಗಳಿಗಾಗಿ ದಾವರಣಗೆರೆಯನ್ನು ಅವಲಂಬಿಸಿರುವ ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ವಿಜಯನಗರ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳ ನಿವಾಸಿಗಳಿಗೆ ಈ ರೈಲು ಸೇವೆಯಿಂದ ಹೆಚ್ಚಿನ ಅನುಕೂಲವಾಗಲಿದೆ. ಅರಸೀಕೆರೆಯಿಂದ ಪ್ರಯಾಣಿಸುವವರಿಗೂ ಮೈಸೂರು ಸೇರಿದಂತೆ ಹಾಸನ, ಬೇಲೂರು-ಹಳೇಬೀಡು, ಶ್ರವಣಬೆಳಗೊಳ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿ ಹಾಗೂ ಮಂಗಳೂರು ಸೇರಿದಂತೆ ಪ್ರಮುಖ ಸ್ಥಳಗಳಿಗೆ ಸುಲಭ ಸಂಪರ್ಕ ದೊರೆಯಲಿದೆ. ಇದರಿಂದ ಪ್ರವಾಸೋದ್ಯಮ, ಯಾತ್ರೆ ಹಾಗೂ ವಿದ್ಯಾರ್ಥಿಗಳ ಪ್ರಯಾಣಕ್ಕೂ ಉತ್ತೇಜನ ಸಿಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್: ಭುವನೇಶ್ವರ – ಯಶವಂತಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ
ವಿಜಯನಗರ ರೈಲ್ವೆ ಬಳಕೆದಾರರ ಸಂಘ ಹಾಗೂ ಹಗರಿಬೊಮ್ಮನಹಳ್ಳಿ-ಕೊಟ್ಟೂರು ರೈಲ್ವೆ ಸಮಿತಿಗಳು ಹಲವು ವರ್ಷಗಳಿಂದ ರೈಲು ಸಂಪರ್ಕ ಸುಧಾರಣೆಗೆ ಒತ್ತಾಯಿಸುತ್ತಿದ್ದವು. ನಂದೀಪುರ ಮಠದ ಮಹೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಈ ಪ್ರಯತ್ನಗಳು ನಡೆದಿದ್ದವು. ಕೊಟ್ಟೂರು, ದಾವಣಗೆರೆ ಹಾಗೂ ಕಡೂರು ಮಾರ್ಗವಾಗಿ ಸುಮಾರು 360 ಕಿ.ಮೀ ಉದ್ದದ ಹೊಸಪೇಟೆ-ಅರಸೀಕೆರೆ ಮಾರ್ಗದಲ್ಲಿ ನಿಯಮಿತವಾಗಿ ಸಂಚರಿಸುವ ಪ್ರಯಾಣಿಕರಿಗೆ ಈ ಹೊಸ ಡಿಇಎಂಯು ಸೇವೆಯು ಅನುಕೂಲಕರ ಹಾಗೂ ವಿಶ್ವಾಸಾರ್ಹ ಹಗಲು ಪ್ರಯಾಣದ ಆಯ್ಕೆಯನ್ನು ಒದಗಿಸುವ ನಿರೀಕ್ಷೆಯಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.