ಸರ್ಕಾರಿ ಬೆಂಬಲ ಬೆಲೆಯಡಿ ಇಂದಿನಿಂದ ತೊಗರಿ ಖರೀದಿ ಆರಂಭ

ತೊಗರಿಯನ್ನು ಮಾರಾಟ ಮಾಡುವ ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಉತ್ಪನ್ನದ ಮೌಲ್ಯವನ್ನು ಡಿಬಿಟಿ ಮೂಲಕ ಹಣ ಜಮಾ ಆಗುವಂತೆ ಪಾವತಿ ಕ್ರಮ ತೆಗೆದುಕೊಳ್ಳಲಾಗಿದೆ.

ಸರ್ಕಾರಿ ಬೆಂಬಲ ಬೆಲೆಯಡಿ ಇಂದಿನಿಂದ ತೊಗರಿ ಖರೀದಿ ಆರಂಭ
ತೊಗರಿ ಬೇಳೆ
Edited By:

Updated on: Dec 15, 2021 | 7:12 PM

ವಿಜಯಪುರ: ವಿಜಯಪುರ ಜಿಲ್ಲೆ ತೊಗರಿ ಬೆಳೆಯುವ ಅಗ್ರಗಣ್ಯ ಜಿಲ್ಲೆಗಳ ಸಾಲಿಗೆ ಸೇರಿದೆ. ಗುಮ್ಮಟ ನಗರಿಯ ಜಿಲ್ಲೆಯನ್ನು ತೊಗರಿ ಬೆಳೆಯುವ ಕಣಜ ಎಂದು ಕರೆದೂ ತಪ್ಪಾಗದು. ಈ ಬಾರಿ 11.90 ಲಕ್ಷ ಎಕರೆ ಪ್ರದೇಶದಲ್ಲಿ ತೊಗರಿಯನ್ನು ಬೆಳೆಯಲಾಗಿದೆ. ಮಳೆಯ ಕೊರತೆ, ಹವಾಮಾನ ವೈಪರೀತ್ಯ ಹಾಗೂ ಅಕಾಲಿಕ ಮಳೆಯ ಕಾಟದಿಂದ ಪ್ರಸಕ್ತ ವರ್ಷ ಉತ್ತಮ ಇಳುವರಿ ಬಾರದಂತಾಗಿದೆ. ಇದ್ದುದರಲ್ಲಿಯೇ ತೊಗರಿ ಫಸಲನ್ನು ರೈತರು ಕೊಯ್ಲು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ತೊಗರಿಯನ್ನು ಬೆಂಬಲ ಬೆಲೆಯಡಿ ಖರೀದಿ ಮಾಡಲು ಸರ್ಕಾರ ಸಮಯವನ್ನು ನಿಗದಿ ಮಾಡಿದೆ.

ಪ್ರಸಕ್ತ 2021-22ನೇ ವರ್ಷದಲ್ಲಿ ತೊಗರಿಯನ್ನು ಬೆಂಬಲ ಬೆಲೆಯಡಿ ಖರೀದಿ ಮಾಡಲು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. FAQ ಗುಣಮಟ್ಟ ತೊಗರಿಗೆ ಪ್ರತಿ ಕ್ವಿಂಟಾಲ್‍ಗೆ 6,300 ರೂ.ನಂತೆ ದರ ನಿಗದಿ ಮಾಡಲಾಗಿದೆ. ತೊಗರಿ ಖರೀದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಂಬಲ ಬೆಲೆ ಯೋಜನೆ ಮಾರ್ಗ ಸೂಚಿಗಳನ್ವಯ ಪೂರ್ವ ಸಿದ್ಧತೆ ಮತ್ತು ರೈತರ ನೋಂದಣಿ ಕಾರ್ಯವನ್ನು ಸರ್ಕಾರದ ಆದೇಶದಂತೆ ಇಂದಿನಿಂದ 45 ದಿನಗಳ ವರೆಗೆ ಅಂದರೆ ಮುಂದಿನ 2022ರ ಜನವರಿ ಕೊನೆಯವರೆಗೆ ನೋಂದಣಿ ಕಾರ್ಯ ಹಾಗೂ ತೊಗರಿ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಹಿತಿ ಟಿವಿ9 ವೆಬ್ ಗೆ ಮಾಹಿತಿ ನೀಡಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತಕ್ಕೆ ಖರೀದಿ ಏಜೆನ್ಸಿಯಾಗಿ ನೇಮಿಸಿರುವುದರಿಂದ ಜಿಲ್ಲೆಯಲ್ಲಿ ತೊಗರಿ ಖರೀದಿಗೆ ಸಂಬಂಧಿಸಿದಂತೆ ಸಿದ್ಧತೆ ಮಾಡಿಕೊಳ್ಳಲು ವ್ಯವಸ್ಥಾಪಕರು ಕೆಸಿಎಂಎಫ್ ವಿಜಯಪುರ ಅವರಿಗೆ ಸೂಚಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 11.90 ಲಕ್ಷ ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, ಅಂದಾಜು 35.70 ಲಕ್ಷ ಕ್ವಿಂಟಾಲ್ ಇಳುವರಿ ಬರಬಹುದೆಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ತೊಗರಿ ಕಟಾವಿಗೆ ಬಂದಿದ್ದು, ಡಿಸೆಂಬರ್ ಕೊನೆಯ ವಾರದಲ್ಲಿ ಮಾರಾಟಕ್ಕೆ ಮಾರುಕಟ್ಟೆಗೆ ಬರಬಹುದು ಎಂದು ಅಂದಾಜಿಸಲಾಗಿದೆ. ಪ್ರತಿ ಎಕರೆಗೆ 7.50 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಖರೀದಿಸಲು ಪ್ರಮಾಣ ನಿಗದಿ ಪಡಿಸಲಾಗಿದೆ.

ಖರೀದಿ ಕೇಂದ್ರಗಳಲ್ಲಿ ತೊಗರಿ ಉತ್ಪನ್ನವನ್ನು ಖರೀದಿಸೋ ಮುನ್ನ ರೈತರ ನೋಂದಣಿಯನ್ನು ಎನ್‍ಐಸಿ ಸಂಸ್ಥೆಯು ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಬೆಳೆಗೆ ಉತ್ಪನ್ನಗಳನ್ನು ಖರೀದಿಸಲು ಸಿದ್ಧಪಡಿಸಿರುವ ತಂತ್ರಾಂಶವನ್ನು ಸೂಕ್ತವಾಗಿ ಉನ್ನತೀಕರಿಸಿ ತೊಗರಿ ಬೆಂಬಲ ಬೆಲೆ ಯೋಜನೆಯಡಿ ನೊಂದಾಯಿಸಲು ಬಳಸಬೇಕು. ಎನ್‍ಐಸಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಈ ನೋಂದಣಿ ತಂತ್ರಾಂಶ ಈಗಾಗಲೇ FRUIS ತಂತ್ರಾಂಶದೊಂದಿಗೆ ಸಂಯೋಜಿಸಲಾಗಿದೆ ಎಂದು ಆಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈತರು ಸಹ ಸರ್ಕಾರದ ನಿರ್ದೇಶನದಂತೆ FRUIS ತಂತ್ರಾಂಶದಲ್ಲಿ ನೋಂದಣಿ ಮಾಡಿಸಬೇಕಿದೆ. ತೊಗರಿಯನ್ನು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲು ರೈತರು ನೋಂದಣಿ ಮಾಡಿದ ನಂತರ NIC ತಂತ್ರಾಂಶದಿಂದ ನ್ಯಾಪೆಡ್ ಸಂಸ್ಥೆಯ ತಂತ್ರಾಂಶಕ್ಕೆ ರೈತರ ನೊಂದಣಿ ಮಾಹಿತಿಯನ್ನು ಒದಗಿಸಲಾಗುವುದು. ಈ ಸಂಸ್ಥೆಯು ತಮ್ಮ ತಂತ್ರಾಂಶದಲ್ಲಿ ಎಲ್ಲಾ ಮಾಹಿತಿಯನ್ನು ಬಳಸಿ ರೈತರಿಂದ ಉತ್ಪನ್ನವನ್ನು ಕೇಂದ್ರಗಳಿಂದ ಖರೀದಿಸಬೇಕೆಂಬ ನಿಯಮ ಜಾರಿ ಮಾಡಲಾಗಿದೆ.

ಇನ್ನು, ತೊಗರಿಯನ್ನು ಮಾರಾಟ ಮಾಡುವ ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಉತ್ಪನ್ನದ ಮೌಲ್ಯವನ್ನು ಡಿಬಿಟಿ ಮೂಲಕ ಹಣ ಜಮಾ ಆಗುವಂತೆ ಪಾವತಿ ಕ್ರಮ ತೆಗೆದುಕೊಳ್ಳಲಾಗಿದೆ. ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ತೊಗರಿ ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರುಪಯೋಗವಾಗದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಕೃಷಿ ಆಧಿಕಾರಿಗಳು ಹೇಳಿದ್ದಾರೆ.

(ವರದಿ: ಅಶೋಕ್ ಯಡಳ್ಳಿ)

ಇದನ್ನೂ ಓದಿ: ಬಾಗಲಕೋಟೆ: 415 ಚೀಲ ತೊಗರಿ ಬೇಳೆ ಮಾರಿ ತಲೆಮರೆಸಿಕೊಂಡಿದ್ದ ಇಬ್ಬರು ಅರೆಸ್ಟ್

ತೊಗರಿ ಕಣಜ ಖ್ಯಾತಿಯ ಕಲಬುರಗಿಯಲ್ಲೇ ತೊಗರಿ ಬೇಳೆ ದಾಖಲೆಗೆ ಮಾರಾಟ!

Web contact

TV9 Kannada

Read More
Follow Us