ಕೊರೊನಾ ಕಡಿಮೆಯಾಗಿದ್ದೇ ಅಂಬಲಿ ಸೇವೆಯಿಂದ! ವಿಜಯಪುರದಲ್ಲಿ ಮಠಕ್ಕೆ ಹರಿದುಬಂತು ಭಕ್ತಸಾಗರ

TV9 Digital Desk

| Edited By: guruganesh bhat

Updated on: Jul 12, 2021 | 9:03 PM

ಕೊರೊನಾ ಮಹಾಮಾರಿ ಉಲ್ಬಣಿಸುವುದನ್ನಾ ಮಠದ ಕಾಲ‌ಜ್ಞಾನದಲ್ಲಿಯೇ ಹಲವಾರು ವರ್ಷಗಳ ಹಿಂದೆಯೇ ಹೇಳಲಾಗಿತ್ತಂತೆ. ಪ್ರತಿ ವರ್ಷ ಶಿವರಾತ್ರಿ ಬಳಿಕ ನಡೆಯುವ ಮಠದ ಜಾತ್ರೆಯಲ್ಲಿ ನಡೆಯುವ ಕಾಲಜ್ಞಾನ ಹೇಳಿಕೆಯ ವೇಳೆಯೂ ಕಳೆದ ವರ್ಷದಂತೆ ಈ ವರ್ಷವೂ ವ್ಯಾಪಕ ರೋಗ ರುಜಿನಗಳು ಜನರನ್ನು‌ ಕಾಡುತ್ತವೆ ಎಂದು ಭವಿಷ್ಯ ನುಡಿಯಲಾಗಿತ್ತು ಎನ್ನುತ್ತಾರೆ ಭಕ್ತರು.

ಕೊರೊನಾ ಕಡಿಮೆಯಾಗಿದ್ದೇ ಅಂಬಲಿ ಸೇವೆಯಿಂದ! ವಿಜಯಪುರದಲ್ಲಿ ಮಠಕ್ಕೆ  ಹರಿದುಬಂತು ಭಕ್ತಸಾಗರ
ಪ್ರವಾಹೋಪಾದಿಯಲ್ಲಿ ಆಗಮಿಸಿದ ಭಕ್ತರು

ವಿಜಯಪುರ: ಅದು ನೂರಾರು‌ ವರ್ಷಗಳ ಐತಿಹ್ಯವನ್ನು ಹೊಂದಿರುವ ಮಠ. ಮಠದ ‌ನೆಲದಲ್ಲಿ ನುಡಿದ ಮಾತು ಸುಳ್ಳಾಗದು ಎಂಬ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸದ್ಯ ಕೊರೊನಾ ಲಾಕ್​ಡೌನ್ ಅನ್​ಲಾಕ್ ಆದ ಬಳಿಕ ಭಕ್ತರು ಮಠಕ್ಕೆ ಲಗ್ಗೆ ಹಾಕುತ್ತಿದ್ದಾರೆ. ಕೊರೊನಾ ಕಡಿಮೆಯಾಗಿದ್ದೇ ಅಂಬಲಿ ಸೇವೆಯಿಂದ ಎಂಬ ನಂಬಿಕೆ ಇಂದು ಮಠಕ್ಕೆ ಭಕ್ತ ಸಾಗರ ಹರಿದು ಬರಲು ಕಾರಣವಾಗಿದೆ. ಕೊರೊನಾ ಮುಂಜಾಗೃತಾ ಕ್ರಮ ಮಾತ್ರ ಎಲ್ಲೆಡೆ ಮಾಯವಾಗಿತ್ತು. ಹಾಗಾದರೆ ಮಠಕ್ಕೆ ಅಷ್ಟೊಂದು ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದೇಕೆ? ಏನಿದು ಅಂಬಲಿ ನೈವೇದ್ಯ? ಇದಕ್ಕೂ ಕೊರೊನಾಗೂ ಏನು ಸಂಬಂಧ? ಟಿವಿ 9 ಕನ್ನಡ ಡಿಜಿಟಲ್​ ವಿಜಯಪುರ ವರದಿಗಾರ ಅಶೋಕ ಯಡಳ್ಳಿ ಬರೆದ ವಿಶೇಷ ವರದಿ ಇಲ್ಲಿದೆ.

ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಬಬಲಾದಿ ಮಠಕ್ಕೆ‌ ಇಂದು ಭಕ್ತರ ಸಾಗರವೇ ಹರಿದುಬಂದಿತ್ತು. ಹೊಳಿ ಬಬಲಾದಿ ಎಂದು‌ ಕರೆಯಲ್ಪಡುವ ಗ್ರಾಮದಲ್ಲಿ ಶ್ರೀ ಸದಾಶಿವ ಮುತ್ಯಾರ ಮಠಕ್ಕೆ ಇಂದು ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದರು. ಕಳೆದ ಏಪ್ರಿಲ್​ನಲ್ಲಿ ಮಹಾಮಾರಿ ಕೊರೊನಾ ಅಬ್ಬರಿಸಲು ಆರಂಭವಾಗಿ ನಂತರ ವ್ಯಾಪಕವಾಗಿ ಹರಡಿದ ಸಮಯ. ಇದೇ ಕೊರೊನಾ ಹತೋಟಿಗೆ ಬರಲು ಭಕ್ತರು ಐದು ಸೋಮವಾರ ಮ‌ನೆಯಲ್ಲಿ ಸದಾಶಿವ ಮುತ್ಯಾರ ಪೂಜೆ ಮಾಡಿ ಅಂಬಲಿ ನೈವೇದ್ಯ ಮಾಡಬೇಕೆಂದು, ಮನೆಯಲ್ಲಿ ಕರಿದ ಪದಾರ್ಥಗಳ ಮಾಡಬಾರದು, ಚಪ್ಪಲಿ ಧರಿಸಬಾರದು ಎಂದು ಮಠದ ಪೀಠಾಧಿಪತಿ ಸಿದ್ದರಾಮಯ್ಯ ಹೋಳಿಮಠ ಹೇಳಿದ್ದರು. ಸ್ವಾಮೀಜಿಗಳ ನಿರ್ದೇಶನದಂತೆ ಮಠದ ಭಕ್ತರು ಐದು ಸೋಮವಾರ ಕಾಲ ಸ್ವಾಮೀಜಿಗಳ‌ ನಿರ್ದೇಶನ ಪಾಲನೆ ಮಾಡಿದ್ದರಂತೆ. ಇವೆಲ್ಲ ಹೇಳಿಕೆ ಪಾಲನೆ ಮಾಡಲು ಆರಂಭಿಸಿದ ಮೂರೇ ವಾರಕ್ಕೆ ಮಹಾಮಾರಿ ಕೊರೊನಾ ಅಬ್ಬರ ಇಳಿಕೆಯಾಯಿತಂತೆ. ಪಾಸಿಟಿವ್ ಪ್ರಕರಣಗಳು, ಕೊರೊನಾದಿಂದ ಸಾವಿನ ಸಂಖ್ಯೆಗಳು ಕಡಿಮೆಯಾದವಂತೆ. ಈ ರೀತಿ ಮಹಾಮಾರಿ ರೋಗ ಕಡಿಮೆಯಾಗಲು ಬಬಲಾದಿಯ ಸದಾಶಿವ ಮುತ್ಯಾನ ಮಠದ ಶಕ್ತಿಯೇ ಕಾರಣವೆಂದು ಭಕ್ತರು ನಂಬಿದ್ದಾರೆ. ಕೊರೊನಾ ಲಾಕ್​ಡೌನ್ ಅನ್​ಲಾಕ್ ಆದ ಬಳಿಕ ಮಠದಲ್ಲಿರುವ ಸದಾಶಿವ ಮುತ್ಯಾರ ಗದ್ದುಗೆಗೆ ಅಂಬಲಿ ನೈವೇದ್ಯ ಅರ್ಪಿಸಲು ಆಗಮಿಸುತ್ತಿದ್ದಾರೆ‌. ಪ್ರತಿ ಸೋಮವಾರ ಅಂಬಲಿ ಸಮರ್ಪಣೆ ಮಾಡುತ್ತಿದ್ದಾರೆ‌. ರವಿವಾರ ರಾತ್ರಿಯಿಂದಲೇ ಮಠದತ್ತ ಭಕ್ತರ ದಂಡು ಹರಿದು ಬರುತ್ತಿದೆ. ಸೋಮವಾರ ರಾತ್ರಿವರೆಗೂ ಭಕ್ತರು ಅಂಬಲಿ ಸೇವೆ ಮಾಡುತ್ತಿದ್ದಾರೆ. ಮಹಾಮಾರಿ ಕೊರೊ‌ನಾ ಕಡಿಮೆಯಾಗಲು ಸದಾಶಿವ ಮಠದ ಪವಾಡವೇ ಕಾರಣವೆಂದು ಭಕ್ತರು ಹೇಳಿದ್ದಾರೆ.

ಕೊರೊನಾ ಮಹಾಮಾರಿ ಉಲ್ಬಣಿಸುವುದನ್ನು ಮಠದ ಕಾಲ‌ಜ್ಞಾನದಲ್ಲಿಯೇ ಹಲವಾರು ವರ್ಷಗಳ ಹಿಂದೆಯೇ ಹೇಳಲಾಗಿತ್ತಂತೆ. ಪ್ರತಿ ವರ್ಷ ಶಿವರಾತ್ರಿ ಬಳಿಕ ನಡೆಯುವ ಮಠದ ಜಾತ್ರೆಯಲ್ಲಿ ನಡೆಯುವ ಕಾಲಜ್ಞಾನ ಹೇಳಿಕೆಯ ವೇಳೆಯೂ ಕಳೆದ ವರ್ಷದಂತೆ ಈ ವರ್ಷವೂ ವ್ಯಾಪಕ ರೋಗರುಜಿನಗಳು ಜನರನ್ನು‌ ಕಾಡುತ್ತವೆ ಎಂದು ಭವಿಷ್ಯ ನುಡಿಯಲಾಗಿತ್ತು. ನಂತರ ಕೊರೊನಾ ಎಲ್ಲೆಡೆ ಹರಡಿದ ವೇಳೆ ಮಠದ ಪೀಠಾಧಿಪತಿ ಸಿದ್ದು ಮುತ್ಯಾ ಹೋಳಿಮಠ ಐದು ಸೋಮವಾರ ಎಲ್ಲ ಭಕ್ತರು ಮನೆಯಾಚೆ ಬರಬೇಡಿ. ಮನೆಯಲ್ಲಿ ಸದಾಶಿವ ಮುತ್ಯಾರ ಪೂಜೆ ಹಾಗೂ ಧ್ಯಾನ ಮಾಡಿ ಅಂಬಲಿ ನೈವೇದ್ಯ ಮಾಡಬೇಕೆಂದು ಹೇಳಿದ್ದೆ, ಮನೆಯಲ್ಲಿ ಕರಿದ ಪದಾರ್ಥಗಳು ಅಡುಗೆ ಮಾಡಬೇಡಿ ಹಾಗೂ ಚಪ್ಪಲಿ ಧರಿಸಬೇಡಿ ಎಂದು ತಿಳಿಸಿದ್ದೆ. ಇದನ್ನು‌ ಭಕ್ತರು ಪಾಲನೆ ಮಾಡಿದ ಮೂರನೇ ವಾರಕ್ಕೆ ಕೊರೊನಾ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಯ್ತು. ಮಠದ ಶಕ್ತಿಯೇ ಇದಕ್ಕೆ ಕಾರಣ. ಅದಾದ ಬಳಿಕ ಲಾಕ್ ಡೌನ್ ಇದ್ದರೂ ಭಕ್ತರು ಅಂಬಲಿ ನೈವೇದ್ಯ ಮಾಡಲು ಮಠಕ್ಕೆ ಭಕ್ತರು ಹೆಚ್ಚನ ಸಂಖ್ಯೆಯಲ್ಲಿ ಆಗಮಿಸಿದ್ದರು.‌ ಆಗ ಮಠಕ್ಕೆ ಬೀಗ ಹಾಕಿ ಯಾರಿಗೂ ಪ್ರವೇಶ ನೀಡಿರಲಿಲ್ಲ . ಮಠದ ಹೊರಗಿನಿಂದಲೇ ಅಂಬಲಿ ನೈವೇದ್ಯ ಮಾಡಿ ಹೋಗಿದ್ದರು. ಈಗಾ ಅನ್ ಲಾಕ್ ಆದ ಬಳಿಕ‌ ಹೆಚ್ಚಿನ ಸಂಖ್ಯೆಯ ಭಕ್ತರು ಅಂಬಲಿ ನೈವೇದ್ಯ ಅರ್ಪಿಸಲು ಬರುತ್ತಿದ್ದಾರೆ.‌ ಸರ್ಕಾರ ಸೂಚಿಸಿದ ಕೊರೊನಾ ಮುಂಜಾಗೃತ ಕ್ರಮಗಳನ್ನು ಪಾಲನೆ ಮಾಡಿ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಬರಬೇಡಿ ಎಂದು ಸೂಚಿಸಿ ಮನವಿ ಮಾಡಿಕೊಂಡರೂ ಜನರು ಯಾವುದನ್ನೂ ಪಾಲನೆ ಮಾಡುತ್ತಿಲ್ಲಾ. ‌ಸಾಮಾಜಿಕ ಅಂತರ ಕಾಪಾಡದೇ, ಮಾಸ್ಕ್ ಇಲ್ಲದೇ ಬಂದಿದ್ದಾರೆ. ಸದಾಶಿವ ಮುತ್ಯಾರ ಶಕ್ತಿ‌ ಕಾಪಾಡುತ್ತದೆ ಎನ್ನುತ್ತಾರೆ‌. ಇಂದು ಪ್ರವೇಶದ್ವಾರ ಬಂದ್ ಮಾಡಿದರೂ ಬಾಗಿಲು ಮುರಿದಿದ್ದಾರೆ. ಹಿಂಬದಿಯಲ್ಲಿನ ಪ್ರವೇಶ ದ್ವಾರ ಬಂದ್ ಮಾಡಿರೋ ಶೀಟ್ ಗಳನ್ನೂ ಸಹ ಮುರಿದು ಹಾಕಿ‌ ಒಳಬಂದಿದ್ದಾರೆ. ಭಕ್ತರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಸ್ವಾಮೀಜಿ ಹೇಳಿದ್ದಾರೆ.

ಒಟ್ಟಾರೆ ಕೊರೊನಾ ಕಡಿಮೆ ಮಾಡಲು ಅಂಬಲಿ ಸೇವೆ ಮಾಡಲು ಸ್ವಾಮೀಜಿ ಹೇಳಿದ್ದರೋ ಇಂದು ಅದೇ ಕೊರೊನಾ ಮಂಜಾಗೃತಾ ಕ್ರಮಗಳನ್ನು ಹಾಗೂ ನಿಯಮ ಮೀರಿ ಅಂಬಲಿ ಸೇವೆ ಮಾಡಲು ಜನ ಸಾಗರ ಮಠದಲ್ಲಿ ಸೇರಿದ್ದು ಭಕ್ತಿಯ ಪರಾಕಾಷ್ಟೆಗೆ ಉದಾಹರಣೆಯಾಗಿತ್ತು. ಜನರ ನಿಯಂತ್ರಿಸಲು ಮಠದ ಸ್ವಾಮೀಜಿ ಮಾಡಿದ ಮನವಿಗೂ ಜನರು ಕೇರ್ ಮಾಡಲಿಲ್ಲ. ‌ಪೊಲೀಸ್ ಸಿಬ್ಬಂದಿ ಮಠದ ಬಳಿ ಇದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರ ಜೊತೆಗೆ ಇಂದು ಬಿಟ್ಟು ಬಿಡದೇ ಸುರಿಯೋ ಮಳೆಯಲ್ಲೂ ಭಕ್ತರು ಅಂಬಲಿ ಸೇವೆಗಾಗಿ ಅಲುಗಾಡದೇ ನಿಂತಿದ್ದು ಕಂಡುಬಂತು. ಅದೇನೇ ಇರಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾವಣೆಯಾಗುವ ಇಂತಹ ಸ್ಥಳಗಳಲ್ಲಿ ಜಿಲ್ಲಾಡಳಿತ ಪೊಲೀಸ್ ಇಲಾಖೆ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕಿದೆ. ಕೊರೊನಾ ಮುಂಜಾಗೃತೆಗಳನ್ನು ಪಾಲನೆ ಮಾಡಿಸೋ ಮೂಲಕ ದರ್ಶನ ಮಾಡಲು ಕ್ರಮ ತೆಗೆದುಕೊಳ್ಳಬೇಕಿದೆ.

ವಿಶೇಷ ವರದಿ: ಅಶೋಕ ಯಡಳ್ಳಿ

ಇದನ್ನೂ ಓದಿ:

 Field Report: ಆನಂದಯ್ಯನ ಕೊರೊನಾ ಔಷಧ ಪರಿಣಾಮ ಬೀರುವುದೇ? ಔಷಧ ಸೇವಿಸಿದ ಕೊಪ್ಪಳದ ಜನರು ಹೇಳುವುದೇನು?

ರೈತರ ಹೊಲ ಗದ್ದೆ ಕಾಯಲೂ ಸೈ, ಕರಾವಳಿಯ ಬಂದರಿಗೂ ಜೈ; ಈ ಕತ್ತಾಳೆ ನಾರಿನ ಬಗ್ಗೆ ನಿಮಗೆಷ್ಟು ಗೊತ್ತು?

(Vijayapura devotees believes Corona reduced by the Ambali Naivedyam went to mutt after unlock)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada